ಅರೆಸ್ಟ್​​ ಆಗಿದ್ದ ಆರೋಪಿ 6 ಗಂಟೆಯಲ್ಲೇ ಪೊಲೀಸ್​ ಠಾಣೆಯಿಂದ ಎಸ್ಕೇಪ್! ನಿರ್ಲಕ್ಷ್ಯ ಆರೋಪ

Accused Escapes from police station: ಓರ್ವ ಆರೋಪಿ ಬಂಧನಕ್ಕೊಳಗಾಗಿ ಕೇವಲ 6 ಗಂಟೆಗಳಲ್ಲಿ ಮತ್ತೆ ಪೊಲೀಸ್​ ಠಾಣೆಯಿಂದ ಎಸ್ಕೇಪ್ ಆಗಿರುವ ಆಘಾತಕಾರಿ ಘಟನೆಯೊಂದು ಬೀದರ್​ ಜಿಲ್ಲೆಯ ಖಟಕಚಿಂಚೊಳಿ ಪೊಲೀಸ್​ ಠಾಣೆಯಲ್ಲಿ ನಡೆದಿದೆ. ಸದ್ಯ ಪೊಲೀಸರ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಅರೆಸ್ಟ್​​ ಆಗಿದ್ದ ಆರೋಪಿ 6 ಗಂಟೆಯಲ್ಲೇ ಪೊಲೀಸ್​ ಠಾಣೆಯಿಂದ ಎಸ್ಕೇಪ್! ನಿರ್ಲಕ್ಷ್ಯ ಆರೋಪ
ಪ್ರಾತಿನಿಧಿಕ ಚಿತ್ರ
Image Credit source: Getty images
Edited By:

Updated on: Jul 12, 2026 | 10:48 PM

ಬೀದರ್, ಜುಲೈ 12: ಅರೆಸ್ಟ್ ಆಗಿ ಕೇವಲ 6 ಗಂಟೆಯಲ್ಲೇ ಪೊಲೀಸ್​ ಠಾಣೆಯಿಂದ ಆರೋಪಿ ಪರಾರಿ (Accused Escape) ಆಗಿರುವಂತಹ ಘಟನೆ ಬೀದರ್ (bidar) ಜಿಲ್ಲೆಯ ಖಟಕಚಿಂಚೊಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಕೈಲಾಶ್ ಪರಾರಿ ಆಗಿರುವ ಆರೋಪಿ. ಪೊಲೀಸರ ಈ ನಿರ್ಲಕ್ಷ್ಯ ಹಾಗೂ ವೈಫಲ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ನಡೆದಿದ್ದೇನು?

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಗೊರಟಾ ಗ್ರಾಮದಲ್ಲಿ ಇತ್ತೀಚೆಗೆ ಅನಿತಾ (32) ಎಂಬ ಮಹಿಳೆ ಮನೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಕೈಲಾಶ್​​​ ಹತ್ಯೆ ಮಾಡಿದ್ದ. ಈ ಘಟನೆಯ ನಂತರ ಕೈಲಾಶ್ ತಲೆಮರೆಸಿಕೊಂಡಿದ್ದ. ತನಿಖೆ ಕೈಗೆತ್ತಿಕೊಂಡಿದ್ದ ಖಟಕಚಿಂಚೊಳಿ ಠಾಣೆಯ ಪೊಲೀಸರು ಕೊನೆಗೂ ಕಾರ್ಯಾಚರಣೆ ನಡೆಸಿ ಕೈಲಾಶ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ತದನಂತರ ಆತನನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತರಲಾಗಿತ್ತು.

ಇದನ್ನೂ ಓದಿ: ಅಥಣಿಯಲ್ಲಿ ಭೀಕರ ದುರಂತ: ದುರಸ್ತಿ ವೇಳೆ ಕುಸಿದುಬಿದ್ದ ಮನೆ; ಇಬ್ಬರು ಕಾರ್ಮಿಕರು ಸಾವು

ಆರೋಪಿಯನ್ನು ಠಾಣೆಗೆ ಕರೆತಂದು ಇನ್ನು ಕೇವಲ 6 ಗಂಟೆ ಕಳೆಯುವಷ್ಟರಲ್ಲಿ ಆತ ರಾತ್ರಿ ವೇಳೆ ಪೊಲೀಸರ ಕಣ್ಣು ತಪ್ಪಿಸಿ ಠಾಣೆಯಿಂದ ಪರಾರಿ ಆಗಿದ್ದಾನೆ. ಇಷ್ಟು ಕೊಲೆ ಪ್ರಕರಣದ ಆರೋಪಿ ಪೊಲೀಸ್ ಕಾವಲಿನಲ್ಲಿದ್ದರೂ ಠಾಣೆಯಿಂದಲೇ ಓಡಿಹೋಗಿರುವುದು ಪೊಲೀಸರ ಕರ್ತವ್ಯದ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ.

