ಚಿಕ್ಕಬಳ್ಳಾಪುರ: ಆರೋಗ್ಯ ಸಚಿವ ಡಾ ಕೆ. ಸುಧಾಕರ್ (Dr K Sudhakar) ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಡ್ಯಾಗರ್ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಚಿಕ್ಕಬಳ್ಳಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ‘ಇದ್ಯಾವುದರ ಬಗ್ಗೆಯೂ ಘಟನೆ ವೇಳೆ ಸಚಿವರಿಗೂ ಗೊತ್ತಾಗಿಲ್ಲ’ ಎಂದು ಟಿವಿ9ಗೆ ಸಚಿವ ಡಾ. ಸುಧಾಕರ್ ಅವರ ಆಪ್ತ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಜ್ವಲ ಭಾರತ ಉಜ್ವಲ ಭವಿಷ್ಯ ಕಾರ್ಯಕ್ರಮ ನಿಮಿತ್ತ ಸಚಿವ ಸುಧಾಕರ್ ತೆರೆಳಿದ್ದರು. ಕಾರ್ಯಕ್ರಮ ಮುಗಿಸಿ ಹೊರಡುತ್ತಿದ್ದಾಗ ಗಂಗರಾಜು ಎಂಬಾತ ಡ್ಯಾಗರ್ ಹೊಂದಿರುವುದು ಬೆಳಕಿಗೆ ಪೊಲೀಸರ ಗಮನಕ್ಕೆ ಬಂದಿದೆ. ಸಚಿವರು ಸಾರ್ವಜನಿಕರ ಜೊತೆ ಮಾತನಾಡುತ್ತಿದ್ದಾಗ ಪೊಲೀಸರು ಜನರನ್ನು ಹಿಂದಕ್ಕೆ ತಳ್ಳುತ್ತಿದ್ದರು.
ಆ ವೇಳೆ, ಪೊಲೀಸ್ ಸಿಬ್ಬಂದಿ ಕರಿಬಾಬು ಅವರ ಕೈ ಸದರಿ ವ್ಯಕ್ತಿಯ ಹೊಟ್ಟೆಗೆ ತಗುಲಿದಾಗ ಅಲ್ಲಿ ಡ್ಯಾಗರ್ ಇರುವುದು ಪತ್ತೆಯಾಗಿದೆ. ತಕ್ಷಣ ಡ್ಯಾಗರ್ ಹೊಂದಿದ್ದ ವ್ಯಕ್ತಿಯನ್ನು ಗುಡಿಬಂಡೆ ಪೊಲೀಸರು (gudibande police) ವಶಕ್ಕೆ ಪಡೆದಿದ್ದಾರೆ. ನಂತರ ಸಚಿವರು ಕಾರು ಹತ್ತಿ ಬೆಂಗಳೂರಿನತ್ತ ಹೊರಟಿದ್ದಾರೆ. ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ನಡೆದಿದೆ.