ಇಂದು (ಶುಕ್ರವಾರ) ಟಿವಿ9 ನೆಟ್ವರ್ಕ್ನಲ್ಲಿ ‘ಪ್ರೈಡ್ ಡೇ’ ಆಚರಿಸಲಾಗಿದ್ದು, ಈ ವೇಳೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅಕ್ಕಯ್ ಪದ್ಮಶಾಲಿ(Akkai Padmashali) ಅವರು, ‘ನಮ್ಮ ಬಗ್ಗೆ ಕರುಣೆ ಬೇಡ, ಗೌರವವಿರಲಿ ಎಂದು ಹೇಳಿದರು. ‘ನಾವು ಕೂಡಾ ಸಮಾಜದಲ್ಲಿ ಎಲ್ಲರ ಹಾಗೆ ಸಹಜವಾಗಿ ಬದುಕುವುದಕ್ಕಾಗಿ ಮುಕ್ತ ವಾತಾವರಣ ಬೇಕಿದೆ. ಈಗಾಗಲೇ ಈಗಾಗಲೇ ಪಾಶ್ಚಿಮಾತ್ಯ ದೇಶಗಳಲ್ಲಿ ಸಮಾನತೆ ಬಗ್ಗೆ ಹೋರಾಟ ನಡೆದು, ಕಾನೂನು ಚೌಕಟ್ಟಿನಲ್ಲಿ ನಮಗೊಂದಿಷ್ಟು ನ್ಯಾಯ ಸಿಕ್ಕಿದ್ದು ಸಮಾಧಾನವಾಗಿದೆ. ‘ನಮ್ಮ ಸಮೂಹಕ್ಕೊಂದು ಸುಭದ್ರ ವ್ಯವಸ್ಥೆ ಹಾಗೂ ಶೈಕ್ಷಣಿಕವಾಗಿ ಮುಂದುವರೆಯಲು ಸಹಕಾರ ಬೇಕಿದೆ ಎಂದರು.
ಭೀಕ್ಷೆ ಬೇಡಿಕೊಂಡು ತಿನ್ನುವ ಹಂತವನ್ನು ದಾಟಿ ನಾವು ದುಡಿದು ತಿನ್ನಬೇಕಾಗಿದೆ. ಹಾಗಾಗಿ ನಾವು ಕೆಲಸ ಮಾಡಲು ಸರ್ಕಾರ ಹಾಗೂ ಸಮಾಜದ ಸಹಕಾರ ಬೇಕೇಬೇಕು. ಈಗಾಗಲೇ ನಮ್ಮಲ್ಲೂ ಕೂಡ ಕೆಲವರು ಓದಿಕೊಂಡು, ಪ್ರತಿಷ್ಟಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗೆ ಮತ್ತೊಂದಿಷ್ಟು ಜನ ಓದಿಕೊಂಡು ಮುಂದುವರೆದರೆ ನಮ್ಮ ಇಡೀ ಸಮೂಹಕ್ಕೆ ಸಹಕಾರಿಯಾಗಬಲ್ಲದು. ಒಟ್ಟಿನಲ್ಲಿ ಸರ್ಕಾರವೂ ಸೇರಿದಂತೆ ಸಮಾಜದಲ್ಲಿರುವ ಪ್ರತಿಯೊಬ್ಬರು ನಮ್ಮ ಸಮೂಹದ ಬಗ್ಗೆ ಮರುಕಪಡದೆ ಸಮಾನವಾಗಿ ಕಂಡರೆ ಅದಕ್ಕಿಂತ ಗೆಲುವು ಮತ್ತೊಂದಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಮೊಟ್ಟ ಮೊದಲು ಬಾರಿಗೆ ಸರ್ಕಾರದಿಂದ ತೃತೀಯ ಲಿಂಗಿಗಳ ಆಶ್ರಯ ಜಾಗ: ನಮ್ಮನೆ ಸುಮ್ಮನೆಗೆ ಭೂಮಿ ಪೂಜೆ ಮಾಡಿದ ಅಶೋಕ್
ಬೆಂಗಳೂರಿನವರಾದ ಅಕ್ಕಯ್ ಪದ್ಮಶಾಲಿ ಅವರು ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಅವರ ಹಕ್ಕುಗಳ ಹೋರಾಟದಲ್ಲಿ ರಾಷ್ಟಮಟ್ಟದಲ್ಲಿ ಮಂಚೂಣಿಯಲ್ಲಿದ್ದಾರೆ. ಇವರು ಪ್ರೇರಕ ಭಾಷಣಕಾರ ಮತ್ತು ಗಾಯಕಿ. ಅವರ ಸಮಾಜಮುಖಿ ಕೆಲಸಕ್ಕಾಗಿ, ಕರ್ನಾಟಕ ರಾಜ್ಯದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ರಾಜ್ಯೋತ್ಸವ ಪ್ರಶಸ್ತಿ ಮತ್ತು ಶಾಂತಿ, ಶಿಕ್ಷಣಕ್ಕಾಗಿ ಭಾರತೀಯ ವರ್ಚುವಲ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಅನ್ನು ಪಡೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