
ಚಾಮರಾಜನಗರ, ಆಗಸ್ಟ್ 16: ಜಿಲ್ಲೆಯ ಹನೂರು ತಾಲೂಕಿನಲ್ಲಿ ಅರಣ್ಯ ಇಲಾಖೆಯ ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ (death) ಪ್ರಕರಣ ಗಡಿ ಜಿಲ್ಲೆ ಧಗಧಗ ಎನ್ನುವಂತೆ ಮಾಡಿದೆ. ನಿನ್ನೆ ಕಚೇರಿಗೆ ನುಗ್ಗಿ ಆಕ್ರೋಶ ಹೊರಹಾಕಿದ್ದ ಜನ, ಇಂದು ಪೊಲೀಸ್ ಠಾಣೆ ಮುಂದೆ ಧರಣಿ ಕೂತಿದ್ದರು. ಒಂದು ಹಂತದಲ್ಲಿ ಹೈಡ್ರಾಮಾವೇ ನಡೆದಿದೆ. ಈ ಎಲ್ಲದರ ಮಧ್ಯೆ ಇದೀಗ ಅರಣ್ಯ ಇಲಾಖೆ (forest Department) ಘಟನೆ ವೇಳೆ ಸಿಕ್ಕ ಸಾಕ್ಷ್ಯವನ್ನು ಬಿಡುಗಡೆ ಮಾಡಿದ್ದು, ಪ್ರಕರಣ ಮತ್ತೆ ತಿರುವು ಪಡೆದುಕೊಂಡಿದೆ.
ಅರಣ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ‘ಘಟನಾ ಸ್ಥಳದಲ್ಲಿದ್ದ ಬೇಟೆಗಾರರಿಂದ ಅಕ್ರಮವಾಗಿ ಬಳಸಲಾಗುತ್ತಿದ್ದ ಬಂದೂಕು ಹಾಗೂ ಬರೋಬ್ಬರಿ 34.25 ಕೆಜಿ ಜಿಂಕೆ ಮಾಂಸ ತುಂಬಿದ್ದ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಂಕೆಗೆ ಮೂರು ಕಡೆಗಳಲ್ಲಿ ಬಿದ್ದಿದ್ದ ಗುಂಡೇಟಿನ ಪುರಾವೆಯನ್ನು ಇದೀಗ ಅರಣ್ಯ ಇಲಾಖೆ ಅಧಿಕೃತವಾಗಿ ಬಿಡುಗಡೆ ಮಾಡಿದೆ.’
ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಘಟನೆಯ ಸತ್ಯಾಸತ್ಯತೆ ಬಯಲಿಗೆಳೆಯಲು ಮ್ಯಾಜಿಸ್ಟ್ರೇಟ್ ಮಟ್ಟದ ತನಿಖೆಗೆ ಅಧಿಕೃತ ಆದೇಶ ಹೊರಡಿಸಿದ್ದಾರೆ. ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸಲ್ಲಿಸಿದ ವರದಿಯ ಪ್ರಕಾರ, ಮುಂಜಾನೆ ಸುಮಾರು 5:15 ರಿಂದ 5:30ರ ಸುಮಾರಿಗೆ ಅಕ್ರಮವಾಗಿ ನಾಡಬಂದೂಕು ಹಿಡಿದು ವನ್ಯಪ್ರಾಣಿಗಳನ್ನು ಬೇಟೆಯಾಡಿ ಹೊರಡುತ್ತಿದ್ದ ಕಳ್ಳಬೇಟೆಗಾರರ ತಂಡ, ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಯನ್ನು ಕಂಡು ಏಕಾಏಕಿ ಗುಂಡಿನ ದಾಳಿ ನಡೆಸಿದೆ.
ಇದನ್ನೂ ಓದಿ: ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಘಟನೆ ಇನ್ಸೈಡ್ ಮಾಹಿತಿ ಬಿಚ್ಚಿಟ್ಟ ಸಿಎಂ ಡಿಕೆಶಿ
ಈ ವೇಳೆ ಸಿಬ್ಬಂದಿ ತಮ್ಮ ಜೀವ ಹಾಗೂ ಸರ್ಕಾರಿ ಸ್ವತ್ತಿನ ರಕ್ಷಣೆಗಾಗಿ ನಡೆಸಿದ ಪ್ರತಿದಾಳಿಯಲ್ಲಿ ಮೂವರಿಗೆ ಗುಂಡೇಟು ತಗುಲಿ, ಇಬ್ಬರು ಪ್ರಜ್ಞಾಹೀನರಾಗಿದ್ದರೆ, ಪ್ರಜ್ಞೆಯಲ್ಲಿದ್ದ ಮತ್ತೊಬ್ಬ ಗಾಯಾಳುವನ್ನು ಕೊಳ್ಳೇಗಾಲದ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇನ್ನೊಬ್ಬ ಆರೋಪಿ ಕಾಡಿನೊಳಗೆ ಪರಾರಿಯಾಗಿದ್ದಾನೆ. ಒಂದೆಡೆ ವನ್ಯಸಂಪತ್ತನ್ನು ಕಾಯುವ ಸಿಬ್ಬಂದಿಯ ಅಸಹಾಯಕತೆ, ಇನ್ನೊಂದೆಡೆ ರಕ್ತಸಿಕ್ತವಾಗಿ ನೆಲಕ್ಕುರುಳಿದ ಜೀವಗಳು, ಈ ಇಡೀ ದುರಂತದ ನೈಜ ಹಿನ್ನೆಲೆ, ಅಂದು ನಡೆದ ಪರಿಸ್ಥಿತಿಯ ಸನ್ನಿವೇಶ, ಬಳಸಲಾದ ಶಸ್ತ್ರಾಸ್ತ್ರಗಳ ಮೂಲ ಹಾಗೂ ಸಿಬ್ಬಂದಿಯ ಕ್ರಮಗಳ ಕುರಿತು ಯಾವುದೇ ಪಕ್ಷಪಾತವಿಲ್ಲದೆ ಸಮಗ್ರ ತನಿಖೆ ನಡೆಸಲು ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದ್ದು, ಮುಂದಿನ 7 ದಿನಗಳ ಒಳಗೆ ಸಂಪೂರ್ಣ ವಾಸ್ತವಾಂಶಗಳನ್ನೊಳಗೊಂಡ ವರದಿ ಸಲ್ಲಿಸುವಂತೆ ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.