ಚಿತ್ರದುರ್ಗ: ಯುವಕನ ಜೊತೆ ಓಡಿ ಹೋದ ಮಗಳು, ಪೊಲೀಸರ ನಿರ್ಲಕ್ಷ್ಯದಿಂದ ಬೇಸತ್ತು ಠಾಣೆ ಎದುರೇ ತಂದೆ ಆತ್ಮಹತ್ಯೆ

ಒಂದೆಡೆ, ಜನಸ್ನೇಹಿ ಪೊಲೀಸ್ ವ್ಯವಸ್ಥೆಗಾಗಿ ರಾಜ್ಯ ಸರ್ಕಾರ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಆಯೋಜಿಸುತ್ತಿದೆ. ಇತ್ತ ಚಿತ್ರದುರ್ಗದಲ್ಲಿ ಪೊಲೀಸ್ ಸಿಬ್ಬಂದಿ ನಿರ್ಲಕ್ಷದಿಂದ ಬೇಸತ್ತ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆ ಎದುರೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಗಳು ಯುವಕನೊಬ್ಬನ ಜತೆ ಓಡಿಹೋಗಿದ್ದ ವಿಚಾರದಲ್ಲಿ ಪೊಲೀಸರ ನೆರವಿಗಾಗಿ ಅಂಗಲಾಚಿದ್ದ ವ್ಯಕ್ತಿ, ಸೂಕ್ತ ಸ್ಪಂದನೇ ದೊರೆಯದಿದ್ದಾಗ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.

ಚಿತ್ರದುರ್ಗ: ಯುವಕನ ಜೊತೆ ಓಡಿ ಹೋದ ಮಗಳು, ಪೊಲೀಸರ ನಿರ್ಲಕ್ಷ್ಯದಿಂದ ಬೇಸತ್ತು ಠಾಣೆ ಎದುರೇ ತಂದೆ ಆತ್ಮಹತ್ಯೆ
ಹೊಳಲ್ಕೆರೆ ಪೊಲೀಸ್ ಠಾಣೆ
Edited By:

Updated on: Jul 22, 2025 | 8:05 AM

ಚಿತ್ರದುರ್ಗ, ಜುಲೈ 22: ಗೊತ್ತುಗುರಿಯಿಲ್ಲದ ಯುವಕನ ಜತೆ ಮಗಳು ಓಡಿಹೋಗಿದ್ದು, ಹೇಗಾದರೂ ಮಾಡಿ ಒಮ್ಮೆ ಮಾತನಾಡಲು ಅವಕಾಶ ಮಾಡಿಕೊಡಿ ಎಂದು ಪೊಲೀಸರ (Police) ಬಳಿ ಪದೇ ಪದೇ ಕಾಡಿದ ವ್ಯಕ್ತಿಯೊಬ್ಬರು ಫಲ ಕಾಣದೆ ಪೊಲೀಸ್ ಠಾಣೆ ಎದುರೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ದಾರುಣ ಘಟನೆ ನಡೆದಿರುವುದು ಚಿತ್ರದುರ್ಗದ (Chitradurga) ಹೊಳಲ್ಕೆರೆ (Holalkere) ಠಾಣೆಯಲ್ಲಿ. ಪೊಲೀಸರ ನಿರ್ಲಕ್ಷ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸ್ ಠಾಣೆ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಲಾಯಿತು. ಜನರನ್ನು ಚದುರಿಸಲು ಲಾಠಿಚಾರ್ಜ್ ಕೂಡ ನಡೆಸಲಾಯಿತು.

ಹೊಳಲ್ಕೆರೆಯಲ್ಲಿ ನಡೆದಿದ್ದೇನು?

