AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೂರ್ತಿ ಶರಣರ ಪೀಠ ತ್ಯಾಗಕ್ಕೆ ಹೆಚ್ಚಿದ ಒತ್ತಡ: ಚಿತ್ರದುರ್ಗದಲ್ಲಿ ಮಠದ ಭಕ್ತರ ಸಭೆ, ಚೆಕ್ ಸಹಿಗೆ ಅವಕಾಶ ನಿರಾಕರಿಸಿದ ಹೈಕೋರ್ಟ್

ಪೊಕ್ಸೋ ಪ್ರಕರಣದಲ್ಲಿ ಜೈಲುಪಾಲಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಪೀಠ ತ್ಯಾಗ ಮಾಡಬೇಕು ಎಂಬ ಒತ್ತಾಯ ಮಠದ ಭಕ್ತರಿಂದಲೇ ಕೇಳಿ ಬರುತ್ತಿದೆ.

ಶಿವಮೂರ್ತಿ ಶರಣರ ಪೀಠ ತ್ಯಾಗಕ್ಕೆ ಹೆಚ್ಚಿದ ಒತ್ತಡ: ಚಿತ್ರದುರ್ಗದಲ್ಲಿ ಮಠದ ಭಕ್ತರ ಸಭೆ, ಚೆಕ್ ಸಹಿಗೆ ಅವಕಾಶ ನಿರಾಕರಿಸಿದ ಹೈಕೋರ್ಟ್
ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು
TV9 Web
| Edited By: |

Updated on:Sep 29, 2022 | 3:31 PM

Share

ಚಿತ್ರದುರ್ಗ / ಬೆಂಗಳೂರು: ಪೊಕ್ಸೋ ಪ್ರಕರಣದಲ್ಲಿ ಜೈಲುಪಾಲಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಪೀಠ ತ್ಯಾಗ ಮಾಡಬೇಕು ಎಂಬ ಒತ್ತಾಯ ಮಠದ ಭಕ್ತರಿಂದಲೇ ಕೇಳಿ ಬರುತ್ತಿದೆ. ಈ ಸಂಬಂಧ ಇಂದು ಚಿತ್ರದುರ್ಗದಲ್ಲಿ ಮಠದ ಅನುಯಾಯಿಗಳ ಸಭೆ ನಡೆಯಿತು. ಮತ್ತೊಂದೆಡೆ ಬೆಂಗಳೂರಿನ ಕರ್ನಾಟಕ ಹೈಕೋರ್ಟ್​ನಲ್ಲಿ ಚೆಕ್​ಗೆ ಸಹಿ ಹಾಕುವ ಅಧಿಕಾರ ಕೋರಿ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯೂ ನಡೆಯಿತು. ಆದರೆ ಹೈಕೋರ್ಟ್​ ಕೆಲವು ಪ್ರಶ್ನೆಗಳನ್ನು ಕೇಳಿ ಸಹಿ ಹಾಕಲು ಅನುಮತಿಯನ್ನು ತಾತ್ಕಾಲಿಕವಾಗಿ ನಿರಾಕರಿಸಿತು. ಇನ್ನೊಂದು ಬೆಳವಣಿಗೆಯಲ್ಲಿ ಚಿತ್ರದುರ್ಗದ ಕಾರಾಗೃಹದಲ್ಲಿ ಮುರುಘಾ ಮಠದ ಪ್ರಭಾರ ಪೀಠಾಧ್ಯಕ್ಷ ರುದ್ರೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಸ್ವಾಮೀಜಿಗಳು ಶಿವಮೂರ್ತಿ ಶರಣರನ್ನು ಭೇಟಿಯಾದರು. ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಸಹ ಈ ಗುಂಪಿನಲ್ಲಿದ್ದರು. ಈ ಭೇಟಿ ಮತ್ತು ಚರ್ಚೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಪೀಠತ್ಯಾಗಕ್ಕೆ ಶಿವಮೂರ್ತಿ ಶರಣರು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದ ಎಸ್​.ನಿಜಲಿಂಗಪ್ಪ ಸ್ಮಾರಕ ಆವರಣದಲ್ಲಿ ಮಾಜಿ ಸಚಿವ ಎಚ್‌.ಏಕಾಂತಯ್ಯ ನೇತೃತ್ವದಲ್ಲಿ ಸಭೆ ನಡೆಯಿತು. ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು. ಮುಂದಿನ ನಡೆ ಏನಾಗಿರಬೇಕು ಎನ್ನುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಸಮಾಲೋಚನಾ ಸಭೆಯಲ್ಲಿ ಶಿವಮೂರ್ತಿ ಮುರುಘಾ ಶರಣರ ಹೆಸರನ್ನು ಕೆಲವರು ಪ್ರಸ್ತಾಪಿಸಿದ್ದಕ್ಕೆ ತೀವ್ರ ಆಕ್ಷೇಪ ಕೇಳಿಬಂತು. ಮುರುಘಾ ಶರಣರ ಹೆಸರು ಪ್ರಸ್ತಾಪಿಸದಂತೆ ಆಕ್ಷೇಪಿಸಿದಾಗ, ಹೆಸರು ಪ್ರಸ್ತಾಪಿಸಿದೇ ಚರ್ಚೆ ನಡೆಸುವುದು ಸಾಧ್ಯವೇ ಎಂದು ಮತ್ತೊಂದು ಗುಂಪಿನವರು ಪ್ರಶ್ನಿಸಿದರು. ಇದರಿಂದ ಸಭೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಸಭಿಕರು ಪರಸ್ಪರ ವಾದಕ್ಕಿಳಿದರು. ಪೊಲೀಸರು ಹಾಗೂ ಸ್ಥಳೀಯ ಮುಖಂಡರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತು ನ್ಯಾಯಾಂಗ ಬಂಧನದಲ್ಲಿರುವ ಶಿವಮೂರ್ತಿ ಮುರುಘಾ ಶರಣರು ಪೀಠ ತ್ಯಾಗ ಮಾಡದ ಹಿನ್ನೆಲೆಯಲ್ಲಿ ಮುರುಘಾಮಠದ ಉಳಿವಿಗಾಗಿ ವೀರಶೈವ ಲಿಂಗಾಯತ ಸಮಾಜದ ಪ್ರಮುಖರು ಸಭೆಯಲ್ಲಿ ಹಲವು ವಿಚಾರಗಳನ್ನು ಚರ್ಚಿಸಿದರು. ಹೊಳಲ್ಕೆರೆಯ ಮಾಜಿ ಶಾಸಕ ರಮೇಶ, ಸಮುದಾಯದ ಮುಖಂಡರಾದ ಕೆ.ವಿ.ಪ್ರಭಾಕರ್, ಷಣ್ಮುಖಪ್ಪ, ವಿಜಯಕುಮಾರ್ ಸೇರಿ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.

