ಬೆಂಗಳೂರು ನಮ್ಮ ಮನೆ, ಬೇರೆ ಕಡೆ ಹೋಗಲ್ಲ: ಬ್ಲಾಕ್ಬಕ್ ಕಂಪನಿ ಸಿಇಒ ರಾಜೇಶ್ ಯಾಬಾಜಿ ಸ್ಪಷ್ಟನೆ
ರಸ್ತೆಗುಂಡಿಯಿಂದ ರೋಸಿ ಹೋಗಿರುವ ಐಟಿ ಕಂಪನಿಗಳು ಬೆಂಗಳೂರು ತೊರೆಯುವ ನಿರ್ಧಾರಕ್ಕೆ ಮುಂದಾಗಿದ್ದವು. ಈ ವಿಚಾರ ಸಾಕಷ್ಟು ಚರ್ಚೆಗೆ ಕೂಡ ಗ್ರಾಸವಾಗಿತ್ತು. ಸದ್ಯ ಈ ವಿಚಾರವಾಗಿ ಬ್ಲಾಕ್ಬಕ್ ಕಂಪನಿ ಸಿಇಒ ರಾಜೇಶ್ ಯಾಬಾಜಿ ಟ್ವೀಟ್ ಮಾಡಿದ್ದು, ನಾವು ಬೆಂಗಳೂರು ತೊರೆಯುವುದಿಲ್ಲ, ಆದರೆ ಬೆಂಗಳೂರಿನಲ್ಲೇ ಬೇರೆಡೆ ಸ್ಥಳಾಂತರಗೊಳ್ಳುವುದಾಗಿ ಹೇಳಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 19: ನಗರದ ರಸ್ತೆಗುಂಡಿಯಿಂದ (Pothole) ಜನಸಾಮಾನ್ಯರು ಸೇರಿದಂತೆ ದೊಡ್ಡ ದೊಡ್ಡ ಕಂಪನಿಗಳು ರೋಸಿ ಹೋಗಿವೆ. ಹೀಗಾಗಿ ಐಟಿ ಕಂಪನಿಗಳು ಬೆಂಗಳೂರನ್ನೇ ತೊರೆಯುವ ನಿರ್ಧಾರಕ್ಕೆ ಮುಂದಾಗಿದ್ದರು. ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕೂಡ ಟ್ವೀಟ್ ಮೂಲಕ ಬೆಂಗಳೂರು ತೊರೆಯದಂತೆ ಮನವಿ ಮಾಡಿದ್ದರು. ಇದೀಗ ಈ ವಿಚಾರವಾಗಿ ‘ನಾವು ಬೆಂಗಳೂರು ತೊರೆಯುವುದಿಲ್ಲ’ ಎಂದು ಬ್ಲಾಕ್ಬಕ್ ಕಂಪನಿ ಸಿಇಒ ರಾಜೇಶ್ ಯಾಬಾಜಿ (Rajesh Yabaji) ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು ತೊರೆಯುವ ಮಾತು ತಳ್ಳಹಾಕಿದ ರಾಜೇಶ್ ಯಾಬಾಜಿ
ಏನ್ರೋಡ್ ಗುರೂ ಅಂತಾ ಟಿವಿ9 ಅಭಿಯಾನದ ಬಳಿಕ ಶಾಲಾ ಮಕ್ಕಳು, ಉದ್ಯಮಿಗಳು ಕೂಡ ರಸ್ತೆ ಬಗ್ಗೆ ಧ್ವನಿ ಎತ್ತಿದ್ದಾರೆ. ಈ ರಸ್ತೆಯಲ್ಲಿ ಹೆಜ್ಜೆಗೊಂದು ಸಂಕಷ್ಟ ಶುರುವಾಗುತ್ತೆ. ಅಷ್ಟಕ್ಕೂ ರಸ್ತೆಗುಂಡಿಯಿಂದ ನಾವು ರೋಸಿ ಹೋಗಿದ್ದೇವೆ. ಬೆಂಗಳೂರನ್ನೇ ತೊರೆಯುತ್ತೇವೆ ಅಂತಾ ನಿನ್ನೆಯಷ್ಟೇ ಬ್ಲಾಕ್ಬಕ್ ಕಂಪನಿ ಸಿಇಒ, ರಾಜೇಶ್ ಯಾಬಾಜಿ ಆಕ್ರೋಶ ಹೊರಹಾಕಿದ್ದರು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ನಾವು ನಗರದಲ್ಲೇ ಬೇರೊಂದು ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಿದ್ದೇವೆ ಎಂದಿದ್ದಾರೆ. ಆ ಮೂಲಕ ಬೆಂಗಳೂರು ತೊರೆಯುವ ಮಾತನ್ನು ತಳ್ಳಿಹಾಕಿದ್ದಾರೆ.
ರಾಜೇಶ್ ಯಾಬಾಜಿ ಟ್ವೀಟ್
— Rajesh Yabaji (@YABAJI) September 18, 2025
ಈ ಬಗ್ಗೆ ರಾಜೇಶ್ ಯಾಬಾಜಿ ಟ್ವೀಟ್ ಮಾಡಿದ್ದು, 2015 ರಲ್ಲಿ ಬೆಂಗಳೂರಿನ ಕೋರಮಂಗಲದ ಸೋನಿ ಸಿಗ್ನಲ್ ಬಳಿ ಬ್ಲಾಕ್ಬಕ್ ತನ್ನ ಸಣ್ಣ ಕಂಪನಿಯೊಂದನ್ನು ಆರಂಭಿಸಿತು. ನಾವು ನಮ್ಮ ಕಾರ್ಯಾ ಮತ್ತು ತಂಡವನ್ನು ವಿಸ್ತರಿಸುತ್ತಿದ್ದಂತೆ, ದೊಡ್ಡ ಸ್ಥಳವುಳ್ಳ ಕಚೇರಿ ಮತ್ತು ಸೂಕ್ತ ಸೌಲಭ್ಯಗಳಿಗಾಗಿ ನಾವು 2016 ರಲ್ಲಿ ಬೆಳ್ಳಂದೂರು – ಹೊರ ವರ್ತುಲ ರಸ್ತೆಗೆ ಸ್ಥಳಾಂತರಗೊಂಡೆವು.
