ಮದುವೆಯಾಗಲು ಹುಡುಗಿ ಸಿಗಲಿಲ್ಲವೆಂದು ಬೇಸತ್ತು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ!

TV9 Digital Desk

| Edited By: ಸಾಧು ಶ್ರೀನಾಥ್​

Updated on:May 28, 2022 | 4:48 PM

ಗಾರ್ಮೆಂಟ್ಸ್​ ನಲ್ಲಿ ಕ್ವಾಲಿಟಿ ಚೆಕ್ ಮಾಡುವ ಕೆಲಸ ಮಾಡುತ್ತಿದ್ದ. ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಬಾಟಲ್ ವೊಂದರಲ್ಲಿ ಪೆಟ್ರೋಲ್ ಖರೀದಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮದುವೆಯಾಗಲು ಹುಡುಗಿ ಸಿಗಲಿಲ್ಲವೆಂದು ಬೇಸತ್ತು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ!
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಮದುವೆಯಾಗಲು ಹುಡುಗಿ ಸಿಗದಿದ್ದಕ್ಕೆ ಬೇಸತ್ತು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದರಿ ಯುವಕ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಪೀಣ್ಯಾದ ಸರ್ಕಾರಿ ಐಟಿಐ ಜಾಗದಲ್ಲಿ ನಡೆದಿದೆ. ಅಂಧ್ರದ ಮಡಕಶಿರಾ ಮೂಲದ ನವೀನ್ (31) ಎಂಬ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದ. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಎಡಗೈ ಸ್ವಾಧೀನವಿಲ್ಲದಿರುವ ಸಮಸ್ಯೆಯಿಂದಲೂ ಯುವಕ ಬಳಲುತ್ತಿದ್ದ ಎಂದು ತಿಳಿದುಬಂದಿದೆ.

ಗಾರ್ಮೆಂಟ್ಸ್​ ನಲ್ಲಿ ಕ್ವಾಲಿಟಿ ಚೆಕ್ ಮಾಡುವ ಕೆಲಸ ಮಾಡುತ್ತಿದ್ದ. ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಬಾಟಲ್ ವೊಂದರಲ್ಲಿ ಪೆಟ್ರೋಲ್ ಖರೀದಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನವೀನ್ ತಂದೆಯವರೂ ಸಹ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಜೀವನದಲ್ಲಿ ನವೀನ್ ಬೇಸತ್ತಿದ್ದ.

ಆತ್ಮಹತ್ಯಗೆ ಯತ್ನಿಸಿದಾಗ ನವೀನ್ ಕೂಗಾಡುವುದನ್ನು ಸ್ಥಳೀಯರು ಹಾಗೂ ಕೆಲ ವಿದ್ಯಾರ್ಥಿಗಳು ಗಮನಿಸಿದ್ದಾರೆ. ತಕ್ಷಣ ಆತನನ್ನು ESI ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಸಪ್ತಗಿರಿ ಆಸ್ಪತ್ರೆಗೆ ಸಾಗಿಸುವ ವೇಳೆ ಆಂಬುಲೆನ್ಸ್ ನಲ್ಲಿಯೇ ಮೃತಪಟ್ಟಿದ್ದಾನೆ. ಹೆಸರಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ಆಸ್ಪತ್ರೆಯಲ್ಲಿ ನವೀನ್ ಮರಣೋತ್ತರ ಪರೀಕ್ಷೆ ನಡೆದಿದೆ. RMC ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆ: ಭತ್ತ ಕೊಯ್ಯುವಾಗ ವಿದ್ಯುತ್​ ತಂತಿ ತುಳಿದು ಯುವಕ ಸಾವು 