ವೀರಶೈವ ಸಮಾಜದ ಮುಖಂಡ ಸೈಟ್ ಬಾಬು ಮಾತನಾಡಿ, ಮುರುಘಾ ಮಠದ ಪರಂಪರೆ, ಸಂಸ್ಕೃತಿ ಉಳಿಯಬೇಕು. ಮಠಕ್ಕೆ ಹೊಸ‌ ಸ್ವಾಮೀಜಿ ನೇಮಕ ಆಗಬೇಕು. ಮುರುಘಾ ಮಠದಲ್ಲಿ ಈಗಿರುವ ಸಮಿತಿಗಳು ರದ್ದಾಗಬೇಕು. ನಾವೆಲ್ಲಾ ಹೋಗಿ ಮಠದಲ್ಲಿದ್ದವರನ್ನು ಹೊರ ಹಾಕೋಣ‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಏಕಾಂತಯ್ಯ ಪೊಲೀಸರ ವರ್ತನೆಯ ಬಗ್ಗೆ ಆಕ್ಷೇಪಿಸಿದರು. ಬಂದೋಬಸ್ತ್​​ಗಾಗಿ ನಾವು ಪೊಲೀಸರಿಗೆ ಮನವಿ ಮಾಡಿದ್ದೆವು. ಆದರೆ ಪೊಲೀಸರು ಸಭೆಯಲ್ಲಿ ಗೊಂದಲ‌ ಸೃಷ್ಟಿಗೆ ಅವಕಾಶ ನೀಡಿದ್ದಾರೆ. ಮುರುಘಾಶ್ರೀ ಪರ ಪೊಲೀಸರು ಕೆಲಸ‌ ಮಾಡುತ್ತಿದ್ದಾರೆ. ಸ್ಥಳಕ್ಕೆ ಎಸ್​ಪಿ ಬರುವವರೆಗೂ ಸಭೆ ಮುಂದುವರಿಸುವುದಿಲ್ಲ ಎಂದು ಪಟ್ಟು ಹಿಡಿದರು. ಕೊನೆಗೆ ಸ್ಥಳೀಯ ಮುಖಂಡರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಮುರುಘಾ ಮಠಕ್ಕೆ ಹೊಸ ಪೀಠಾಧ್ಯಕ್ಷರು ಬೇಕು

