AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ ಎಎಸ್‌ಐ ಮನೆಯಲ್ಲಿ ದರೋಡೆ ಪ್ರಕರಣ: ಬಿಎಸ್ಎಫ್​ ಮಾಜಿ ಕಮಾಂಡೆಂಟ್ ಮತ್ತು ದತ್ತು ಪುತ್ರ ಉತ್ತರ ಪ್ರದೇಶದಲ್ಲಿ ಅರೆಸ್ಟ್​!

ದರೋಡೆಯ ಮಾಸ್ಟರ್​​ ಮೈಂಡ್​, ಮಾಜಿ ಬಿಎಸ್ಎಫ್ ಡೆಪ್ಯೂಟಿ ಕಮಾಡೆಂಟ್ ವೀರೇಂದ್ರ ಸಿಂಗ್ ಠಾಕೂರ್​, 2002ರಲ್ಲಿ ತಮ್ಮ ವೃತ್ತಿಗೆ ಗುಡ್ ಬೈ ಹೇಳಿದರಂತೆ! ಮುಂದೆ... ಸಾಕು ಮಗ ಹೈದರ್ ಮಾಡ್ತಿದ್ದ ದರೋಡೆಗಳಿಗೆ ಬೆಂಗಾವಲಾಗಿ ನಿಂತುಬಿಟ್ಟಿದ್ದರಂತೆ!

ಚಿಕ್ಕಬಳ್ಳಾಪುರ ಎಎಸ್‌ಐ ಮನೆಯಲ್ಲಿ ದರೋಡೆ ಪ್ರಕರಣ: ಬಿಎಸ್ಎಫ್​ ಮಾಜಿ ಕಮಾಂಡೆಂಟ್ ಮತ್ತು ದತ್ತು ಪುತ್ರ ಉತ್ತರ ಪ್ರದೇಶದಲ್ಲಿ ಅರೆಸ್ಟ್​!
ಎಎಸ್‌ಐ ಮನೆಯಲ್ಲಿ ದರೋಡೆ: ಬಿಎಸ್ಎಫ್​ ಮಾಜಿ ಕಮಾಂಡೆಂಟ್, ಆತನ ದತ್ತು ಪುತ್ರ ಅರೆಸ್ಟ್​
Follow us
TV9 Web
| Updated By: ಸಾಧು ಶ್ರೀನಾಥ್​

Updated on:Nov 24, 2022 | 7:23 PM

ಸ್ವತಃ ಪೊಲೀಸ್ ಇಲಾಖೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಮನೆಗೆ ನುಗ್ಗಿದ್ದ 4 ಜನ ದರೋಡೆಕೋರರು, ಮನೆಯಲ್ಲಿದ್ದವರ ಕೈ-ಕಾಲು ಕಟ್ಟಿ ಹಾಕಿ, ಅಡ್ಡ ಬಂದವರ ಮೇಲೆ ಸಿನಿಮೀಯ ರೀತಿಯಲ್ಲಿ ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿಕ್ಕಬಳ್ಳಾಪುರ ಪೊಲೀಸರು (Chikkaballapur police) ದರೋಡೆ ಪ್ರಕರಣದ ಮಾಸ್ಟರ್ ಮೈಂಡ್, ಉತ್ತರ ಪ್ರದೇಶದ (Uttar Pradesh) ಮಾಜಿ ಬಿಎಸ್ಎಫ್ (BSF)​ ಡೆಪ್ಯೂಟಿ ಕಮಾಡೆಂಟ್ ಸೇರಿ ಕೃತ್ಯ ಎಸಗಿದ್ದ ಆತನ ದತ್ತು ಪುತ್ರನನ್ನು ಬಂಧಿಸಿದ್ದಾರೆ (Arrest). ಈ ಕುರಿತು ಒಂದು ವರದಿ…

