
ಬೆಂಗಳೂರು, ಜುಲೈ 1: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಸಂಚಾರ ದಟ್ಟಣೆ ನಿವಾರಣೆಗೆ ಮದ್ದಾಗಬೇಕಿದ್ದ ನಮ್ಮ ಮೆಟ್ರೋದ ಬಹುನಿರೀಕ್ಷಿತ ಸರ್ಜಾಪುರ-ಹೆಬ್ಬಾಳ ‘ಕೆಂಪು ಮಾರ್ಗದ (Red Line)’ ಡಬಲ್ ಡೆಕ್ಕರ್ ಫ್ಲೈ ಓವರ್ ಯೋಜನೆಗೆ ಭಾರತೀಯ ವಿಜ್ಞಾನ ಸಂಸ್ಥೆಯ (IISc) ತಜ್ಞರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೆಟ್ರೋ ಮಾರ್ಗದ ಮೇಲೆಯೇ ರಸ್ತೆ ಫ್ಲೈ ಓವರ್ ನಿರ್ಮಿಸುವ ಈ ಡಬಲ್ ಡೆಕ್ಕರ್ ಮಾದರಿಯಿಂದ ಯಾವುದೇ ಲಾಭವಿಲ್ಲ, ಬದಲಿಗೆ ಇದು ಪರಿಸರಕ್ಕೆ ಅತ್ಯಂತ ಮಾರಕ ಎಂದು ಐಐಎಸ್ಸಿ ವರದಿ ಎಚ್ಚರಿಸಿದೆ. ಈಗಾಗಲೇ ಅಂದಾಜು ವೆಚ್ಚ ಹೆಚ್ಚಾಗಿದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ಈ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು (DPR) ತಿರಸ್ಕರಿಸಿರುವ ಬೆನ್ನಲ್ಲೇ ತಜ್ಞರ ಈ ವರದಿ ಹೊರಬಿದ್ದಿರುವುದು ಬಿಎಂಆರ್ಸಿಎಲ್ (BMRCL) ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ.
ಐಐಎಸ್ಸಿಯ ಸಾರಿಗೆ ತಜ್ಞ ಪ್ರೊ. ಆಶಿಶ್ ವರ್ಮಾ ನೇತೃತ್ವದಲ್ಲಿ ನಡೆದ ವೈಜ್ಞಾನಿಕ ಅಧ್ಯಯನದ ಪ್ರಕಾರ, ಮೆಟ್ರೋ ಮಾರ್ಗದ ಮೇಲೆಯೇ ರಸ್ತೆ ಫ್ಲೈ ಓವರ್ ನಿರ್ಮಿಸುವುದರಿಂದ ಜನರು ಸಾರ್ವಜನಿಕ ಸಾರಿಗೆಯಿಂದ ವಿಮುಖರಾಗಿ, ಖಾಸಗಿ ವಾಹನಗಳ ಬಳಕೆಗೆ ಮುಂದಾಗಲಿದ್ದಾರೆ. 2041ರ ವೇಳೆಗೆ ಈ ಯೋಜನೆಯಿಂದಾಗಿ ನಗರದಲ್ಲಿ ಕಾರುಗಳ ಬಳಕೆ ಶೇ 3.65 ರಿಂದ ಶೇ 7.45 ಕ್ಕೆ ಮತ್ತು ದ್ವಿಚಕ್ರ ವಾಹನಗಳ ಬಳಕೆ ಶೇ 18.31 ರಿಂದ ಶೇ 19.59 ಕ್ಕೆ ಏರಿಕೆಯಾಗಲಿದೆ. ಇದರ ನೇರ ಪರಿಣಾಮವಾಗಿ ಮೆಟ್ರೋ ರೈಲು ಬಳಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಪ್ರತಿದಿನ ಬರೋಬ್ಬರಿ 11,000 ದಷ್ಟು ಭಾರಿ ಕುಸಿತ ಉಂಟಾಗಲಿದೆ ಎಂದು ವರದಿ ಸ್ಪಷ್ಟಪಡಿಸಿದೆ. 37 ಕಿಲೋಮೀಟರ್ ಉದ್ದದ ಈ ಯೋಜನೆಗೆ 2024ರಲ್ಲಿ ರಾಜ್ಯ ಸರ್ಕಾರ 28,405 ಕೋಟಿ ರೂ. ವೆಚ್ಚದಲ್ಲಿ ಅನುಮೋದನೆ ನೀಡಿ ಕೇಂದ್ರಕ್ಕೆ ಕಳುಹಿಸಿತ್ತು.
