ಸಾಲ ತೀರಿಸೋಕೆ ಬುರ್ಖಾ ತೊಟ್ಟು ವೃದ್ದೆಯ ಚಿನ್ನಾಭರಣ ಕದ್ದ ಖತರ್ನಾಕ್ ಮಹಿಳೆಯರು
ಕೆಲವರು ಸಾಲ ಮಾಡಿ ಸಾಲಗಾರರಿಂದ ತಪ್ಪಿಸಿಕೊಂಡು ಒಡಾಡೋದು ಮಾಮೂಲಿ. ಆದ್ರೆ, ಇಲ್ಲಿ ಮೈತುಂಬಾ ಸಾಲ ಮಾಡಿಕೊಂಡ ಇಬ್ಬರು ಮಹಿಳೆಯರು, ಸಾಲ ತೀರಿಸೋಕೆ ಬಾಡಿಗೆಗೆ ಅಂಗಡಿ ಕೊಟ್ಟಿದ್ದಂತಹ ವೃದ್ದೆಯ ಮನೆಗೆ ನುಗ್ಗಿ ಚಿನ್ನಾಭರಣಗಳನ್ನ ಕಳ್ಳತನ ಮಾಡಿದ್ದಾರೆ. ಅದು ಕಳ್ಳತನ ಮಾಡಲು ಬುರ್ಖಾ ಖರೀದಿಸಿದ್ದು, ಇದೀಗ ಕಿಲಾಡಿ ಲೇಡಿ ಕಳ್ಳಿಯರು ಅರೆಸ್ಟ್ ಆಗಿ ಜೈಲು ಕಂಬಿ ಎಣಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರ, (ಮಾರ್ಚ್ 04): ಸಾಲ ತೀರಿಸಲು ವೃದ್ದೆಯ ಚಿನ್ನಾಭರಣ ಕದ್ದಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಒಎಂಬಿ ರಸ್ತೆಯಲ್ಲಿ ನಡೆದಿದೆ. ವೃದ್ದೆ ಬಾಡಿಗೆ ಕೊಟ್ಟಿದ್ದ ಅಂಗಡಿ ಓನರ್, ಸ್ನೇಹಿತೆಗೆ ಬುರ್ಖಾ ತೊಡಿಸಿ ಅಜ್ಜಿ ಚಿನ್ನಾಭರಣ ಎಗರಿಸಿದ್ದು, ಇದೀಗ ಇಬ್ಬರು ಸಿಕ್ಕಿಬಿದ್ದಿದ್ದು, ಜೈಲು ಕಂಬಿ ಎಣಿಸುತ್ತಿದ್ದಾರೆ. ಅರ್ಚನಾ ಹಾಗೂ ಮಂಜುಳಾ ಸಿಕ್ಕಿಬಿದ್ದ ಕಳ್ಳಿಯರು. ಅರ್ಚನಾ, ಅಜ್ಜಿಯ ಮನೆಪಕ್ಕದಲ್ಲೇ ಬಾಡಿಗೆ ಇದ್ದು, ಈ ಕೃತ್ಯ ಎಸಗಿದ್ದಾಳೆ.
ಫೆಬ್ರವರಿ 21 ಸಂಜೆ 6 ಗಂಟೆ ಸುಮಾರು ಇನ್ನೇನು ಸೂರ್ಯ ಮುಳುಗಿ ಕತ್ತಲು ಆವರಿಸಿತ್ತು. ಅಷ್ಟರಲ್ಲೇ ಚಿಕ್ಕಬಳ್ಳಾಪುರ ನಗರದ ಒಎಂಬಿ ರಸ್ತೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ವೃದ್ದೆ ಗೌರಮ್ಮ ಮನೆಗೆ ಬುರ್ಖಾ ಧರಿಸಿ ಎಂಟ್ರಿ ಕೊಟ್ಟದ್ದ ಮಹಿಳೆ, ಲಗ್ನಪತ್ರಿಕೆ ನೀಡಲು ಬಂದಿದ್ದೇನೆಂದು ಅಜ್ಜಿಯ ಚಿನ್ನಾಭರಣ ದೋಚಿಕೊಂಡು ಹೋಗಿದ್ದಾಳೆ.
ಲಗ್ನಿ ಪತ್ರಿಕೆ ನೀಡಲು ಬಂದಿದ್ದೇನೆಂದು ಮನೆಯೊಳಗೆ ಎಂಟ್ರಿ ಕೊಟ್ಟಿದ್ದಳು. ಯಾರೋ ಪರಿಚಯದವರೇ ಇರಬೇಕು ಅಂತ ಕುಡಿಯೋಕೆ ನೀರು ಕೋಡೋಣ ಅಂತ ಆಡುಗೆ ಮನೆಯತ್ತ ಹೋದ ವೃದ್ದೆಯನ್ನ ಹಿಂದೆಯಿಂದ ಹಿಡಿದ ಬುರ್ಖಾಧಾರಿ ಮಹಿಳೆ ಕತ್ತಿನಲ್ಲಿರವ ಸರಕ್ಕೆ ಕೈ ಹಾಕಿದ್ದಾಳೆ. ಅಜ್ಜಿ ಕತ್ತಲ್ಲಿದ್ದ ಎರಡು ಎಳೆಯ ಚಿನ್ನದ ಮಾಂಗಲ್ಯ ಸರ ಹಾಗೂ 1 ಎಳೆಯ ಮತ್ತೊಂದು ಸರ ಕಿತ್ತುಕೊಳ್ಳೋಕೆ ಮುಂದಾಗಿದ್ದಳು. ಆದ್ರೆ ಅಷ್ಟರಲ್ಲೇ ಭಯಭೀತಿಗೊಳಗಾದ ಅಜ್ಜಿ, ಅಯ್ಯೋ ನನ್ನ ಏನು ಮಾಡಬೇಡ ಅಂತಲೇ ಸರನ ಹಾಗೂ ಕಿವಿಯಲ್ಲಿದ್ದ ಒಲೆಯನ್ನ ಸ್ವತಃ ಅಜ್ಜಿಯೇ ಬಿಚ್ಚಿ ಬುರ್ಖಾಧಾರಿ ಮಹಿಳೆ ಕೈಗೆ ಕೊಟ್ಟಿದ್ದಾರೆ.
