ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹಸಚಿವಾಲಯದಿಂದ ಬ್ರೇಕ್​​: ಕರ್ನಾಟಕ ಸರ್ಕಾರಕ್ಕೆ ಹಿನ್ನಡೆ

ಕರ್ನಾಟಕ ಸರ್ಕಾರದ 'ದ್ವೇಷ ಭಾಷಣ ತಡೆ ಮಸೂದೆ'ಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್ ಹಾಕಿದ್ದು, ಬಿಎನ್‌ಎಸ್ (BNS) ಕಾಯ್ದೆಯಲ್ಲಿ ಈಗಾಗಲೇ ಇದಕ್ಕೆ ಸೂಕ್ತ ಕಾನೂನುಗಳಿರುವುದರಿಂದ ಹೊಸ ಕಾನೂನಿನ ಅಗತ್ಯವಿಲ್ಲ ಎಂದು ತಿಳಿಸಿದೆ. ರಾಜ್ಯಪಾಲ ಗೆಹ್ಲೋಟ್ ಕೂಡ ವಾಪಸ್​​ ಕಳುಹಿಸಿದ್ದ ಈ ಮಸೂದೆಗೆ ಮತ್ತೆ ತಡೆ ಎದುರಾಗಿರೋದು ಕಾಂಗ್ರೆಸ್​​ ನೇತೃತ್ವದ ರಾಜ್ಯ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ.

ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹಸಚಿವಾಲಯದಿಂದ ಬ್ರೇಕ್​​: ಕರ್ನಾಟಕ ಸರ್ಕಾರಕ್ಕೆ ಹಿನ್ನಡೆ
ರಾಜ್ಯ ಸರ್ಕಾರಕ್ಕೆ ಹಿನ್ನಡೆ
Image Credit source: Tv9 Kannada

Updated on: May 26, 2026 | 3:25 PM

ನವದೆಹಲಿ/ಬೆಂಗಳೂರು, ಮೇ 26: ಕರ್ನಾಟಕದ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆಗೆ ಅಮಿತ್​​ ಶಾ ನೇತೃತ್ವದ ಗೃಹ ಸಚಿವಾಲಯವು ಬ್ರೇಕ್​​ ಹಾಕಿದ್ದು, ಈಗಿರುವ ಕಾನೂನು ವ್ಯವಸ್ಥೆಯೇ ಸಾಕಷ್ಟು ಸಮರ್ಪಕವಾಗಿದೆ. ಆ ಕಾರಣಕ್ಕೆ ಹೊಸ ಕಾನೂನು ಅಗತ್ಯವಿಲ್ಲದಿರಬಹುದು ಎಂದು ಹೇಳಿದೆ. ಈ ಕುರಿತ ತನ್ನ ಅಭಿಪ್ರಾಯವನ್ನು ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.

ಇದೇ ವರ್ಷ ಫೆಬ್ರವರಿಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಸೂದೆಗೆ ಅನುಮೋದನೆ ನೀಡಲು ನಿರಾಕರಿಸಿದ ನಂತರ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅನುಮೋದನೆಗಾಗಿ ಮಸೂದೆಯನ್ನು ಗೃಹ ಸಚಿವಾಲಯಕ್ಕೆ ಕಳುಹಿಸಲಾಗಿತ್ತು. ಕಠಿಣ ನಿಯಮಗಳನ್ನು ಒಳಗೊಂಡಿದ್ದ ಈ ಮಸೂದೆ ಪ್ರಕಾರ, ದ್ವೇಷ ಅಪರಾಧ ಅಥವಾ ದ್ವೇಷ ಭಾಷಣ ಮಾಡಿದರೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸುವ ಅವಕಾಶವಿತ್ತು. ಮರು ಅಪರಾಧಕ್ಕೆ ಏಳು ವರ್ಷಗಳವರೆಗೆ ಶಿಕ್ಷೆ ಮತ್ತು 1 ಲಕ್ಷದ ವರೆಗೆ ದಂಡ ವಿಧಿಸುವ ಬಗ್ಗೆಯೂ ಮಸೂದೆಯಲ್ಲಿ ಸೇರಿಸಲಾಗಿತ್ತು.

ಇದನ್ನೂ ಓದಿ: ಏನಿದು ದ್ವೇಷ ಅಪರಾಧಗಳ ಮಸೂದೆ? ದ್ವೇಷಾಪರಾಧಕ್ಕೆ ಶಿಕ್ಷೆಯೇನು? ಇಲ್ಲಿದೆ ಮಾಹಿತಿ

ಗೃಹ ಸಚಿವಾಲಯ ಹೇಳಿದ್ದೇನು?

ಮೇ 12ರಂದು ಕಳುಹಿಸಿದ ಪತ್ರದಲ್ಲಿ ಗೃಹ ಸಚಿವಾಲಯ, ಮಸೂದೆಯಲ್ಲಿ ಪರಿಹರಿಸಲು ಯತ್ನಿಸಿರುವ ವಿಷಯಗಳು ಈಗಾಗಲೇ ಭಾರತೀಯ ನ್ಯಾಯ ಸಂಹಿತೆ (BNS) 2023 ಮತ್ತು ಇತರ ಕಾನೂನುಗಳಲ್ಲೇ ಇವೆ. ಹೀಗಾಗಿ ಪ್ರತ್ಯೇಕವಾಗಿ ರಾಜ್ಯಗಳು ಕಾನೂನು ಜಾರಿ ಮಾಡುವುದರಿಂದ ಪುನರಾವರ್ತನೆ ಮತ್ತು ಏಕರೂಪತೆಯ ಕೊರತೆ ಉಂಟಾಗಬಹುದು ಎಂದು ತಿಳಿಸಿದೆ.

2025ರ ಡಿಸೆಂಬರ್‌ನಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಈ ಮಸೂದೆಯನ್ನು ತ್ವರಿತವಾಗಿ ಅಂಗೀಕರಿಸಲಾಗಿತ್ತು. ಈ ವೇಳೆ ಸ್ಪೀಕರ್ ಯು.ಟಿ. ಖಾದರ್​​ ಹೆಚ್ಚಿನ ಚರ್ಚೆಗೆ ಅಥವಾ ಸದನ ಸಮಿತಿಗೆ ಒಪ್ಪದ ಹಿನ್ನೆಲೆ ವಿರೋಧ ಪಕ್ಷ ಬಿಜೆಪಿ ವಾಕೌಟ್ ನಡೆಸಿತ್ತು. ಜನವರಿಯಲ್ಲಿ ರಾಜ್ಯಪಾಲ ಗೆಹ್ಲೋಟ್ ಕೂಡ ಮಸೂದೆಯನ್ನು ಹಿಂದಿರುಗಿಸಿ, ಇದು ಸಂವಿಧಾನಬದ್ಧ ಪ್ರಜಾಸತ್ತಾತ್ಮಕ ಚರ್ಚೆಗಳ ಮೇಲೆ ಗಂಭೀರ  ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:22 pm, Tue, 26 May 26

Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us