ಇದನ್ನೂ ಓದಿ: Bengaluru Potholes: ಬೆಂಗಳೂರು ರಸ್ತೆ ಗುಂಡಿ, ಟಿವಿ9 ರಿಯಾಲಿಟಿ ಚೆಕ್ನಲ್ಲಿ ಬಯಲಾಯ್ತು ಮತ್ತಷ್ಟು ಅವ್ಯವಸ್ಥೆ
ಹೊರ ವರ್ತುಲ ರಸ್ತೆ, ಬೆಂಗಳೂರು ನಗರ ಮತ್ತು ಕರ್ನಾಟಕ ರಾಜ್ಯವು, ನಮ್ಮ ಕಂಪನಿಗೆ ಅಗತ್ಯವಿರುವ ಸಂಪನ್ಮೂಲ, ಮೂಲಸೌಕರ್ಯ, ಪ್ರತಿಭೆ ಮತ್ತು ಅವಕಾಶಗಳೊಂದಿಗೆ ದೊಡ್ಡ ಕಂಪನಿಯಾಗಿ ಬೆಳೆಯಲು ಅನುವು ಮಾಡಿಕೊಟ್ಟಿದೆ. ಇದು ಭಾರತದ ಟ್ರಕ್ಕಿಂಗ್ ಪರಿಸರ ವ್ಯವಸ್ಥೆಯಾದ್ಯಂತ ಪರಿಣಾಮ ಬೀರಿದೆ.
ಕಳೆದ ದಶಕದಲ್ಲಿ ಕರ್ನಾಟಕ ತಂತ್ರಜ್ಞಾನ-ಪರಿಸರ ವ್ಯವಸ್ಥೆಯ ಅತಿದೊಡ್ಡ ಫಲಾನುಭವಿಗಳಲ್ಲಿ ಒಬ್ಬರಾಗಿ, ಬೆಂಗಳೂರು ನಗರವು ನಾವು ಏನು ಸಾಧಿಸಲು ಸಹಾಯ ಮಾಡಿದೆ ಮತ್ತು ಮುಂದಿನ ನಮ್ಮ ಸಾಮರ್ಥ್ಯದ ಬಗ್ಗೆ ಅದು ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ. ಆದ್ದರಿಂದ, ನಾವು ನಗರವನ್ನು ತೊರೆಯುತ್ತಿದ್ದೇವೆ ಎಂದು ಹೇಳುತ್ತಿರುವ ಮಾತನನ್ನು ನಾವು ಏಕಪಕ್ಷೀಯವಾಗಿ ನಿರಾಕರಿಸುತ್ತೇವೆ ಎಂದಿದ್ದಾರೆ.
ನಾವು ನಗರದಲ್ಲೇ ಬೇರೆ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಿದ್ದೇವೆ. ಆ ಮೂಲಕ ನಮ್ಮ ಉದ್ಯೋಗಿಗಳಿಗೆ ಪ್ರಯಾಣ ಮತ್ತಷ್ಟು ಸುಗಮಗೊಳಿಸುತ್ತದೆ. ಆದ್ದರಿಂದ ಉತ್ತಮ ವ್ಯಾಪಾರ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಮೂಲಸೌಕರ್ಯ ಸುಧಾರಣೆಗಳನ್ನು ಸಕ್ರಿಯಗೊಳಿಸಲು ನಾವು ಸಂಬಂಧಪಟ್ಟ ಅಧಿಕಾರಿಗಳಿಂದ ಸಹಾಯವನ್ನು ಪಡೆಯುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಗುಂಡಿ ಅಪಮಾನಕ್ಕೆ ಸಿಎಂ, ಡಿಸಿಎಂ ಹೊಣೆ ಎಂದ ಕುಮಾರಸ್ವಾಮಿ: ರಾಜಧಾನಿ ಬಿಡದಂತೆ ಕಂಪನಿಗಳಿಗೆ ಮನವಿ
ಇನ್ನು ನಾವು ಬೆಂಗಳೂರು ನಗರದಲ್ಲಿಯೇ ಮುಂದುವರಿಯುವುದಲ್ಲದೆ, ಇಲ್ಲಿ ನಮ್ಮ ಹೆಜ್ಜೆಗುರುತನ್ನು ಮೂಡಿಸಲು ಬಯಸುತ್ತೇವೆ. ಬೆಂಗಳೂರು ನಮ್ಮ ಮನೆಯಾಗಿದ್ದು, ಮುಂದೆಯೂ ಮನೆಯಾಗಿ ಇರಲಿದೆ. ನಮ್ಮ ಅಗತ್ಯತೆಗಳು ಮತ್ತು ಸಮಸ್ಯೆಗಳನ್ನು ಸಂಬಂಧಿತ ಸರ್ಕಾರಿ ಅಧಿಕಾರಿಗಳ ಗಮನಕ್ಕೆ ತಂದು ಅವುಗಳನ್ನು ಪರಿಹರಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದು ರಾಜೇಶ್ ಯಾಬಾಜಿ ಟ್ವೀಟ್ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







