ವಾಮಮಾರ್ಗದಲ್ಲಿ ಇಡಿ ಕೆಲಸ ಮಾಡುತ್ತಿದೆ, ನಾವು ಅವರಿಗೆ ಹೆದರುವುದಿಲ್ಲ: ಸಿಎಂ ಸಿದ್ದರಾಮಯ್ಯ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಎಂ, ಡಿಸಿಎಂ ಹೆಸರು ಹೇಳುವಂತೆ ಕಿರುಕುಳಕ್ಕೆ ಸಂಬಂಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಈ ವೇಳೆ ಸಿಎಂ, ಡಿಸಿಎಂ ಮಾತನಾಡಿದ್ದು ಇಡಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ವಾಮಮಾರ್ಗದಲ್ಲಿ ಇಡಿ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ವಾಮಮಾರ್ಗದಲ್ಲಿ ಇಡಿ ಕೆಲಸ ಮಾಡುತ್ತಿದೆ, ನಾವು ಅವರಿಗೆ ಹೆದರುವುದಿಲ್ಲ: ಸಿಎಂ ಸಿದ್ದರಾಮಯ್ಯ
ಕಾಂಗ್ರೆಸ್ ಪ್ರತಿಭಟನೆ
Edited By: ಆಯೇಷಾ ಬಾನು

Updated on: Jul 23, 2024 | 11:09 AM

ಬೆಂಗಳೂರು, ಜುಲೈ. 23: ಕರ್ನಾಟಕದಲ್ಲಿ ಕಾಂಗ್ರೆಸ್​ ಸರ್ಕಾರ ದುರ್ಬಲಗೊಳಿಸುವ ಯತ್ನ ನಡೆದಿದೆ. ಇಡಿಯವರ ಬೆದರಿಕೆಗಳಿಗೆ ನಾವು ಬೆದರುವುದಿಲ್ಲ. ಇಡಿ ತನಿಖೆ ನಡೆಸುವುದಕ್ಕೆ ನಮಗೆ ತಕರಾರಿಲ್ಲ. ಆದರೆ ನಮ್ಮ ಸರ್ಕಾರವನ್ನ ಗುರಿಯಾಗಿಸುವ ಕೆಲಸ ಮಾಡುತ್ತಿದೆ. ಕಾನೂನಿಗೆ ವಿರುದ್ಧವಾಗಿ ವಾಮಮಾರ್ಗವಾಗಿ ಇಡಿ ಕೆಲಸ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹಾಘೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಇಡಿ (ED) ತನಿಖಾ ಸಂಸ್ಥೆ ಹಾಗೂ ಕೇಂದ್ರ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಎಂ, ಡಿಸಿಎಂ ಹಾಘೂ ಮಾಜಿ ಸಚಿವ ಬಿ. ನಾಗೇಂದ್ರ ಹೆಸರೇಳುವಂತೆ ಕಿರುಕುಳ ಆರೋಪಕ್ಕೆ ಸಂಬಂಧಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಸಚಿವರಾದ ಡಾ.ಜಿ.ಪರಮೇಶ್ವರ್​, ಮುನಿಯಪ್ಪ, ಪ್ರಿಯಾಂಕ್ ಖರ್ಗೆ, ಹೆಚ್​.ಕೆ.ಪಾಟೀಲ್, ಭೈರತಿ ಸುರೇಶ್​, ಲಾಡ್, ಕೆ.ಎನ್​.ರಾಜಣ್ಣ, ಕೃಷ್ಣಭೈರೇಗೌಡ, ಎಂ.ಬಿ.ಪಾಟೀಲ್​, ವೆಂಕಟೇಶ್​, ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್, ರಹೀಂ ಖಾನ್​, ಎಂ.ಸಿ.ಸುಧಾಕರ್, ಶರಣಪ್ರಕಾಶ್​ ಪಾಟೀಲ್ ಸೇರಿ ಹಲವರು ಭಾಗಿಯಾಗಿದ್ದಾರೆ. ಇಡಿ ಅಧಿಕಾರಿಗಳ ನಡೆ ಖಂಡಿಸಿ ಕೇಂದ್ರದ ವಿರುದ್ಧ ಘೋಷಣೆ ಕೂಗಿ ಕಾಂಗ್ರೆಸ್​ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ.

