ಜಿನ್ನಾ ಮನಸ್ಥಿತಿಯವರಿಂದ ಉಂಟಾಗುತ್ತಿರುವ ಗಲಭೆಗಳನ್ನು ಸಾವರ್ಕರ್ ಮನಸ್ಥಿತಿಯಿಂದಲೇ ಎದುರಿಸಬೇಕು: ಸಿ.ಟಿ.ರವಿ

| Updated By: Lakshmi Hegde

Updated on: Apr 23, 2022 | 5:27 PM

ಪಿಎಸ್​ಐ ನೇಮಕಾತಿ ಅಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸುವಂತೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಆಗ್ರಹ ಮಾಡಿದ್ದೇನೆ ಎಂದಿದ್ದಾರೆ.

ಜಿನ್ನಾ ಮನಸ್ಥಿತಿಯವರಿಂದ ಉಂಟಾಗುತ್ತಿರುವ ಗಲಭೆಗಳನ್ನು ಸಾವರ್ಕರ್ ಮನಸ್ಥಿತಿಯಿಂದಲೇ ಎದುರಿಸಬೇಕು: ಸಿ.ಟಿ.ರವಿ
ಸಿ.ಟಿ.ರವಿ
Follow us on

ಚಿಕ್ಕಮಗಳೂರು: ಪ್ರಚೋದನಕಾರಿ ವಾಟ್ಸ್​ಆ್ಯಪ್​ ಸ್ಟೇಟಸ್​​ನಿಂದ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಸದ್ಯ ತಕ್ಕಮಟ್ಟಿಗೆ ಶಮನಗೊಂಡಿದೆ. ಈ ಮಧ್ಯೆ ಸ್ಟೇಟಸ್​ ಹಾಕಿದ ಯುವಕ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ. ಇದೇ ಹೊತ್ತಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ, ಹುಬ್ಬಳ್ಳಿ ಗಲಾಟೆ ಬಗ್ಗೆ ಪ್ರತಿಕ್ರಿಯೆ ನೀಡಿ, ಹುಬ್ಬಳ್ಳಿಯಲ್ಲಾದ ಗಲಾಟೆ ಅಚಾನಕ್​ ಆಗಿ ನಡೆದಿದ್ದಲ್ಲ, ಈ ಘಟನೆಗೂ ಡಿಜೆಹಳ್ಳಿ-ಕೆಜಿಹಳ್ಳಿ ಗಲಾಟೆಗೂ ತುಂಬ ಸಾಮ್ಯತೆ ಇದು ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಎಲ್ಲೆಡೆ ಗಲಭೆ ಎಬ್ಬಿಸುವ ಷಡ್ಯಂತ ನಡೆಯುತ್ತಿದೆ. ಇದನ್ನು ಇಲ್ಲಿಗೇ ಹತ್ತಿಕ್ಕಬೇಕು ಎಂದೂ ಹೇಳಿದ್ದಾರೆ.  

ನಡೆಯುತ್ತಿರುವ ಗಲಭೆ, ಗಲಾಟೆಗಳಿಗೆ ಕಾರಣವಾಗುತ್ತಿರುವವರು, ಮನಸಿನಲ್ಲಿ ಜಿನ್ನಾರನ್ನು (ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ) ಇಟ್ಟುಕೊಂಡವರು. ಈ ಜಿನ್ನಾ ಮನಸ್ಥಿತಿಗೆ ಹೊಂದಿರುವವರನ್ನು ಗಾಂಧಿ ಮನಸಿನಿಂದ ಎದುರಿಸಲು ಸಾಧ್ಯವೇ ಇಲ್ಲ. ಗಾಂಧಿಮನಸ್ಥಿತಿಯಿಂದ  ಹಿಂದೆ ಇದನ್ನೆಲ್ಲ ಎದುರಿಸಲು ಹೋದಾಗ ಆಗಿದ್ದೇನು? ದೇಶವೇ ವಿಭಜನೆ ಆಯಿತು. 46 ಲಕ್ಷ ಜನರ ಮಾರಣಹೋಮವಾಯಿತು. ಹೀಗಾಗಿ ಜಿನ್ನಾ ಮಾನಸಿಕತೆಯನ್ನು ನಾವು ಸಾವರ್ಕರ್​ ಮನಸಿನಿಂದ ಎದುರಿಸಬೇಕು. ಗಲಭೆ ಹುಟ್ಟುಹಾಕುವುದೇ ಅವರ ದುರುದ್ದೇಶವಾಗಿದ್ದರೆ, ಅದನ್ನು ನಿಯಂತ್ರಿಸಲು ಕಠಿಣ ನಿಯಮಗಳನ್ನು ನಾವು ಕೈಗೊಳ್ಳಬೇಕಾಗುತ್ತದೆ.  ರಾಜ್ಯದಲ್ಲಿ ಮತ್ತೊಮ್ಮೆ ಡಿಜೆ ಹಳ್ಳಿ, ಕೆ.ಜಿಹಳ್ಳಿ ಮಾದರಿಯ ಗಲಭೆ ನಡೆಯಲು ಬಿಡಬಾರದು ಎಂದು ಸಿಟಿ ರವಿ ಹೇಳಿದ್ದಾರೆ.

