AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದುರ್ಗ: ಜೋಗಿಮಟ್ಟಿ ವನ್ಯಧಾಮಕ್ಕೆ ಜೂನ್​ವರೆಗೆ ಪ್ರವಾಸಿಗರಿಗೆ ನಿಷೇಧ!

ಚಿತ್ರದುರ್ಗದ ಊಟಿ ಖ್ಯಾತಿಯ ಜೋಗಿಮಟ್ಟಿ ವನ್ಯಧಾಮ ಬೇಸಿಗೆಯ ತೀವ್ರ ಬಿಸಿಲಿನಿಂದ ಒಣಗುತ್ತಿದೆ. ಹೀಗಾಗಿ ಅಗ್ನಿ ಅವಘಡ ಅಪಾಯ ಹೆಚ್ಚಿರುವ ಮತ್ತು ಪ್ರಾಣಿ-ಪಕ್ಷಿಗಳ ರಕ್ಷಣೆಗಾಗಿ, ಅರಣ್ಯ ಇಲಾಖೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಿದೆ. ಮಳೆಗಾಲ ಆರಂಭದ ನಂತರ ಈ ನಿರ್ಬಂಧ ತೆರವುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿತ್ರದುರ್ಗ: ಜೋಗಿಮಟ್ಟಿ ವನ್ಯಧಾಮಕ್ಕೆ ಜೂನ್​ವರೆಗೆ ಪ್ರವಾಸಿಗರಿಗೆ ನಿಷೇಧ!
ಜೋಗಿಮಟ್ಟಿ
ಬಸವರಾಜ ಮುದನೂರ್, ಚಿತ್ರದುರ್ಗ
| Edited By: |

Updated on:Apr 12, 2025 | 1:30 PM

Share

ಚಿತ್ರದುರ್ಗ, ಏಪ್ರಿಲ್​ 12: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿದೆ. ಈ ಬಿಸಿಲಿಗೆ ಜನರು ಹೈರಾಣಾಗಿದ್ದಾರೆ. ಇತ್ತ ಕೋಟೆನಾಡು ಚಿತ್ರದುರ್ಗದಲ್ಲಿ (Chitradurga) ಬೇಸಿಗೆಯ ಬಿಸಿಲು ಜೋರಾಗಿದೆ. ಪರಿಣಾಮ ಬಯಲುಸೀಮೆಯ ಕುರುಚಲು ಕಾಡಿನಲ್ಲಿ ಹಸಿರು ಮರೆಯಾಗಿ ಕಪ್ಪುಗಟ್ಟುತ್ತಿದೆ. ಹೀಗಿರುವಾಗಲೇ  ಅಲರ್ಟ್ ಆಗಿರುವ ಅರಣ್ಯ ಇಲಾಖೆ, ಚಿತ್ರದುರ್ಗದ ಊಟಿ ಎಂದೇ ಖ್ಯಾತಿಯಾಗಿರುವ ಜೋಗಿಮಟ್ಟಿ (Jogimatti) ವನ್ಯಧಾಮನಕ್ಕೆ ಮಳೆಗಾಲ ಆರಂಭವಾಗುವವರೆಗೂ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

ಕೋಟೆನಾಡಿನ ಊಟಿ ಖ್ಯಾತಿಯ ಚಿತ್ರದುರ್ಗ ನಗರ ಬಳಿಯ ಜೋಗಿಮಟ್ಟಿ ವನ್ಯಧಾಮಕ್ಕೆ ಇದೀಗ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ. ಏಕೆಂದರೆ ಕುರುಚಲು ಕಾಡು ಹೊಂದಿರುವ ವನ್ಯಧಾಮದಲ್ಲಿ ಬಿರು ಬೇಸಿಗೆಯ ಪರಿಣಾಮ ಗಿಡ, ಮರಗಳು ಒಣಗಿ ಕಪ್ಪುಗಟ್ಟುತ್ತಿದೆ. ಹೀಗಾಗಿ ಅಪ್ಪಿತಪ್ಪಿ ಯಾರಾದರೂ ಬೆಂಕಿ  ಕಡ್ಡಿ ಗೀರಿದರೂ ಸಹ ಕಾಡು ಬೆಂಕಿಗಾಹುತಿ ಆಗುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಹಿರಿಯೂರಲ್ಲಿ ಆಲಿಕಲ್ಲು ಸಮೇತ ಜೋರು ಮಳೆ, ಕಾದ ಹೆಂಚಿನಂತಾಗಿದ್ದ ರಸ್ತೆಗಳು ತಂಪು-ತಂಪು