ಸತ್ಯ ಮುಚ್ಚಿಡಲು ಯತ್ನಿಸಿದ ಪೊಲೀಸರು?

ಇನ್ನು ಆರೋಪಿ ಕೈಲಾಶ್ ಪೊಲೀಸ್ ಠಾಣೆಯಿಂದ ಪರಾರಿಯಾಗಿರುವ ವಿಷಯದ ಬಗ್ಗೆ ಖಟಕಚಿಂಚೊಳಿ ಪೊಲೀಸರು ಯಾರ ಮುಂದೆಯೂ ಬಾಯಿ ಬಿಡದೆ ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸಿದ್ದಾರೆ. ಆದರೆ, ಈ ವಿಷಯವನ್ನು ತಿಳಿದ ಮೃತ ಅನಿತಾ ಕುಟುಂಬಸ್ಥರು ತಕ್ಷಣವೇ ಮಾಧ್ಯಮಗಳಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಆರೋಪಿ ರಕ್ಷಣೆಗೆ ನಿಂತ್ರಾ ಪೊಲೀಸರು?

ಕೈಲಾಶ್​​ ಠಾಣೆಯಿಂದ ಓಡಿಹೋಗಲು ಪೊಲೀಸರ ಬೇಜವಾಬ್ದಾರಿತನವೇ ಕಾರಣ ಎಂದು ಆರೋಪಿಸಿರುವ ಮೃತರ ಕುಟುಂಬಸ್ಥರು, “ಬಂಧನಕ್ಕೊಳಗಾದ ಆರೋಪಿಗೆ ಪೊಲೀಸರೇ ರಕ್ಷಣೆ ನೀಡುತ್ತಿದ್ದಾರಾ?” ಎಂದು ಪ್ರಶ್ನಿಸಿದ್ದಾರೆ.

ಆರೋಪಿ ಕೊನೆಗೂ ಅರೆಸ್ಟ್​

ನಿನ್ನೆ ರಾತ್ರಿ ಖಟಕಚಿಂಚೋಳಿ ಠಾಣೆಯಿಂದ ತಪ್ಪಿಸಿಕೊಂಡಿದ್ದ ಕೈಲಾಶ್, ನಿರಂತರ ಶೋಧ ಬೆನ್ನಲ್ಲೇ ಬೀದರ್ ಪೊಲೀಸರು ಬಂಧಿಸಿದ್ದಾರೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮರೂರು ಬಳಿ ಕೈಲಾಶ್​​ನನ್ನು ಬಂಧಿಸಿರುವ ಪೊಲೀಸರು ಮತ್ತೆ ಖಟಕಚಿಂಚೋಳಿ ಠಾಣೆಗೆ ಕರೆದೊಯ್ದಿದ್ದಾರೆ.

ಲಾರಿ ಡಿಕ್ಕಿ: ಕಾರಿನಲ್ಲಿ ತೆರಳುತ್ತಿದ್ದ ಜೈಲು ಸಿಬ್ಬಂದಿ ಸಾವು

ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ತೆರಳುತ್ತಿದ್ದ ಜೈಲು ಸಿಬ್ಬಂದಿ ಸಾವನ್ನಪ್ಪಿರುವಂತಹ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಬಳಿ ನಡೆದಿದೆ. ಧಾರವಾಡ ಜೈಲಿನ ವಾರ್ಡರ್ ಸಂಗಪ್ಪ ಮಜ್ಜಗಿ(41) ಮೃತ ವ್ಯಕ್ತಿ.

ಇದನ್ನೂ ಓದಿ: ಬೈಕ್​​ಗೆ ಸಾರಿಗೆ ಬಸ್​​ ಡಿಕ್ಕಿ: ಹುಮನಾಬಾದ್​​ನಲ್ಲಿ ದುರಂತ ಅಂತ್ಯ ಕಂಡ ಮಗ, ಚಿಕ್ಕಮ್ಮ

ಧಾರವಾಡದಿಂದ ಬಾಗಲಕೋಟೆ ಜಿಲ್ಲೆಯ ನೀರಲಗಿ ಗ್ರಾಮಕ್ಕೆ ತೆರಳುತ್ತಿದ್ದರು. ಭೈರನಹಟ್ಟಿ ಬಳಿ ಲಾರಿ, ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿತ್ತು. ಕಾರಿನಲ್ಲಿ ಸಿಲುಕಿ ನಜ್ಜುಗುಜ್ಜಾಗಿ ಸಂಗಪ್ಪ ಮಜ್ಜಗಿ ಮೃತಪಟ್ಟಿದ್ದಾರೆ. ಸದ್ಯ ಹರಸಾಹಸಪಟ್ಟು ಪೊಲೀಸರು ಶವವನ್ನು ಹೊರತೆಗೆದಿದ್ದು, ಗದಗ ಜಿಲ್ಲೆಯ ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:22 pm, Sun, 12 July 26

Follow Us