ವೈಟ್​ಫೀಲ್ಡ್​​ನಲ್ಲಿ ನಾಪತ್ತೆಯಾಗಿದ್ದ ಬಾಲಕ ಹೈದರಾಬಾದ್​​ನ ನಾಂಪಲ್ಲಿಯಲ್ಲಿ ಪತ್ತೆ

ಹುಡುಗನ ಬಳಿ ಸೀಮಿತ ನಗದು ಇತ್ತು ಮತ್ತು ಅವನು ಹೇಗೆ ಹೈದರಾಬಾದ್ ತಲುಪಿದನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪೋಷಕರು ಬಾಲಕನೊಂದಿಗೆ ಮಾತನಾಡಿದ್ದಾರೆ ಮತ್ತು ಅವನನ್ನು ಕರೆದುಕೊಂಡು ಬರಲು ತೆರಳುತ್ತಿದ್ದಾರೆ.

ವೈಟ್​ಫೀಲ್ಡ್​​ನಲ್ಲಿ ನಾಪತ್ತೆಯಾಗಿದ್ದ ಬಾಲಕ ಹೈದರಾಬಾದ್​​ನ ನಾಂಪಲ್ಲಿಯಲ್ಲಿ ಪತ್ತೆ
ಪರಿಣವ್
Follow us
| Updated By: ಗಣಪತಿ ಶರ್ಮ

Updated on: Jan 24, 2024 | 10:38 AM

ಬೆಂಗಳೂರು, ಜನವರಿ 24: ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ (Whitefield) ನಿಗೂಢವಾಗಿ ನಾಪತ್ತೆಯಾಗಿದ್ದ 12 ವರ್ಷದ ಬಾಲಕ ಪರಿಣವ್​ನನ್ನು ಪೊಲೀಸರು ಹೈದರಾಬಾದ್‌ನ ನಾಂಪಲ್ಲಿ (Nampally) ಮೆಟ್ರೋ ನಿಲ್ದಾಣದಲ್ಲಿ ಪತ್ತೆ ಹಚ್ಚಿದ ನಂತರ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಬುಧವಾರ ಬೆಳಗ್ಗೆ ಪೊಲೀಸರು ಬಾಲಕನನ್ನು ಪತ್ತೆ ಹಚ್ಚಿದ್ದು, ಆತ ಸುರಕ್ಷಿತವಾಗಿದ್ದಾನೆ.

ಜನವರಿ 21ರ ಭಾನುವಾರದಂದು ವೈಟ್‌ಫೀಲ್ಡ್‌ನಲ್ಲಿ ಟ್ಯೂಷನ್ ತರಗತಿ ಮುಗಿಸಿ ಹಿಂತಿರುಗುತ್ತಿದ್ದಾಗ ಪರಿಣವ್ ನಾಪತ್ತೆಯಾಗಿದ್ದ. ತಂದೆ ತಡವಾಗಿ ಟ್ಯೂಷನ್ ತರಗತಿ ನಡೆಯತ್ತಿದ್ದಲ್ಲಿಗೆ ಬಂದಿದ್ದಾಗ ಬಾಲಕ ಅಲ್ಲಿಂದ ತೆರಳಿರುವುದು ಗೊತ್ತಾಗಿತ್ತು. ಅಂದಿನಿಂದ ಆತ ನಾಪತ್ತೆಯಾಗಿದ್ದ. ಮಾರತ್ತಹಳ್ಳಿ, ಯಮಲೂರು ಮತ್ತು ಮೆಜೆಸ್ಟಿಕ್‌ನಲ್ಲಿರುವ ವಿವಿಧ ಸಿಸಿಟಿವಿ ಕ್ಯಾಮೆರಾಗಳಲ್ಲಿ ಬಾಲಕನ ಚಲನವಲನಗಳು ಪತ್ತೆಯಾಗಿದ್ದವು.

ಹುಡುಗನ ಬಳಿ ಸೀಮಿತ ನಗದು ಇತ್ತು ಮತ್ತು ಅವನು ಹೇಗೆ ಹೈದರಾಬಾದ್ ತಲುಪಿದನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪೋಷಕರು ಬಾಲಕನೊಂದಿಗೆ ಮಾತನಾಡಿದ್ದಾರೆ ಮತ್ತು ಅವನನ್ನು ಕರೆದುಕೊಂಡು ಬರಲು ತೆರಳುತ್ತಿದ್ದಾರೆ. ಪರಿಣವ್ ತಾಯಿ ನಿವೇದಿತಾ ಅವರು ತಮ್ಮ ಮಗ ಸುರಕ್ಷಿತ ಮತ್ತು ಆರೋಗ್ಯವಾಗಿದ್ದಾರೆ ಎಂದು ಖಚಿತಪಡಿಸಿದ್ದಾರೆ.

ಹುಡುಗನ ಬಳಿ ಹಣವಿರಲಿಲ್ಲ. ಹಣಕ್ಕಾಗಿ ಆತ ವ್ಯಕ್ತಿಯೊಬ್ಬನಿಗೆ ತನ್ನ ಪಾರ್ಕರ್ ಪೆನ್ ಮಾರಾಟ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದು ಕಂಡುಬಂದಿದೆ ಎಂದು ಪರಿಣವ್ ತಂದೆ ಸುಕೇಶ್ ತಿಳಿಸಿದ್ದಾರೆ.

ಪರಿಣವ್ ಭಾನುವಾರ ಮಧ್ಯಾಹ್ನ 12.15ರ ಸುಮಾರಿಗೆ ನಾಪತ್ತೆ ಆಗಿದ್ದ. ಆತ ಟ್ಯೂಷನ್ ಸೆಂಟರ್​ನಿಂದ ಮಾರತ್ತಹಳ್ಳಿವರೆಗೆ ನಡೆದುಬಂದಿದ್ದು, ನಂತರ ಬಿಎಂಟಿಸಿ ಬಸ್ ಹತ್ತಿರುವ ಸಿಸಿಕ್ಯಾಮರಾ ದೃಶ್ಯ ಲಭ್ಯವಾಗಿತ್ತು. ಈ ಸಂಬಂಧ ವೈಟ್​ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಕ್ಷಣವೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದರು.

ಇದನ್ನೂ ಓದಿ: ಟ್ಯೂಷನ್​ಗೆ ತೆರಳಿದ್ದ 12 ವರ್ಷದ ಬಾಲಕ ನಾಪತ್ತೆ! ವೈಟ್​ಫೀಲ್ಡ್ ಠಾಣೆಯಲ್ಲಿ ಕೇಸ್ ದಾಖಲು

ಬೈಕ್​ಗೆ ಕ್ಯಾಂಟರ್ ಡಿಕ್ಕಿ, ಬೈಕ್ ಸವಾರ ಸಾವು

ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ಚಿಕ್ಕಬಿದರಕಲ್ಲು ಬಳಿ ಬೈಕ್​​ಗೆ ಕ್ಯಾಂಟರ್ ಡಿಕ್ಕಿಯಾಗಿ ಬೈಕ್​​ ಸವಾರ ಜಗದೀಶ್ (42) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಮಧ್ಯೆ, ಕ್ಯಾಂಟರ್ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