Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಳ್ಳೇಗಾಲ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಗೆ ಇಂದು ವಿದ್ಯುಕ್ತ ಚಾಲನೆ; ಪ್ರಾಣಿಬಲಿಗೆ ಅವಕಾಶ ಇಲ್ಲದಂತೆ ಜಿಲ್ಲಾಡಳಿತ ಕ್ರಮ

Chikkalluru Siddappaji Jatre: ಚಾಮರಾಜನಗರದ ಸುಪ್ರಸಿದ್ದ ಚಿಕ್ಕಲ್ಲೂರು ಸಿದ್ದಾಪಾಜಿ ಜಾತ್ರೆಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಐದು ದಿನಗಳ ಕಾಲ ಈ ಜಾತ್ರೆ ನಡೆಯಲಿದ್ದು ಲಕ್ಷಾಂತರ ಭಕ್ತರು ಭೇಟಿ ಕೊಡುವ ನಿರೀಕ್ಷೆ ಇದೆ. ಈ ಬಾರಿ ಜಾತ್ರೆಯಲ್ಲಿ ಪ್ರಾಣಿ ಬಲಿ ನೀಡದಂತೆ ದಯಾನಂದ ಸ್ವಾಮಿಜಿ ಕರೆ ನೀಡಿದ್ದಾರೆ. ಕೊಳ್ಳೇಗಾಲದ ಚಿಕ್ಕಲ್ಲೂರಿನ ಈ ಸಿದ್ದಪ್ಪಾಜಿ ಜಾತ್ರೆಯಲ್ಲಿ ಏಳು ಗ್ರಾಮಗಳ ಜನರು ಹರಕೆ ಸಲ್ಲಿಸುತ್ತಾರೆ.

ಕೊಳ್ಳೇಗಾಲ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಗೆ ಇಂದು ವಿದ್ಯುಕ್ತ ಚಾಲನೆ; ಪ್ರಾಣಿಬಲಿಗೆ ಅವಕಾಶ ಇಲ್ಲದಂತೆ ಜಿಲ್ಲಾಡಳಿತ ಕ್ರಮ
ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 13, 2025 | 2:00 PM

ಚಾಮರಾಜನಗರ, ಜನವರಿ 13: ಇಲ್ಲಿಯ ಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆ ಇವತ್ತು ಆರಂಭಗೊಂಡಿದೆ. ಕೊಳ್ಳೇಗಾಲ ತಾಲೂಕಿನಲ್ಲಿ ಐದು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿರುವ ಈ ಮಹಾ ಜಾತ್ರೆಯನ್ನು ಯಶಸ್ವಿಯಾಗಿ ನಡೆಸಲು ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆ ಮಾಡಿದೆ. ಈ ಜಾತ್ರೆ ಸಂದರ್ಭದಲ್ಲಿ ದೇವರಿಗೆ ಪ್ರಾಣಿಬಲಿ ಕೊಡುವ ಪರಿಪಾಟ ಈ ಹಿಂದೆ ಇತ್ತು. ದೇವಸ್ಥಾನದಲ್ಲಿ ಪ್ರಾಣಿಬಲಿ ನೀಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಇದರ ಬಗ್ಗೆ ಜಿಲ್ಲಾಡಳಿತ ಎಚ್ಚರ ವಹಿಸಿದೆ. ಇದೇ ವೇಳೆ, ಪಶು, ಪ್ರಾಣಿ ಬಲಿ ನಿರ್ಮೂಲನಾ ಸಂಘದ ದಯಾನಂದ ಸ್ವಾಮೀಜಿ ಅವರು ಪ್ರಾಣಿ ಬಲಿ ನಡೆಸಬಾರದೆಂದು ಮನವಿ ಮಾಡಿದ್ದಾರೆ.

ಶ್ರೀ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆ ಮತ್ತು ಬಿಳಿಗಿರಿ ರಂಗನಾಥ ಸ್ವಾಮಿ ಜಾತ್ರೆ ಹಾಗೂ ಶಿಂಷಾ ಮಾರಮ್ಮ ದೇವಿ, ಕುರಬನ ಕಟ್ಟೆ ಶ್ರೀ ಮಂಟೇಸ್ವಾಮಿ, ವಡೆಗೆರೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಮುಂತಾದ ಧಾರ್ಮಿಕ ಸ್ಥಳಗಳಲ್ಲಿ, ಆವರಣಗಳಲ್ಲಿ, ದೇವಸ್ಥಾನದ ಮುಂಭಾಗ, ಸುತ್ತಮುತ್ತಲಿನ ಪರಿಸರ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ, ಹೊರವಲಯ ಮತ್ತು ಸಾರ್ವಜನಿಕ ಸ್ಥಳ, ಧಾರ್ಮಿಕ ಸಮಾವೇಶದಲ್ಲಿ ಯಾವುದೇ ಪ್ರಾಣಿಗಳ ಬಲಿ ನಡೆಯದಂತೆ ಹಾಗೂ ಪ್ರಾಣಿ ಅಂಗಾಗಗಳ ನೈವೇದ್ಯ ಸಲ್ಲಿಕೆ ಮಾಡಂತೆ ದಯಾನಂದ ಸ್ವಾಮಿಜಿ ಕರೆ ನೀಡಿದ್ದಾರೆ.

ಇದನ್ನೂ ಓದಿ: ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ಬಿದರಿ ಕಲೆ ಅವಸಾನದತ್ತ!

