- Kannada News Photo gallery Karnataka Heritage Bidri Craft: Dying Art wants Government Support, Kannada News
ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ಬಿದರಿ ಕಲೆ ಅವಸಾನದತ್ತ!
ಶತಮಾನಗಳ ಇತಿಹಾಸ ಹೊಂದಿರುವ ಬಿದರಿ ಕಲೆ ಅಳಿವಿನಂಚಿನಲ್ಲಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ಮಾರುಕಟ್ಟೆಯ ಕೊರತೆಯಿಂದ ಕುಶಲಕರ್ಮಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಬಿದರಿ ಕಲೆಗಾರರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿದ್ದರೂ ರಾಜ್ಯ ಸರ್ಕಾರದಿಂದ ಸೂಕ್ತ ಬೆಂಬಲವಿಲ್ಲದಿರುವುದು ಚಿಂತಾಜನಕ. ಬಿದರಿ ಕಲೆಯನ್ನು ಉಳಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು.
Updated on: Jan 13, 2025 | 12:39 PM

ಜಗತ್ತಿನಾದ್ಯಾಂತ ಪ್ರಸಿದ್ಧಿ ಪಡೆದಿರುವ ಐತಿಹಾಸಿಕ ಬಿದರಿ ಕಲೆ ಅವಸಾನದತ್ತ ಸಾಗಿದೆ. ಬಿದರಿ ಕಲೆಯನ್ನು ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ಕುಟುಂಬಗಳು ಇಂದಿಗೂ ಕೂಡಾ ಸಂಕಷ್ಟದಲ್ಲಿದ್ದಾರೆ. ಬಿದರಿ ಕಲೆಗೆ ಪದ್ಮಶ್ರೀ ಪ್ರಶಸ್ತಿ ಸಂದಿದ್ದರೂ ಈ ಕಲೆಯನ್ನು ಪ್ರೋತ್ಸಾಹಿಸಬೇಕಾದ ಸರಕಾರ ಕಂಡು ಕಾಣದಂತೆ ಕುಳಿತುಬಿಟ್ಟಿದೆ.

ಬಿದರಿ ಕಲೆಯನ್ನು ನಂಬಿಕೊಂಡು ಬದುಕನ್ನು ಕಟ್ಟಿಕೊಂಡಿರುವ ಕುಶಲಕರ್ಮಿಗಳು ವಶಂಪರಪರಾಗತವಾಗಿ ಬಂದಿರುವ ವೃತ್ತಿಯನ್ನು ಬಿಟ್ಟು ಬೇರೆ ಉದ್ಯೋಗವನ್ನು ಅರಸಿಕೊಂಡು ಗೂಳೆ ಹೋಗುತ್ತಿದ್ದಾರೆ. ಈ ಕಲೆಯನ್ನು ನಂಬಿಕೊಂಡು ಬದುಕನ್ನ ಕಟ್ಟಿಕೊಂಡಿರುವ ಕಲಾವಿದರನ್ನು ಸರಕಾರ ನಿಷ್ಕಾಳಜಿ ಮಾಡುತ್ತಿರುವುದೆ ಕಲಾವಿದರ ಬದುಕು ಬೀದಿಗೆ ಬರಲು ಕಾರಣವಾಗಿದೆ.

ಅತ್ಯಂತ ಸೂಕ್ಷ್ಮವಾದ ಕುಸುರಿ ಕಲೆಯಿಂದ ವಸ್ತುಗಳನ್ನು ತಯಾರಿಸಲು ಸುಮಾರು ತಿಂಗಳು ಬೇಕಾಗುತ್ತದೆ. ಕಷ್ಟ ಪಟ್ಟು ತಯಾರಿಸಿದ ವಸ್ತುಗಳಿಗೆ ಸೂಕ್ತವಾದ ಮಾರುಕಟ್ಟೆ ಇಲ್ಲ. ಹೀಗಾಗಿ ಬಿದರಿ ಕಲೆಯನ್ನು ನಂಬಿಕೊಂಡು ಬದುಕಟ್ಟಿಕೊಳ್ಳುವುದು ಸಾಧ್ಯವಿಲ್ಲವೆಂದು ತಿಳಿದ ಅದೆಷ್ಟೋ ಜನರು ಈ ವೃತ್ತಿಯನ್ನು ದೂರ ಸರಿಯುತ್ತಿದ್ದಾರೆ.

ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಬಿದರಿ ಕಲೆಗಾರ ಷಾ ರಷೀದ್ ಅಹ್ಮದ್ ಖಾದ್ರಿ ಅವರನ್ನು ಗುರುತಿಸಿ 74ನೇ ಗಣರಾಜ್ಯೋತ್ಸವ ದಂದು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಆದರೆ, ಬಿದರಿ ವಸ್ತುಗಳನ್ನು ಮಾರಾಟ ಮಾಡಲು ಸರಿಯಾದ ಮಾರುಕಟ್ಟೆ ಇಲ್ಲ. ಜೊತೆಗೆ ಈ ವಸ್ತುಗಳನ್ನು ತಯಾರಿಸಲು ಬೇಕಾದ ಕಚ್ಚಾವಸ್ತುಗಳನ್ನು ಸಹ ರಾಜ್ಯ ಸರ್ಕಾರ ಪೂರೈಸುತ್ತಿಲ್ಲ.

