ಚಾಮರಾಜನಗರ: ವಿದ್ಯುತ್ ಶಾಕ್ಗೆ ಹೆಣ್ಣು ಹುಲಿ ಬಲಿ; ಅರಣ್ಯಾಧಿಕಾರಿಗಳ ಕಳ್ಳಾಟಕ್ಕೆ ರೊಚ್ಚಿಗೆದ್ದ ರೈತರು
ಜಮೀನಿನ ಬೇಲಿಯಿಂದ ವಿದ್ಯುತ್ ಪ್ರವಹಿಸಿ 5 ವರ್ಷದ ಹೆಣ್ಣು ಹುಲಿ ಸಾವನ್ನಪ್ಪಿರುವಂತಹ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ನಡೆದಿದೆ. ಇದೇ ಹುಲಿ ಮೂರು ಹಸುಗಳನ್ನು ಕೊಂದಿತ್ತು. ಜಾನುವಾರು ಸತ್ತಾಗ ಸ್ಪಂದಿಸದ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಚಾಮರಾಜನಗರ, ಮಾರ್ಚ್ 17: ಗಡಿನಾಡು ಚಾಮರಾಜನಗರದಲ್ಲಿ ಮಾನವ ಮತ್ತು ಕಾಡು ಪ್ರಾಣಿ ಸಂಘರ್ಷ ಮತ್ತೆ ಮುಂದುವರೆದಿದೆ. ಕಳೆದ ವಾರ ಮೂರು ಹಸುವನ್ನ ಕೊಂದು ತಿಂದಿದ್ದ 5 ವರ್ಷದ ಹೆಣ್ಣು ಹುಲಿ (tiger) ವಿದ್ಯುತ್ ಶಾಕ್ಗೆ ಬಲಿಯಾಗಿರುವಂತಹ (death) ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ನಡೆದಿದೆ. ಜಾನುವಾರು ಸತ್ತಾಗ ಬಾರದ ಅರಣ್ಯ ಸಿಬ್ಬಂದಿ ಇದೀಗ ಹುಲಿ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಓಡೋಡಿ ಬಂದಿದ್ದ ಅರಣ್ಯಾಧಿಕಾರಿಗಳಿಗೆ ರೈತರು ಚಳಿ ಕೂಡ ಬಿಡಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿಗೆ ಘೇರಾವ್ ಹಾಕಿದ ಅನ್ನದಾತರು
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದ ಜಮೀನು ಒಂದಕ್ಕೆ ನೀಡಿದ್ದ ವಿದ್ಯುತ್ ಸಂಪರ್ಕದಿಂದ 5 ವರ್ಷ ಪ್ರಾಯದ ಹೆಣ್ಣು ಹುಲಿ ಸಾವನ್ನಪ್ಪಿದೆ. ಈ ಹಿನ್ನಲೆ ಸ್ಥಳಕ್ಕೆ ಬಂದ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿಗೆ ಘೇರಾವ್ ಹಾಕಿ ಅನ್ನದಾತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ಹುಲಿ ಸಾವು ಕೇಸ್: ಉರುಳು ಹಾಕಿದ್ದ ಆರೋಪಿ ಅರೆಸ್ಟ್
ಇನ್ನು ಕಳೆದ 15 ದಿನಗಳಲ್ಲಿ ರವಿಚಂದ್ರ ಎಂಬುವವರ ಜಮೀನಿನಲ್ಲಿ ಮೇಯುತ್ತಿದ್ದ ಮೂರು ಜಾನುವಾರುಗಳ ಮೇಲೆ ವ್ಯಾಘ್ರ ದಾಳಿ ಮಾಡಿತ್ತು. ಮೂರು ಹಸುವನ್ನ ಕೊಂದು ತಿಂದು ತೇಗಿತ್ತು. ಆಗ ಬಂಡೀಪುರ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದರೆ ಸ್ಥಳಕ್ಕೆ ಬಾರದೆ ಉಡಾಫೆ ತೋರಿದ್ದರು. ಆದರೆ ಇಂದು ಹುಲಿ ಸತ್ತ ವಿಚಾರ ತಿಳಿದ ತಕ್ಷಣ ಇಡೀ ಬಂಡೀಪುರ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದರು. ಇದರಿಂದ ರೊಚ್ಚಿಗೆದ್ದ ರೈತ ವರ್ಗ ಅರಣ್ಯ ಸಿಬ್ಬಂದಿಗೆ ಘೇರಾವ್ ಹಾಕಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಹುಲಿಯ ಕಾಟಕ್ಕೆ ಈ ಭಾಗದ ರೈತರು ರೋಸಿಹೋಗಿದ್ದಾರೆ. ಆಗಲೇ ಅರಣ್ಯ ಸಿಬ್ಬಂದಿ ಬೋನಿಟ್ಟು ಹುಲಿಯನ್ನ ಹಿಡಿದಿದ್ದರೆ ಇಂದು ಹುಲಿ ಬಲಿಯಾಗುತ್ತಿರಲಿಲ್ಲ ಎಂದು ರೈತ ದಿನೇಶ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ: ಗಂಡು ಹುಲಿ ಮೃತದೇಹ ಪತ್ತೆ: ಡ್ಯಾಂನಲ್ಲಿ ಶವ ತೇಲುತ್ತಿರುವುದನ್ನು ಕಂಡು ಬೆಚ್ಚಿಬಿದ್ದ ಪ್ರವಾಸಿಗರು
ಜಮೀನಿನಲ್ಲಿ ವಿದ್ಯುತ್ ಕೊಟ್ಟು ಹುಲಿ ಸಾವಿಗೆ ಕಾರಣವಾದವರ ಮೇಲೆ ಎಫ್ಐಆರ್ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳಿ, ಆದರೆ ಕರ್ತವ್ಯ ಲೋಪ ಎಸಗಿದ ಅರಣ್ಯ ಇಲಾಖೆಯ ಸಿಎಫ್ ಪ್ರಭಾಕರನ್ ಮೇಲೆ ಎಫ್ ಐ ಆರ್ ಮಾಡಿದರೆ ಮಾತ್ರ ರೈತನ ಮೇಲೆ ಎಫ್ಐಆರ್ ಮಾಡಬೇಕು. ಇಲ್ಲದೆ ಹೋದರೆ ಯಾವುದೇ ಕಾರಣಕ್ಕೂ ಪ್ರಕರಣ ದಾಖಲು ಮಾಡುವುದಕ್ಕೆ ಬಿಡಲ್ಲವೆಂದು ರೈತರು ಪಟ್ಟುಹಿಡಿದರು. ರೈತರ ಉಗ್ರ ರೂಪಕ್ಕೆ ಬೆದರಿದ ಬಂಡೀಪುರ ಸಿಎಫ್ ಪ್ರಭಾಕರನ್, ಪೊಲೀಸ್ ರಕ್ಷಣೆ ಜೊತೆ ಸ್ಥಳಕ್ಕೆ ಬಂದಿದ್ದು ಹಾಸ್ಯಸ್ಪದವಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.