ಡಬಲ್ ಡೆಕ್ಕರ್ ವಿನ್ಯಾಸಕ್ಕಾಗಿ ಮೆಟ್ರೋ ಪಿಲ್ಲರ್ಗಳ ಸೂಪರ್ ಸ್ಟ್ರಕ್ಚರ್ ವೆಚ್ಚ ಶೇ 125 ರಷ್ಟು ಮತ್ತು ಸಬ್ ಸ್ಟ್ರಕ್ಚರ್ ವೆಚ್ಚ ಶೇ 60 ರಷ್ಟು ಹೆಚ್ಚಾಗಲಿದ್ದು, ಇದರಿಂದ ಬಿಎಂಆರ್ಸಿಎಲ್ ಮೇಲೆ ಅಂದಾಜು 2,863.54 ಕೋಟಿ ರೂ. ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ.
ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ನಿಯಮಾವಳಿಗಳ ಪ್ರಕಾರ ಯಾವುದೇ ಮೆಟ್ರೋ ಯೋಜನೆಯ ಆರ್ಥಿಕ ಆಂತರಿಕ ಆದಾಯ ದರ (EIRR) ಕನಿಷ್ಠ ಶೇ 14 ರಷ್ಟಿರಬೇಕು. ಆದರೆ, ಈ ಡಬಲ್ ಡೆಕ್ಕರ್ ಯೋಜನೆಯ ಒಟ್ಟಾರೆ ಇಐಆರ್ಆರ್ ಕೇವಲ ಶೇ 5.43 ರಷ್ಟಿದ್ದು, ಇದು ಆರ್ಥಿಕವಾಗಿ ಸಂಪೂರ್ಣ ನಷ್ಟದ ಯೋಜನೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಫ್ಲೈ ಓವರ್ ನಿರ್ಮಾಣದಿಂದ ಖಾಸಗಿ ವಾಹನಗಳ ಓಡಾಟ ಹೆಚ್ಚಾಗುವುದರಿಂದ ಪ್ರತಿದಿನ 7,000 ಲೀಟರ್ ಹೆಚ್ಚುವರಿ ಇಂಧನ ವ್ಯರ್ಥವಾಗಲಿದ್ದು, ಇದರಿಂದ ಪ್ರತಿನಿತ್ಯ 6.45 ಲಕ್ಷ ರೂ. ನಷ್ಟವಾಗಲಿದೆ. ಅಲ್ಲದೆ, ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ ಪ್ರತಿದಿನ 17,011.6 ಕೆ.ಜಿ ಯಷ್ಟು ಹೆಚ್ಚಳವಾಗಲಿದ್ದು, ಬೆಂಗಳೂರಿನ ಪರಿಸರದ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ರೆಡ್ ಲೈನ್ ವೆಚ್ಚ ಕಡಿತಕ್ಕೆ ಒಂದು ಸ್ಟೇಷನನ್ನೇ ಕೈಬಿಡಲು ನಿರ್ಧರಿಸಿದ ಬಿಎಂಆರ್ಸಿಎಲ್!
ಒಟ್ಟಾರೆಯಾಗಿ ಈ ಯೋಜನೆಯು ಕೇಂದ್ರ ಸರ್ಕಾರದ ಸಮಗ್ರ ಸಾರಿಗೆ ನೀತಿ (CMP) ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ ಎಂದು ಐಐಎಸ್ಸಿ ವರದಿ ತಿಳಿಸಿದೆ. ಈ ವರದಿಯ ಹಿನ್ನೆಲೆಯಲ್ಲಿ ಬಿಎಂಆರ್ಸಿಎಲ್ ಮುಂದಿನ ನಡೆ ತೀವ್ರ ಕುತೂಹಲ ಮೂಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:07 am, Wed, 1 July 26