ಇದರಿಂದ ಬಿದರಿ ಕಲೆಯನ್ನು ನಂಬಿಕೊಂಡು ಬದುಕು ಕಟ್ಟಿಕೊಂಡವರು ಪರದಾಡುವಂತಾಗಿದೆ. ಬಿದರಿ ಕಲೆಗಾರರು ಆರಕ್ಕೇರದೆ ಮೂರಕ್ಕಿಳಿಯದಂತ ಸ್ಥಿತಿಯಲ್ಲಿದ್ದು ನಮ್ಮ ಕಲೆಗೆ ರಾಜ್ಯ ಸರ್ಕಾರದ ಬೆಂಬಲ ಅಗತ್ಯವಿದೆ ಎಂದು ಕಲಾವಿದರು ಮನವಿ ಮಾಡಿದ್ದಾರೆ.

ಬಿದರಿ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಣ ಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಅವುಗಳಿಗೆ ಹೊಳಪು ನೀಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿದರಿ ವಸ್ತುಗಳನ್ನು ಸಾವಿರಾರು ರೂಪಾಯಿ ಕೊಟ್ಟು ಖರೀದಿ ಮಾಡುತ್ತಾರೆ. ಗೋಬೆಗಳು, ಬಳೆಗಳು, ಕೀ ಚೈನ್, ಮಹಾತ್ಮರ ಮೂರ್ತಿಗಳು, ದೇವರ ವಿಗ್ರಹಗಳನ್ನು ತಾಮ್ರ ಹಾಗೂ ಸತುಗಳಿಂದ ತಯಾರಿಸಿ ಅದರ ಮೇಲೆ ಕೆತ್ತನೆಯನ್ನು ಮಾಡಲಾಗುತ್ತದೆ. ಈ ಕೆತ್ತನೆಯ ಅತ್ಯಂತ ಸೂಕ್ಷ್ಮ ರೀತಿಯಿಂದ ಕೂಡಿದ್ದಾಗಿದ್ದು ಸ್ವಲ್ಪ ಯಾಮಾರಿದರೂ ಇಡೀ ವಸ್ತು ಹಾಳಾಗಿ ಹೋಗುತ್ತದೆ.

ಯಾವುದೇ ಒಂದು ವಸ್ತುವಿನ ಮೇಲೆ ಅಲಂಕಾರಿಕ ಚಿತ್ರ ಬೀಡಿಸಬೇಕಾದರೆ 2-3 ದಿನಗಳು ಬೇಕಾಗುತ್ತದೆ. ಇಂತಹ ಸೂಕ್ಷ್ಮ ಕಲೆಯನ್ನು ಕರಗತಮಾಡಿಕೊಂಡು ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಕಲಾವಿದರಿಗೆ ಪ್ರೋತ್ಸಾಹ ಅಗತ್ಯವಿದೆ ಎಂದು ಕುಶಲಕರ್ಮಿಗಳು ಒತ್ತಾಯಿಸಿದ್ದಾರೆ.

ನಾಲ್ಕೈದು ತಿಂಗಳ ಹಿಂದೆ ಒಂದು ಗ್ರಾಂ ಬೆಳ್ಳಿಯ ದರ 400 ರೂಪಾಯಿ ಇತ್ತು. ಆದರೆ ಈಗ 1 ಸಾವಿರ ರೂಪಾಯಿ ಆಗಿದೆ. ಇದರಿಂದ ನಮಗೆ ಬಾರಿ ನಷ್ಟವಾಗುತ್ತಿದೆ. ಇದನ್ನ ನಂಬಿಕೊಂಡು ಬದುಕು ಕಟ್ಟಿಕೊಂಡವರು ನಷ್ಟ ಅನುಭವಿಸಿ ಈ ಉದ್ಯೋಗವನ್ನು ತೊರೆದು ಬೆರೆ ಉದ್ಯೋಗ ಅರಸಿಕೊಂಡು ಹೋಗುತ್ತಿದ್ದಾರೆಂದು ಕಲಾವಿದರು ಅಳಲು ತೋಡಿಕೊಂಡರು.

ಶತಮಾನಗಳ ಇತಿಹಾಸ ಹೊಂದಿರುವ ಬಿದರಿ ಕಲೆಯಿಂದು ಅವಸಾನದತ್ತ ಸಾಗಿರುವುದು ಕಲೆಗೆ ಬೆಲೆಯಿಲ್ಲದಂತಾಗಿದೆ. ಜಿಲ್ಲಾಡಳಿತ ಹಾಗೂ ಸರಕಾರದ ದಿವ್ಯ ನಿರ್ಲಕ್ಷದಿಂದ ಇಡೀ ಜಗತ್ತಿಗೆ ಕರ್ನಾಟಕದ ಬೀದರಿ ಕಲೆಯನ್ನ ಪರಿಚಯಿಸಿದ ಕಲಾವಿದರ ಬದುಕು ಮಾತ್ರ ಬೀದಿಗೆ ಬಂದಿದೆ. ಕಲೆ ಹಾಗೂ ಕಲಾವಿದರನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವ್ದಾರಿ ಸರ್ಕಾರದ ಮೇಲಿದೆ.
























