Bengaluru Traffic Adisory: ಬೆಂಗಳೂರಿನ ಈ ರಸ್ತೆಗಳಲ್ಲಿ ಭಾನುವಾರ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ವಿವರ ಇಲ್ಲಿದೆ
ಬೆಂಗಳೂರು ಸಂಚಾರ ಸಲಹೆ: ಇತಿಹಾಸ ಪ್ರಸಿದ್ಧ ಕರಗ ಮಹೋತ್ಸವ ಬೆಮಗಳೂರಿನಲ್ಲಿ ನಡೆಯುತ್ತಿದ್ದು, ವೈಭವದ ಕರಗ ಮೆರವಣಿಗೆ ನಡೆಯುತ್ತಿದೆ. ಹೀಗಾಗಿ ಸಂಚಾರ ದಟ್ಟಣೆ ಹಾಗೂ ಅಡಚಣೆ ನಿವಾರಿಸುವುದಕ್ಕಾಗಿ ಬೆಂಗಳೂರು ಟ್ರಾಫಿಕ್ ಪೊಲೀಸರು ಭಾನುವಾರ ಕೆಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಿದ್ದಾರೆ. ಆ ರಸ್ತೆಗಳ ವಿವರ ಹಾಗೂ ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ.

ಬೆಂಗಳೂರು, ಏಪ್ರಿಲ್ 12: ವಿಶ್ವವಿಖ್ಯಾತ ಮತ್ತು ಇತಿಹಾಸ ಪ್ರಸಿದ್ಧಬೆಂಗಳೂರು (Bengaluru) ಕರಗ ಮಹೋತ್ಸವದ ಮೆರವಣಿಗೆ (Bangalore Karaga 2025) ಬೆಂಗಳೂರಿನ ಬೀದಿಗಳಲ್ಲಿ ನಡೆಯುತ್ತಿದ್ದು, ಸಾವಿರಾರು ಭಕ್ತರು ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗುತ್ತಿದ್ದಾರೆ. ಭಾನುವಾರ, ಅಂದರೆ ಏಪ್ರಿಲ್ 13 ರಂದು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಕರಗ ಮೆರವಣಿಗೆ ಹಾದುಹೋಗಲಿದೆ. ಹೀಗಾಗಿ ಸಂಚಾರ ದಟ್ಟಣೆ ತಡೆಯುವುದಕ್ಕಾಗಿ ಹಾಗೂ ಸುಗಮ ಸಂಚಾರಕ್ಕಾಗಿ ಬೆಂಗಳೂರು ಟ್ರಾಫಿಕ್ ಪೊಲೀಸರು (Bengaluru Traffic Police) ಕೆಲವು ಕ್ರಮಗಳನ್ನು ಕೈಗೊಂಡಿದ್ದಾರೆ.
ಇತಿಹಾಸದ ಪ್ರಸಿದ್ದ ಬೆಂಗಳೂರು ಕರಗ ಉತ್ಸವದ ಮೆರವಣಿಗೆ ಏಪ್ರಿಲ್ 12 ಗೂ 13.04.2025 ರಂದು ಸಿಟಿ ಮಾರ್ಕೆಟ್, ಚಾಮರಾಜಪೇಟೆ ಹಾಗೂ ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ, ಸರಹದ್ದಿನಲ್ಲಿ ನಡೆಯಲಿದೆ. ಹೀಗಾಗಿ ಕೆಲವು ರಸ್ತೆಗಳಲ್ಲಿ ಸಂಚಾರ ನಿರ್ಭಂಧಿಸಲಾಗಿದ್ದು ಪರ್ಯಾಯ ಮಾರ್ಗವನ್ನು ಬಳಸಲು ಕೋರಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ಸಂಚಾರ ನಿರ್ಬಂಧಿತ ರಸ್ತೆಗಳ ವಿವರವನ್ನೂ ನೀಡಿದ್ದಾರೆ.
