
ಚಾಮರಾಜನಗರ, ಮಾರ್ಚ್ 24: ಹುಲಿ ಸೆರೆಗೆ ಹಮ್ಮಿಕೊಳ್ಳಲಾಗಿದ್ದ ‘ಆಪರೇಷನ್ ಬೀಸ್ಟ್ (Operation Beast)’ ಕಾರ್ಯಾಚರಣೆಯ ಎರಡನೇ ಹಂತ ಯಶಸ್ವಿಯಾಗಿ ಪೂರ್ಣಗೊಂಡ ಬೆನ್ನಲ್ಲೇ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಅವಘಡವೊಂದು ಸಂಭವಿಸಿರುವುದು ಬೆಳಕಿಗೆ ಬಂದಿದೆ. ಚಾಮರಾಜನಗರ (Chamarajanagar) ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಭೀಮನ ಬೀಡು ಗ್ರಾಮದಲ್ಲಿ ನಡೆದ ಕಾರ್ಯಾಚರಣೆಯ ವೇಳೆ, ಬಂಡೀಪುರ (Bandipur) ಅರಣ್ಯ ಸಿಬ್ಬಂದಿ ಕೂಂಬಿಂಗ್ ವೇಳೆ ಅನುಸರಿಸಬೇಕಾದ ನಿಯಮಗಳನ್ನು ಪಾಲಿಸದೇ ಇರುವುದು ಗೊತ್ತಾಗಿದೆ. ಇದರಿಂದ ಸಿಬ್ಬಂದಿಯೊಬ್ಬರ ಪ್ರಾಣಕ್ಕೆ ಸಂಚಕಾರ ಎದುರಾಗಿದ್ದು, ಅದೃಷ್ಟವಶಾತ್ ಅನಾಹುತವೊಂದು ತಪ್ಪಿದೆ.
ಹುಲಿಗೆ ಅರವಳಿಕೆ (ಡಾಟ್) ನೀಡಿದ ನಂತರ ಅದು ಸಂಪೂರ್ಣವಾಗಿ ಪ್ರಜ್ಞೆ ತಪ್ಪುವ ಮುನ್ನವೇ ಸೆರೆ ಹಿಡಿಯಲು ಸಿಬ್ಬಂದಿ ಮುಂದಾಗಿದ್ದರು. ನಿಯಮ ಪ್ರಕಾರ, ಹಿರಿಯ ಅಧಿಕಾರಿಗಳು ಮತ್ತು ಪಶುವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ಮುಂದಿನ ಕ್ರಮ ಕೈಗೊಳ್ಳಬೇಕಾಗಿದ್ದರೂ, ಈ ಸಂದರ್ಭದಲ್ಲಿ ಆತುರದ ನಿರ್ಧಾರ ಕೈಗೊಳ್ಳಲಾಗಿತ್ತು ಎನ್ನಲಾಗಿದೆ. ಸಿಬ್ಬಂದಿ ಸೆರೆ ಹಿಡಿಯಲು ಬರುತ್ತಿದ್ದಂತೆಯೇ ಗಾಬರಿಗೊಂಡ ಹುಲಿ ರಿವರ್ಸ್ ಅಟ್ಯಾಕ್ ನಡೆಸಿ, ಫಾರೆಸ್ಟ್ ಗಾರ್ಡ್ ಬಸವೇಗೌಡ ಮೇಲೆ ದಾಳಿ ನಡೆಸಿದೆ. ಹುಲಿಯ ಒಂದೇ ಹೊಡೆತಕ್ಕೆ ಅವರ ಕೈಗೆ ಗಂಭೀರ ಗಾಯವಾಗಿದೆ.
ಕಾರ್ಯಾಚರಣೆ ವೇಳೆ ಸ್ಥಳದಲ್ಲಿದ್ದ ಜನರ ಕೂಗಾಟ ಮತ್ತು ಗದ್ದಲದಿಂದ ಹುಲಿ ಇನ್ನಷ್ಟು ಗಾಬರಿಗೊಂಡಿತ್ತು. ಅರವಳಿಕೆ ಮದ್ದು ನೀಡಿದ ಬಳಿಕವೂ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿರಲಿಲ್ಲ ಎಂಬುದು ತಿಳಿದುಬಂದಿದೆ. ಗಾಯಗೊಂಡ ಫಾರೆಸ್ಟ್ ಗಾರ್ಡ್ ಬಸವೇಗೌಡರನ್ನು ತಕ್ಷಣವೇ ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಹಿರಿಯ ಅಧಿಕಾರಿಗಳು ಸ್ಥಳದಲ್ಲಿರದೇ ಕಾರ್ಯಾಚರಣೆ ನಡೆಸಿದ ಆರೋಪ ಕೇಳಿಬಂದಿದ್ದು, ಅರಣ್ಯ ಇಲಾಖೆಯ ಕಾರ್ಯವಿಧಾನಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.
ಇದನ್ನೂ ಓದಿ: ಚಾಮರಾಜನಗರ: ವಿದ್ಯುತ್ ಶಾಕ್ಗೆ ಹೆಣ್ಣು ಹುಲಿ ಬಲಿ; ಅರಣ್ಯಾಧಿಕಾರಿಗಳ ಕಳ್ಳಾಟಕ್ಕೆ ರೊಚ್ಚಿಗೆದ್ದ ರೈತರು
ಒಟ್ಟಿನಲ್ಲಿ, ಕಾಡುಪ್ರಾಣಿಗಳ ಸೆರೆ ಕಾರ್ಯಾಚರಣೆಯಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳನ್ನು ಲೆಕ್ಕಿಸದ ಪರಿಣಾಮ ಈ ಅವಘಡ ಸಂಭವಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಅಗತ್ಯವಿದೆ.