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಗಿಲ್ಕೇನಹಳ್ಳಿಯ ಅಜ್ಜಯ್ಯ(51) ಮೃತ ದುರ್ದೈವಿ. ಅಜ್ಜಯ್ಯನ ಪ್ರೀತಿಯ ಮಗಳು ವಾರದ ಹಿಂದೆ ಗೊತ್ತು ಗುರಿಯಿಲ್ಲದ ಯುವಕ ರಘು ಎಂಬಾತನ ಜತೆ ಮನೆ ಬಿಟ್ಟು ಹೋಗಿದ್ದಾಳೆ. ಹೀಗಾಗಿ, ಮೊದಲೇ ನೊಂದಿದ್ದ ಅಜ್ಜಯ್ಯ, ಕಳೆದ ಒಂದು ವಾರದಿಂದ ಹೊಳಲ್ಕೆರೆ ಠಾಣೆಗೆ ಅಲೆದಿದ್ದಾರೆ. ಮಗಳನ್ನು ಒಮ್ಮೆ ಕರೆಸಿ ಮಾತಾಡಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಆದರೆ, ಹೊಳಲ್ಕೆರೆ ಠಾಣೆ ಸಿಪಿಐ ಚಿಕ್ಕಣ್ಣವರ್ ಮತ್ತು ಪಿಎಸ್​​​ಐ ಸಚಿನ್ ಮಾತ್ರ ನಿರ್ಲಕ್ಷ್ಯ ತೋರಿದ್ದಾರೆ. ಆಮೇಲೆ ಬನ್ನಿ, ನಾಳೆ ಬನ್ನಿ ಎಂದು ಅಲೆಸಿದ್ದಾರೆ. ಅಷ್ಟು ಸಾಲದೆಂಬಂತೆ ಪೊಲೀಸರು ಅಜ್ಜಯ್ಯನಿಗೆ ಮತ್ತಷ್ಟು ಅವಮಾನ, ನೋವು ನೀಡುವಂತೆ ಮಾತನಾಡಿದ್ದರು ಎಂಬ ಆರೋಪವೂ ಇದೆ. ಇದರಿಂದ ಮನನೊಂದ ಅಜ್ಜಯ್ಯ ಭಾನುವಾರ ಸಂಜೆ ವೇಳೆ ಹೊಳಲ್ಕೆರೆ ಠಾಣೆ ಎದುರೇ ವಿಷ ಸೇವಿಸಿದ್ದಾರೆ. ಗಮನಿಸಿದ ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಅಜ್ಜಯ್ಯ ಕೊನೆಯುಸಿರೆಳೆದಿದ್ದಾರೆ.

ಅಜ್ಜಯ್ಯ ಬೆಂಗಳೂರಿಗೆ ಹೋಗಿ ಕೂಲಿ ಕೆಲಸ ಮಾಡಿಕೊಂಡಿದ್ದ ಬಡವ. ಬಡತನದಲ್ಲೇ ಮಕ್ಕಳನ್ನು ಪ್ರೀತಿಯಿಂದ ಸಾಕಿದ್ದರು. ಆರೆ, ಏಕಾಏಕಿ ಮಗಳು ಮನೆ ಬಿಟ್ಟು ಯುವಕನ ಜತೆ ಹೋಗಿ ಮದುವೆ ಆಗಿದ್ದಾಳೆಂದು ತಿಳಿದು ಕಂಗಾಲಾಗಿದ್ದರು. ಒಂದು ಸಲ ಕರೆಸಿ ಮತಾಡಲು ಅವಕಾಶ ಕೊಡಿ ಎಂದು ಪೊಲೀಸರ ಬಳಿ ಅಂಗಲಾಚಿದ್ದರು. ಮಗಳಿಗಿನ್ನೂ ವಯಸ್ಸು 18 ತುಂಬಿಲ್ಲ, ನನ್ನ ಬಳಿ ಬರ್ತ್ ಸರ್ಟಿಫಿಕೇಟ್ ಇದೆ ಎಂದು ಸಹ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದರು ಎನ್ನಲಾಗಿದೆ. ಆದರೆ, ಅಧಿಕಾರಿಗಳು ಕ್ಯಾರೇ ಅನ್ನದ ಕಾರಣ ನೊಂದು ಠಾಣೆ ಎದುರೇ ವಿಷ ಸೇವನೆಗೆ ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಲಿವಿಂಗ್ ರಿಲೇಷನ್​ಶಿಪ್​: ಬಾತ್‌ರೂಮಲ್ಲೇ ವ್ಯಕ್ತಿಯ ಬರ್ಬರ ಹತ್ಯೆ, ಜಾಲಿ ಜಾಲಿ ಎಂದವರು ಜೈಲಿಗೆ

ವಿಷಸೇವನೆಗೂ ಅರ್ಧಗಂಟೆ ಮುನ್ನ ನನಗೆ ಕರೆ ಮಾಡಿ, ‘ಪೊಲೀಸ್ ಅಧಿಕಾರಿಗಳಿಂದ ನ್ಯಾಯ ಸಿಗುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದಿದ್ದರು. ಸಮಾಧಾನ ಹೇಳಿದರೂ ಕೇಳದೆ ಅಪಮಾನದಿಂದ ನೊಂದು ವಿಷ ಸೇವಿಸಿದ್ದಾರೆ ಎಂದು ಮೃತನ ಸಂಬಂಧಿ ಪ್ರಶಾಂತ್ ಎಂಬವರು ತಿಳಿಸಿದ್ದಾರೆ.

ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎದು ಅಜ್ಜಯ್ಯನ ಸಂಬಂಧಿಕರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us