ಕಾವೇರಿ ನೀರು ಬೇಕೇ? ಮೊಬೈಲ್ ಆ್ಯಪ್ನಲ್ಲೇ ಬುಕ್ ಮಾಡಿ! ಜಲಮಂಡಳಿಯಿಂದ ಹೊಸ ಯೋಜನೆ
ಬೆಂಗಳೂರಿನ ಬೇಸಿಗೆ ನೀರಿನ ಸಮಸ್ಯೆ ಮತ್ತು ಟ್ಯಾಂಕರ್ ಮಾಫಿಯಾ ತಡೆಯಲು, ಜಲಮಂಡಳಿ ಮೊಬೈಲ್ ಆ್ಯಪ್ ಆರಂಭಿಸುತ್ತಿದೆ. ಈ ಆ್ಯಪ್ ಮೂಲಕ ಕಾವೇರಿ ನೀರಿನ ಟ್ಯಾಂಕರ್ಗಳನ್ನು ಬುಕ್ ಮಾಡಬಹುದು. ಜಿಪಿಎಸ್ ಟ್ರ್ಯಾಕಿಂಗ್ ಮತ್ತು ಒಟಿಪಿ ಪರಿಶೀಲನೆಯ ಮೂಲಕ ಪಾರದರ್ಶಕತೆ ಹೆಚ್ಚಿಸಲಾಗುವುದು ಎಂದು ಜಲಮಂಡಳಿ ತಿಳಿಸಿದೆ. ವಿವರಗಳು ಇಲ್ಲಿವೆ.

ಬೆಂಗಳೂರು, ಮಾರ್ಚ್ 18: ಬೇಸಗೆಯಲ್ಲಿ ಬೆಂಗಳೂರು (Bengaluru) ನಗರದ ನೀರಿನ ಸಮಸ್ಯೆ ತಪ್ಪಿಸಲು ಮತ್ತು ಟ್ಯಾಂಕರ್ ಮಾಫಿಯಾ ನಿಯಂತ್ರಿಸುವುದಕ್ಕಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಹೊಸ ಯೋಜನೆಯೊಂದನ್ನು ಜಾರಿಗೊಳಿಸಲು ಮುಂದಾಗಿದೆ. ಪೈಪ್ಲೈನ್ ಮೂಲಕ ಕಾವೇರಿ ನೀರು (Cauvery Water) ಪೂರೈಕೆ ವ್ಯವಸ್ಥೆ ಇಲ್ಲದ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿ ಟ್ಯಾಂಕರ್ ಮಾಫಿಯಾ ತಡೆಯುವುದಕ್ಕಾಗಿ ‘ವೆಬ್ ಆಧಾರಿತ ಮೊಬೈಲ್ ಅಡಾಪ್ಟಿವ್ ಅಪ್ಲಿಕೇಶನ್’ ಆರಂಭಿಸಲು ಮುಂದಾಗಿದೆ. ಇದೇ ಮೊದಲ ಬಾರಿಗೆ ಆ್ಯಪ್ ಮೂಲಕ ನೀರು ಬುಕಿಂಗ್ ವ್ಯವಸ್ಥೆ ಆರಂಭಿಸಲಾಗುತ್ತಿದ್ದು, ಆ್ಯಪ್ನ ಲಿಂಕ್ ಶೀಘ್ರದಲ್ಲೇ BWSSB ವೆಬ್ಸೈಟ್ನಲ್ಲಿ ದೊರೆಯಲಿದೆ.
ಮಾರ್ಚ್ ಅಂತ್ಯದ ವೇಳೆಗೆ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ. ಆ್ಯಪ್ ಮೂಲಕವೇ ನಗರವಾಸಿಗಳು ನೀರಿನ ಟ್ಯಾಂಕರ್ಗಳನ್ನು ಬುಕ್ ಮಾಡಲು ಮತ್ತು ನಿಗದಿತ ಸಮಯದೊಳಗೆ ನೀರು ಪಡೆಯಲು ಪೂರ್ವನಿರ್ಧರಿತ ಶುಲ್ಕವನ್ನು ಪಾವತಿಸಲು ಅವಕಾಶ ಇರಲಿದೆ. ಈ ಯೋಜನೆಯ ಬಹಳ ದೊಡ್ಡ ಪ್ರಯೋಜನವೆಂದರೆ, ಈ ಟ್ಯಾಂಕರ್ಗಳು ಬೋರ್ವೆಲ್ ನೀರನ್ನು ಪೂರೈಸುವುದಿಲ್ಲ. ಬದಲಿಗೆ ಪೈಪ್ ನೀರು ಸರಬರಾಜು ಲಭ್ಯವಿಲ್ಲದ ಪ್ರದೇಶಗಳಲ್ಲಿ ಸ್ಥಾಪಿಸಲಾದ 100-ಕ್ಕೂ ಹೆಚ್ಚು ಕಾವೇರಿ ನೀರಿನ ಸಂಪರ್ಕ ಕೇಂದ್ರಗಳಿಂದ ಕಾವೇರಿ ನೀರನ್ನು ಪೂರೈಸಲಿವೆ.
