ಹೊರ ರಾಜ್ಯದ ಮಹಿಳೆಯರಿಂದ ಶಕ್ತಿ ಯೋಜನೆ ದುರ್ಬಳಕೆ: ನಿರ್ವಾಹಕರಿಗೆ ತಲೆನೋವಾದ ಫೇಕ್ ಆಧಾರ್ ಕಾರ್ಡ್ ಬಳಕೆ
ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ ಯೋಜನೆ ಕೂಡ ಒಂದು. ಈ ಯೋಜನೆ ರಾಜ್ಯದ ಮಹಿಳೆಯರಿಗೆ ತುಂಬಾ ಉಪಯೋಗವಾಗಿದೆ. ಆದರೆ ನಕಲಿ ಆಧಾರ್ ಕಾರ್ಡ್ ಬಳಸಿ ಈ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿರುವ ಆರೋಪ ಕೇಳಿಬಂದಿದೆ. ಸದ್ಯ ಈ ನಕಲಿ ಆಧಾರ್ ಕಾರ್ಡ್ ಬಳಕೆ ನಿರ್ವಾಹಕರಿಗೆ ತಲೆನೋವಾಗಿದೆ.

ಬೆಂಗಳೂರು, ಜನವರಿ 08: ಶಕ್ತಿ ಯೋಜನೆ (Shakti Yojana) ದುರ್ಬಳಕೆ ಇನ್ನೂ ತಪ್ಪಿಲ್ಲ. ಆಧಾರ್ ಕಾರ್ಡ್ಗಳನ್ನ ಫೇಕ್ (Fake Aadhaar cards) ಮಾಡಿ ಕೆಲ ಮಹಿಳೆಯರು ಸಂಚರಿಸುತ್ತಿದ್ದು, ಇದರಿಂದ ನಿರ್ವಾಹಕರಿಗೆ ತಲೆ ನೋವು ತಪ್ಪಿಲ್ಲ. ಬೇರೆ ರಾಜ್ಯದ ಮಹಿಳೆಯರಿಗೆ ಕನ್ನಡದಲ್ಲಿ ಯಾರು ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದಾರೋ ಗೊತ್ತಿಲ್ಲ, ಆದರೆ ಇದರಿಂದ ಇತ್ತ ಸರ್ಕಾರಕ್ಕೂ ತಲೆ ನೋವಾಗಿದೆ.
ಶಕ್ತಿ ಯೋಜನೆಯಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬಂದಿದೆ. ನೌಕರರು ಕೂಡ ಅಷ್ಟೇ ಕಷ್ಟ ಪಟ್ಟು ಕೆಲಸ ಮಾಡ್ತಿದ್ದಾರೆ. ಅದರ ಭಾಗವಾಗಿ ಪ್ರಯಾಣಿಕರು ನೌಕರರ ಮೇಲೆ ಹಲ್ಲೆ ಮಾಡಿರುವ ಘಟನೆಗಳು ನಡೆದಿವೆ. ಇನ್ನು ಹೊರ ರಾಜ್ಯದಿಂದ ಬಂದ ಮಹಿಳೆಯರಿಂದ ಶಕ್ತಿ ಯೋಜನೆ ದುರ್ಬಳಕೆಯಾಗುತ್ತಿರುವ ಆರೋಪ ಕೇಳಿ ಬಂದಿದೆ. ಆಧಾರ್ ಕಾರ್ಡ್ನ ಒಂದು ಬದಿ ಒಂದು ನಂಬರ್ ಇದ್ದರೆ, ಇನ್ನೊಂದು ಕಡೆ ಬೇರೆ ನಂಬರ್ ಇದೆ. ರಾಜ್ಯದ ಮಹಿಳೆಯರು ಕನ್ನಡದಲ್ಲಿ ಆಧಾರ್ ಪ್ರಿಂಟ್ ಮಾಡಿಸಿಕೊಂಡು ಫೇಕ್ ಆಧಾರ್ ಕಾರ್ಡ್ ಬಳಸಿ ಮೋಸದಿಂದ ಸಂಚರಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಸಾರಿಗೆ ನೌಕರರ ಮುಖಂಡ ಆನಂದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಇದೆ ಎಂಬುದನ್ನು ಒಪ್ಪಿಕೊಂಡ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ: ಪಾವತಿ ಬಗ್ಗೆ ಹೇಳಿದ್ದೇನು?
