ಯಾವುದೇ ಹಗರಣ ಮಾಡಿಲ್ಲವೆಂದು ಸುಧಾಕರ್ ಆಣೆ ಪ್ರಮಾಣ ಮಾಡ್ತಾರಾ? ಪ್ರದೀಪ್ ಈಶ್ವರ್ ಸವಾಲ್

| Updated By: ರಮೇಶ್ ಬಿ. ಜವಳಗೇರಾ

Updated on: Mar 25, 2024 | 3:31 PM

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ದಿನ ದಿನದಿಂದಕ್ಕೆ ರಂಗೇರುತ್ತಿದೆ. ಇದರ ಮಧ್ಯೆ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ಸಹ ಜೋರಾಗಿವೆ. ಅದರಲ್ಲೂ ಮುಖ್ಯವಾಗಿ ಈ ಬಾರಿ ಲೋಕಸಭಾ ಎಲೆಕ್ಷನ್ ಮಧ್ಯ ರಾಜ್ಯ ರಾಜಕೀಯದಲ್ಲಿ ಮತ್ತೆ ಆಣೆ ಪ್ರಮಾಣ ಮುನ್ನೆಲೆಗೆ ಬಂದಿದೆ.

ಯಾವುದೇ ಹಗರಣ ಮಾಡಿಲ್ಲವೆಂದು ಸುಧಾಕರ್ ಆಣೆ ಪ್ರಮಾಣ ಮಾಡ್ತಾರಾ? ಪ್ರದೀಪ್ ಈಶ್ವರ್ ಸವಾಲ್
Follow us on

ಬೆಂಗಳೂರು/ಚಿಕ್ಕಬಳ್ಳಾಪುರ, (ಮಾರ್ಚ್ 25): ವಿಧಾನಸಭಾ ಚುನಾವಣೆ ಸೋಲುಕಂಡಿರುವ ಮಾಜಿ ಸಚಿವ ಡಾ.ಕೆ ಸುಧಾಕರ್ (Dr K Sudhakar) ಅವರಿಗೆ ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಟಿಕೆಟ್ ನೀಡಲಾಗಿದೆ. ಇದರ ಬೆನ್ನಲ್ಲೇ ರಾಜಕೀಯ ಎದುರಾಳಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರಪ್ಪ (Congress MLA Pradeep Eshwar) ಅವರು ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅದರಲ್ಲೂ ಸುಧಾಕರ್ ವಿರುದ್ಧ ಕೆಲ ಗಂಭೀರ ಆರೋಪಗಳನ್ನು ಮಾಡಿರುವ ಪ್ರದೀಪ್ ಈಶ್ವರ್, ನಾನು ಹಗರಣ ಮಾಡಿಲ್ಲ ಎಂದು ನಾಳೆ ನಂದಿಭೋಗ ನಂದೀಶ್ವರ ದೇಗುಲದಲ್ಲಿ ಆಣೆ ಪ್ರಮಾಣ ಮಾಡುತ್ತೇನೆ. ಸುಧಾಕರ್ ಪ್ರಮಾಣ ಮಾಡುವುದಕ್ಕೆ ರೆಡಿ ಇದ್ದಾರಾ? ಎಂದು ಸವಾಲು ಹಾಕಿದ್ದಾರೆ.

ಇಂದು(ಮಾರ್ಚ್ 25) ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, IT, ED ಬಿಟ್ಟು ಕಾಟ ಕೊಡುತ್ತೀರಾ ಸುಧಾಕರ್​ ಅವರೇ, ನಾನು ರೆಡಿ ಇದ್ದೇನೆ. ನಾನು ಹಗರಣ ಮಾಡಿಲ್ಲ ಎಂದು ಪ್ರಮಾಣ ಮಾಡುತ್ತೇನೆ. ನಾಳೆ ನಂದಿಭೋಗ ನಂದೀಶ್ವರ ದೇಗುಲದಲ್ಲಿ ಆಣೆ ಮಾಡುತ್ತೇನೆ. ಸುಧಾಕರ್ ಪ್ರಮಾಣ ಮಾಡುವುದಕ್ಕೆ ರೆಡಿ ಇದ್ದಾರಾ ಎಂದು ಆಣೆ ಪ್ರಮಾಣದ ಸವಾಲೆಸೆದರು.

