ಕರ್ನಾಟಕದಲ್ಲಿ ವ್ಯಾಪಿಸುತ್ತಲೇ ಇದೆ ಹಕ್ಕಿಜ್ವರ: ಬಳ್ಳಾರಿಯಲ್ಲಿ 17 ಸಾವಿರ ಕೋಳಿಗಳ ಮಾರಣಹೋಮ
ಚಿಕ್ಕಬಳ್ಳಾಪುರ ಮೂಲಕ ಕರ್ನಾಟಕಕ್ಕೆ ಕಾಲಿಟ್ಟಿದ್ದ ಹಕ್ಕಿಜ್ವರ ಬಳ್ಳಾರಿಯಲ್ಲೇ ಠಿಕಾಣಿ ಹೂಡಿದೆ. ನಿತ್ಯ ಸಾವಿರಾರು ಕೋಳಿಗಳ ಮಾರಣಹೋಮ ನಡೆಯುತ್ತಿದೆ. ಒಂದು ಫಾರ್ಮ್ನಿಂದ ಮತ್ತೊಂದು ಫಾರ್ಮ್ಗೆ ಹಕ್ಕಿಜ್ವರ ಹರಡುತ್ತಿದ್ದಂತೆಯೇ ಅಲರ್ಟ್ ಆಗಿರುವ ಆರೋಗ್ಯ ಇಲಾಖೆ ಗೈಡ್ಲೈನ್ಸ್ ಜಾರಿಗೊಳಿಸಿದೆ. ಹಕ್ಕಿ ಜ್ವರ ಕುರಿತ ಇತ್ತೀಚಿನ ಅಪ್ಡೇಟ್ ಇಲ್ಲಿದೆ.

ಬೆಂಗಳೂರು, ಬಳ್ಳಾರಿ, ಮಾರ್ಚ್ 4: ಮನೆಮುಂದೆಯೇ ಕೋಳಿಗಳು ಸತ್ತು ಬೀಳುತ್ತಿವೆ. ಫಾರಂಗಳಲ್ಲಿ ಮಾರಣಹೋಮವೇ ನಡೆಯುತ್ತಿದೆ. ದಿನಕ್ಕೊಂದು ಜಿಲ್ಲೆ, ದಿನಕ್ಕೊಂದು ಊರು ಎಂದು ರಾಜ್ಯದಲ್ಲಿ ಹಕ್ಕಿಜ್ವರ ವ್ಯಾಪಿಸುತ್ತಲೇ ಇದ್ದು, ಬಳ್ಳಾರಿಯಲ್ಲಿ ಹಕ್ಕಿಜ್ವರ ಅಬ್ಬರಕ್ಕೆ ಇಡೀ ಕೋಳಿ ಫಾರಂಗಳೇ ಖಾಲಿ ಆಗುತ್ತಿವೆ. ಜಿಲ್ಲೆಯಲ್ಲಿ ಸುಮಾರು 17 ಸಾವಿರ ಕೋಳಿಗಳ ಹತ್ಯೆ ಮಾಡಲಾಗಿದೆ.
ಆಂಧ್ರ, ತೆಲಂಗಾಣದಲ್ಲಿ ಅಬ್ಬರಿಸುತ್ತಿದ್ದ ಹಕ್ಕಿಜ್ವರ ಕರ್ನಾಟಕಕ್ಕೂ ಕಾಲಿಟ್ಟಿದೆ. ಅದರಲ್ಲೂ ಬಳ್ಳಾರಿಯಲ್ಲಿ ಕೋಳಿಗಳ ಮಾರಣಹೋಮವೇ ನಡೆದಿದೆ. ಹಕ್ಕಿಜ್ವರ ಕಾಣಿಸಿಕೊಂಡ ಕಾರಣಕ್ಕೆ ಜಿಲ್ಲಾಡಳಿತವೇ 7 ಸಾವಿರ ಜೀವಂತ ಕೋಳಿಗಳನ್ನು ವಧೆ ಮಾಡಿದೆ. ಹಕ್ಕಿಜ್ವರದಿಂದ ಕುರೇಕುಪ್ಪದಲ್ಲಿ 2400 ಕೋಳಿಗಳು ಸಾವಿನ ಮನೆ ಸೇರಿವೆ. ಜಿಲ್ಲೆಯಲ್ಲಿ ಈ ವರೆಗೆ 17400 ಕೋಳಿಗಳು ಸತ್ತಿವೆ. ಅಸಿಲ್ ಹಾಗೂ ಕಾವೇರಿ ತಳಿ ಕೋಳಿಗಳೇ ಹಕ್ಕಿಜ್ವರಕ್ಕೆ ಟಾರ್ಗೆಟ್ ಆಗಿವೆ.
ವಲಸೆ ಹಕ್ಕಿಗಳಿಂದಲೇ ಹಕ್ಕಿಜ್ವರ ಎಂಟ್ರಿ ಶಂಕೆ
ಬಳ್ಳಾರಿಯ ದರೋಜಿ ಕೆರೆಗೆ ಸಾವಿರಾರು ವಲಸೆ ಪಕ್ಷಿಗಲು ಬರುತ್ತವೆ. ಇದೇ ಪಕ್ಷಿಗಳಿಂದ ಹಕ್ಕಿಜ್ವರ ಜಿಲ್ಲೆಗೆ ಕಾಲಿಟ್ಟಿರುವ ಶಂಕೆ ವ್ಯಕ್ತಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್ ಮಿಶ್ರಾ ಅನುಮಾನ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಜೈವಿಕ ವಿಜ್ಞಾನಿಗಳಿಂದ ಪರಿಶೀಲನೆ
ರಾಜ್ಯದಲ್ಲಿ ಮೊದಲು ಹಕ್ಕಿಜ್ವರ ಕಾಣಿಸಿಕೊಂಡಿದ್ದೇ ಚಿಕ್ಕಬಳ್ಳಾಪುರ ಜಿಲ್ಲೆಯ ವರದಹಳ್ಳಿಯಲ್ಲಿ. ಅದೇ ಗ್ರಾಮಕ್ಕೆ ಸೋಮವಾರ ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆ ಆಯುಕ್ತರು ಹಾಗೂ ಜೈವಿಕ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿಗಳು ಕೂಡಾ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಹಕ್ಕಿಜ್ವರ ಕಾಣಿಸಿಕೊಂಡ್ರೆ ಫಾರಂ ಸೀಲ್ಡೌನ್
ಬಾಗಲಕೋಟೆ ಜಿಲ್ಲೆಯಲ್ಲೂ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಯಾವುದೇ ಕೋಳಿ ಫಾರಂನಲ್ಲೂ ಹಕ್ಕಿಜ್ವರ ಕಾಣಿಸಿಕೊಂಡರೆ ಆ ಫಾರಂ ಅನ್ನು ಸೀಲ್ಡೌನ್ ಮಾಡುವಂತೆ ಹೇಳಲಾಗಿದೆ .
