AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ರೋ ಟಿಕೆಟ್ ದರ ಸಮರ: ಯುದ್ಧ ಪೂರ್ತಿ ಗೆದ್ದಿಲ್ಲ ಎಂದ ಸಂಸದ; ಕೇಂದ್ರಕ್ಕೆ ಪತ್ರ ಬರೆಯುವಂತೆ ಒತ್ತಾಯ

ಬೆಂಗಳೂರು ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ ಬೆನ್ನಲ್ಲೇ ಸುದ್ದಿಗೋಷ್ಠಿ ಮಾಡಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಇದು ತಾತ್ಕಾಲಿಕ ಅಷ್ಟೇ, ನಾವು ಪೂರ್ತಿಯಾಗಿ ಯದ್ಧ ಗೆದ್ದಿಲ್ಲ ಎಂದು ಹೇಳಿದ್ದಾರೆ. ದರ ನಿಗದಿ ಸಮಿತಿ ರಚನೆಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆಯುವಂತೆ ಒತ್ತಾಯಿಸಿದ್ದಾರೆ. ಆ ಮೂಲಕ ಚೆಂಡು ಸಿಎಂ ಮತ್ತು ಡಿಸಿಎಂ ಅಂಗಳದಲ್ಲಿ ಇದೆ.

ಮೆಟ್ರೋ ಟಿಕೆಟ್ ದರ ಸಮರ: ಯುದ್ಧ ಪೂರ್ತಿ ಗೆದ್ದಿಲ್ಲ ಎಂದ ಸಂಸದ; ಕೇಂದ್ರಕ್ಕೆ ಪತ್ರ ಬರೆಯುವಂತೆ ಒತ್ತಾಯ
ಸಂಸದ ತೇಜಸ್ವಿ ಸೂರ್ಯImage Credit source: deccanherald
ಗಂಗಾಧರ​ ಬ. ಸಾಬೋಜಿ
|

Updated on:Feb 07, 2026 | 7:47 PM

Share

ಬೆಂಗಳೂರು, ಫೆಬ್ರವರಿ 07: ಸೋಮವಾರದಿಂದ ನಮ್ಮ ಮೆಟ್ರೋ ಟಿಕೆಟ್ (Namma Metro) ಪ್ರಯಾಣ ದರ ಶೇಕಡಾ 5ರಷ್ಟು ಏರಿಕೆ ಮಾಡಲು ನಿರ್ಧರಿಸಲಾಗಿತ್ತು. ಇದೇ ದರ ಏರಿಕೆ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ದಂಗಲ್ ಕೂಡ ಏರ್ಪಟ್ಟಿದೆ. ಈ ಮೆಟ್ರೋ ಪ್ರಯಾಣ ದರ ಏರಿಕೆ ಜಟಾಪಟಿಯ ನಡುವೆ ಸೋಮವಾರದಿಂದ ಮೆಟ್ರೋ ಪ್ರಯಾಣ ದರ ಏರಿಕೆಯಾಗಲ್ಲ ಅಂತಾ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಘೋಷಿಸಿದ್ದು, ಇದು ತಾತ್ಕಾಲಿಕ ಅಷ್ಟೇ ನಾವು ಪೂರ್ತಿಯಾಗಿ ಯದ್ಧ ಗೆದ್ದಿಲ್ಲ ಎಂದು ಹೇಳಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಹೇಳಿದ್ದಿಷ್ಟು 

ನಗದರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಸೋಮವಾರದಿಂದ ರಾಜ್ಯ ಸರ್ಕಾರ ಮತ್ತು ಬಿಎಂ‌ಆರ್‌ಸಿಎಲ್ ದರ ಹೆಚ್ಚಳದ ಪ್ರಸ್ತಾಪ ಇಟ್ಟಿತ್ತು. ನಾವು, ಸಾರ್ವಜನಿಕರು ಇದರ ವಿರುದ್ಧ ಧ್ವನಿ ಎತ್ತಿದ್ದೆವು. ಈಗಾಗಲೇ ದೇಶದ ದುಬಾರಿ ಮೆಟ್ರೋ ಎನ್ನುವ ಕುಖ್ಯಾತಿ ಇದೆ. ಕೇಂದ್ರ ಸಚಿವ ಮನೋಹರ ಲಾಲ್​ ಖಟ್ಟರ್ ಜೊತೆ ನಾನು, ವಿಪಕ್ಷ ನಾಯಕ ಆರ್ ಅಶೋಕ್, ಸಂಸದ ಪಿಸಿ ಮೋಹನ್ ಅವರು ಮಾತಾಡಿದ್ದೆವು. ನಗರಾಭಿವೃದ್ಧಿ ಇಲಾಖೆಯ ಸೆಕ್ರೆಟರಿ ಅವರಿಗೆ ತಾತ್ಕಾಲಿಕವಾಗಿ ದರ ಏರಿಕೆಯನ್ನು ನಿಲ್ಲಿಸಲು ಸೂಚಿಸಿದ್ದಾಗಿ ಹೇಳಿದ್ದಾರೆ. ಆದರೆ ಇದು ತಾತ್ಕಾಲಿಕ ಅಷ್ಟೇ, ನಾವು ಯದ್ದ‌ ಪೂರ್ತಿಯಾಗಿ ಗೆದ್ದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್ ಕೊಟ್ಟ ತೇಜಸ್ವಿ ಸೂರ್ಯ: ಸೋಮವಾರದಿಂದ ದರ ಏರಿಕೆ ಆಗುವುದಿಲ್ಲ