ಎಲ್ಲೆಲ್ಲಿ ಸಂಚಾರ ನಿರ್ಬಂಧ?
ಸಿಟಿ ಮಾರ್ಕೆಟ್, ಚಾಮರಾಜಪೇಟೆ ಹಾಗೂ ಉಪ್ಪಾರಪೇಟೆ ವ್ಯಾಪ್ತಿಯಲ್ಲಿ ಹಾಗೂ ಧರ್ಮರಾಯಸ್ವಾಮಿ ದೇವಸ್ಥಾನ ವ್ಯಾಪ್ತಿಯಲ್ಲಿ ಕರಗ ಮೆರವಣಿಗೆ ವೇಳೆ ಸಂಚಾರಕ್ಕೆ ಅವಕಾಶವಿಲ್ಲ. ಅವೆನ್ಯೂ ರಸ್ತೆ, ಮಾರುಕಟ್ಟೆ ವೃತ್ತ, ಕಾಟನ್ ಪೇಟೆ, ಕೆಜಿ ರಸ್ತೆ ಮತ್ತು ಚಿಕ್ಕಪೇಟೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗಗಳು ಯಾವುವು?
- ಮಾರ್ಕೆಟ್ ವೃತ್ತದಿಂದ ಕೆ.ಜಿ. ರಸ್ತೆ, ಆನಂದರಾವ್ ವೃತ್ತದ ಮೂಲಕ ಮೆಜೆಸ್ಟಿಕ್ ಕಡೆಗೆ ಚಲಿಸುವುದು.
- ಎಎಸ್ ಚಾರ್ ಸ್ಟ್ರೀಟ್ನಿಂದ ಸಿಸಿಬಿ ಜಂಕ್ಷನ್, ಮೆಡಿಕಲ್ ಜಂಕ್ಷನ್, ಮಿನರ್ವಾ ವೃತ್ತ ಮತ್ತು ಜೆಸಿ ರಸ್ತೆ ಮೂಲಕ ಟೌನ್ಹಾಲ್ ಕಡೆಗೆ ಚಲಿಸುವುದು.
- ಶಾಂತಲಾ ಜಂಕ್ಷನ್ನಿಂದ ಖೋಡೆ ಜಂಕ್ಷನ್, ಹುಣಸೆಮರ ಜಂಕ್ಷನ್ ಟ್ಯಾಂಕ್ ಬಂಡ್ ರಸ್ತೆ ಮೂಲಕ ಮೈಸೂರು ರಸ್ತೆಯ ಕಡೆಗೆ ಚಲಿಸುವುದು.
ಸಂಚಾರ ನಿರ್ಬಂಧ ಯಾವಾಗಿನಿಂದ ಜಾರಿ?
ಶನಿವಾರ, ಅಂದರೆ ಏಪ್ರಿಲ್ 12 ರ ರಾತ್ರಿ 10 ಗಂಟೆಯಿಂದ ಏಪ್ರಿಲ್ 13 ರ ಭಾನುವಾರ ಸಂಜೆ 6 ರ ವರೆಗೆ ಸಂಚಾರ ನಿರ್ಬಂಧ ಚಾಲ್ತಿಯಲ್ಲಿರಲಿದೆ.
ಇದನ್ನೂ ಓದಿ: ಬೆಂಗಳೂರು ಕರಗ ಮೆರವಣಿಗೆಯಲ್ಲಿ ಸಾಗುತ್ತಾ ತಪ್ಪದೆ ದರ್ಗಾಗೆ ಹೋಗುವುದೇಕೆ ಗೊತ್ತಾ!?
ಬೆಂಗಳೂರಿನ ಇತಿಹಾಸ ಸಾರುವ ಐತಿಹಾಸಿಕ ಕರಗ ಒಟ್ಟು 11 ದಿನಗಳ ಕಾಲ ನಡೆಯುತ್ತಿದ್ದು, ಏಪ್ರಿಲ್ 14 ರಂದು ಸಂಪನ್ನಗೊಳ್ಳಲಿದೆ.