ಸವಾಲಿನ ವಿರುದ್ದವೇ ಕೆಲಸ ಮಾಡುವ ಛಾತಿ ಬೆಳೆಸಿಕೊಳ್ಳಬೇಕು: ಹಿರಿಯ ಪತ್ರಕರ್ತೆ ಡಾ ವಿಜಯಾ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 28, 2025 | 1:22 PM

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಮಹಿಳಾ ದಿನಾಚರಣೆ ಮತ್ತು ವಿಶ್ವ ರಂಗಭೂಮಿ ದಿನಾಚರಣೆ ಸಂದರ್ಭದಲ್ಲಿ ಮನೆಯಂಗಳದಲ್ಲಿ ಮನದುಂಬಿ ನಮನ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಹಿರಿಯ ಪತ್ರಕರ್ತೆ ಡಾ. ವಿಜಯಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಪತ್ರಿಕೋದ್ಯಮದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಅವರು ಮಾತನಾಡಿದ್ದಾರೆ.

ಸವಾಲಿನ ವಿರುದ್ದವೇ ಕೆಲಸ ಮಾಡುವ ಛಾತಿ ಬೆಳೆಸಿಕೊಳ್ಳಬೇಕು: ಹಿರಿಯ ಪತ್ರಕರ್ತೆ ಡಾ ವಿಜಯಾ
ಸವಾಲಿನ ವಿರುದ್ದವೇ ಕೆಲಸ ಮಾಡುವ ಛಾತಿ ಬೆಳೆಸಿಕೊಳ್ಳಬೇಕು: ಡಾ ವಿಜಯಾ
Follow us on

ಬೆಂಗಳೂರು, ಮಾರ್ಚ್​ 28: ಸಾಧಿಸುವ ಛಲ, ವೃತ್ತಿ ಬದ್ಧತೆ ಇದ್ದರೆ ಪತ್ರಕರ್ತರಿಗೆ ವಯಸ್ಸು ಅಡ್ಡಿಯಾಗುವುದಿಲ್ಲ. ಸವಾಲಿನ ವಿರುದ್ದವೇ ಕೆಲಸ ಮಾಡುವ ವೃತ್ತಿ ಬದ್ಧತೆಯ ಛಾತಿ ರೂಢಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತೆ, ರಂಗಕರ್ಮಿ, ಸಾಹಿತಿ ಡಾ.ವಿಜಯಾ (Dr. Vijaya) ಹೇಳಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು (KUWJ) ಮಹಿಳಾ ದಿನಾಚರಣೆ ಪ್ರಯುಕ್ತ ಮತ್ತು ವಿಶ್ವ ರಂಗಭೂಮಿ ದಿನಾಚರಣೆ ಸಂದರ್ಭದಲ್ಲಿ ಏರ್ಪಡಿಸಿದ್ದ ಮನೆಯಂಗಳದಲ್ಲಿ ಮನದುಂಬಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚೆಗಿನ ದಿನಗಳಲ್ಲಿ ಪತ್ರಿಕಾ ವೃತ್ತಿಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ ಎಂದು ಹೇಳಿದರು.

ಪತ್ರಿಕೋದ್ಯಮದ ಜೊತೆಗೆ ಅನ್ಯಾಯಗಳ ವಿರುದ್ಧ ತಾನು ಸಾಕಷ್ಟು ಹೋರಾಟ ಮಾಡಿಕೊಂಡ ಕಾರಣಕ್ಕೆ ಸಮಾಜದ ವ್ಯವಸ್ಥೆಯ ಬಗ್ಗೆ ಪತ್ರಕರ್ತೆಯಾಗಿ ತನಗೆ ಸಂಪೂರ್ಣ ಅರಿವಿದೆ. ಕೆಲವು ಪತ್ರಿಕಾ ಸಂಸ್ಥೆಗಳು ಇತ್ತೀಚೆಗೆ ಕಾರ್ಪೋರೇಟ್ ವ್ಯವಸ್ಥೆಯಿಂದ ಕೂಡಿವೆ, ಅವು ಆ ಯೋಚನೆಯಿಂದ ಹೊರಬಂದು ಪತ್ರಕರ್ತರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪತ್ರಕರ್ತರನ್ನು ರೂಪಿಸಿ, ನಡೆಸಿಕೊಳ್ಳಬೇಕು ಎಂದರು.

ಐಟಿಐ ಸಂಸ್ಥೆಯಿಂದ ಸುದ್ದಿಮನೆಗೆ ಪಯಣ

ದಾವಣಗೆರೆ ಮೂಲದ ಡಾ. ವಿಜಯಾ ಅವರು ಬೆಂಗಳೂರಿನ ಐಟಿಐ ಸಂಸ್ಥೆಯಲ್ಲಿ ವೃತ್ತಿರಂಗಕ್ಕೆ ಪ್ರವೇಶಿಸಿದವರು. ಅಲ್ಲಿ ಆರಂಭವಾದ ಅವರ ಬರವಣಿಗೆಯ ಹವ್ಯಾಸವು ನಾಡಿನ ಹಿರಿಯ ಮತ್ತು ಪ್ರಶಸ್ತಿ ವಿಜೇತ ಪತ್ರಕರ್ತೆಯ ಸಾಲಿನಲ್ಲಿ ತಂದು ನಿಲ್ಲಿಸಿದೆ. ಪ್ರಜಾಮತ ಪತ್ರಿಕೆಯಲ್ಲಿ ಆರಂಭವಾದ ಅವರ ಬರಹಗಳು ಅದೇ ಸಂಸ್ಥೆಯ ಮಯೂರ, ಉದಯವಾಣಿ ಬಳಗದ ತುಷಾರ, ರೂಪತಾರ, ಮಲ್ಲಿಗೆ ಮುಂತಾದ ಪತ್ರಿಕೆಗಳ ಅಂಕಣಕಾರರನ್ನಾಗಿಸಿತು ಹಾಗೂ ಆ ಪತ್ರಿಕೆಗಳ ಸಂಪಾದಕ ಸ್ಥಾನವನ್ನೂ ದೊರಕಿಸಿಕೊಟ್ಟಿತು. ಮಲ್ಲಿಗೆ ಪತ್ರಿಕೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿತು.

ಇದನ್ನೂ ಓದಿ
KUWJ ದತ್ತಿನಿಧಿ ಪ್ರಶಸ್ತಿ: ರಂಗನಾಥ್​​ ಭಾರದ್ವಾಜ್ ಸೇರಿ ಹಲವರಿಗೆ ಗೌರವ
ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಸಿದ್ದರಾಮಯ್ಯಗೆ KUWJ ಅಭಿನಂದನೆ
ಹಿರಿಯ ಪತ್ರಕರ್ತ ಮೊದಲಿಯಾರ್‌ಗೆ ಕಾರ್ಯನಿರತ ಪತ್ರಕರ್ತರ ಸಂಘದಿಂದ ಗೌರವ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ವಾರ್ಷಿಕ ಪ್ರಶಸ್ತಿ ಘೋಷಣೆ

ಇದನ್ನೂ ಓದಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ವಾರ್ಷಿಕ ಪ್ರಶಸ್ತಿ ಘೋಷಣೆ; ಬೆಂಗಳೂರಿನ ಐವರಿಗೆ ಪ್ರಶಸ್ತಿ

ಆರಂಭದಲ್ಲಿ ಗೋಕಾಕ್ ಚಳುವಳಿಯಲ್ಲಿ ಕಾರಾಗೃಹ ವಾಸವನ್ನೂ ಅನುಭವಿಸಿರುವ ಡಾ. ವಿಜಯ ಅವರ ಆರಂಭಿಕ ಚಟುವಟಿಕೆಗಳು ಹೋರಾಟ ಮನೋಭಾವಕ್ಕೆ ಮಾತ್ರ ಸೀಮಿತವಾಗಿದ್ದರೂ, ಕ್ರಮೇಣ ರಂಗಭೂಮಿಯತ್ತ ಅವರು ಮನಸ್ಸನ್ನು ಹೊರಳಿಸಿ ಬೀದಿ ನಾಟಕ ಎಂಬ ಕಲ್ಪನೆಯನ್ನು ಹುಟ್ಟು ಹಾಕಿ, ಬಳಿಕ ಸಾವಿರಾರು ಸಿನಿಮಾ ಲೇಖನಗಳನ್ನು ಬರೆದು ಕನ್ನಡದ ಖ್ಯಾತ ಸಿನಿಮಾ ಪತ್ರಕರ್ತೆ ಎಂದೆನಿಸಿಕೊಂಡವರು.