ಬಳಿಕ ಬುರ್ಖಾಧಾರಿ ಮಹಿಳೆ, ಕೆಲಸ ಸಲೀಸಾಯಿತು ಎಂದು ಅಜ್ಜಿ ಬಳಿಯ ಚಿನ್ನಾಭರಣ ಕಿತ್ತುಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದ್ದಾಳೆ. ಇನ್ನು ಬುರ್ಖಾಧಾರಿ ಮಹಿಳೆ ಹೋಗ್ತಿದ್ದಂತೆ ಮನೆಯಿಂದ ಹೊರಬಂದ ಅಜ್ಜಿ ಅಕ್ಕ ಪಕ್ಕದವರಿಗೆ ವಿಚಾರ ತಿಳಿಸಿದ್ದಾಳೆ. ವಿಷಯ ತಿಳಿದು ಎಸ್ಪಿ ಕುಶಾಲ್ ಚೌಕ್ಸಿ ಸಮೇತ ಎಲ್ಲಾ ಪೊಲೀಸ್ ಆಧಿಕಾರಿಗಳು ಅಜ್ಜಿ ಮನೆಗೆ ಭೇಟಿ ಕೊಟ್ಟು ಪರಿಶೀಲಿಸಿದರು.
ಅಜ್ಜಿ ಹೇಳಿದ ಹಾಗೆ ಅವರ್ಯಾರೋ ಗೊತ್ತಿರುವವರೇ ಮಾಡಿರುವುದು ಎಂದು ಪೊಲೀಸರು ಸಹ ಅಕ್ಕ ಪಕ್ಕದ ಸಿಸಿಟಿವಿಗಳನ್ನೆಲ್ಲಾ ಪರಿಶೀಲಿಸಿದ್ದು, ಬುರ್ಖಾಧಾರಿ ಮಹಿಳೆ ನಡೆದುಕೊಂಡು ಹೋಗುತ್ತಿರುವುದು ಹಾಗೂ ಮತ್ತೋರ್ವ ಮಹಿಳೆ ಬೈಕ್ ನಲ್ಲಿ ಆಕೆಯನ್ನ ಕೂರಿಸಿಕೊಂಡು ಹೋಗುತ್ತಿರುವ ದೃಶ್ಯಗಳು ಲಭ್ಯವಾಗಿದ್ದವು. ಬಳಿಕ ಗಾಡಿ ನಂಬರ್ ಮೇಲೆ ಪೊಲೀಸರು ತನಿಖೆ ನಡೆಸಿದಾಗ ಅಜ್ಜಿ ಮನೆಯ ಪಕ್ಕದಲ್ಲೇ ಇರುವ ಅದ್ರಲ್ಲೂ ಅಜ್ಜಿಯೇ ಬಾಡಿಗೆ ಕೊಟ್ಟಿದ್ದ ಅಂಗಡಿಯ ಓನರ್ ಅರ್ಚನಾ ಎಂಬುದು ಗೊತ್ತಾಗಿದೆ.
ಕೂಡಲೇ ಫ್ಯಾನ್ಸಿ ಸ್ಟೋರ್ ಮಾಲೀಕಿ ಅರ್ಚನಾಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ರೆ ಇದು ತನ್ನದೇ ಪ್ಲಾನ್. ಸಾಲ ಜಾಸ್ತಿ ಆಗಿ ಬಾಡಿಗೆ ಕಟ್ಟೋಕು ಆಗ್ತಿಲ್ಲ. ಹಾಗಾಗಿ ನನ್ನ ಸ್ನೇಹಿತೆ ಗಂಗನಮಿದ್ದೆಯ ಮಂಜುಳಾಗೆ ನಾನೇ ಬುರ್ಖಾ ಹಾಕಿಸಿ ಕಳುಹಿಸಿ ಚಿನ್ನಾಭರಣ ಕಳವು ಮಾಡಿಸಿದ್ದೆ ಎಂದು ಬಾಯ್ಬಿಟ್ಟಿದ್ದಾಳೆ.
ಇನ್ನೂ ಕದ್ದ ಎರಡು ಸರ ಹಾಗೂ ಒಂದು ಜೊತೆ ಒಲೆಯಲ್ಲಿ ಅರ್ಚನಾ ಒಂದು ಸರವನ್ನ ಕದ್ದುಕೊಂಡು ಬಂದ ಮಂಜುಳಾಗೆ ಕೊಟ್ಟಿದ್ದು, .ಉಳಿದ ಸರ ಹಾಗೂ ಒಲೆಯನ್ನ ತಾನು ಇಟ್ಟುಕೊಂಡಿದ್ದಳು. ಇನ್ನು ಕದ್ದ ಒಡವೆಗಳನ್ನ ಅದಾಗಲೇ ಅಡ ಇಟ್ಟು ಸಾಲ ಸಹ ತೀರಿಸಿದ್ದಳು. ಸದ್ಯ ಪೊಲೀಸರು ಇಬ್ಬರನ್ನ ಅರೆಸ್ಟ್ ಮಾಡಿದ್ದು, ಕದ್ದ ಮಾಲನ್ನ ಸಹ ವಶಪಡಿಸಿಕೊಂಡಿದ್ದಾರೆ.