ಇದನ್ನೂ ಓದಿ: ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ: ಕರ್ನಾಟಕದಲ್ಲಿ ಅಲರ್ಟ್, ಬೇರೆ ರಾಜ್ಯದ ಕೋಳಿಗಳಿಗೆ ನಿರ್ಬಂಧ
ಕೊಡಗು, ಚಾಮರಾಜನಗರ, ಮೈಸೂರು ಗಡಿಯಲ್ಲಿ ತಪಾಸಣೆ
ಕೇರಳದ ಜತೆ ಗಡಿ ಹಂಚಿಕೊಂಡಿರುವ ಕೊಡಗಿನಲ್ಲೂ ಹಕ್ಕಿಜ್ವರ ಆತಂಕ ಇದೆ. ಹೀಗಾಗಿ ವಿರಾಜಪೇಟೆ ತಾಲೂಕಿನ ಮಾಕುಟ್ಟ ಹಾಗೂ ಪೆರುಂಬಾಡಿ ಚೆಕ್ಪೋಸ್ಟ್, ಪೊನ್ನಂಪೇಟೆ ತಾಲೂಕಿನ ಕುಟ್ಟ ಚೆಕ್ಪೋಸ್ಟ್ನಲ್ಲಿ ಸಿಬ್ಬಂದಿ ನಿಯೋಜಿಸಲಾಗಿದ್ದು, ಹೊರರಾಜ್ಯದ ಕೋಳಿಗಳನ್ನ ತಪಾಸಣೆ ನಡೆಸಲಾಗ್ತಿದೆ. ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆಯಲ್ಲಿ ಕೇರಳದಿಂದ ಆಗಮಿಸುತ್ತಿರುವ ಕೋಳಿ ಸಾಗಾಣ ವಾಹನಗಳಿಗೆ ಸ್ಯಾನಿಟೈಜೇಷನ್ ಮಾಡಲಾಗ್ತಿದೆ. ಕರ್ನಾಟಕ- ಕೇರಳ ಗಡಿ ಬಾವಲಿಯಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದ್ದು, ವಾಹನಗಳನ್ನು ತಪಾಸಣೆ ಮಾಡಿ ಬಿಡಲಾಗುತ್ತಿದೆ.
ಹಕ್ಕಿಜ್ವರ ನಿಯಂತ್ರಣಕ್ಕೆ ಮಾರ್ಗಸೂಚಿ
- ಹಕ್ಕಿ ಜ್ವರ ಕಂಡುಬಂದ 3 ಕಿ.ಮೀ. ವ್ಯಾಪ್ತಿಯಲ್ಲಿ ಮಾರಾಟ ಬಂದ್.
- 3 ಕಿ.ಮೀ. ವ್ಯಾಪ್ತಿಯಲ್ಲಿ ಕೋಳಿ ಮಾಂಸ ಮಾರಾಟ ಮಾಡುವಂತಿಲ್ಲ.
- ಹಕ್ಕಿಜ್ವರ ಕಂಡು ಬಂದ 10 ಕಿಲೋ ಮೀಟರ್ ಸರ್ವಲೆನ್ಸ್ ಸ್ಥಳ.
- ಯಾರೂ ಕೂಡ 3 ಕಿ.ಮೀ. ವ್ಯಾಪ್ತಿಯಲ್ಲಿ ಓಡಾಡುವಂತಿಲ್ಲ.
- ಮಾಂಸ ಬೇಯಿಸಿ ತಿನ್ನಬೇಕು, ಹಸಿ ಮಾಂಸ ತಿನ್ನುವಂತಿಲ್ಲ.
- ಕೋಳಿ ಮಾಂಸ ಕತ್ತರಿಸುವಾಗ ಮಾಸ್ಕ್, ಗ್ಲೌಸ್ ಧರಿಸುವುದು ಕಡ್ಡಾಯ.
- ಹಕ್ಕಿಗಳು, ಕೋಳಿಗಳ ಜೊತೆ ಇರುವವರಿಗೆ ಔಷಧ ನೀಡಬೇಕು.
- ಹಕ್ಕಿ ಜ್ವರದ ಗುಣಲಕ್ಷಣ ಇರುವವರಿಗೆ RTPCR ಟೆಸ್ಟ್ ಕಡ್ಡಾಯ.
- ಹಕ್ಕಿ ಜ್ವರ ಬಂದವರ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್ ತೆರೆಯಬೇಕು .
ಜಿಲ್ಲೆಯಿಂದ ಜಿಲ್ಲೆಗೆ ಹಕ್ಕಿಜ್ವರ ವ್ಯಾಪಿಸುತ್ತಿದ್ದಂತೆ ಆರೋಗ್ಯ ಇಲಾಖೆ ಗೈಡ್ಲೈನ್ ಜಾರಿಗೊಳಿಸಿದ್ದು, ಜನ ಇವುಗಳನ್ನ ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಬೇಕಿದೆ.