ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆಯಾದ ಬಾನು ಮುಷ್ತಾಕರ ಹಳೇ ವಿಡಿಯೋ ಹರಿಬಿಟ್ಟ ಸಚಿವೆ ಶೋಭಾ

ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್​ ಅವರನ್ನು ಆಹ್ವಾನಿಸಿದ್ದು, ವಿವಾದಕ್ಕೆ ಕಾರಣವಾಗಿದೆ. ಹಿಂದೂ ಧರ್ಮದ ಬಗ್ಗೆ ನಂಬಿಕೆ ಇಲ್ಲದವರು ದಸರಾ ಉದ್ಘಾಟನೆಗೆ ಬಂದು ಏನು ಮಾಡುತ್ತಾರೆ ಎಂಬ ಪ್ರಶ್ನೆ ಎದ್ದಿದೆ. ಶೋಭಾ ಕರಂದ್ಲಾಜೆ ಅವರು ಬಾನು ಮುಷ್ತಾಕ್​​ ಅವರು ಕಾರ್ಯಕ್ರಮದಿಂದ ಹೊರಗುಳಿಯುವಂತೆ ಮನವಿ ಮಾಡಿದ್ದಾರೆ. ಈ ವಿಷಯ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು, ಆಗಸ್ಟ್​ 25: ಮೈಸೂರು ದಸರಾ (Mysore Dasara) ಕನ್ನಡ ನಾಡಿನ ಹಬ್ಬವಾಗಿದೆ. ಮೈಸೂರು ದಸರಾಕ್ಕೆ ಲೇಖಕಿ ಬಾನು ಮುಷ್ತಾಕ್​​ (Banu Mushtaq) ಅವರನ್ನು ಅತಿಥಿಯಾಗಿ ಸರ್ಕಾರ ಆಹ್ವಾನಿಸಿದೆ. ಯಾರಿಗೆ ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲವೋ, ಯಾರಿಗೆ ಮೂರ್ತಿ ಪೂಜೆ ಮೇಲೆ ನಂಬಿಕೆ ಇಲ್ಲವೋ ಅವರು ದಸರಾ ಉದ್ಘಾಟನೆಗೆ ಬಂದು ಏನು ಮಾಡುತ್ತಾರೆ. ಸರ್ಕಾರ ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿದೆ. ಲೇಖಕಿ ಬಾನು ಮುಷ್ತಾಕ್​​ ಚಾಮುಂಡಿ ಬೆಟ್ಟ ಹತ್ತಬಾರದು. ಅವರು ದೇವರಿಗೆ ಪುಷ್ಪಾರ್ಚನೆ ಮಾಡಲ್ಲ ಅಂತ ಭಾವಿಸುತ್ತೇನೆ. ಅವರು ಕಾರ್ಯಕ್ರಮದಿಂದ ಹೊರಹೋಗಬೇಕೆಂದು ಮನವಿ ಮಾಡುವೆ. ಅವರಿಗೆ ಚಾಮುಂಡೇಶ್ವರಿ ಮೇಲೆ ನಂಬಿಕೆ ಇದೆಯಾ ಹೇಳಲಿ. ಚಾಮುಂಡೇಶ್ವರಿ ಮೇಲೆ ನಂಬಿಕೆ ಇದ್ರೆ ಪುಷ್ಪಾರ್ಚನೆಗೆ ನಮ್ಮ ವಿರೋಧವಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,  ಲೇಖಕಿ ಬಾನು ಮುಷ್ತಾಕ್​​ ನಮ್ಮ ಭುವನೇಶ್ವರಿ ದೇವಿಯನ್ನು ಒಪ್ಪಲ್ಲ. ಹಾಗಾದರೆ ತಾಯಿ ಚಾಮುಂಡೇಶ್ವರಿ ದೇವಿಯನ್ನು ಹೇಗೆ ಒಪ್ಪುತ್ತಾರೆ. ದಸರಾ ಕೇವಲ ಸಾಂಸ್ಕೃತಿಕ ಉತ್ಸವ ಅಲ್ಲ ಧಾರ್ಮಿಕ ಉತ್ಸವವಾಗಿದೆ.