 

ಕೇಂದ್ರ ಸಾಹಿತ್ಯ ಅಕಾಡೆಮಿ ಸೇರಿದಂತೆ ಹತ್ತಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಅವರು, ’ವಿಜಯಮ್ಮ’ ಎಂದೇ ಪತ್ರಕರ್ತರ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ತಮಗೆ ದೊರೆತ ಪ್ರಶಸ್ತಿಗಳ ಜೊತೆ ಬಂದ ನಗದು ಬಹುಮಾನಗಳನ್ನೆಲ್ಲಾ ಮರಳಿ ನೀಡಿದವರು, ಇಲ್ಲವೇ ಸಾಮಾಜಿಕ ಸೇವಾ ಕಾರ್ಯಕ್ಕೆ ವಿನಿಯೋಗಿಸಿಕೊಂಡವರು. ಯಾರ ಹಂಗಿನಲ್ಲೂ ಇರದೆ, ಸ್ವಾಭಿಮಾನಿ ಗುಣವನ್ನು ಮೈಗೂಡಿಸಿಕೊಂಡ ಸ್ವಭಾವ ಅವರದ್ದಾಗಿದೆ.

ಅನನ್ಯವಾದ ಸೇವೆಯ ಅಮ್ಮ

ಇದೇ ಸಂದರ್ಭದಲ್ಲಿ ಡಾ. ವಿಜಯಾ ಅವರ ಸಾಧನೆಯ ಬಗ್ಗೆ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ತಮ್ಮ ಸುದೀರ್ಘ ಅವಧಿಯ ವೃತ್ತಿ ಜೀವನದ ಅವರ ಕೊಡುಗೆ ಪತ್ರಿಕಾ ರಂಗಕ್ಕೆ ನಿಜಕ್ಕೂ ಬಹುದೊಡ್ಡ ಕೊಡುಗೆ. 90ರ ದಶಕದ ಬಾಗೂರು ಚಳುವಳಿಗಾರರಿಗೂ ಅವರು ಸಹಕಾರ ನೀಡಿದ ದೂರದೃಷ್ಟಿಯ ಚಿಂತನೆಯ ಸಹಕಾರವೂ ಸ್ಮರಣೀಯ. ಅವರ ಆದರ್ಶ ಇಂದಿನ ಯುವ ಪತ್ರಕರ್ತರಿಗೆ ನಿಜಕ್ಕೂ ಮಾದರಿ ಎಂದರು. ಪತ್ರಕರ್ತೆಯಾಗಿ, ಸಂಘಟಕಿಯಾಗಿ, ಸಾಹಿತಿಯಾಗಿ, ರಂಗಕರ್ಮಿಯಾಗಿ ವಿಜಯಮ್ಮ ಅವರ ಸೇವೆ ಅನನ್ಯ ಎಂದು ಶ್ಲಾಘಿಸಿದರು

ಅಮ್ಮನ ಭಾವ ತುಂಬಿದ ವಿಜಯಮ್ಮ

ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಮಾತನಾಡಿ, ಸಮಾಜದಲ್ಲಿ ಸಾಮಾಜಿಕ ಬದ್ಧತೆ ಏನೆಂಬುದನ್ನು ತೋರಿಸಿದ ದಿಟ್ಟ ಪತ್ರಕರ್ತೆ ಡಾ. ವಿಜಯಾ ಅವರು ಎಂದು ಉದಾಹರಣೆ ಸಹಿತ ಶ್ಲಾಘಿಸಿದರು. ಒಬ್ಬೊಬ್ಬರನ್ನು ಒಂದೊಂದು ರೀತಿಯಲ್ಲಿ ಪ್ರಭಾವಿಸಿ, ಅವರಿಗೆ ನೆರವಾಗಿರುವ ಕಾರಣಕ್ಕೆ ಅವರಿಗೆ ಅಮ್ಮ ಪಟ್ಟ ದೊರೆತಿದೆ. ಸಮಾಜಕ್ಕೆ ಮೊದಲು ಬೀದಿ ನಾಟಕಗಳ ಪರಿಕಲ್ಪನೆಯನ್ನು ಬಿತ್ತಿದ್ದನ್ನು ಮರೆಯುವಂತಿಲ್ಲ. ಪ್ರತಿಯೊಂದು ಸಮಸ್ಯೆಗೂ ಸ್ಪಂದಿಸುವ ಅವರ ಮಾತೃ ಹೃದಯ ಇಡೀ ಸಮಾಜಕ್ಕೆ ಮಾದರಿ ಎಂದು ಹೇಳಿದ್ದಾರೆ.

