
ಚಿತ್ರದುರ್ಗ, ಫೆಬ್ರವರಿ 09: ಭದ್ರಾ ಮೇಲ್ದಂಡೆ ಯೋಜನೆ (Upper Bhadra Project) ಬಯಲು ಸೀಮೆಯ ಜನರ ಬಹುಕಾಲದ ಕನಸು. ಆದರೆ ಯೋಜನೆ ಆರಂಭವಾಗಿ ಎರಡು ದಶಕಗಳೇ ಕಳೆಯುತ್ತ ಬಂದರೂ ಯೋಜನೆ ಮಾತ್ರ ಪೂರ್ಣಗೊಂಡಿಲ್ಲ. ಹೀಗಾಗಿ ಕಾದು ಕಾದು ಸಿಡಿದೆದ್ದ ಚಿತ್ರದುರ್ಗದ ರೈತರು ನಾಳೆ ಅಂದರೆ ಫೆಬ್ರವರಿ 10ರಂದು ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳ ಬಂದ್ಗೆ (Bandh) ಕರೆ ನೀಡಿದ್ದಾರೆ.
ಚಿತ್ರದುರ್ಗದ ಜನರ ದಶಕಗಳ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಜಾರಿ ಆಗಿದೆ. ಆದರೆ ಯೋಜನೆಗೆ ಚಾಲನೆ ಸಿಕ್ಕು ಎರಡು ದಶಕಗಳೇ ಕಳೆಯುತ್ತ ಬಂದರೂ ಯೋಜನೆ ಮಾತ್ರ ಪೂರ್ಣಗೊಂಡಿಲ್ಲ. ಅನುದಾನ ಬಿಡುಗಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಬ್ಬರ ಮೇಲೊಬ್ಬರು ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಮುತ್ತಿನಕೊಪ್ಪದಿಂದ ಭದ್ರಾ ಡ್ಯಾಂವರೆಗೆ ಶೇ 25ರಷ್ಟು ಕಾಮಗಾರಿ ಬಾಕಿಯಿದೆ. ಅರಣ್ಯ ವ್ಯಾಪ್ತಿಯಲ್ಲಿ ಎರಡು ಕಡೆ ಟವರ್ ಹಾಕುವ ಕೆಲಸ ಬಾಕಿಯಿದೆ.
ಇದನ್ನೂ ಓದಿ: ಪಾವಗಡ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕೆಲಸ ನಮ್ಮ ಸರ್ಕಾರ ಮಾಡಲಿದೆ: ಸಿದ್ದರಾಮಯ್ಯ, ಸಿಎಂ
ಅಲ್ಲದೆ ಸೂಕ್ಷ್ಮ ಹನಿ ನೀರಾವರಿ ಯೋಜನೆಗೆ ಹೊಳಲ್ಕೆರೆ ಕೈಬಿಡಲಾಗಿದೆ. ಹೀಗಾಗಿ ತಾರತಮ್ಯ ಬಿಟ್ಟು ಜಿಲ್ಲೆಯ ಎಲ್ಲೆಡೆ ನೀರು ಹರಿಸುವವರೆಗೆ ಟ್ರಯಲ್ ಟೆಸ್ಟ್ಗೆ ಅವಕಾಶ ಕೊಡುವುದಿಲ್ಲ ಎಂದು ರೈತ ಮುಖಂಡ ಈಚಘಟ್ಟ ಸಿದ್ದವೀರಪ್ಪ ಎಚ್ಚರಿಕೆ ನೀಡಿದ್ದಾರೆ.
ಇನ್ನು ಈಗಾಗಲೇ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಪ್ರತಿ ತಾಲೂಕಿನಲ್ಲಿ ಫೆಬ್ರವರಿ 4ರಿಂದ ಧರಣಿ ನಡೆಸಲಾಗುತ್ತಿದೆ. ಫೆಬ್ರವರಿ 10ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಹೊಳಲ್ಕೆರೆ, ಮೊಳಕಾಲ್ಮೂರು ಮತ್ತು ಹೊಸದುರ್ಗ ತಾಲೂಕು ಕೇಂದ್ರಗಳ ಬಂದ್ಗೆ ಕರೆ ನೀಡಿದ್ದೇವೆ. ಫೆಬ್ರವರಿ 12ಕ್ಕೆ ಚಳ್ಳಕೆರೆ ಪಟ್ಟಣ ಬಂದ್ ಮಾಡಲಾಗುವುದು. ಫೆಬ್ರವರಿ 13ಕ್ಕೆ ಚಿತ್ರದುರ್ಗ ನಗರಕ್ಕೆ ಪಾದಯಾತ್ರೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸುತ್ತೇವೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಬಗ್ಗೆ ಮತ್ತಷ್ಟು ವಿವರ ಕೇಳಿದ ಕೇಂದ್ರ; ಕಿಡಿಕಾರಿದ ಟಿ.ಬಿ.ಜಯಚಂದ್ರ
ಒಟ್ಟಾರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸಿಡಿಸಿದೆದ್ದಾರೆ. ಕೇಂದ್ರ ಸರ್ಕಾರ ಭದ್ರಾ ಯೋಜನೆಗೆ 5300 ಕೋಟಿ ರೂ ಅನುದಾನ ಘೋಷಿಸಿದ್ದು ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರವೂ ಭದ್ರಾ ಯೋಜನೆಗೆ ಆದ್ಯತೆ ನೀಡಿ ಹೆಚ್ಚಿನ ಹಣ ಬಿಡುಗಡೆ ಮಾಡುವಲ್ಲಿ ಮೀನಮೇಷ ಎಣಿಸುತ್ತಿದೆ. ಪರಿಣಾಮ ಬಯಲು ಸೀಮೆಯ ಜನರ ಕನಸಾದ ಭದ್ರಾ ಯೋಜನೆ ಆಮೆಗತಿಯಲ್ಲಿ ಸಾಗಿದ್ದು, ರೈತಾಪಿ ವರ್ಗ ಹೈರಾಣಾಗಿದ್ದಾರೆ. ಹೀಗಾಗಿ, ಕೂಡಲೇ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂಬುದು ರೈತರ ಆಗ್ರಹವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.