ಇದನ್ನೂ ಓದಿ: ಮಂಡ್ಯ-ಚನ್ನಪಟ್ಟಣ ಜೆಡಿಎಸ್ ಮುಖಂಡರ ನಡುವೆ ಗಲಾಟೆ: ಕುಮಾರಣ್ಣನ ಚಿತ್ತ ಎತ್ತ..?

ಡಾ.ಕೆ.ಸುಧಾಕರ್ ನೂರಾರು ಕೋಟಿ ಆಸ್ತಿ ಮಾಡಿದ್ದಾರೆ. ತಂದೆ ಬಾಮೈದನ ಹೆಸರಲ್ಲಿ ನೂರಾರು ಎಕರೆ ರಿಜಿಸ್ಟರ್ ಆಗಿದೆ. ಸುಧಾಕರ್ ನೂರಾರು ಕೋಟಿ ರೂಪಾಯಿ ಮಾಡಿದ್ದಾರೆ. ಅನೇಕ ಕಂಪನಿಗಳಿಗೆ ಸುಧಾಕರ್​ ಹೂಡಿಕೆ ಮಾಡಿದ್ದಾರೆ. ಶ್ರೀಲಂಕಾದಲ್ಲಿ ಸುಧಾಕರ್ ಅವರ ಪ್ರಾಪರ್ಟಿ ಇದೆ. ಬೆಂಗಳೂರಿನ ಸದಾಶಿವನಗರದಲ್ಲಿ ಅವರ​​ ಮನೆ ಇದೆ. ಇದೆಲ್ಲವೂ ಎಲ್ಲಿಂದ ಬಂದಿದೆ ಎಂದು ಅವರು ಹೇಳಲಿ ಎಂದು ವಾಗ್ದಾಳಿ ನಡೆಸಿದರು.

ಸುಧಾಕರ್​ ಕಾಂಗ್ರೆಸ್ ಸೇರಲು ಬಹಳ ಪ್ರಯತ್ನ ಮಾಡಿದ್ರು. ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಬರಲು ಬಹಳ ಪ್ರಯತ್ನ ಮಾಡಿದ್ದರು. ಕೆಲವು ನಾಯಕರ ಜೊತೆ ಸಿಎಂ, ಡಿಸಿಎಂ ಭೇಟಿ ಮಾಡಿಸಿ ಎಂದು ಹೇಳಿದ್ದರು. ಆದರೆ ಕೊನೆಗೆ ಸುಧಾಕರ್​ ಏನು ಯೋಚನೆ ಮಾಡಿದ್ರೋ ಗೊತ್ತಿಲ್ಲ. ಬಿಜೆಪಿ ಬಿಟ್ಟರೆ ಐಟಿ, ಇಡಿ ರೇಡ್ ಆಗಬಹುದು ಎಂದು ಹೆದರಿದ್ದಾರೆ. ಸುಧಾಕರ್ ಟಾರ್ಚರ್​ನಿಂದಲೇ ನಾನು ಶಾಸಕನಾಗಿದ್ದೇನೆ. ಸುಧಾಕರ್​ಗೆ ಮತ ಹಾಕಿದ್ರೆ ಪ್ರಜಾಪ್ರಭುತ್ವಕ್ಕೆ ಮಾರಕ. ಸಾಮಾನ್ಯ ಜನರಿಗೆ ಸುಧಾಕರ್ ತೊಂದರೆ ಕೊಡುತ್ತಾರೆ. . 1 ಮಾಸ್ಕ್​ಗೆ 450 ರೂ. ಕೊಟ್ಟು ಖರೀದಿಸಿ ಹಗರಣ ಮಾಡಿದ್ದಾರೆ. ಕೊವಿಡ್ ಹಗರಣದ ತನಿಖೆ ಆಳವಾಗಿ ನಡೆಯುತ್ತಿದೆ. ಬಿಜೆಪಿ ಶಾಸಕ ಎಸ್​.ಆರ್.ವಿಶ್ವನಾಥ್ ಅವರು ಸುಧಾಕರ್​ ಪರ ಕೆಲಸ ಮಾಡಲ್ಲ ಅಂದಿದ್ದಾರೆ ಎಂದು ಪ್ರದೀಶ್ ಈಶ್ವರ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.