ಸರ್ಕಾರಿ ಇಮೇಲ್ ಐಡಿ ಬಳಸಿ, ನಕಲಿ ಕೊರ್ಟ್ ಆದೇಶ ಕಳುಹಿಸಿ ಬ್ಯಾಂಕ್ಗೆ 1 ಕೋಟಿ ರೂ. ವಂಚನೆ
ಬೆಂಗಳೂರು ಪೊಲೀಸರು ನಕಲಿ ನ್ಯಾಯಾಲಯದ ಆದೇಶಗಳನ್ನು ಬಳಸಿ ಬ್ಯಾಂಕ್ಗಳನ್ನು ವಂಚಿಸಿದ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳು 18 ನಕಲಿ ಆದೇಶಗಳ ಮೂಲಕ 1.23 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ. ಪೊಲೀಸರು ತನಿಖೆಯಲ್ಲಿ 62 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಸರ್ಕಾರಿ ಇಮೇಲ್ ಐಡಿಯನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂಬುದು ತನಿಖೆಯಿಂದ ಬಹಿರಂಗವಾಗಿದೆ.

ಬೆಂಗಳೂರು ಏಪ್ರಿಲ್ 11: ನಕಲಿ ಕೊರ್ಟ್ (Court) ಆದೇಶ ನೀಡಿ ಬ್ಯಾಂಕ್ಗೆ ವಂಚಿಸಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಪೊಲೀಸರು (Bengaluru) ಬಂಧಿಸಿದ್ದಾರೆ. ಸಾಗರ್ ಲಕೂರಾ, ನೀರಜ್ ಸಿಂಗ್, ಅಭಿಮನ್ಯು ಕುಮಾರ್ ಬಂಧಿತ ಆರೋಪಿಗಳು. ಆರೋಪಿಗಳು ಬ್ಯಾಂಕ್ನಲ್ಲಿ ಫ್ರೀಜ್ ಆಗಿರುವ ಖಾತೆ ರಿಲೀಸ್ ಮಾಡುವ ರೀತಿಯಲ್ಲಿ ನಕಲಿ ಕೋರ್ಟ್ ಆದೇಶ ತಯಾರು ಮಾಡಿದ್ದರು. ಬಳಿಕ ಬ್ಯಾಂಕ್ಗೆ ಕಳುಹಿಸಿಸಿ ಹಣ ರಿಲೀಸ್ ಮಾಡುವಂತೆ ಹೇಳುತ್ತಿದ್ದರು.
ಬ್ಯಾಂಕ್ನ ಸಿಬ್ಬಂದಿ ಪರಿಶೀಲನೆ ನಡೆಸಲು ಕರೆ ಮಾಡಿದಾಗಲೂ ಇವರು ಸುಳ್ಳು ಮಾಹಿತಿ ನೀಡುತ್ತಿದ್ದರು. ಇದೇ ರೀತಿ ಒಟ್ಟು 18 ನಕಲಿ ಕೋರ್ಟ್ ಆದೇಶಗಳನ್ನು ಆರೋಪಿಗಳು ಬ್ಯಾಂಕ್ಗೆ ನೀಡಿದ್ದಾರೆ. ನಕಲಿ ಆದೇಶಗಳ ಮೂಲಕ 1.23 ಕೋಟಿ ರೂ. ವಂಚಿಸಿದ್ದಾರೆ. ತನಿಖೆ ವೇಳೆ ಪೊಲೀಸರು 62 ಲಕ್ಷ ರೂ. ಹಣವನ್ನು ಆರೋಪಿಗಳ ಬ್ಯಾಂಕ್ ಖಾತೆಯಲ್ಲಿ ಫ್ರೀಜ್ ಮಾಡಿದ್ದಾರೆ.
ಆರೋಪಿಗಳು ವಂಚನೆ ಮಾಡಲು ಸರ್ಕಾರದಿಂದಲೇ ಇ ಮೇಲ್ ಐಡಿ ಪಡೆದುಕೊಂಡಿದ್ದಾರೆ. ಕರ್ನಾಟಕ ಸ್ಟೇಟ್ ವೈಡ್ ಏರಿಯಾ ನೆಟ್ವರ್ಕ್ ಮೂಲಕ ಇಮೆಲ್ ಐಡಿ ಪಡೆದಿದ್ದಾರೆ. ತಾವು ಸರ್ಕಾರದ ಅಧಿಕಾರಿಗಳು ಹೀಗಾಗಿ ಇಮೇಲ್ ಐಡಿ ಬೇಕು ಎಂದು ಆರೋಪಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿ ಅಧಿಕೃತವಾಗಿ cb-crime-sog@karnataka.gov.in ಎಂಬ ಹೆಸರಿನ ಇಮೇಲ್ ಐಡಿ ಪಡೆದಿದ್ದಾರೆ. ಇದೇ ಇಮೇಲ್ ಐಡಿ ಬಳಸಿ ಬ್ಯಾಂಕ್ ಗಳಿಗೆ ನಕಲಿ ಕೋರ್ಟ್ ಆರ್ಡರ್ ಕಳಿಸಿ ಹಣ ವಂಚನೆ ಮಾಡಿರುವುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಬುರ್ಖಾ ಧರಿಸಿ ಸ್ನೇಹಿತನೊಂದಿಗೆ ಪಾರ್ಕ್ನಲ್ಲಿ ಕುಳಿತ ಯುವತಿ: ಐವರು ಯುವಕರಿಂದ ನಿಂದನೆ, ಹಲ್ಲೆ ಆರೋಪ
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಇಬ್ಬರ ಬಂಧನ
ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲೂಕಿನ ನಾಮಗೊಂಡ್ಲು ಗ್ರಾಮದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಇಬ್ಬರನ್ನು ಮಂಚೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಅಶ್ವತ್ಥ್ ಮತ್ತು ದೇವರಾಜ್ ಬಂಧಿತ ಆರೋಪಿಗಳು. ಬಂಧಿತರಿಂದ 8 ಸಾವಿರ ನಗದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳ ಮೇಲೆ ರೌಡಿಶೀಟ್ ತೆರೆಯಲು ಪೊಲೀಸರು ನಿರ್ಧರಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:29 pm, Fri, 11 April 25