
ಬೆಂಗಳೂರು, (ಮೇ 26): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಭಾರೀ ಗುಡುಗು ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು (Rain), ಹಲವೆಡೆ ಭಾರೀ ಅವಾಂತರಗಳು ಸೃಷ್ಟಿಸಿದೆ. ಅದರಲ್ಲೂ ಮರದ ಕೊಂಬೆ ಬಿದ್ದು ಐಟಿಪಿಎಲ್ – ಸತ್ಯಸಾಯಿ ಆಸ್ಪತ್ರೆ ಮಾರ್ಗದ ನಮ್ಮ ಮೆಟ್ರೋ (Namma Metro) ಸಂಚಾರ ಸ್ಥಗಿತವಾಗಿದೆ. ಇದರಿಂದ ಮೆಟ್ರೋ ಸ್ಟೇಷನ್ಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದು, ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಮನೆಗೆ ಹೋಗಲಾದೇ ಮೆಟ್ರೋ ನಿಲ್ದಾಣಗಳಲ್ಲೇ ಪರದಾಡುತ್ತಿದ್ದಾರೆ.
ಮರದ ಕೊಂಬೆ ಹಳಿ ಮೇಲೆ ಬಿದ್ದ ಹಿನ್ನೆಲೆ ನೇರಳೆ ಮಾರ್ಗದ ಐಟಿಪಿಎಲ್ – ಸತ್ಯಸಾಯಿ ಆಸ್ಪತ್ರೆ ಮಾರ್ಗದ ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ. ಇನ್ನು ಸಂಜೆ 6 ಗಂಟೆಯಿಂದ ವೈಟ್ಫೀಲ್ಡ್ – ಗರುಡಾಚಾರ ಪಾಳ್ಯ ನಡುವೆ ಮೆಟ್ರೋ ಸೇವೆ ಬಂದ್ ಆಗಿದ್ದು, ಗರುಡಾಚಾರ ಪಾಳ್ಯ – ಚಲ್ಲಘಟ್ಟ ನಡುವೆ ಮಾತ್ರ ಮೆಟ್ರೋ ಸಂಚಾರ ಲಭ್ಯವಿದೆ. ಇನ್ನು ಅಡಚಣೆ ತೆರವಿಗೆ ಬಿಎಂಆರ್ಸಿಎಲ್ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಶೀಘ್ರದಲ್ಲೇ ಮೆಟ್ರೋ ಸೇವೆ ಪುನರಾರಂಭವಾಗುವ ನಿರೀಕ್ಷೆ ಎಂದು ಪ್ರಯಾಣಿಕರಿಗೆ ಬಿಎಂಆರ್ಸಿಎಲ್ನಿಂದ ಮಾಹಿತಿ ನೀಡಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಜೆ ಆಗುತ್ತಿದ್ದಂತೆ ವರುಣನ ಆರ್ಭಟ ಆರಂಭವಾಗಿದೆ. ನಗರದ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು, ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ನಗರದ ಪ್ರಮುಖ ಕೇಂದ್ರಗಳಾದ ಮೆಜೆಸ್ಟಿಕ್, ಶಾಂತಿನಗರ, ಜಯನಗರ, ಜೆ.ಪಿ.ನಗರ, ವಸಂತನಗರ, ಕೆ.ಆರ್. ಮಾರ್ಕೆಟ್, ಬನಶಂಕರಿ, ಕೋಣನಕುಂಟೆ, ಯಲಹಂಕ ಹಾಗೂ ಹೆಬ್ಬಾಳ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಇನ್ನುಳಿದಂತೆ ಸದಾಶಿವನಗರ, ರಾಜಾಜಿನಗರ, ವಿಜಯನಗರ, ಲಗ್ಗೆರೆ, ಚಂದ್ರಲೇಔಟ್, ಇಂದಿರಾನಗರ, ನಂದಿನಿ ಲೇಔಟ್, ಗಿರಿನಗರ, ಮಹಾಲಕ್ಷ್ಮೀ ಲೇಔಟ್, ಸುಬ್ರಹ್ಮಣ್ಯ ನಗರ, ನಾಗರಭಾವಿ, ಮೂಡಲಪಾಳ್ಯ ಮತ್ತು ಬಸವನಗುಡಿ ಸೇರಿದಂತೆ ನಗರದ ಬಹುತೇಕ ಎಲ್ಲಾ ಕಡೆಗಳಲ್ಲೂ ಎಡಬಿಡದೆ ಮಳೆ ಸುರಿಯುತ್ತಿದೆ.
ಭಾರೀ ಮಳೆಯಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕೆ ಆರ್ ಸರ್ಕಲ್ ಅಂಡರ್ ಪಾಸ್ ಕ್ಲೋಸ್ ಮಾಡಲಾಗಿದೆ. ಸಣ್ಣ ಮಳೆಗೂ ಕೆ ಆರ್ ಸರ್ಕಲ್ ಅಂಡರ್ ಪಾಸ್ ಜಲಾವೃತವಾಗುತ್ತೆ. ಹೀಗಾಗಿ ಪೊಲೀಸರು ಬ್ಯಾರಿಕೇಡ್ ಹಾಕಿ ಅಂಡರ್ ಪಾಸ್ ಬಂದ್ ಮಾಡಿದ್ದಾರೆ.
Published On - 7:01 pm, Tue, 26 May 26