ಬೆಂಗಳೂರಿನಲ್ಲಿ ಗುಡುಗು-ಸಿಡಿಲು ಗಾಳಿಯೊಂದಿಗೆ ಭಾರೀ ಮಳೆ, ನಮ್ಮ ಮೆಟ್ರೋ ಸಂಚಾರ ಸ್ಥಗಿತ

Bengaluru Rains: ಹವಾಮಾನ ಇಲಾಖೆ ಮುನ್ಸೂಚನೆಯಂತೆ ಸಂಜೆಯಾಗುತ್ತಿದ್ದಂತೆಯೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರೀ ಗಾಳಿ ಮಳೆ ಶುರುವಾಗಿದೆ. ಬಿರುಗಾಳಿಯಿಂದಾಗಿ ಹಳಿ ಮೇಲೆ ಮರದ ಕೊಂಬೆ ಬಿದ್ದಿದ್ದು, ಪರಿಣಾಮ ಐಟಿಪಿಎಲ್ – ಸತ್ಯಸಾಯಿ ಆಸ್ಪತ್ರೆ ಮಾರ್ಗದ ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಮೆಟ್ರೋ ಸ್ಟೇಷನ್​​ ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ.

ಬೆಂಗಳೂರಿನಲ್ಲಿ ಗುಡುಗು-ಸಿಡಿಲು ಗಾಳಿಯೊಂದಿಗೆ ಭಾರೀ ಮಳೆ, ನಮ್ಮ ಮೆಟ್ರೋ ಸಂಚಾರ ಸ್ಥಗಿತ
Purple Line Metro

Updated on: May 26, 2026 | 7:20 PM

ಬೆಂಗಳೂರು, (ಮೇ 26): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಭಾರೀ ಗುಡುಗು ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು (Rain), ಹಲವೆಡೆ ಭಾರೀ ಅವಾಂತರಗಳು ಸೃಷ್ಟಿಸಿದೆ. ಅದರಲ್ಲೂ ಮರದ ಕೊಂಬೆ ಬಿದ್ದು ಐಟಿಪಿಎಲ್ – ಸತ್ಯಸಾಯಿ ಆಸ್ಪತ್ರೆ ಮಾರ್ಗದ  ನಮ್ಮ ಮೆಟ್ರೋ (Namma Metro)  ಸಂಚಾರ ಸ್ಥಗಿತವಾಗಿದೆ. ಇದರಿಂದ ಮೆಟ್ರೋ ಸ್ಟೇಷನ್​​ಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದು, ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಮನೆಗೆ ಹೋಗಲಾದೇ ಮೆಟ್ರೋ ನಿಲ್ದಾಣಗಳಲ್ಲೇ ಪರದಾಡುತ್ತಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರು ನಗರದ ಹಲವೆಡೆ ಗುಡುಗು ಸಹಿತ ಭಾರಿ ಮಳೆ
  • ಮುಂಜಾಗ್ರತಾ ಕ್ರಮವಾಗಿ K.R.ಸರ್ಕಲ್ ಅಂಡರ್​ಪಾಸ್ ಬಂದ್
  • ಐಟಿಪಿಎಲ್ –ಸತ್ಯಸಾಯಿ ಆಸ್ಪತ್ರೆ ಮಾರ್ಗದ ಮೆಟ್ರೋ ಸಂಚಾರ ಸ್ಥಗಿತ
  • ಹಳಿ ಮೇಲೆ ಮರದ ಕೊಂಬೆ ಬಿದ್ದ ಹಿನ್ನೆಲೆ ಮೆಟ್ರೋ ಸಂಚಾರಕ್ಕೆ ಅಡ್ಡಿ