ಅಂದು ನವೆಂಬರ್ 9, ರಾತ್ರಿ 8 ಗಂಟೆ ಸಮಯ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪೊಲೀಸ್ ಠಾಣೆಯ ಸಹಾಯಕ ಸಬ್‌ಇನ್ಸಪೆಕ್ಟರ್ ನಾರಾಯಣಸ್ವಾಮಿಗೆ ಸೇರಿದ ಪೆರೇಸಂದ್ರ ಗ್ರಾಮದಲ್ಲಿರುವ ಮನೆಗೆ ನುಗ್ಗಿದ್ದ 4 ಜನರಿದ್ದ ದರೋಡೆಕೋರರ ಗ್ಯಾಂಗ್, ಮನೆಯಲ್ಲಿದ್ದ ನಾರಾಯಣಸ್ವಾಮಿ ತಾಯಿ ಚೌಡಮ್ಮ, ಪತ್ನಿ ಸುಗುಣ, ಸೊಸೆ ಲೇಖಾ ಅವರುಗಳನ್ನು ಕಟ್ಟಿ ಹಾಕಿ, ಅಡ್ಡ ಬಂದ ನಾರಾಯಣಸ್ವಾಮಿ ಹಾಗೂ ಆತನ ಮಗನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಅದೇ ವೇಳೆ ಮನೆಯಲ್ಲಿದ್ದ 15 ಲಕ್ಷ ರೂಪಾಯಿ ನಗದು ಹಾಗೂ 800 ಗ್ರಾಂ ಚಿನ್ನಾಭರಣ ದರೋಡೆ ಮಾಡಲಾಗಿತ್ತು.

ಬಿಎಸ್ಎಫ್ ಕೆಲ್ಸಕ್ಕೆ ಗುಡ್​ ಬೈ ಹೇಳಿ, ದರೋಡೆಗೆ ತರಬೇತು ನೀಡ್ತಿದ್ದನಂತೆ ಪುಣ್ಯಾತ್ಮ!

ಪ್ರಕರಣ ದಾಖಲಿಸಿಕೊಂಡಿದ್ದ ಪೆರೇಸಂದ್ರ ಠಾಣೆ ಪೊಲೀಸರು, ಈ ಹಿಂದೆ ಆಂಧ್ರ ಮೂಲದ ಕದಿರಿ ವಾಸಿ ಪಠಾಣ ಮಹಮದ್ ಹ್ಯಾರೀಸ್ ಖಾನ್, ಉತ್ತರ ಪ್ರದೇಶ ಮೂಲದ ಆರೀಪ್​ ಅಲಿಯಾಸ್ ಆರೀಫ್​ ಅನ್ಸಾರಿ ಹಾಗೂ ಉತ್ತರ ಪ್ರದೇಶ ಮೂಲದ ಜಮ್‌ಷೀದ್‌ ಖಾನ್ ರನ್ನು ಬಂಧಿಸಿದ್ದರು. ಆದ್ರೆ ಪ್ರಯೋಜನ ಆಗಿರಲಿಲ್ಲ. ಕೃತ್ಯದ ಮಾಸ್ಟರ್ ಮೈಂಡ್ ಹಾಗೂ ಎ1 ಆರೋಪಿ ಪತ್ತೆಯಾಗಿರಲಿಲ್ಲ. ಆತ ಉತ್ತರ ಭಾರತದಲ್ಲಿ ತಲೆಮರೆಸಿಕೊಂಡಿದ್ರು. ಆದ್ರೆ ಪೊಲೀಸರು ಘಟನೆ ನಡೆದ ಆರಂಭಕ್ಕೇ ಹೇಳಿದಂತೆ ಪಾತಾಳದಲ್ಲಿದ್ದರೂ ಆರೋಪಿಗಳನ್ನು ಬೀಡಲ್ಲ ಎಂಬ ಶಪಥಕ್ಕೆ ಚ್ಯುತಿ ಬಾರದಂತೆ ಈಗ ಮಾತು ಉಳಿಸಿಕೊಂಡಿದ್ದಾರೆ.