ಇನ್ನೂ ನಿರ್ವಾಹಕರಿಗೆ ಆಧಾರ್ ಕಾರ್ಡ್ ಸಂಪೂರ್ಣ ಪರಿಶೀಲನೆ ಕಷ್ಟವಾಗುತ್ತಿದೆ ಅಂತೆ. ಇದಕ್ಕೆ ಕಾರಣ ಒಂದು ನಿಲ್ದಾಣದಲ್ಲಿ 10 ರಿಂದ 15 ಪ್ರಯಾಣಿಕರು ಹತ್ತಿದಾಗ ಕಷ್ಟವಾಗುತ್ತೆ. ಇದನ್ನೆ ಬಂಡವಾಳ ಮಾಡಿಕೊಳ್ಳುವ ಕೆಲ ಕಿಲಾಡಿ ಮಹಿಳೆಯರು ಫೇಕ್ ಆಧಾರ್ ಕಾರ್ಡ್ ಬಳಕೆ ಮಾಡುತ್ತಿದ್ದಾರಂತೆ.
ತನಿಖಾಧಿಕಾರಿಗಳು ತನಿಖೆ ಮಾಡಿದಾಗ ಹೊರರಾಜ್ಯದ ಮಹಿಳೆಯರು ಅನ್ನೋದು ಹಲವು ಸಂದರ್ಭಗಳಲ್ಲಿ ಗೊತ್ತಾಗಿದೆ. ಇಂತಹ ಸನ್ನಿವೇಶದಲ್ಲಿ ನಿರ್ವಾಹಕರು ಸರಿಯಾಗಿ ಪರಿಶೀಲನೆ ಮಾಡಿಲ್ಲ ಎಂದು ನಿರ್ವಾಹಕರಿಗೆ ಮೆಮೊ ಕೊಟ್ಟು ಕ್ರಮ ಕೂಡ ಜರುಗಿಸಲಾಗುತ್ತಿದೆ.
ಮಹಿಳಾ ಪ್ರಯಾಣಿಕರು ಹೇಳುವುದೇನು?
ಈ ಬಗ್ಗೆ ಮಾತನಾಡಿದ ಲಕ್ಷ್ಮೀ ಎಂಬ ಪ್ರಯಾಣಿಕರು, ಶಕ್ತಿ ಯೋಜನೆಯಿಂದ ನಮಗೆ ತುಂಬಾ ಉಪಯೋಗ ಆಗಿದೆ. ಆದರೆ ಬೇರೆ ರಾಜ್ಯದ ಮಹಿಳೆಯರು ನಕಲಿ ಆಧಾರ್ ಕಾರ್ಡ್ ಬಳಕೆ ಮಾಡಿಕೊಂಡು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ತಪ್ಪು ಎಂದಿದ್ದಾರೆ.
ಇದನ್ನೂ ಓದಿ: ಸದನದಲ್ಲಿ ಚರ್ಚೆ ಬೆನ್ನಲ್ಲೇ ಶಕ್ತಿ ಯೋಜನೆ ಹಣ ಬಾಕಿ ರಿಲೀಸ್: ಯಾವ ನಿಗಮಕ್ಕೆ ಎಷ್ಟು?
ಸಾರಿಗೆ ಇಲಾಖೆ ಈ ರೀತಿ ಫೇಕ್ ಆಧಾರ್ ಕಾರ್ಡ್ ಬಳಕೆ ಮಾಡುವ ಮಹಿಳೆಯರ ವಿರುದ್ಧ ಕ್ರಮ ಜರುಗಿಸಿ, ನೌಕರರ ವಿರುದ್ಧ ಕ್ರಮ ಜರುಗಿಸುವುದನ್ನ ತಡೆಯಬೇಕಿದೆ ಅನ್ನೋದು ನೌಕರರ ಮನವಿ. ಆದರೆ ಸಾರಿಗೆ ಇಲಾಖೆ ಯಾವ ಕ್ರಮಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:09 pm, Thu, 8 January 26