ಹಳಿ ಮೇಲೆ ಬಿದ್ದ ಮರದ ಕೊಂಬೆ

ಮರದ ಕೊಂಬೆ ಹಳಿ ಮೇಲೆ ಬಿದ್ದ ಹಿನ್ನೆಲೆ ನೇರಳೆ ಮಾರ್ಗದ ಐಟಿಪಿಎಲ್ – ಸತ್ಯಸಾಯಿ ಆಸ್ಪತ್ರೆ ಮಾರ್ಗದ ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ. ಇನ್ನು ಸಂಜೆ 6 ಗಂಟೆಯಿಂದ ವೈಟ್‌ಫೀಲ್ಡ್ – ಗರುಡಾಚಾರ ಪಾಳ್ಯ ನಡುವೆ ಮೆಟ್ರೋ ಸೇವೆ ಬಂದ್ ಆಗಿದ್ದು, ಗರುಡಾಚಾರ ಪಾಳ್ಯ – ಚಲ್ಲಘಟ್ಟ ನಡುವೆ ಮಾತ್ರ ಮೆಟ್ರೋ ಸಂಚಾರ ಲಭ್ಯವಿದೆ. ಇನ್ನು ಅಡಚಣೆ ತೆರವಿಗೆ ಬಿಎಂಆರ್‌ಸಿಎಲ್ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಶೀಘ್ರದಲ್ಲೇ ಮೆಟ್ರೋ ಸೇವೆ ಪುನರಾರಂಭವಾಗುವ ನಿರೀಕ್ಷೆ ಎಂದು ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ನಿಂದ ಮಾಹಿತಿ ನೀಡಿದೆ.

ಇದನ್ನೂ ಓದಿ: Karnataka Weather Forecast: ತಿಂಗಳಾಂತ್ಯದವರೆಗೂ ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಜೆ ಆಗುತ್ತಿದ್ದಂತೆ ವರುಣನ ಆರ್ಭಟ ಆರಂಭವಾಗಿದೆ. ನಗರದ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು,  ಹಲವೆಡೆ ಟ್ರಾಫಿಕ್ ​ಜಾಮ್ ಉಂಟಾಗಿದೆ. ಇದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ನಗರದ ಪ್ರಮುಖ ಕೇಂದ್ರಗಳಾದ ಮೆಜೆಸ್ಟಿಕ್, ಶಾಂತಿನಗರ, ಜಯನಗರ, ಜೆ.ಪಿ.ನಗರ, ವಸಂತನಗರ, ಕೆ.ಆರ್. ಮಾರ್ಕೆಟ್, ಬನಶಂಕರಿ, ಕೋಣನಕುಂಟೆ, ಯಲಹಂಕ ಹಾಗೂ ಹೆಬ್ಬಾಳ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಇನ್ನುಳಿದಂತೆ ಸದಾಶಿವನಗರ, ರಾಜಾಜಿನಗರ, ವಿಜಯನಗರ, ಲಗ್ಗೆರೆ, ಚಂದ್ರಲೇಔಟ್, ಇಂದಿರಾನಗರ, ನಂದಿನಿ ಲೇಔಟ್, ಗಿರಿನಗರ, ಮಹಾಲಕ್ಷ್ಮೀ ಲೇಔಟ್, ಸುಬ್ರಹ್ಮಣ್ಯ ನಗರ, ನಾಗರಭಾವಿ, ಮೂಡಲಪಾಳ್ಯ ಮತ್ತು ಬಸವನಗುಡಿ ಸೇರಿದಂತೆ ನಗರದ ಬಹುತೇಕ ಎಲ್ಲಾ ಕಡೆಗಳಲ್ಲೂ ಎಡಬಿಡದೆ ಮಳೆ ಸುರಿಯುತ್ತಿದೆ.

ಕೆಆರ್ ಸರ್ಕಲ್ ಅಂಡರ್ ಪಾಸ್ ಕ್ಲೋಸ್

ಭಾರೀ ಮಳೆಯಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕೆ ಆರ್ ಸರ್ಕಲ್ ಅಂಡರ್ ಪಾಸ್ ಕ್ಲೋಸ್ ಮಾಡಲಾಗಿದೆ. ಸಣ್ಣ ಮಳೆಗೂ ಕೆ ಆರ್ ಸರ್ಕಲ್ ಅಂಡರ್ ಪಾಸ್ ಜಲಾವೃತವಾಗುತ್ತೆ. ಹೀಗಾಗಿ ಪೊಲೀಸರು ಬ್ಯಾರಿಕೇಡ್ ಹಾಕಿ ಅಂಡರ್ ಪಾಸ್ ಬಂದ್ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:01 pm, Tue, 26 May 26

Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Follow Us