ದೆಹಲಿಯಲ್ಲಿ 69 ರೂ ಮತ್ತು ಚೆನೈನಲ್ಲಿ 50 ರೂ ಗೆ ಮೆಟ್ರೋದಲ್ಲಿ ಸಂಚಾರ ಮಾಡಬೇಕಾದರೆ, ಬೆಂಗಳೂರಲ್ಲಿ ಏಕೆ 90 ರೂ. ಕೊಡಬೇಕು ಎನ್ನುವುದು ನಮ್ಮ‌ ಪ್ರಶ್ನೆ. ಈಗ ಮತ್ತೊಂದು ದರ ನಿಗದಿ ಕಮಿಟಿ ಮಾಡಬೇಕು. ರಾಜ್ಯ ಸರ್ಕಾರ ದರ ನಿಗದಿ ಕಮಿಟಿ ರಚಿಸಲು ನಾಲ್ಕಾರು ಬಾರಿ ಹಿಂದೆ ಪತ್ರ ಬರೆದಿದ್ದರು. ದರ ನಿಗದಿ ಕಮಿಟಿಯಲ್ಲಿ ಪ್ರತಿ ವರ್ಷ ದರ ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರದ ಅಧಿಕಾರಿಗಳು ಮನವಿ ಮಾಡಿದ್ದರು. ನಾನು ಹೈಕೋರ್ಟ್‌ನಲ್ಲಿ ಕೇಸ್ ಹಾಕಿದ್ದೆ. ಫೇರ್ ಫಿಕ್ಸೇಷನ್ ಕಮಿಟಿ ಏಕೆ ಮುಚ್ಚಿಟ್ಟಿದ್ದರು, ಇವರ ವಾದ ಮುಚ್ಚಿಡಲು ಹೀಗೆ ಮಾಡಿದ್ದರು ಎಂದು ವಾಗ್ದಾಳಿ ಮಾಡಿದ್ದಾರೆ.

ಹೊಸ ಕಮಿಟಿ ರಚನೆಗೆ ಪತ್ರ ಬರೆಯುವಂತೆ ಒತ್ತಾಯ

ರಾಜ್ಯ ಸರ್ಕಾರ ಹೊಸ ಫೇರ್ ಫಿಕ್ಸೇಷನ್ ಕಮಿಟಿ ರಚಿಸಿಲು ಪತ್ರ ಬರೆದರೆ, ನಾವು ಅದನ್ನ ಪರಿಗಣಿಸುತ್ತೇವೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಈಗ ಬಾಲ್ ಸಿಎಂ ಮತ್ತು ಡಿಸಿಎಂ ಅಂಗಳದಲ್ಲಿ ಇದೆ. ಈಗ ಒಂದು ಪತ್ರ ಬರೆಯಿರಿ ಎಂದು ಹೇಳಿದ್ದಾರೆ. ಮರುಪರಿಷ್ಕರಣೆ ಮಾಡಿ ಎಂದು ಪತ್ರ ಬರೆದರೆ ಹೊಸ ಕಮಿಟಿ ರಚನೆ ಮಾಡುತ್ತಾರೆ. ಪತ್ರ ಬರೆದರೂ ಕಮಿಟಿ ಮಾಡಿಲ್ಲ ಎಂದರೆ ಕೇಂದ್ರದ ತಪ್ಪು. ಇವರು ಪತ್ರ ಬರೆದಿಲ್ಲ ಎಂದರೆ ಇವರ ತಪ್ಪು, ಏನು ಮಾಡುತ್ತಾರೆ ನೋಡೋಣ. ಟೆಕ್ನಿಕಲ್​ ಆಗಿ ಈಗಲೂ ಸಹ ತಡೆ ನೀಡಲು ಸಾಧ್ಯವಾಗುತ್ತಿರಲಿಲ್ಲ, ಆದರೆ ನಾವೆಲ್ಲಾ ಒತ್ತಡ ಹೇರಿದ್ದರಿಂದ ತಾತ್ಕಾಲಿಕವಾಗಿ ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಕಮಿಟಿ ರಚಿಸಲು ಹೇಳಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ವರದಿ: ನಟರಾಜ್​​ ಟಿವಿ9

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:46 pm, Sat, 7 February 26