ಪ್ರತ್ಯೇಕ ಪ್ರಕರಣ: ಒಂಟಿ ಸಲಗ ದಾಳಿಗೆ ಕಾರ್ಮಿಕ ಮಹಿಳೆ ಮೃತ, ಕರು ಮೇಲೆ ಚಿರತೆ ದಾಳಿ

| Updated By: ವಿವೇಕ ಬಿರಾದಾರ

Updated on: Nov 08, 2023 | 10:20 AM

ಕಳೆದ ಒಂದು ತಿಂಗಳಿನಿಂದ ಅಲ್ದೂರು ಅರೇನೂರು, ಹೆಡದಾಳು ಗ್ರಾಮಗಳಲ್ಲಿ ಸಂಚಾರ ಮಾಡುತ್ತಿದ್ದ ಏಳು ಕಾಡಾನೆಗಳ ಹಿಂಡಿನಿಂದ ಒಂಟಿ ಸಲಗ ಬೇರ್ಪಟ್ಟಿದೆ. ಈ ಕಾಡಾನೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒಂದು ತಿಂಗಳಿನಿಂದ ಅರಣ್ಯ ಇಲಾಖೆಗೆ ಮನವಿ ಸಲ್ಲಿಸುತ್ತಿದ್ದಾರೆ. ಮಾಹಿತಿ ನೀಡಿದರೂ ಅರಣ್ಯ ಇಲಾಖೆ ಸಿಬ್ಬಂದಿ ಕ್ರಮ ಕೈಗೊಂಡಿಲ್ಲ.

ಪ್ರತ್ಯೇಕ ಪ್ರಕರಣ: ಒಂಟಿ ಸಲಗ ದಾಳಿಗೆ ಕಾರ್ಮಿಕ ಮಹಿಳೆ ಮೃತ, ಕರು ಮೇಲೆ ಚಿರತೆ ದಾಳಿ
ಆನೆ (ಎಡಚಿತ್ರ) ಮೃತ ಕಾರ್ಮಿಕ ಮಹಿಳೆ (ಬಲಚಿತ್ರ)
Follow us on

ಚಿಕ್ಕಮಗಳೂರು ನ.08: ಕಾಫಿನಾಡಿನಲ್ಲಿ ಕಾಡಾನೆ (Elephant) ದಾಳಿಗೆ ಮತ್ತೊಬ್ಬರು ಮೃತಪಟ್ಟಿದ್ದಾರೆ. ಒಂಟಿ ಸಲಗ ದಾಳಿಗೆ ಕಾರ್ಮಿಕ ಮಹಿಳೆ (Woman) ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಹೆಡದಾಳು ಗ್ರಾಮದಲ್ಲಿ ನಡೆದಿದೆ. ಮೀನಾ (45) ಮೃತ ಕಾರ್ಮಿಕ ಮಹಿಳೆ. ಇಬ್ಬರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ. ಬುಧವಾರ ಬೆಳಿಗ್ಗೆ ಮೀನಾ ತೋಟಕ್ಕೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ಮಾಡಿದೆ. ಕಾಡಾನೆ ತುಳಿತದಿಂದ ಮೀನಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ದೂರು ವಲಯ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಳೆದ ಒಂದು ತಿಂಗಳಿನಿಂದ ಅಲ್ದೂರು ಅರೇನೂರು, ಹೆಡದಾಳು ಗ್ರಾಮಗಳಲ್ಲಿ ಸಂಚಾರ ಮಾಡುತ್ತಿದ್ದ ಏಳು ಕಾಡಾನೆಗಳ ಹಿಂಡಿನಿಂದ ಒಂಟಿ ಸಲಗ ಬೇರ್ಪಟ್ಟಿದೆ. ಈ ಕಾಡಾನೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒಂದು ತಿಂಗಳಿನಿಂದ ಅರಣ್ಯ ಇಲಾಖೆಗೆ ಮನವಿ ಸಲ್ಲಿಸುತ್ತಿದ್ದಾರೆ. ಮಾಹಿತಿ ನೀಡಿದರೂ ಅರಣ್ಯ ಇಲಾಖೆ ಸಿಬ್ಬಂದಿ ಕ್ರಮ ಕೈಗೊಂಡಿಲ್ಲ.

