ಚಾಮರಾಜನಗರದಲ್ಲಿ ಗಣಿ ಧಣಿಗಳದ್ದೇ ಕಾರುಬಾರು: ಜಿಲ್ಲಾಧಿಕಾರಿ ಆದೇಶಕ್ಕೂ ಡೊಂಟ್ ಕೇರ್
ಚಾಮರಾಜನಗರದಲ್ಲಿ ಟಿಪ್ಪರ್ ಲಾರಿಗಳ ಹಾವಳಿ ಮಿತಿ ಮೀರಿದೆ. ಶಾಲಾ-ಕಾಲೇಜು ಅವಧಿಯಲ್ಲಿ ಲಾರಿಗಳ ಸಂಚಾರ ನಿರ್ಬಂಧವನ್ನು ಗಣಿ ಮಾಲೀಕರು ಉಲ್ಲಂಘಿಸುತ್ತಿದ್ದಾರೆ. ಇದರಿಂದ ಗ್ರಾಮಗಳಲ್ಲಿ ಧೂಳು, ಮಕ್ಕಳ ಆರೋಗ್ಯಕ್ಕೆ ಹಾನಿ ಮತ್ತು ಅಪಘಾತಗಳು ಹೆಚ್ಚಿವೆ. ಗುಂಡ್ಲುಪೇಟೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಚಾಮರಾಜನಗರ, ಜೂನ್ 22: ಟಿಪ್ಪರ್ಗಳ (tipper) ಹಾವಳಿಗೆ ಬ್ರೇಕ್ ಹಾಕಲು ಜಿಲ್ಲಾಡಳಿತ ಅಂಕುಶ ಹಾಕಿತ್ತು. ಸ್ವತಃ ಜಿಲ್ಲಾಧಿಕಾರಿ ಶಾಲಾ, ಕಾಲೇಜ್ ಸಮಯದಲ್ಲಿ ಟಿಪ್ಪರ್ ಸಂಚಾರಕ್ಕೆ ಬ್ರೇಕ್ ಹಾಕಿ ಆದೇಶ ಹೊರಡಿಸಿದ್ದರು. ಆದರೆ ಇದೀಗ ಗಣಿ ಧಣಿಗಳು ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮದೆ ಕಾನೂನು ಮಾಡಿಕೊಂಡು ಮೆರೆಯುತ್ತಿದ್ದು, ಜನರು ಟಿಪ್ಪರ್ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಾಂಶಗಳು
- ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಟಿಪ್ಪರ್ ಲಾರಿಗಳ ಹಾವಳಿ
- ಟಿಪ್ಪರ್ ಲಾರಿಗಳ ಸಂಚಾರದಿಂದ ಗ್ರಾಮದಲ್ಲಿ ಧೂಳು
- ಕಠಿಣ ಕ್ರಮಕ್ಕೆ ಜನರು ಆಗ್ರಹ
ಜಿಲ್ಲಾಡಳಿತದ ಸೂಚನೆ ಪಾಲಿಸದ ಗಣಿ ಮಾಲೀಕರು
ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗ್ರಾಮದಲ್ಲಿ ಪ್ರತಿನಿತ್ಯ ಸಂಚರಿಸುವ ಟಿಪ್ಪರ್ ಲಾರಿಗಳ ಹಾವಳಿಯಿಂದ ಬೇಸತ್ತ ಗ್ರಾಮಸ್ಥರು ಲಾರಿಗಳನ್ನ ತಡೆದು ನಿಲ್ಲಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಪ್ಪರ್ಗಳಿಂದ ಸಂಭವಿಸಬಹುದಾದ ಅವಘಡಗಳನ್ನ ತಪ್ಪಿಸಲು ಜಿಲ್ಲಾಡಳಿತ ಹಲವು ಕಟ್ಟುನಿಟ್ಟಿನ ಸೂಚನೆಗಳನ್ನ ನೀಡಿದ್ದರೂ ಸಹ ಗಣಿ ಮಾಲೀಕರು ಪಾಲಿಸುತ್ತಿಲ್ಲ.
ಇದನ್ನೂ ಓದಿ: ಹಗಲು ದರೋಡೆ: ಬೀದರ್ನಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಕೆಂಪು ಕಲ್ಲು ಗಣಿಗಾರಿಕೆ
ಬೆಳಿಗ್ಗೆ 5 ಗಂಟೆಗೆ ಟಿಪ್ಪರ್ ಲಾರಿಗಳ ಸಂಚಾರ ಆರಂಭವಾದರೆ ಸಂಜೆ 6 ಗಂಟೆಯಾದರೂ ನಿಲ್ಲುವುದಿಲ್ಲ. ಗ್ರಾಮದ ಒಳಗೆ ನುಗ್ಗಿ ಬರುವ ಟಿಪ್ಪರ್ ಲಾರಿಗಳ ಆರ್ಭಟ ನೋಡಿದರೆ ಮಕ್ಕಳನ್ನ ಶಾಲೆ, ಅಂಗನವಾಡಿಗಳಿಗೆ ಕಳುಹಿಸಲು ಭಯವಾಗುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಟಿಪ್ಪರ್ ಲಾರಿಗಳ ಸಂಚಾರದಿಂದ ಗ್ರಾಮದಲ್ಲಿ ಧೂಳು
ಟಿಪ್ಪರ್ ಲಾರಿಗಳ ಸಂಚಾರದಿಂದ ಗ್ರಾಮ ಧೂಳಿನಿಂದ ಆವರಿಸಿದ್ದು, ಕಾಯಿಲೆಗಳಿಗೆ ತುತ್ತಾಗುವಂತಾಗಿದೆ ಎಂದು ಬೇಗೂರು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಗ್ರಾಮದ ಸರ್ವೇ ನಂಬರ್ 108ರಲ್ಲಿ ನಡೆಯುತ್ತಿರುವ ಗಣಿಗಾರಿಕೆಯೂ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಆಟವಾಡಲು ಸಹ ಹೊರಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಣಿ ಮಾಲೀಕರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ರೈತ ಹೋರಾಟಗಾರ ಭಾಗ್ಯರಾಜ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ದಶಕ ಕಳೆದರೂ ಸಿಗದ ರೇಷನ್ ಕಾರ್ಡ್; ಹಸಿವಿನಿಂದ ಕಣ್ಣೀರು ಇಡುತ್ತಿದ್ದಾರೆ ಆನೆ ದಿಂಬ ಹಾಡಿಯ ಆದಿವಾಸಿಗಳು!
ಕಳೆದ 6 ತಿಂಗಳಲ್ಲಿ ಗುಂಡ್ಲುಪೇಟೆ, ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಟಿಪ್ಪರ್ ಲಾರಿಗಳಿಂದ ಬರೋಬ್ಬರಿ 10 ಅಪಘತ ಪ್ರಕರಣಗಳು ದಾಖಲಾಗಿವೆ. ಒಟ್ಟಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹ ವ್ಯಕ್ತವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:15 pm, Mon, 22 June 26