ನಿಗಮದ ಹಣ ವರ್ಗಾಣೆ ಆಗಿರುವುದು 89.63 ಕೋಟಿ ರೂ

ಪ್ರತಿಭಟನೆ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಇಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಡಿ ಅಧಿಕಾರಿಗಳು ಸ್ವಯಂಪ್ರೇರಣೆಯಿಂದ ತನಿಖೆ ಮಾಡುತ್ತಿದ್ದಾರೆ. ಒಂದೇ ಕೇಸ್​ನಲ್ಲಿ ಮೂರು ತನಿಖಾ ಸಂಸ್ಥೆ ವಿಚಾರಣೆ ಮಾಡುತ್ತಿವೆ. ವಾಲ್ಮೀಕಿ ನಿಗಮದಲ್ಲಿ ಅಕ್ರಮ ನಡೆದಿಲ್ಲ ಎಂದು ನಾವು ಹೇಳ್ತಿಲ್ಲ. ವಿಪಕ್ಷದವರು 186 ಕೋಟಿ‌ ದುರುಪಯೋಗ ಆಗಿದೆ ಅಂತಿದ್ದಾರೆ. ನಿಗಮದ ಹಣ ವರ್ಗಾಣೆ ಆಗಿರುವುದು 89.63 ಕೋಟಿ ರೂ. ಪ್ರಕರಣ ಸಂಬಂಧ ಈಗಾಗಲೇ 12 ಆರೋಪಿಗಳ ಬಂಧನವಾಗಿದೆ. ಅಧಿಕಾರಿಗಳು ಈಗಾಗಲೇ $34 ಕೋಟಿ ರಿಕವರಿ ಮಾಡಿದ್ದಾರೆ. ಶೇಕಡಾ 90ರಷ್ಟು ಎಸ್​ಐಟಿ ಅಧಿಕಾರಿಗಳ ತನಿಖೆ ಮುಗಿದಿದೆ. ಬ್ಯಾಂಕ್​ ಅಧಿಕಾರಿಗಳ ದೂರಿನ ಮೇರೆಗೆ ಸಿಬಿಐ ತನಿಖೆ ಮಾಡ್ತಿದೆ. ಆದ್ರೆ ಇಡಿ ತಂಡ ಸ್ವಯಂ ಪ್ರೇರಣೆಯಿಂದ ತನಿಖೆ ಮಾಡುತ್ತಿದೆ. ಪ್ರಕರಣ ಸಂಬಂಧ ಅಧಿಕಾರಿ ಕಲ್ಲೇಶ್​ರನ್ನು ವಿಚಾರಣೆ ಮಾಡಿದ್ದಾರೆ. ವಿಚಾರಣೆ ವೇಳೆ ಸಿಎಂ, ಡಿಸಿಎಂ, ಸಚಿವರ ಹೆಸರೇಳುವಂತೆ ಒತ್ತಡ ಹಾಕಿದ್ದಾರೆ.

ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಇಡಿ ಅಧಿಕಾರಿಗಳ ವಿರುದ್ಧ ದೂರು ನೀಡಿದ ಕಲ್ಲೇಶ್​ ವಾಲ್ಮೀಕಿ ನಿಗಮದ ಮಾಜಿ ಪದನಿಮಿತ್ತ ನಿರ್ದೇಶಕ

