
ಬೆಂಗಳೂರು, ನವೆಂಬರ್ 4: ರೈಲಿನಲ್ಲಿ ಎಲ್ಲಿಗಾದರೂ ಪ್ರಯಾಣ ಮಾಡಬೇಕಿದ್ದರೆ, ರೈಲ್ವೆ ನಿಲ್ದಾಣದಲ್ಲಿಯೇ ಟಿಕೆಟ್ ಖರೀದಿಸುತ್ತೇವೆ ಎಂದರೆ ಮುಗಿದೇ ಹೋಯಿತು. ಟಿಕೆಟ್ ಖರೀದಿಗೆ ಸರದಿ ನಿಲ್ಲಬೇಕು. ಅಷ್ಟೇ ಅಲ್ಲದೆ, ಚಿಲ್ಲರೆ ಸಹಿತ ಅನೇಕ ಸಮಸ್ಯೆ ಎದುರಿಸಬೇಕು. ಆದರೆ ಇದೀಗ ನೈಋತ್ಯ ರೈಲ್ವೆ (South Western Railway) ಬೆಂಗಳೂರಿನ (Bengaluru) ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ (KSR) ನಿಲ್ದಾಣದಲ್ಲಿ Mobile unreserved ticketing system (MUTS) ಸಹಾಯಕ್ ಪರಿಚಯ ಮಾಡಿದೆ. ಇದರಿಂದ, ಇನ್ಮುಂದೆ ಕೆಎಸ್ಆರ್ ರೈಲ್ವೆ ನಿಲ್ದಾಣ ಪ್ರವೇಶಿಸುತ್ತಿದ್ದಂತೆಯೇ ಪ್ರಯಾಣಿಕರು ಇರುವ ಸ್ಥಳಕ್ಕೆ ಬಂದು ಟಿಕೆಟ್ ಮಷಿನ್ಗಳ ಮೂಲಕ ರೈಲ್ವೆ ಸಿಬ್ಬಂದಿ ಟಿಕೆಟ್ ನೀಡಲಿದ್ದಾರೆ.
ದೇಶದಲ್ಲಿ ಐದು ರೈಲ್ವೆ ಸ್ಟೇಷನ್ಳಲ್ಲಿ ಈ ವ್ಯವಸ್ಥೆ ಜಾರಿ ಮಾಡಲು ರೈಲ್ವೆ ಇಲಾಖೆ ಸಿದ್ದತೆ ಮಾಡಿಕೊಂಡಿದ್ದು, ಪ್ರಾಯೋಗಿಕವಾಗಿ ಮೊದಲಿಗೆ ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಪರಿಚಯ ಮಾಡಲಾಗಿದೆ. ವೀಕೆಂಡ್ ಅಥವಾ ಹಬ್ಬಗಳ ಸಂದರ್ಭದಲ್ಲಿ ಕೆಎಸ್ಎಆರ್ ರೈಲ್ವೆ ನಿಲ್ದಾಣಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಪ್ರಯಾಣಿಕರು ಬರುತ್ತಾರೆ. ಜನರ ದಟ್ಟಣೆ ನಿಯಂತ್ರಣಕ್ಕಾಗಿ ಈ MUTS ಸಹಾಯಕ್ ಆರಂಭಿಸಲಾಗಿದ್ದು, ಇದರಿಂದ ಪ್ರಯಾಣಿಕರು ಗಂಟೆಗಟ್ಟಲೇ ಸರದಿಯಲ್ಲಿ ನಿಲ್ಲುವ ಅನಿವಾರ್ಯತೆ ತಪ್ಪಲಿದೆ.
MUTS ಸಹಾಯಕ್ ಮೂಲಕ ಟಿಕೆಟ್ ಖರೀದಿ ಮಾಡಿದರೆ ಶೇ 3 ರಷ್ಟು ರಿಯಾಯಿತಿ ಕೂಡ ದೊರೆಯಲಿದೆ. ಪ್ರತಿದಿನ ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಸಾವಿರಾರು ಪ್ರಯಾಣಿಕರು ಇದ್ದಲ್ಲಿಗೆ ಹೋಗಿ ಸಹಾಯಕ್ಗಳು ಟಿಕೆಟ್ ಕೊಡಲಿವೆ. ಇದು ಯಶಸ್ವಿಯಾದರೆ ರಾಜ್ಯದ ಎಲ್ಲಾ ರೈಲ್ವೆ ನಿಲ್ದಾಣಗಳಿಗೆ ವಿಸ್ತರಿಸುವ ಗುರಿಯನ್ನು ನೈಋತ್ಯ ರೈಲ್ವೆ ಹಾಕಿಕೊಂಡಿದೆ. MUTS ಸಹಾಯಕ್ ಮೂಲಕ ಟಿಕೆಟ್ ಪಡೆದ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಆರೇ ವರ್ಷಕ್ಕೇ ಕಲಬುರಗಿ ಬೆಂಗಳೂರು ವಿಮಾನ ಸಂಚಾರ ಬಂದ್! ಸ್ತಬ್ಧವಾಯ್ತು ಕಲಬುರಗಿ ವಿಮಾನ ನಿಲ್ದಾಣ
ಒಟ್ಟಿನಲ್ಲಿ, ಈ MUTS ಸಹಾಯಕ್ನಿಂದ ಪ್ರಯಾಣಿಕರು ಟಿಕೆಟ್ ಖರೀದಿಸಲು ಸರದಿ ಸಾಲಿನಲ್ಲಿ ನಿಲ್ಲುವುದು ತಪ್ಪುವುದರಲ್ಲಿ ಅನುಮಾನ ಇಲ್ಲ.