ಚಿತ್ರದುರ್ಗ: ಪೊಕ್ಸೋ ಪ್ರಕರಣದಲ್ಲಿ ಜೈಲು ಸೇರಿರುವ ಮುರುಘಾ ಮಠದ ಹಾಲಿ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರನ್ನು ಪದಚ್ಯುತಿಗೊಳಿಸಿ, ಹೊಸ ಪೂರ್ಣಕಾಲೀನ ಪೀಠಾಧ್ಯಕ್ಷರನ್ನು ಸರ್ಕಾರವೇ ಆಯ್ಕೆ ಮಾಡಬೇಕು ಎಂದು ಮನವಿ ಸಲ್ಲಿಸಲು ಮಾಜಿ ಸಚಿವ ಏಕಾಂತಯ್ಯ ನೇತೃತ್ವದ ಸಭೆ ನಿರ್ಧರಿಸಿತು. ಪ್ರಸ್ತುತ ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಪೀಠಾಧ್ಯಕ್ಷರ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ಸ್ಥಿತಿಯಿದೆ. ಮಠದ ಧಾರ್ಮಿಕ, ಆಡಳಿತಾತ್ಮಕ ಚಟುವಟಿಕೆಗೆ ಅಡೆತಡೆ ಆಗಿದೆ. ಇಂಥ ಸಂದರ್ಭದಲ್ಲಿ ಹೊಸ ಪೀಠಾಧ್ಯಕ್ಷರ ನೇಮಕ ಅಗತ್ಯವಾಗಿದೆ. ಸರ್ಕಾರವು ಇದನ್ನು ವಿಶೇಷ ಸಂದರ್ಭ ಎಂದು ಪರಿಗಣಿಸಿ ಕ್ರಮಕೈಗೊಳ್ಳಬೇಕು ಎಂದು ಸಭೆಯಲ್ಲಿ ಹಲವು ಅಭಿಪ್ರಾಯಪಟ್ಟರು.

ಚಿತ್ರದುರ್ಗದ ಎಸ್.ನಿಜಲಿಂಗಪ್ಪ ಸ್ಮಾರಕ ಆವರಣದಲ್ಲಿ ನಡೆದ ವೀರಶೈವ ಲಿಂಗಾಯತ ಸಮಾಜದ ಸಭೆಯ ನಂತರ ಮಾತನಾಡಿದ ಅವರು, ಸರ್ಕಾರ ಮತ್ತು ನ್ಯಾಯಾಲಯಕ್ಕೆ ಹೊಸ ಪೀಠಾಧ್ಯಕ್ಷೆ ಬಗ್ಗೆ ತೀರ್ಮಾನ ಮಾಡಲು ಅಧಿಕಾರವಿದೆ. ಕಾನೂನಾತ್ಮಕ ಅಥವಾ ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿಯನ್ನು ಮುಖತಃ ಭೇಟಿ ಮಾಡಿ ಪರಿಸ್ಥಿತಿ ವಿವರಿಸಲು ತೀರ್ಮಾನಿಸಿದ್ದೇವೆ. ಈಗಿನ ಪೀಠಾದ್ಯಕ್ಷರನ್ನು ವಜಾಗೊಳಿಸಿ ಹೊಸಬರ ನೇಮಿಸಬೇಕು ಎಂದು ಆಗ್ರಹಿಸಿದರು.

ಒಂದು ವೇಳೆ ಶಿವಮೂರ್ತಿ ಶರಣರು ನಿರ್ದೋಷಿಯಾಗಿ ಹೊರ ಬಂದರೆ ಏನು ಮಾಡುವಿರಿ ಎಂಬ ಪ್ರಶ್ನೆಗೆ ಉತ್ತರಿಸಲು ಅವರು ಒಪ್ಪಲಿಲ್ಲ. ಈ ಮೊದಲು ಶಿವಮೂರ್ತಿ ಶರಣರೇ ಒಬ್ಬರನ್ನು ಉತ್ತರಾಧಿಕಾರಿಗಾಗಿ ನೇಮಿಸಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈ ಘೋಷಣೆ ಕಾನೂನು ಪ್ರಕಾರ ಆಗಿದೆಯೇ ಇಲ್ಲವೇ ನೋಡಬೇಕು. ಮುರುಘಾಶ್ರೀ ಉತ್ತರಾಧಿಕಾರಿ ನೇಮಿಸಿದ ಬಗ್ಗೆ ನಾವು ಚಿಂತನೆ ಮಾಡಿಲ್ಲ ಎಂದರು.

Published On - 2:47 pm, Thu, 29 September 22

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