ನಂದಿಗಿರಿಧಾಮದಲ್ಲಿ ಕರಡಿಗಳ ಹಿಂಡು ಪ್ರತ್ಯಕ್ಷ: ಪ್ರವಾಸಿಗರಲ್ಲಿ ಹೆಚ್ಚಿದ ಆತಂಕ!
ನಂದಿಗಿರಿಧಾಮದಲ್ಲಿ ರಾತ್ರಿ ವೇಳೆಯಲ್ಲಿ ಕರಡಿಗಳ ಹಿಂಡು ಕಾಣಿಸಿಕೊಳ್ಳುತ್ತಿರುವುದು ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ. ಮನೆ, ಹೋಟೆಲ್, ರಸ್ತೆಗಳಲ್ಲಿ ಕರಡಿಗಳು ಕಾಣಿಸಿಕೊಂಡಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿವೆ. ಈ ಬೆನ್ನಲ್ಲೇ ಚಿಕ್ಕಬಳ್ಳಾಪುರ ಅರಣ್ಯ ಇಲಾಖೆ ಪ್ರವಾಸಿಗರ ಸುರಕ್ಷತೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಸಹಕರಿಸುವಂತೆ ಮನವಿ ಮಾಡಿದೆ.

ಮುಖ್ಯಾಂಶಗಳು
- ನಂದಿಗಿರಿಧಾಮದಲ್ಲಿ ಕರಡಿಗಳ ಹಾವಳಿ
- ಮನೆ, ಹೋಟೆಲ್, ರೆಸಾರ್ಟ್ಗಳ ಬಳಿ ಕರಡಿಗಳು ಓಡಾಟ
- ಪ್ರಮುಖ ಸೂಚನೆ ನೀಡಿದ ಅರಣ್ಯ ಇಲಾಖೆ
ಚಿಕ್ಕಬಳ್ಳಾಪುರ, ಜುಲೈ 09: ವಿಶ್ವಪ್ರಸಿದ್ಧ ಪ್ರವಾಸಿ ತಾಣವಾದ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದಲ್ಲಿ (Nandi Hills) ಇದೀಗ ಹೊಸ ಆತಂಕವೊಂದು ಮನೆ ಮಾಡಿದೆ. ಈ ಗಿರಿಧಾಮದ ಸುತ್ತಮುತ್ತ ರಾತ್ರಿಯಾಗುತ್ತಿದ್ದಂತೆ ಕರಡಿಗಳ (bear) ಹಿಂಡು ಪ್ರತ್ಯಕ್ಷವಾಗುತ್ತಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರು ತೀವ್ರ ಭೀತಿಗೊಳಗಾಗಿದ್ದಾರೆ. ಇನ್ನು ಕರಡಿಗಳ ಓಡಾಟದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಪ್ರವಾಸಿಗರಲ್ಲಿ ಆತಂಕ
ನಂದಿಗಿರಿಧಾಮಕ್ಕೆ ಪ್ರತಿನಿತ್ಯ ಸಾವಿರಾರು ಜನ ಪ್ರವಾಸಿಗರು, ಪ್ರೇಮಿಗಳು ಬರುತ್ತಾರೆ. ಅದರಲ್ಲೂ ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗಿರುತ್ತದೆ. ಆದರೆ ಇದೀಗ ಗಿರಿಧಾಮದಲ್ಲಿ ಹೊಸ ಸಮಸ್ಯೆವೊಂದು ಉಂಟಾಗಿದೆ. ಕರಡಿಗಳ ಹಿಂಡು ಕಾಣಿಸಿಕೊಳ್ಳುವುದರ ಮೂಲಕ ಪ್ರವಾಸಿಗರ ಆತಂಕಕ್ಕೆ ಕಾರಣವಾಗಿದೆ.