ಭತ್ತ ಕಟಾವು ವೇಳೆ ವಿದ್ಯುತ್​ ತಂತಿ ತುಳಿದು ಯುವಕ ಮೃತಪಟ್ಟಿರುವ ದುರ್ಘಟನೆ ದಾವಣಗೆರೆ ತಾಲೂಕಿನ ಮಾಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ತುಂಡಾಗಿ ಬಿದ್ದಿದ್ದ ವಿದ್ಯುತ್​ ತಂತಿ ತುಳಿದು ಗಣೇಶ್(22) ಸಾವನ್ನಪ್ಪಿದ್ದರೆ ಮತ್ತೊಬ್ಬ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಪರಶುರಾಮ್ ಎನ್ನುವರ ಜಮೀನಿನಲ್ಲಿ ಘಟನೆ ನಡೆದಿದೆ. ಘಟನೆಯ ಬಳಿಕ, ಬೆಸ್ಕಾಂ ಸಿಬ್ಬಂದಿ ವಿರುದ್ಧ ಮಾಗನಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳ ಹಿಂದೆ ಗ್ರಾಮದ ಪಕ್ಕದಲ್ಲಿ ತುಂಡಾಗಿ ಬಿದ್ದ ತಂತಿ ತುಳಿದು ಎರಡು ಎಮ್ಮೆಗಳು ಸಾವನ್ನಪ್ಪಿದ್ದವು. ಬೆಸ್ಕಾಂ ಸಿಬ್ಬಂದಿ ಸರಿಯಾಗಿ ಕಂಬಗಳನ್ನು ಹಾಗೂ ವಿದ್ಯುತ್ ತಂತಿ ನಿರ್ವಹಣೆ ಮಾಡುತ್ತಿಲ್ಲ. ಸಾಕಷ್ಟು ಬಾರಿ ಗ್ರಾಮಸ್ಥರು ದೂರು ನೀಡಿದರೂ ನಿರ್ಲಕ್ಷ್ಯ ತೋರಲಾಗುತ್ತಿದೆ.ದಾವಣಗೆರೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಆದರೆ ಅವಘಡ ಸಂಭವಿಸಿದರೂ ಕೆಇಬಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ.

ಇದನ್ನೂ ಓದಿ:

ಬಾಲಕಿ ಒಂಟಿಕಾಲಲ್ಲಿ ಜಿಗಿದುಕೊಂಡು ಶಾಲೆಗೆ ಹೋಗುವ ದೇಶವಿದು! ಹಾಗಾದರೆ ಶಾಲೆಗೆ ನಡೆದುಹೋಗುವ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು ಗೊತ್ತಾ!? ಇಲ್ಲಿದೆ ಅಂಕಿ ಅಂಶಗಳು

ಶಾಲೆಗೆ ಚಕ್ಕರ್ ಹೊಡೆದು ಕೆರೆಯಲ್ಲಿ ಈಜಲು ಹೋಗಿದ್ದ 5 ವಿದ್ಯಾರ್ಥಿಗಳು ಪೈಕಿ ಒಬ್ಬ ಜಲ ಸಮಾಧಿ:

ಮೈಸೂರು: ಹುಣಸೂರು ತಾಲೂಕಿನ ತಿಪ್ಪಲಾಪುರ ಬೆಳ್ತೂರು ಕೆರೆಯಲ್ಲಿ ಈಜಲು ಹೋಗಿದ್ದ ಚಿಲ್ಕುಂದ ಗ್ರಾಮದ ಮಂಜುನಾಥ್ ಮತ್ತು ಶೈಲಜಾ ದಂಪತಿ ಪುತ್ರ ಹರ್ಷ(14) ಸಾವಿಗೀಡಾಗಿದ್ದಾನೆ. ಖಾಸಗಿ ಶಾಲೆಯ ಐವರು ವಿದ್ಯಾರ್ಥಿಗಳು ಶಾಲೆಗೆ ಚಕ್ಕರ್ ಹೊಡೆದು ಈಜಲು ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ಅವಘಡ ಅರಿವಿಗೆ ಬರುತ್ತಿದ್ದಂತೆ, ಉಳಿದ ನಾಲ್ವರು ಸ್ಥಳದಿಂದ ಪೇರಿ ಕಿತ್ತಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada