ಯೋಗೇಶ್ವರ್ ರಾಜೀನಾಮೆ ಬೆನ್ನಲ್ಲೇ ಚುರುಕುಗೊಂಡ ತಂತ್ರಗಾರಿಕೆ: ಎನ್​ಡಿಎ ಅಚ್ಚರಿ ಅಭ್ಯರ್ಥಿ ಯಾರು?

|

Updated on: Oct 23, 2024 | 1:45 PM

ಸಿಪಿ ಯೋಗೇಶ್ವರ್​ ಬಿಜೆಪಿಗೆ ಗುಡ್​ಬೈ ಹೇಳಿ ಕಾಂಗ್ರೆಸ್ ಸೇರಿದ್ದಾರೆ. ಚನ್ನಪಟ್ಟಣ ಅಖಾಡದಲ್ಲಿ ಕಾಂಗ್ರೆಸ್ ಬಾವುಟ ಹಿಡಿದು ಹೋರಾಟಕ್ಕೆ ಸಜ್ಜಾಗಿದ್ದಾರೆ. ಸೈನಿಕನ ಹೆಗಲ ಮೇಲೆ ಬಂದೂಕನ್ನ ಇಟ್ಟು ಕಾಂಗ್ರೆಸ್ ಬಿಜೆಪಿ ಜೆಡಿಎಸ್​​ಗೆ ಒಂದೇ ಏಟಿನಲ್ಲಿ ಶಾಕ್ ಕೊಟ್ಟಿದೆ. ಈಗ ಬಿಜೆಪಿ ಮುಂದಿನ ನಡೆ ಏನು? ಜೆಡಿಎಸ್ ಏನ್ ಮಾಡುತ್ತೆ? ಚನ್ನಪಟ್ಟಣದಲ್ಲಿ ಎನ್​ಡಿಎ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವುದೇ ಕುತೂಹಲ ಕೆರಳಿಸಿದೆ.

ಯೋಗೇಶ್ವರ್ ರಾಜೀನಾಮೆ ಬೆನ್ನಲ್ಲೇ ಚುರುಕುಗೊಂಡ ತಂತ್ರಗಾರಿಕೆ: ಎನ್​ಡಿಎ ಅಚ್ಚರಿ ಅಭ್ಯರ್ಥಿ ಯಾರು?
ಎಚ್​ಡಿ ಕುಮಾರಸ್ವಾಮಿ
Follow us on

ಬೆಂಗಳೂರು, (ಅಕ್ಟೋಬರ್ 23): ಸಿ.ಪಿ.ಯೋಗೇಶ್ವರ್ ರಾಜೀನಾಮೆ ಚನ್ನಪಟ್ಟಣ ಉಪಚುನಾವಣೆ ಅಖಾಡದ ದಿಕ್ಕನ್ನೇ ಬದಲಿಸಿದೆ. ಬಂದವರೆಲ್ಲ ಒಳ್ಳೆಯವರು ಎಂದು ಕಾಂಗ್ರೆಸ್ ಖುಷಿ ಖುಷಿ ಆಗಿದ್ರೆ, ಹೋದವರೆಲ್ಲ ಕೆಟ್ಟವರು ಎಂದು ಬಿಜೆಪಿ ಕೈ ಕೈ ಹಿಸುಕಿಕೊಳ್ಳುತ್ತಿದೆ. ಅತ್ತ ಜೆಡಿಎಸ್​ ಮುಂದೇನು ಮಾಡಬೇಕು ಎಂದು ತಲೆ ಮೇಲೆ ಕೈ ಹೊತ್ತು ಕೂತಿದೆ. ಇನ್ನು ಕೈ ಕಟ್ಟಿ ಕೂತರೆ ಆಗಲ್ಲ ಎಂದು ಅರಿತಿರುವ ಜೆಡಿಎಸ್ ಈಗ ಹೊಸ ತಂತ್ರಗಾರಿಕೆ ಶುರು ಮಾಡಿದೆ. ಸಿಪಿ ಯೋಗೇಶ್ವರ್ ರಾಜೀನಾಮೆ ಬೆನ್ನಲ್ಲೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡರು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಫೋನ್ ಮಾಡಿ ಅರ್ಜೆಂಟಾಗಿ ಬರಬೇಕೆಂದು, ಬುಲಾವ್ ನೀಡಿ ಮಹತ್ವದ ಮಾತುಕತೆ ನಡೆಸಿದ್ದಾರೆ.

.ನಿಖಿಲ್ ತಮ್ಮ ಜೆ.ಪಿ.ನಗರ ನಿವಾಸದಿಂದ ಪದ್ಮನಾಭನಗರದ ಹೆಚ್​ಡಿಡಿ ನಿವಾಸಕ್ಕೆ ತೆರಳಿದ್ರು. ಈ ವೇಳೆ ಮಾತನಾಡಿದ ನಿಖಿಲ್, ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದು ಆಶ್ಚರ್ಯ ತಂದಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ಚನ್ನಪಟ್ಟಣದಲ್ಲಿ ಕಳೆದ ಎರಡು ತಿಂಗಳಿಂದ ನಿರಂತರವಾಗಿ ನನ್ನ ಹೆಸರು ಚಾಲ್ತಿಯಲ್ಲಿದೆ ಅಂತಾನೂ ಹೇಳಿದ್ದಾರೆ. ಈ ಮಧ್ಯೆ ಚನ್ನಪಟ್ಟಣಕ್ಕೆ ಸಂಸದ ಡಾಕ್ಟರ್ ಮಂಜುನಾಥ್ ಅವರ ಪತ್ನಿ ಅನಸೂಯ ಅವರ ಹೆಸರು ಚರ್ಚೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ನಿಖಿಲ್ ಕಾದು ನೋಡಿ ಎಂದಷ್ಟೇ ಹೇಳಿದ್ದಾರೆ.