ಈ ಯೋಜನೆಗಾಗಿ 200 ಟ್ಯಾಂಕರ್ಗಳನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ವಿ ರಾಮ್ ಪ್ರಸಾತ್ ಮನೋಹರ್ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. 6,000 ಮತ್ತು 12,000 ಲೀಟರ್ ಸಾಮರ್ಥ್ಯದ ಈ ಟ್ಯಾಂಕರ್ಗಳು ದಿನಕ್ಕೆ ಸರಾಸರಿ ಎಂಟು ಟ್ರಿಪ್ಗಳಷ್ಟು ಕಾರ್ಯನಿರ್ವಹಿಸಬಹುದು. ಲಾಭವೂ ಇಲ್ಲ, ನಷ್ಟವೂ ಇಲ್ಲ ಎಂಬ ತತ್ವದ ಆಧಾರದಲ್ಲಿ ಈ ವ್ಯವಸ್ಥೆ ಕಾರ್ಯಾಚರಿಸಲಿದೆ. ಅಲ್ಲಿ ನೀರು ಮತ್ತು ಟ್ಯಾಂಕರ್ ವೆಚ್ಚವನ್ನು ಮೊದಲೇ ಲೆಕ್ಕಹಾಕಲಾಗುತ್ತದೆ ಮತ್ತು ಶುಲ್ಕವನ್ನು ನಿಗದಿಪಡಿಸಲಾಗುತ್ತದೆ ಎಂದು ಮನೋಹರ್ ಹೇಳಿದ್ದಾರೆ.
ಹೇಗೆ ಕಾರ್ಯನಿರ್ವಹಿಸಲಿದೆ ಆ್ಯಪ್ ಆಧಾರಿತ ಟ್ಯಾಂಕರ್ ನೀರು ಪೂರೈಕೆ?
ಆ್ಯಪ್ ಆಧಾರಿತ ವ್ಯವಸ್ಥೆಯಲ್ಲಿ ಎಲ್ಲವನ್ನೂ ಸಾಫ್ಟ್ವೇರ್ನಲ್ಲಿ ಸಂಯೋಜಿಸಲಾಗಿದ್ದು, ಅಲ್ಲಿ ಬುಕಿಂಗ್ ಮತ್ತು ಪಾವತಿಗಳನ್ನು ಡಿಜಿಟಲ್ ರೂಪದಲ್ಲಿ ಮಾಡಲಾಗುತ್ತದೆ ಎಂದು ಮನೋಹರ್ ತಿಳಿಸಿದ್ದಾರೆ. ಇದು ಮನಬಂದಂತೆ ಹಣ ವಸೂಲಿ ಮಾಡುವ ಟ್ಯಾಂಕರ್ ಮಾಫಿಯಾ ಸಮಸ್ಯೆಗೆ ಕಡಿವಾಣ ಹಾಕಲಿದೆ. ಪ್ರತಿ ಟ್ಯಾಂಕರ್ಗೆ ಜಿಪಿಎಸ್ ಅಳವಡಿಸಲಾಗುತ್ತದೆ. ಇದರಲ್ಲಿ ಗ್ರಾಹಕರು ಅದನ್ನು ಟ್ರ್ಯಾಕ್ ಮಾಡಬಹುದು ಮತ್ತು ಬುಕಿಂಗ್ ಸಮಯದಲ್ಲಿ ಗ್ರಾಹಕರ ವಿತರಣಾ ವಿಳಾಸದ ಜಿಪಿಎಸ್ ನಿರ್ದೇಶಾಂಕಗಳನ್ನು ಪಡೆಯಲಾಗುತ್ತದೆ. ಗ್ರಾಹಕರಿಗೆ ಒಟಿಪಿ ಕಳುಹಿಸಲಾಗುತ್ತದೆ ಮತ್ತು ಅವರು ಅದನ್ನು ಟ್ಯಾಂಕರ್ ಸಿಬ್ಬಂದಿಯೊಂದಿಗೆ ಹಂಚಿಕೊಂಡ ನಂತರವೇ ಅವರಿಗೆ ನೀರು ಸರಬರಾಜು ಮಾಡಲಾಗುತ್ತದೆ. ಅವರು ಒಟಿಪಿ ನೀಡಿದ ನಂತರವೇ ನೀರನ್ನು ತಲುಪಿಸಲಾಗುತ್ತದೆ. ಟ್ಯಾಂಕರ್ನಲ್ಲಿ ಆಟೋಮ್ಯಾಟಿಕ್ ಎನೇಬಲ್ಡ್ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ (ಆರ್ಎಫ್ಐಡಿ) ವ್ಯವಸ್ಥೆ ಇದ್ದು, ಎಷ್ಟು ಲೀಟರ್ ನೀರು ತುಂಬಿದೆ ಎಂಬುದನ್ನು ಅದಾಗಿಯೇ ಲೆಕ್ಕಾಚಾರ ಮಾಡುವ ರೀತಿಯಲ್ಲಿ ಸಾಫ್ಟ್ವೇರ್ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಲಕ್ಕಿ ಭಾಸ್ಕರ್ ಸಿನಿಮಾ ಮಾದರಿಯಲ್ಲಿ ವೃದ್ಧೆಗೆ 50 ಲಕ್ಷ ರೂ. ವಂಚಿಸಿದ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್
ನೀರು ಪೂರೈಕೆ ಸಮಯ
ಈ ಯೋಜನೆಯಡಿ ಟ್ಯಾಂಕರ್ಗಳಿಗೆ ತುಂಬಿಸುವ ನೀರು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಪ್ರಮಾಣೀಕೃತ ಗುಣಮಟ್ಟದ್ದಾಗಿದೆ. ಬುಕಿಂಗ್ಗಳನ್ನು 24 ಗಂಟೆಗಳ ಮುಂಚಿತವಾಗಿ ಮಾಡಬೇಕು ಮತ್ತು ಪೂರೈಕೆ ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾಗಿ ರಾತ್ರಿ 10 ಗಂಟೆಗೆ ವರೆಗೆ ಇರಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:51 am, Tue, 18 March 25