ಬಾನು ಮುಷ್ತಾಕ್ ಅವರು ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡಲ್ಲ ಅಂತ ಭಾವಿಸುತ್ತೇನೆ. ಅವರು ಕಾರ್ಯಕ್ರಮದಿಂದ ಹೊರಗೆ ಉಳಿಯಬೇಕು ಎಂದು ಮನವಿ ಮಾಡುತ್ತೇನೆ. ಎಲ್ಲ ಭಕ್ತಾದಿಗಳು ವಿರೋಧ ಮಾಡುತ್ತೇವೆ. ಬಾನು ಮುಷ್ತಾಕ್ ಅವರಿಗೆ ತಾಯಿ ಚಾಮುಂಡೇಶ್ವರಿ ದೇವಿ ಮೇಲೆ ನಂಬಿಕೆ ಇದೆಯಾ ಹೇಳಲಿ. ನಂಬಿಕೆ ಇದ್ರೆ ಬನ್ನಿ, ನಮ್ಮ ವಿರೋಧ ಇಲ್ಲ. ಯಾವುದೇ ವಿಚಾರಕ್ಕೆ ನಮ್ಮ ವಿರೋಧ ಇಲ್ಲ. ಜಾತ್ಯಾತೀತೆಯ ಅರ್ಥ ಹಿಂದು ಧರ್ಮಕ್ಕೆ ವಿರೋಧ ಮಾಡು ಎಂಬುವುದಲ್ಲ. ಮೈಸೂರು ದಸರಾ ಉದ್ಘಾಟನೆಯಿಂದ ಬಾನು ಮುಷ್ತಾಕ್ ಅವರನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದವರು ಚಾಮುಂಡೇಶ್ವರಿಯನ್ನು ಒಪ್ಪಿ ಪುಷ್ಪಾರ್ಚನೆ ಮಾಡಿಯಾರೇ: ಪ್ರತಾಪ್ ಸಿಂಹ ಪ್ರಶ್ನೆ

ಟಿಪ್ಪು ಹಾಗೂ ಹೈದರಾಲಿ ದಸರಾ ಆಚರಣೆ ಮಾಡಿರಬಹುದು. ಆದರೆ, ಅವರು ಎಂದೂ ತಾಯಿ ಚಾಮುಂಡಿಶ್ವೇರಿ ದೇವಿಗೆ ನಮಸ್ಕಾರ ಮಾಡಿಲ್ಲ. ನಾವು ನಾಸ್ತಿಕರನ್ನು ಗೌರವಿಸಿಸುತ್ತೇವೆ, ನಾವು ವೈಚಾರಿಕವಾಗಿ ವಿರೋಧಿಸುತ್ತಿಲ್ಲ. ನಂಬಿಕೆಯೇ ಇಲ್ಲದಾಗ ಹೇಗೆ ಪುಷ್ಪಾರ್ಚನೆ ಮಾಡುತ್ತೀರಿ. ಈ ರಾಜ್ಯದಲ್ಲಿ ಭುವನೇಶ್ವರಿ ದೇವಿಯ ದೇವಸ್ಥಾನ ಇದೆ. ಕುವೆಂಪು ಅವರು ಜಯಹೇ ಕರ್ನಾಟಕ ಮಾತೆ ಅಂತ ಹೇಳಿದರು. ಇಂತಹದ್ದಕ್ಕೆ ಅಪಮಾನ ಮಾಡುವವರು ಚಾಮುಂಡೇಶ್ವರಿ ದೇವಿಗೆ ಅಪಮಾನ ಮಾಡಲ್ಲ ಎಂಬುವುದಕ್ಕೆ ಏನು ಗ್ಯಾರಂಟಿ? ಎಂದು ಪ್ರಶ್ನಿಸಿದರು.

ಇದೇ ಇಂಡಿ ಒಕ್ಕೂಟದ‌ ಕೇರಳ ಸರ್ಕಾರ ಶಬರಿ ಮಲೆ ಕಾರ್ಯಕ್ರಮ ಉದ್ಘಾಟನೆಗೆ ದೇವರೇ ನಂಬದ, ಹಿಂದೂ ವಿರೋಧಿಯಾಗಿರುವ ತಮಿಳುನಾಡು ಸಿಎಂ ಸ್ಟಾಲಿನ್​ಗೆ ಕರೆಯುತ್ತಿದೆ. ಇತ್ತ ಕರ್ನಾಟಕ ಸರ್ಕಾರ ಚಾಮುಂಡಿ ನಂಬಂದ ಬಾನು ಮುಸ್ತಾಕ್ ಆಹ್ವಾನಿಸಿದೆ. ಅದೆಷ್ಟು ತುಷ್ಠಿಕರಣದ ರಾಜಕೀಯ ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:24 pm, Mon, 25 August 25