AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಥಣಿಯಲ್ಲಿ ಭೀಕರ ದುರಂತ: ದುರಸ್ತಿ ವೇಳೆ ಕುಸಿದುಬಿದ್ದ ಮನೆ; ಇಬ್ಬರು ಕಾರ್ಮಿಕರು ಸಾವು

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ದುರಂತವೊಂದು ನಡೆದಿದೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಸೋರುತ್ತಿದ್ದ ಮನೆಯನ್ನು ದುರಸ್ತಿ ಮಾಡುವಾಗ ಮನೆ ಕುಸಿದುಬಿದ್ದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಸದ್ಯ ಸ್ಥಳಕ್ಕೆ ಐಗಳಿ ಠಾಣೆ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ.

ಅಥಣಿಯಲ್ಲಿ ಭೀಕರ ದುರಂತ: ದುರಸ್ತಿ ವೇಳೆ ಕುಸಿದುಬಿದ್ದ ಮನೆ; ಇಬ್ಬರು ಕಾರ್ಮಿಕರು ಸಾವು
ಮೃತ ಕಾರ್ಮಿಕರುImage Credit source: tv9 kannada
Sahadev Mane
| Edited By: |

Updated on: Jul 12, 2026 | 4:59 PM

Share

ಮುಖ್ಯಾಂಶಗಳು

  • ಬೆಳಗಾವಿ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆ
  • ಸೋರುತ್ತಿದ್ದ ಮನೆ ದುರಸ್ತಿ ವೇಳೆ ದುರಂತ
  • ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಬೆಳಗಾವಿ, ಜುಲೈ 12: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆ (rain) ಸುರಿಯುತ್ತಿದೆ. ಹೀಗಾಗಿ ಅವಾಂತರಗಳು ಸಂಭವಿಸಿವೆ. ಇದೀಗ ಮತ್ತೊಂದು ದುರಂತ ಸಂಭವಿಸಿದೆ. ಸೋರುತ್ತಿದ್ದ ಮನೆ ದುರಸ್ತಿ ವೇಳೆ ಕುಸಿದುಬಿದ್ದು ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ನಡೆದಿದೆ. ಮಾದೇವ್ ಕೃಷ್ಣಪ್ಪ ಬಡಿಗೇರ್(48) ಮತ್ತು ಸೈಯದ್ ಕೆಂಪವಾಡಿ(32) ಮೃತರು. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಕೊಟ್ಟಲಗಿ ಗ್ರಾಮದ ನಿವಾಸಿ ಲಕ್ಷ್ಮೀಬಾಯಿ ನಂದಗೊಂಡ ಎಂಬುವರಿಗೆ ಸೇರಿದ ಮನೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದಾಗಿ ಸೋರುತ್ತಿತ್ತು. ಹೀಗಾಗಿ ಮನೆ ದುರಸ್ತಿಗೆ ಇಬ್ಬರು ಕಾರ್ಮಿಕರು ಬಂದಿದ್ದರು. ಕಾರ್ಮಿಕರು ಮನೆಯ ಒಳಗೆ ರಿಪೇರಿ ಕೆಲಸದಲ್ಲಿ ತೊಡಗಿದ್ದಾಗ, ಮಳೆಗೆ ಸಂಪೂರ್ಣವಾಗಿ ನೆನೆದು ದುರ್ಬಲಗೊಂಡಿದ್ದ ಮಣ್ಣಿನ ಮೇಲ್ಛಾವಣಿ ಹಾಗೂ ಗೋಡೆಗಳು ಒಮ್ಮೆಗೇ ಇವರ ಮೇಲೆಯೇ ಕುಸಿದುಬಿದ್ದಿವೆ. ಇದರ ಪರಿಣಾಮ ಮಾದೇವ್ ಕೃಷ್ಣಪ್ಪ ಮತ್ತು ಸೈಯದ್ ಮಣ್ಣಿನ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು.

ಇದನ್ನೂ ಓದಿ: ರಾಜ್ಯದ ಹಲವೆಡೆ ವರುಣಾರ್ಭಟ: ತಡೆಗೋಡೆ ಕುಸಿದು, ಮರ ಬಿದ್ದು ಮನೆಗಳಿಗೆ ಹಾನಿ

ಇನ್ನು ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯ ಗ್ರಾಮಸ್ಥರು ತಕ್ಷಣವೇ ಧಾವಿಸಿ ಮಣ್ಣಿನ ಅಡಿಯಲ್ಲಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಲು ಹರಸಾಹಸ ಪಟ್ಟರು. ಗಾಯಗೊಂಡಿದ್ದ ಇಬ್ಬರನ್ನೂ ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಪಕ್ಕದ ಮಹಾರಾಷ್ಟ್ರದ ಜತ್ತ ನಗರದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟರಲ್ಲಾಗಲೇ ತೀವ್ರ ರಕ್ತಸ್ರಾವ ಹಾಗೂ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸದ್ಯ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಸರ್ಕಾರಿಬಸ್​​ ಡಿಕ್ಕಿಯಾಗಿ ಬೈಕ್​​ನಲ್ಲಿ ತೆರಳುತ್ತಿದ್ದ ಮಗ, ಚಿಕ್ಕಮ್ಮ ದುರ್ಮರಣ

ಸರ್ಕಾರಿ ಬಸ್​ ಡಿಕ್ಕಿ ಹೊಡೆದು ಬೈಕ್​​ನಲ್ಲಿ ತೆರಳುತ್ತಿದ್ದ ಇಬ್ಬರು ದುರ್ಮರಣ ಹೊಂದಿರುವಂತಹ ಘಟನೆ ಬೀದರ್​ ಜಿಲ್ಲೆಯ ಹುಮನಾಬಾದ್ ತಾಲೂಕಿನ ಕಬಿರಾಬಾದ್ ವಾಡಿ ಕ್ರಾಸ್​ ಬಳಿಯ ರಾಷ್ಟ್ರೀಯ ಹೆದ್ದಾರಿ-50ರಲ್ಲಿ‌ ನಡೆದಿದೆ. ದುಬಲಗುಂಡಿ ಗ್ರಾಮದ ನಿವಾಸಿ ಪವನ್(22) ಮತ್ತು ಚಿಕ್ಕಮ್ಮ ನರಸಮ್ಮ ಮೃತರು.

ಇದನ್ನೂ ಓದಿ: ಪಶ್ಚಿಮ ಘಟ್ಟದಲ್ಲಿ ಮುಂದುವರಿದ ಮಳೆಯ ಅಬ್ಬರ; ನರಸಿಂಹವಾಡಿ ದತ್ತ ಮಂದಿರ ಜಲಾವೃತ!

ಕಾಮಾಲೆ ರೋಗಕ್ಕೆ ಮನ್ನಾಏಖೇಳ್ಳಿ ಗ್ರಾಮಕ್ಕೆ ಪವನ್ ಮತ್ತು ನರಸಮ್ಮ ಹೋಗಿದ್ದರು. ನಾಟಿಮದ್ದು ಹಾಕಿಸಿಕೊಂಡು ಹಿಂತಿರುಗುವಾಗ ಬೀದರ್-ಕಲಬುರಗಿ ಮಾರ್ಗದ ತಡೆರಹಿತ ಸಾರಿಗೆ ಬಸ್​ ಡಿಕ್ಕಿ ಹೊಡೆದು  ಅಪಘಾತ ಸಂಭವಿಸಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಹಳ್ಳಿಖೇಡ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಹಳ್ಳಿಖೇಡ್ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us