
ಚಾಮರಾಜನಗರ, ಫೆಬ್ರವರಿ 2: ಫ್ಲೋರೈಡ್ ಮಿಶ್ರಿತ ಕುಡಿಯುವ ನೀರಿನಿಂದಾಗಿ (Fluoride-contaminated water) ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಹಾಗೂ ಸುಳ್ವಾಡಿ ಗ್ರಾಮಗಳ 47 ಜನರಿಗೆ ಕಿಡ್ನಿ ವೈಫಲ್ಯ ಸಂಭವಿಸಿರುವ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಅಷ್ಟೇ ಅಲ್ಲದೆ, ಈ ಗ್ರಾಮಗಳ ಹತ್ತಾರು ಜನರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವುದು ‘ಟಿವಿ9’ ನಡೆಸಿದ ರಿಯಾಲಿಟಿ ಚೆಕ್ನಲ್ಲಿ ಬೆಳಕಿಗೆ ಬಂದಿದೆ. ಮಾರ್ಟಳ್ಳಿ–ಸುಳ್ವಾಡಿ ಗ್ರಾಮಗಳಲ್ಲಿ ಕಳೆದ 30 ವರ್ಷಗಳಿಂದ ಗ್ರಾಮ ಪಂಚಾಯ್ತಿ ಮೂಲಕ ಸರಬರಾಜಾಗುತ್ತಿರುವ ನೀರನ್ನೇ ಕುಡಿಯುತ್ತಿರುವ ಜನರು ಇಂದು ಕಿಡ್ನಿ ವೈಫಲ್ಯ, ಥೈರಾಯ್ಡ್, ಹೈಪರ್ ಟೆನ್ಷನ್, ಸಂದಿವಾತ ಸೇರಿದಂತೆ ಹಲವು ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಈ ಎರಡು ಗ್ರಾಮಗಳಲ್ಲಿ ಈಗಾಗಲೇ 47 ಮಂದಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಪ್ರಚುರಪಡಿಸಿದೆ.
ಗ್ರಾಮದಲ್ಲಿ ಅಂತರ್ಜಲದ ತೀವ್ರ ಕೊರತೆಯಿದ್ದು, ಲಭ್ಯವಾಗುತ್ತಿರುವ ನೀರು ಫ್ಲೋರೈಡ್ ಪ್ರಮಾಣ ಅಧಿಕವಾಗಿರುವುದೇ ಆರೋಗ್ಯ ಹಾನಿಗೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ. ಈ ನೀರನ್ನು ಸೇವಿಸುವುದರಿಂದ ಅನೇಕ ಗ್ರಾಮಸ್ಥರ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿದ್ದು, ಆರೋಗ್ಯದ ಮೇಲೆ ಬೀರಿರುವ ಪರಿಣಾಮ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಅನೇಕ ವರ್ಷಗಳ ಹಿಂದೆ ಕಾಡುಗಳ್ಳ ವೀರಪ್ಪನ್ ವಿರುದ್ಧ ಕಾರ್ಯಾಚರಣೆಗೆ ತೆರಳಿದ್ದ ಪೊಲೀಸರ ಮೇಲೂ ಈ ಪ್ರದೇಶದ ವಿಷಕಾರಿ ನೀರು ಪರಿಣಾಮ ಬೀರಿತ್ತು. ವೀರಪ್ಪನ್ನನ್ನು ಸೆರೆ ಹಿಡಿಯಲು ಕರ್ನಾಟಕ ಪೊಲೀಸರು ಮಾರ್ಟಳ್ಳಿ ಗ್ರಾಮದಲ್ಲಿ ಕ್ಯಾಂಪ್ ಹಾಕಿದ್ದ ಸಂದರ್ಭದಲ್ಲಿ, ಇಬ್ಬರು ಪೊಲೀಸರಿಗೆ ಕಿಡ್ನಿ ವೈಫಲ್ಯ ಕಾಣಿಸಿಕೊಂಡಿತ್ತು. ಆ ವೇಳೆ ನಡೆದ ಪರಿಶೀಲನೆಯಲ್ಲಿ ಗ್ರಾಮದಲ್ಲಿ ಬಳಕೆಯಾಗುತ್ತಿದ್ದ ನೀರಿನಲ್ಲಿ ಅಧಿಕ ಪ್ರಮಾಣದ ಫ್ಲೋರೈಡ್ ಅಂಶ ಇರುವ ವಿಚಾರ ಬಯಲಾಗಿತ್ತು ಎನ್ನಲಾಗಿದೆ.
ಇಷ್ಟಾದರೂ ಜಿಲ್ಲಾಡಳಿತದಿಂದ ಶುದ್ಧ ಕುಡಿಯುವ ನೀರಿನ ಶಾಶ್ವತ ವ್ಯವಸ್ಥೆ ಕಲ್ಪಿಸಲಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಶುದ್ಧ ನೀರಿಗಾಗಿ ಪರಿಪರಿಯಾಗಿ ಬೇಡಿಕೊಂಡರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇರೆ ದಾರಿ ಇಲ್ಲದೆ ತಿಂಗಳಿಗೆ ಸಾವಿರಾರು ರೂಪಾಯಿ ವೆಚ್ಚ ಮಾಡಿ ಟ್ಯಾಂಕರ್ ನೀರು ತರಸಿಕೊಳ್ಳುವ ಸ್ಥಿತಿಗೆ ಗ್ರಾಮಸ್ಥರು ತಲುಪಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಪೊಲೀಸರಿಗೆ ದೊಡ್ಡ ತಲೆನೋವಾದ ಕೇರಳಿಯನ್ ಮಲ್ಲು ದರೋಡೆ ಗ್ಯಾಂಗ್
‘ಟಿವಿ9’ ನಡೆಸಿದ ಗ್ರೌಂಡ್ ರಿಯಾಲಿಟಿ ಚೆಕ್ನಿಂದಾಗಿ ಗ್ರಾಮಸ್ಥರ ಬದುಕಿನ ಕಟು ಸತ್ಯ ಅನಾವರಣಗೊಂಡಿದೆ. ಫ್ಲೋರೈಡ್ ನೀರು ಮತ್ತು ಆಡಳಿತದ ವೈಫಲ್ಯ ಒಟ್ಟಾಗಿ ಜನರ ಜೀವಕ್ಕೆ ಮಾರಕವಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಕೂಡಲೇ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ, ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಒದಗಿಸುವಂತೆ ಸಾರ್ವಜನಿಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.