ಅಂತೆಯೇ ಬೇಸಿಗೆ ವೇಳೆ ಪ್ರಾಣಿ, ಪಕ್ಷಿಗಳ ರಕ್ಷಣೆ ದೃಷ್ಟಿಯಿಂದಲೂ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಮತ್ತು ವಾಯು ವಿಹಾರಿಗಳಿಗೂ ನಿಷೇಧಿಸಲಾಗಿದೆ. ಜೂನ್ ವೇಳೆಗೆ ಮಳೆ ಆರಂಭವಾದ ಬಳಿಕ ಮತ್ತೆ ಜೋಗಿಮಟ್ಟಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುವುದು ಎಂದು ವಲಯ ಅರಣ್ಯ ಅಧಿಕಾರಿ ವಸಂತ್ ಕುಮಾರ್​ ಹೇಳಿದ್ದಾರೆ.

Jogimatti

ಜೋಗಿಮಟ್ಟಿ ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹರಡಿದೆ. ಅಲ್ಲದೆ ಸಮುದ್ರ ಮಟ್ಟದಿಂದ ಸುಮಾರು ಮೂರುವರೆ ಸಾವಿರ ಅಡಿಯಷ್ಟು ಎತ್ತರ ಪ್ರದೇಶದಲ್ಲಿದ್ದು, ಏಷ್ಯಾದಲ್ಲೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶಗಳಲ್ಲೊಂದಾಗಿದೆ. ಹೀಗಾಗಿ, ನಿತ್ಯ ಪ್ರವಾಸಿಗರು, ಪರಿಸರ ಪ್ರಿಯರು ಜೋಗಿಮಟ್ಟಿ ವೀಕ್ಷಣೆಗೆ ಬಂದು ನಿರಾಸೆಯಿಂದ ವಾಪಸ್ ಆಗುವುದು ಸಹಜವಾಗಿದೆ. ಆದರೆ ಕಾಡು ಸಂರಕ್ಷಣೆ ದೃಷ್ಟಿಯಿಂದ ಅರಣ್ಯ ಇಲಾಖೆ ಮುಂಜಾಗೃತೆ ಕ್ರಮವಹಿಸಿದೆ.

ಇದನ್ನೂ ಓದಿ: ಅರಣ್ಯ ಪ್ರದೇಶದಲ್ಲಿ ಮರ ಕಳ್ಳತನಕ್ಕೆ ಯತ್ನ: ಆರೋಪಿಗಳಿಗೆ ವಿಚಿತ್ರ ಶಿಕ್ಷೆ ವಿಧಿಸಿದ ಕೋರ್ಟ್​

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರ ಬಳಿಯ ಜೋಗಿಮಟ್ಟಿ ವನ್ಯಧಾಮ ಸಹ ಬೇಸಿಗೆ ಬಿಸಿಲಿಗೆ ಕಳೆಗುಂದಿದೆ. ಬರಿದಾಗುತ್ತಿರುವ ಅರಣ್ಯದಿಂದಾಗಿ ಪ್ರಾಣಿ, ಪಕ್ಷಿಗಳು ಸಂಕಷ್ಟಕ್ಕೀಡಾಗುವ ಸ್ಥಿತಿ ಎದುರಾಗಿದೆ. ಹೀಗಾಗಿ, ಬೆಂಕಿ ಅವಘಡ ಮತ್ತು ಪ್ರಾಣಿ, ಪಕ್ಷಿಗಳ ಸಂರಕ್ಷಣೆ ದೃಷ್ಟಿಯಿಂದ ಅರಣ್ಯ ಇಲಾಖೆ ಜೋಗಿಮಟ್ಟಿ ವನ್ಯಧಾಮಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹೇರಿದೆ. ಕಾಡು ಸಂರಕ್ಷಣೆ ಮತ್ತು ಪ್ರಾಣಿಗಳ ಉಳಿವಿಗೆ ಅರಣ್ಯ ಇಲಾಖೆ ಮತ್ತೆ ಯಾವ ಕ್ರಮಕೈಗೊಳ್ಳಲಿದೆ ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:28 pm, Sat, 12 April 25

Follow Us
Basavaraj Mudnur
Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More