ರೆಸಾರ್ಟ್, ಹೋಟೆಲ್ಗಳ ಬಳಿ ಕರಡಿಗಳ ಓಡಾಟ
ರಾತ್ರಿಯಾದರೆ ಸಾಕು, ಕಾಡಿನಿಂದ ಹೊರಬರುವ ಕರಡಿಗಳ ಹಿಂಡು ಗಿರಿಧಾಮದ ಬಳಿಯಿರುವ ಮನೆ, ಹೋಟೆಲ್ ಹಾಗೂ ರೆಸಾರ್ಟ್ಗಳ ಬಳಿ ಸುಳಿದಾಡುತ್ತಿವೆ. ಕಾರಹಳ್ಳಿ ಕ್ರಾಸ್ ಬಳಿ ರೆಸಾರ್ಟ್ವೊಂದರ ತಂತಿ ಮುಳ್ಳಿನ ಕಾಂಪೌಂಡ್ಗಳನ್ನು ಜಿಗಿದು ಆವರಣದವರೆಗೆ ಕರಡಿ ಬಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಕೆರೆಯಲ್ಲಿ ಸಿಲುಕಿದ್ದ ಕಾಡಾನೆ ಬಚಾವ್, 2 ದಿನ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
ಇನ್ನು ನಂದಿಗಿರಿಧಾಮದ ಆಸುಪಾಸಿನಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಅರಣ್ಯ ಇಲಾಖೆಯು ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಕೆಲವು ಪ್ರಮುಖ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಕಟ್ಟುನಿಟ್ಟಿನ ಮನವಿ ಮಾಡಿದೆ.
ಅರಣ್ಯ ಇಲಾಖೆಯ ಪ್ರಮುಖ ಸೂಚನೆಗಳು
- ಆತಂಕಕ್ಕೆ ಒಳಗಾಗಬೇಡಿ: ಕರಡಿಗಳು ಪ್ರತ್ಯಕ್ಷವಾದರೆ ತಕ್ಷಣ ಗಾಬರಿಗೊಂಡು ಓಡಬೇಡಿ.
- ಪ್ರಚೋದಿಸಬೇಡಿ: ಕರಡಿಗಳನ್ನು ಕಂಡು ಅವುಗಳ ಮೇಲೆ ಕಲ್ಲು ಎಸೆಯುವುದು ಅಥವಾ ಓಡಿಸಲು ಬೆಂಕಿ ಹಚ್ಚುವಂತಹ ಸಾಹಸಕ್ಕೆ ಕೈ ಹಾಕಬೇಡಿ.
- ದೂರವಿರಿ: ವನ್ಯಜೀವಿಗಳಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಿ.
- ಶಾಂತರಾಗಿರಿ: ನೀವು ಯಾವುದೇ ಹಾನಿ ಮಾಡದೆ ಶಾಂತವಾಗಿ ನಿಂತರೆ, ಕರಡಿಗಳು ತಾನಾಗಿಯೇ ಮರಳಿ ಕಾಡಿನತ್ತ ಹೆಜ್ಜೆ ಇಡುತ್ತವೆ.
ಇದನ್ನೂ ಓದಿ: ಬೆಂಗಳೂರಿನ ಪ್ಯಾಲೇಸ್ ರಸ್ತೆ ಮಧ್ಯೆ ಹೆಡೆಬಿಚ್ಚಿ ನಿಂತ ನಾಗರಹಾವು: 40 ನಿಮಿಷ ವಾಹನ ಸಂಚಾರ ಸ್ಥಗಿತ
ರಾತ್ರಿ ವೇಳೆಯಲ್ಲಿ ಕರಡಿಗಳು ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ. ಮತ್ತೊಂದೆಡೆ ವನ್ಯಜೀವಿಗಳಿಗೆ ತೊಂದರೆ ನೀಡದೆ ಸಹಕರಿಸುವಂತೆ ಅರಣ್ಯ ಇಲಾಖೆ ಸಾರ್ವಜನಕರಲ್ಲಿ ಮನವಿ ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