ಅಸಲಿಗೆ ನಾರಾಯಣಸ್ವಾಮಿ ಮನೆಯಲ್ಲಿ ಗುಂಡು ಹಾರಿಸಿ ದರೋಡೆ ಮಾಡಿದ್ದ 25 ವರ್ಷ ಆರೋಪಿ ಹೈದರ್, ಉತ್ತರ ಭಾರತದಲ್ಲಿ ತಲೆ ಮರೆಸಿಕೊಂಡಿದ್ದವ! ಘಟನೆಯ ನಂತರ ಫೋನ್ ಬಳಸದೆ ಪೊಲೀಸರಿಗೆ ತಲೆ ನೋವಾಗಿದ್ದ. ಇದ್ರಿಂದ ಕಳೆದ 10 ದಿನಗಳಿಂದ ಗುಡಿಬಂಡೆ ಪೊಲೀಸ್ ಇನ್ಸಪೆಕ್ಟರ್ ಲಿಂಗರಾಜು, ಗೌರಿಬಿದನೂರು ಪೊಲೀಸ್ ಇನ್ಸಪೆಕ್ಟರ್ ಸತ್ಯನಾರಾಯಣ ಹಾಗೂ ತಂಡ ಉತ್ತರ ಭಾರತದಲ್ಲಿಯೇ ಬೀಡುಬಿಟ್ಟಿದ್ದರು. ಉತ್ತರ ಪ್ರದೇಶದ ಗಾಜಿಯಾಬಾದ್ ಕ್ರೈಮ್ ಬ್ರ್ಯಾಂಚ್ ಪೊಲೀಸರ ಸಹಕಾರದಿಂದ ಪೊಲೀಸರು ಈಗ ಎ1 ಆರೋಪಿ ಹೈದರ್ ಹಾಗೂ ಆತನ ಸಾಕು ತಂದೆಯಾಗಿರುವ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಮಾಜಿ ಬಿಎಸ್ಎಫ್ ಡೆಪ್ಯೂಟಿ ಕಮಾಡೆಂಟ್ ವೀರೇಂದ್ರ ಸಿಂಗ್ ಠಾಕೂರರನ್ನು ಬಂಧಿಸಿ, ಕರ್ನಾಟಕಕ್ಕೆ ಎಳೆದುಕೊಂಡು ಬಂದಿದ್ದಾರೆ. ಇಂದು ಗುಡಿಬಂಡೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.

ಕೋಲಾರ, ವಿಜಯಪುರದಲ್ಲಿ ನಡೆದಿದ್ದ ಎರಡು ದರೋಡೆ ಪ್ರಕರಣಗಳಲ್ಲೂ ಇವರದ್ದೇ ಕುಕೃತ್ಯ:

ಇನ್ನು ಮಾಜಿ ಬಿಎಸ್ಎಫ್ ಡೆಪ್ಯೂಟಿ ಕಮಾಡೆಂಟ್ ವೀರೇಂದ್ರ ಸಿಂಗ್ ಠಾಕೂರ್​, 2002ರಲ್ಲಿ ತಮ್ಮ ವೃತ್ತಿಗೆ ಗುಡ್ ಬೈ ಹೇಳಿದ್ದರು. ಮುಂದೆ… ಸಾಕು ಮಗ ಹೈದರ್ ಮಾಡ್ತಿದ್ದ ದರೋಡೆಗಳಿಗೆ ಬೆಂಗಾವಲಾಗಿ ನಿಂತುಬಿಟ್ಟಿದ್ದರಂತೆ! ಪೊಲೀಸರಿಂದ ಹೇಗೆ ಬಚಾವ್ ಆಗಬೇಕು, ದರೋಡೆ ಸಮಯದಲ್ಲಿ ಅಡ್ಡಬಂದವರನ್ನು ಹೇಗೆ ಹೆದರಿಸಬೇಕು ಅಂತ ತರಬೇತಿ ನೀಡಿದ್ದನಂತೆ ಪುಣ್ಯಾತ್ಮ! ಇದ್ರಿಂದ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಇದ್ರಿಂದ ಕೋಲಾರದ ಒಂದು ಪ್ರಕರಣ ಹಾಗೂ ವಿಜಯಪುರದಲ್ಲಿ ನಡೆದಿದ್ದ ಎರಡು ದರೋಡೆ ಪ್ರಕರಣಗಳನ್ನೂ ಇದೇ ಆರೋಪಿಗಳು ಮಾಡಿದ್ದು ಬಯಲಾಗಿದೆ. ಆ ನಿಟ್ಟಿನಲ್ಲಿಯೂ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. (ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ)

Published On - 6:30 pm, Thu, 24 November 22