ಇದೇ ವೇಳೆ ಪಿಎಸ್​ಐ ನೇಮಕಾತಿ ಅಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸುವಂತೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಆಗ್ರಹ ಮಾಡಿದ್ದೇನೆ.  ಇದರಲ್ಲಿ ಯಾರೇ ಪಾಲುದಾರರು ಆಗಿರಲಿ, ಕಾಂಗ್ರೆಸ್​-ಬಿಜೆಪಿ ಅಥವಾ ಇನ್ಯಾರೇ ಇದ್ದರೂ ಅವರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಅಕ್ರಮ ನಡೆಸುವವರು ಕಾಂಗ್ರೆಸ್ ಮುಖವಾಡವನ್ನೂ ಹಾಕ್ತಾರೆ, ಬಿಜೆಪಿ ಮುಖವಾಡವನ್ನೂ ಹಾಕ್ತಾರೆ. ನಮ್ಮ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸುತ್ತಿದೆ. ಯಾರೇ ಪ್ರಭಾವಿಗಳು ಇದ್ದರೂ ಕೂಡ ಖಂಡಿತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಗಾಯಗೊಂಡ ಪೊಲೀಸ್ ಅಧಿಕಾರಿ ಮನೆಗೆ ಸಿದ್ದು ಸವದಿ ಭೇಟಿ

ಹುಬ್ಬಳ್ಳಿ ಗಲಭೆಯಲ್ಲಿ ಗಾಯಗೊಂಡ ಸಿಪಿಐ ನಾಗೇಶ್​ ಕಾಡದೇವರ ನಿವಾಸಕ್ಕೆ ತೇರದಾಳ ಶಾಸಕ ಸಿದ್ದು ಸವದಿ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು, ಪೊಲೀಸರ ಮೇಲೆಯೂ ಹಲ್ಲೆ ನಡೆಸುವ ಮನಸ್ಥಿತಿ ಇದೆ ಎಂದಾದರೆ ಈ ದೇಶದ ಮೇಲೆ ಅವರಿಗೆ ನಿಯತ್ತಿಲ್ಲ. ಇವರನ್ನೆಲ್ಲ ಉಗ್ರಗಾಮಿಗಳು ಎಂದೇ ಪರಿಗಣಿಸಿ, ಬಂಧಿಸಬೇಕು. ಗೋಲಿಬಾರ್ ಮಾಡಿ ಹೊಡೆದು ಹಾಕಿದರೂ ಯಾರಿಗೂ ಅನ್ಯಾಯ ಆಗಲ್ಲ. ಇಲ್ಲಿಯ ಅನ್ನ ತಿಂದು ಬೇರೆ ದೇಶಕ್ಕೆ ನಿಯತ್ತು ಇರುವವರನ್ನ ಆ ದೇಶಕ್ಕೆ ಕಳಿಸಬೇಕು. ಈ ನಿಟ್ಟಿನಲ್ಲಿ ಯೋಗಿ ಆದಿತ್ಯನಾಥ, ದೆಹಲಿ ಪೊಲೀಸರು, ಗುಜರಾತ್, ಮಧ್ಯಪ್ರದೇಶದಂತೆ ಆಡಳಿತ ನಮ್ಮಲ್ಲಿ ಬರಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್​ ಕುರ್ಚಿ ಆಸೆಗಾಗಿ ತಾಯಿಗೆ ಸಮಾನವಾದ ದೇಶವನ್ನೇ ಮಾರುವ ಭಯೋತ್ಪಾದಕರನ್ನೂ ಬೆಂಬಲಿಸುತ್ತದೆ. ಇದು ಅತ್ಯಂತ ನೀಚತನದ ಕಾಯಕ. ಹುಬ್ಬಳ್ಳಿ ಘಟನೆಯಲ್ಲಿ ದಾಳಿ ಮಾಡಿದ, ಕಲ್ಲು ತೂರಾಟ ನಡೆಸಿದ ಹಾಗೂ ಪ್ರಚೋದಿಸಿದ ಎಲ್ಲರನ್ನು ಅಜೀವಕಾಲ ಜೈಲಲ್ಲಿ ಇಡಬೇಕು. ಇಂಥ ಕಠಿಣ ಕಾನೂನು ಜಾರಿಯಾದರೆ ಮಾತ್ರ ಜನರು ನೆಮ್ಮದಿಯಿಂದ ಬದುಕಲು ಸಾಧ್ಯ. ಇಲ್ಲದೆ ಹೋದರೆ ಉಳಿಗಾಲವಿಲ್ಲ. ಕೇರಳ, ಪಶ್ಚಿಮ ಬಂಗಾಳದ ಪರಿಸ್ಥಿತಿಯೇ ಕರ್ನಾಟಕಕ್ಕೂ ಬರುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಹಾಂಗೀರ್​​ಪುರಿ ಹಿಂಸಾಚಾರ ಪ್ರಕರಣ; ಪ್ರಮುಖ ಆರೋಪಿ ಅನ್ಸಾರ್ ಕೇಸ್ ದಾಖಲು, ಇಡಿಯಿಂದ ತನಿಖೆ ಆರಂಭ

Published On - 12:55 pm, Sat, 23 April 22