ಈ ಹಿಂದೆ ದೇವರಿಗೆ ಪ್ರಾಣಿ ಬಲಿ ನೀಡುವುದು ಸಂಪ್ರದಾಯವಾಗಿತ್ತು. ದೇವಾಲಯ ಆವರಣದಲ್ಲೇ ವಧೆ ಮಾಡಲಾಗುತ್ತಿತ್ತು. 1959ರ ಕರ್ನಾಟಕ ಪ್ರಾಣಿಬಲಿಗಳ ಪ್ರತಿಬಂಧಕ ಅಧಿನಿಯಮ ಹಾಗೂ 1963 ಮತ್ತು 1975 ರ ನಿಯಮಗಳ ಪ್ರಕಾರ ರಾಜ್ಯ ಹೈಕೋರ್ಟ್ ಆದೇಶದಂತೆ ಕಟ್ಟುನಿಟ್ಟಿನ ವ್ಯಾಪಕ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು ಪ್ರಾಣಿಬಲಿಯನ್ನು ಸಂಪೂರ್ಣವಾಗಿ ತಡೆಯಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಪಶು ಪ್ರಾಣಿಬಲಿ ನಿರ್ಮೂಲನ ಜಾಗೃತಿ ಮಹಸಂಘ ಹಾಗು ಬಸವ ಧರ್ಮ ಜ್ಞಾನ ಪೀಠದ ಅಧ್ಯಕ್ಷರಾದ ಶ್ರೀ ದಯಾನಂದ ಸ್ವಾಮೀಜಿಯವರು ಕರ್ನಾಟಕ ಸರ್ಕಾರ, ಚಾಮರಾಜ ನಗರ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.

Chikkalluru Siddappaji Jatre begins on January 13th, district administration readies for big cultural fair, news in Kannada

ದಯಾನಂದ ಸ್ವಾಮಿಜಿ

ಈ ಬಾರಿಯ ಜಾತ್ರೆ ಬಹಳ ಕಟ್ಟು ನಿಟ್ಟಾಗಿ ನಡೆಯಲಿದ್ದು ಅಕ್ರಮವಾಗಿ ಪ್ರಾಣಿ ಬಲಿ ನೀಡುವವರ ವಿರುದ್ದ ಕಠಿಣ ಕಾನೂನು ರೀತಿಯ ಕ್ರಮ ಕೈ ಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.

ಚಿಕ್ಕಲ್ಲೂರು ಜಾತ್ರೆಗೆ 600 ವರ್ಷ ಇತಿಹಾಸ

ಕೊಳ್ಳೇಗಾಲದ ಚಿಕ್ಕಲ್ಲೂರಿನಲ್ಲಿ ನಡೆಯುವ ಸಿದ್ದಪ್ಪಾಜಿ ಜಾತ್ರೆ ಕಳೆದ 600 ವರ್ಷಗಳಿಂದಲೂ ಆಚರಿಸಲಾಗುತ್ತಿದೆ. ಏಳು ಗ್ರಾಮಗಳ ಜನರು ಸೇರಿ ಈ ಜಾತ್ರೆ ನಡೆಸುತ್ತಾರೆ. ಚಂದ್ರಮಂಡಲೋತ್ಸವದ ಮೂಲಕ ಜಾತ್ರೆಗೆ ಚಾಲನೆ ದೊರೆಯುತ್ತದೆ. ಪವಾಡಪುರುಷರೆನ್ನಲಾದ ಸಿದ್ದಪ್ಪಾಜಿ ಅವರು ಜನರನ್ನು ಜಾಗೃತಿಗೊಳಿಸಿದ್ದಕ್ಕೆ ಸಾಂಕೇತಿಕವಾಗಿ ಚಂದ್ರಮಂಡಲ ಕಟ್ಟಲಾಗುತ್ತದೆ. ಈ ಕಾರ್ಯವನ್ನು ಆದಿಜಾಂಬವ ಸಮುದಾಯದವರು ಮಾತ್ರವೇ ಮಾಡುತ್ತಾರೆ.

ಇದನ್ನೂ ಓದಿ: ಗದಗ: ಪುಟ್ಟರಾಜ ಗವಾಯಿಗಳ ಸ್ಮಾರಕ ಭವನ ನಿರ್ಮಾಣಕ್ಕೆ ಅನುದಾನ ನೀಡದ ಸರ್ಕಾರ, ಭಿಕ್ಷಾಟನೆ ಮೂಲಕ ಹಣ ಸಂಗ್ರಹ

ಏಳು ಗ್ರಾಮಗಳ ಜನರು ತಮ್ಮ ಹರಕೆಗಳನ್ನು ಈ ಸಂದರ್ಭದಲ್ಲಿ ತೀರಿಸುತ್ತಾರೆ. ಐದು ದಿನಗಳ ಕಾಲ ವಿವಿಧ ಉತ್ಸವಗಳನ್ನು ನಡೆಸಲಾಗುತ್ತದೆ. ಏಳು ಗ್ರಾಮದ ಜನರು ಮಾತ್ರವಲ್ಲ, ಜಿಲ್ಲೆಯ ಹಾಗೂ ಅಕ್ಕಪ್ಪದ ಜಿಲ್ಲೆಯ ಜನರೂ ಈ ಅದ್ಧೂರಿ ಜಾತ್ರೆಯನ್ನು ವೀಕ್ಷಿಸಲು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