ಇದನ್ನೂ ಓದಿ: ಹಾಸನ: ಚಿಕಿತ್ಸೆ ನೀಡಲು ಸೆರೆ ಹಿಡಿಯುತ್ತಿದ್ದಾಗ ಆನೆ ದಾಳಿ, ಮಲೆನಾಡ ಶಾರ್ಪ್ ಶೂಟರ್ ಸಾವು

ಅರಣ್ಯ ಇಲಾಖೆಯ ಸಿಬ್ಬಂದಿಗಳ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

ಘಟನೆ ನಡೆದ ಸ್ಥಳದಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಯ ಸಿಬ್ಬಂದಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಘಟನೆ ನಡೆದ ಸ್ಥಳದಿಂದ ಮೃತ ದೇಹ ತೆಗೆಯದಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಾನೆ ಹಿಂಡು ಲಕ್ಷಾಂತರ ಮೌಲ್ಯದ ಕಾಫಿ ಅಡಿಕೆ, ತೆಂಗು ಬಾಳೆ ನಾಶ ಮಾಡಿದೆ. ಈ ಹಿಂಡಿನಿಂದ ಬೇರ್ಪಟ್ಟ ಒಂಟಿ ಸಲಗ ಒಂದು ತಿಂಗಳ ಹಿಂದೆ ಅರೇನೂರು ಗ್ರಾಮದ ಕಾರ್ಮಿಕನ ಮೇಲೆ ದಾಳಿ ಮಾಡಿತ್ತು. ಕಾಡಾನೆ ‌ಸಂಚಾರ ಮಾಡುತ್ತಿರುವ ಕುರಿತು ಮತ್ತು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಸಿಬ್ಬಂದಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಆದರೂ ಕೂಡ ಕ್ರಮಕೈಗೊಳ್ಳದ ಅಲ್ದೂರು ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರಿಂದ ಶಾಸಕಿ ನಯನ ಮೋಟಮ್ಮಗೆ ಕ್ಲಾಸ್​

ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಅವರಿಗೆ ತರಾಟೆಗೆ ತೆಗೆದುಕೊಂಡರು. ಮೂಡಿಗೆರೆಗೆ ಬರುವ ಸಿ.ಎಂ ಸಿದ್ದರಾಮಯ್ಯ ಅವರನ್ನು ಘಟನ ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದಿದ್ದಾರೆ. ಸಿ.ಎಂ ಬರುವವರೆಗೂ ಮೃತ ದೇಹ ತೆಗೆಯುವುದಿಲ್ಲ. ಇಷ್ಟು ದಿನವಾದರೂ ಏನು ಕ್ರಮ ತೆಗೆದುಕೊಂಡಿದ್ದೀರಾ?  ಎಂದು ಪ್ರಶ್ನಿಸಿದ್ದಾರೆ.

ಕರು ಮೇಲೆ ಚಿರತೆ ದಾಳಿ

ಮಂಡ್ಯ: ಕರು ಮೇಲೆ ಚಿರತೆ ದಾಳಿ ಮಾಡಿದ್ದು, ಕುತ್ತಿಗೆ ಭಾಗ ತಿಂದಿರುವ ಘಟನೆ ಮಂಡ್ಯ ತಾಲ್ಲೂಕಿನ ಉಪ್ಪರಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೃಷ್ಣೇಗೌಡ ಎಂಬುವರು ಕರುವನ್ನು ಮನೆಯ ಬಳಿ ಇರುವ ಕೊಟ್ಟಿಗೆಯಲ್ಲಿ ಕಟ್ಟಿದ್ದರು. ಈ ವೇಳೆ ಚಿರತೆ‌ ದಾಳಿ ಮಾಡಿ, ಕರುವನ್ನು ಹೊತೋಯ್ದು ತಿಂದಿದೆ. ಚಿರತೆ ಪ್ರತ್ಯಕ್ಷದಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.

ರೈತರು ಜಮೀನಿನ ಬಳಿ ತೆರಳಲು ಭಯ ಪಡುತ್ತಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಚಿರತೆ ಸೆರೆಗೆ ಬೋನ್ ಇಡಲು ಗ್ರಾಮಸ್ಥರ ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:44 am, Wed, 8 November 23