ಇದನ್ನೂ ಓದಿ: CP Yogeshwar: ಸಿಪಿ ಯೋಗೇಶ್ವರ್​​ ಕಾಂಗ್ರೆಸ್​ ಸೇರ್ಪಡೆ: ಸಿಎಂ, ಡಿಕೆ ಬ್ರದರ್ಸ್​ ತಂತ್ರ ಸಕ್ಸಸ್!

ಇನ್ನು ತಮ್ಮ ಪತ್ನಿ ಅನುಸೂಯ ಅವರ ಹೆಸರು ಕೇಳಿಬರುತ್ತಿದ್ದಂತೆಯೇ ಟಿವಿ9ಗೆ ಪ್ರತಿಕ್ರಿಯಿಸಿರುವ ಸಂಸದ ಡಾ ಮಂಜುನಾಥ್, ಅನುಸೂಯ ಅವರು ಸ್ಪರ್ಧೆ ಮಾಡಲ್ಲ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಅನುಸೂಯ ಸ್ಪರ್ಧಿಸುತ್ತಾರೆ ಎನ್ನುವುದು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಆದ್ರೆ, ಜೆಡಿಎಸ್​ ಮಹಿಳಾ ಅಸ್ತ್ರ ಪ್ರಯೋಗಿಸೋಣ ಎಂದು ದೇವೇಗೌಡ ಅವರು ಕೊನೆ ಕ್ಷಣದಲ್ಲಿ ಅನಸೂಯ ಅವರನ್ನೇ ಕಣಕ್ಕಿಳಿಸಿದರೂ ಅಚ್ಚರಿಪಡಬೇಕಿಲ್ಲ. ಇನ್ನು ಇದರ ಜೊತೆಗೆ ಅನಿತಾ ಕುಮಾರಸ್ವಾಮಿ ಅವರ ಹೆಸರು ಸಹ ಕೇಳಿಬರುತ್ತಿದೆ.

ಸಂಜೆ ಅಭ್ಯರ್ಥಿ ಘೋಷಣೆ

ದೇವೇಗೌಡರ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, ರಾಜಕೀಯದ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ, ಇಂದು ಸಂಜೆ 7 ಗಂಟೆಗೆ ಚನ್ನಪಟ್ಟಣ ಅಭ್ಯರ್ಥಿ ಯಾರು ತಿಳಿಯಲಿದೆ. ದೇವೇಗೌಡರು, ಕುಮಾರಣ್ಣ ಅದನ್ನ ಬಹಿರಂಗ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಮತ್ತೊಂದೆಡೆ ಚನ್ನಪಟ್ಟಣದ ಬೆಳವಣಿಗೆ ಬಗ್ಗೆ ಕುಮಾರಸ್ವಾಮಿ ಬಿಜೆಪಿ ಹೈಕಮಾಂಡ್​ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ, ಇಂದು ಚನ್ನಪಟ್ಟಣ ಮುಖಂಡರ ಸಭೆ ಕರೆದಿದ್ದು, ಸಭೆಯಲ್ಲಿ ಅಭ್ಯರ್ಥಿ ಘೋಷಣೆ ಮಾಡುವ ಸಾಧ್ಯತೆ ಇದೆ. ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡಬೇಕೆನ್ನುವ ಚರ್ಚೆಯೂ ಇದೆ. ಹೀಗಾಗಿ ಚನ್ನಪಟ್ಟಣ ತಾಲೂಕು ಘಟಕದ ಜೆಡಿಎಸ್ ಅಧ್ಯಕ್ಷ ಜಯಮುತ್ತು ಅವರ ಹೆಸರು ಕೂಡಾ ಕೇಳಿ ಬಂದಿದೆ.

ಇನ್ನು ಚನ್ನಪಟ್ಟಣದ ಮುಖಂಡರ ಸಭೆ ಬಳಿಕ ಕುಮಾರಸ್ವಾಮಿ ಅವರು ಬಿಜೆಪಿ ನಾಯಕರೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಪಕ್ಷ ನಾಯಕ ಅಶೋಕ್​ ಸೇರಿದಂತೆ ಇತರೆ ನಾಯಕರೊಂದಿಗೆ ಇಂದು (ಅಕ್ಟೋಬರ್ 23) ಸಂಜೆ ಮಾತುಕತೆ ನಡೆಸಲಿದ್ದು, ಚನ್ನಪಟ್ಟಣದ ರಾಜಕೀಯ ತಂತ್ರಗಾರಿಕೆ ಬಗ್ಗೆ ಚರ್ಚಿಸಲಿದ್ದಾರೆ. ಹೀಗಾಗಿ ಎನ್​ಡಿಎ ಅಭ್ಯರ್ಥಿ ಯಾರು ಆಗುತ್ತಾರೆ ಎನ್ನುವುದೇ ಕುತೂಹಲ ಮೂಡಿಸಿದೆ.

ಒಟ್ಟಿನಲ್ಲಿ ಚನ್ನಪಟ್ಟಣ ಅಖಾಡ ಮತ್ತೊಂದು ದಿಕ್ಕಿಗೆ ಹೊರಳಿದ್ದು, ಸದ್ಯ ಎನ್​ಡಿಎ ಅಭ್ಯರ್ಥಿ ಯಾರಾಗ್ತಾರೆ ಅನ್ನೋದರ ಮೇಲೆ ಮುಂದಿನ ಕದನ ನಿರ್ಧಾರವಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:38 pm, Wed, 23 October 24