ಅಧಿಕಾರಿ ಕಲ್ಲೇಶ್​​​ಗೆ ಬೆದರಿಸಿ, ಹೆದರಿಸಿ ಹೆಸರೇಳುವಂತೆ ಇಡಿ ಒತ್ತಡ ಹಾಕಿದೆ. ಜೀವಬೆದರಿಕೆ ಹಾಕಿ ಒತ್ತಡ ಹಾಕಿದ್ದಾರೆಂದು ಕಲ್ಲೇಶ್ ಆರೋಪಿಸಿದ್ದಾರೆ. ಕಾಂಗ್ರೆಸ್​​​​ ಗುರಿಯಾಗಿಸಿಕೊಂಡು ಬೆದರಿಸುವ ಯತ್ನ ಆಗ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್​ ಸರ್ಕಾರ ದುರ್ಬಲಗೊಳಿಸುವ ಯತ್ನ ನಡೆದಿದೆ. ಇಡಿಯವರ ಇಂತಹ ಬೆದರಿಕೆಗಳಿಗೆ ನಾವು ಬೆದರುವುದಿಲ್ಲ. ಇಡಿ ತನಿಖೆ ನಡೆಸುವುದಕ್ಕೆ ನಮಗೆ ತಕರಾರಿಲ್ಲ. ಆದರೆ ನಮ್ಮ ಸರ್ಕಾರವನ್ನ ಗುರಿಯಾಗಿಸುವ ಕೆಲಸ ಮಾಡುತ್ತಿದೆ. ಕಾನೂನಿಗೆ ವಿರುದ್ಧವಾಗಿ ವಾಮಮಾರ್ಗವಾಗಿ ಇಡಿ ಕೆಲಸ ಮಾಡುತ್ತಿದೆ. ಇಡಿ, ಕೇಂದ್ರದ ವಿರುದ್ಧ ಕಾನೂನು ಪ್ರಕಾರ ಹೋರಾಟ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಬಿಜೆಪಿಯವರ ಕಾಲದಲ್ಲಿ ಹಲವು ಹಗರಣ ನಡೆದಿವೆ. ಆದರೆ ಇದರ ಬಗ್ಗೆ ಅವರು ಮಾತನಾಡುತ್ತಿಲ್ಲ. ಈ ಹಿಂದೆ ತನಿಖಾ ಸಂಸ್ಥೆಗಳನ್ನು ಚೋರ್ ಎನ್ನುತ್ತಿದ್ರು. ರವಿ, ಗಣಪತಿ, ಪರಮೇ ಮೇಹ್ತಾ ಪ್ರಕರಣವನ್ನ ಸರ್ಕಾರ ಸಿಬಿಐಗೆ ನೀಡಿತ್ತು. ನಮ್ಮದು ತನಿಖೆಗೆ ತಕರಾರಿಲ್ಲ. ಆದರೆ ಕಾನೂನು ಬಾಹಿರ ಹಾಗೂ ಯಾರನ್ನೂ ಗುರಿ ಇಟ್ಟು‌ ಮಾಡಬಾರದು. “ಸದನದಲ್ಲೂ ಈ ವಿಚಾರ ಪ್ರಸ್ತಾಪ ಮಾಡುತ್ತೇವೆ” ಎಂದರು.

ಇನ್ನು ಇದೇ ವೇಳೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಸರ್ಕಾರದ ಎಲ್ಲಾ‌ ಮಂತ್ರಿಗಳು ಶಾಸಕರು ದೊಡ್ಡ ಪ್ರತಿಭಟನೆ ಮಾಡುತ್ತಿದ್ದೇವೆ. ವಾಲ್ಮೀಕಿ ‌ಹಗರಣ‌ ಬೆಳಕಿಗೆ ಬಂದಿದೆ. ತಪ್ಪಾಗಿದೆ ಎಂದು ನಮಗೆ ಮನವರಿಕೆಯಾಗಿದೆ. ಅಧಿಕಾರಿಗಳು ದುರ್ಬಳಕೆ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ. ವಾಲ್ಮೀಕಿ ನಿಗಮದ ಅಕ್ರಮ ಗೊತ್ತಾದ ತಕ್ಷಣ SIT ಅಧಿಕಾರಿಗಳ ಮೂಲಕ ನಾವು ಹಗರಣದ ತನಿಖೆ ಮಾಡಿಸುತ್ತಿದ್ದೇವೆ. ಈಗಾಗಲೇ 50ರಷ್ಟು ಹಣ ರಿಕವರಿ ಮಾಡಿದ್ದಾರೆ. ಎಸ್​ಐಟಿ ತನಿಖೆ ಮಧ್ಯೆಯೇ ಇಡಿ ಪ್ರವೇಶಿಸಿ ವಿಚಾರಣೆ ಮಾಡ್ತಿದೆ. ಇಡಿ ವಿಚಾರಣೆ ವೇಳೆ ಅಧಿಕಾರಿ ಕಲ್ಲೇಶ್​ಗೆ ಕಿರುಕುಳ ನೀಡಿದ್ದಾರೆ. ಸಚಿವರು, ಸಿಎಂ, ಡಿಸಿಎಂ ಹೆಸರೇಳಬೇಕೆಂದು ಕಿರುಕುಳ ನೀಡಿದ್ದಾರೆ. ಇಡಿ, ಕೇಂದ್ರ ಸರ್ಕಾರದ ವಿರುದ್ಧ ನಮ್ಮ ಹೋರಾಟ. ಕಿರುಕುಳ ನೀಡಿದ ಇಡಿ ಅಧಿಕಾರಿಗಳ ವಿರುದ್ಧ FIR ದಾಖಲಾಗಿದೆ. ತನಿಖೆಯಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಲ್ಲ ಎಂದು ಡಿಸಿಎಂ ಆಕ್ರೋಶ ಹೊರ ಹಾಕಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:58 am, Tue, 23 July 24

Web contact

TV9 Kannada

Read More
Follow Us