ಚಲನಚಿತ್ರ ಪತ್ರಿಕೋದ್ಯಮದಲ್ಲಿ ಹೊಸ ಭಾಷ್ಯ ಬರೆದ ಹೆಗ್ಗಳಿಕೆಗೆ ಡಾ. ವಿಜಯಾ ಅವರು ಪಾತ್ರರಾಗಿದ್ದು, ಅವರ ಬರವಣಿಗೆಯ ಮಾರ್ಗದರ್ಶನ ಇಂದಿನ ಪತ್ರಕರ್ತರಿಗೂ ದೊರೆತಿದೆ ಎಂದು ಹಿರಿಯ ಪತ್ರಕರ್ತರಾದ ಬಾ.ನಾ. ಸುಬ್ರಮಣ್ಯ ಹೇಳಿದರು. ಪತ್ರಕರ್ತೆಯರ ಸಂಘದ ಮಾಲತಿ ಭಟ್ ಮಾತನಾಡಿ, ಉನ್ನತ ವ್ಯಕ್ತಿತ್ವದ ಡಾ. ವಿಜಯ ಅವರು ಪತ್ರಕರ್ತೆಯರ ಸಮಸ್ಯೆಗಳಿಗೂ ಸ್ಪಂದಿಸಿದವರು ಮತ್ತು ಪರ್ತ್ರಕರ್ತೆಯರ ಸಂಘದ ಹುಟ್ಟಿಗೂ ಕಾರಣಕರ್ತರಾದವರು ಎಂದಿದ್ದಾರೆ.

ಇದನ್ನೂ ಓದಿ: ಹಿರಿಯ ಪತ್ರಕರ್ತ ಮೊದಲಿಯಾರ್‌ಗೆ ಕಾರ್ಯನಿರತ ಪತ್ರಕರ್ತರ ಸಂಘದಿಂದ ಗೌರವ

ಡಾ. ವಿಜಯ ಅವರು ಪತ್ರಿಕಾ ವೃತ್ತಿಯ ಜೊತೆಗೆ ಹಲವಾರು ಮೌಲ್ಯಯುತ ಗ್ರಂಥಗಳ ಸಂಪಾದಕಿಯಾಗಿ ಪುಸ್ತಕ ಪ್ರಕಟಣೆಗಳ ಮೆರಗನ್ನು ಹೆಚ್ಚಿಸಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್ ಹೇಳಿದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ. ಆರ್. ದೇವರಾಜ್, ನಗರ ಘಟಕದ ಸಮಿತಿ ಸದಸ್ಯ ಡಿ.ಎಲ್.ಹರೀಶ್, ಶಿವರಾಜ್, ಸದಸ್ಯರಾದ ಸುಂದರೇಶ್, ಶರಣ ಬಸಪ್ಪ, ಪೂರ್ಣಿಮಾ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ ಸ್ವಾಗತಿಸಿದ್ದು, ರಾಜ್ಯ ಖಜಾಂಚಿ ವಾಸುದೇವ ಹೊಳ್ಳ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಡಾ. ವಿಜಯಾ ಅವರ ಸಹೋದರಿ ಪುಷ್ಪಾ, ಪುತ್ರ ಗುರು, ಸೊಸೆ ಭಾರತಿ ಸೇರಿದಂತೆ ಅವರ ಹಿತೈಷಿಗಳು ಪಾಲ್ಗೊಂಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.