ಮಂಗಳೂರು: ಬೋಳಂತೂರು ಗಣೇಶೋತ್ಸವ ಮೆರವಣಿಗೆಯಲ್ಲಿ ಹಿಂದೂ ಮುಸ್ಲಿಂ -ಸೌಹಾರ್ದತೆಗೆ ಬ್ರೇಕ್!

ಕೋಮು ಸೂಕ್ಷ್ಮ ಪ್ರದೇಶಗಳನ್ನೊಳಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬೋಳಂತೂರು ಗಣೇಶೋತ್ಸವ ಮೆರವಣಿಗೆ ಈ ಬಾರಿ ಚರ್ಚೆಗೆ ಗ್ರಾಸವಾಗಿದೆ. ಸಿಹಿ ತಿಂಡಿ ಹಾಗೂ ಪಾನೀಯ ಹಂಚದಂತೆ ಗಣೇಶೋತ್ಸವ ಆಯೋಜಕರು ಸಮೀಪದ ಮಸೀದಿಗೆ ಪತ್ರ ಬರೆದಿದ್ದು, ಚರ್ಚೆಗೆ ಗ್ರಾಸವಾಗಿದೆ. ಪತ್ರ ಬರೆಯಲು ಕಾರಣವೇನು? ಪತ್ರದಲ್ಲೇನಿತ್ತು ಇತ್ಯಾದಿ ವಿವರ ಇಲ್ಲಿದೆ.

ಮಂಗಳೂರು: ಬೋಳಂತೂರು ಗಣೇಶೋತ್ಸವ ಮೆರವಣಿಗೆಯಲ್ಲಿ ಹಿಂದೂ ಮುಸ್ಲಿಂ -ಸೌಹಾರ್ದತೆಗೆ ಬ್ರೇಕ್!
ಗಣೇಶೋತ್ಸವ ಮೆರವಣಿಗೆಯ ಸಾಂದರ್ಭಿಕ ಚಿತ್ರ ಮತ್ತು ಬೋಳಂತೂರು ಗಣೇಶೋತ್ಸವ ಆಯೋಜಕರು ಬರೆದಿದ್ದು ಎನ್ನಲಾದ ಪತ್ರದ ಪ್ರತಿ
Follow us
| Updated By: ಗಣಪತಿ ಶರ್ಮ

Updated on: Sep 09, 2024 | 10:56 AM

ಮಂಗಳೂರು, ಸೆಪ್ಟೆಂಬರ್ 9: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬೋಳಂತೂರು ಗಣೇಶೋತ್ಸವದಲ್ಲಿ ಹಿಂದೂ ಮುಸ್ಲಿಂ -ಸೌಹಾರ್ದತೆಗೆ ಬ್ರೇಕ್ ಬಿದ್ದಿದೆ! ಕೋಮು ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿರುವ ಜಿಲ್ಲೆಯ ಈ ಭಾಗದಲ್ಲಿ ಕಳೆದ ವರ್ಷ ಗಣೇಶೋತ್ಸವ ಮೆರವಣಿಗೆ ವೇಳೆ ಮುಸ್ಲಿಮರು ಸಿಹಿ ತಿಂಡಿ, ಪಾನೀಯ ಹಂಚಿದ್ದರು. ಆ ಮೂಲಕ ಸೌಹಾರ್ದತೆ ಮೆರೆದಿದ್ದು ಸುದ್ದಿಯಾಗಿತ್ತು. ಆದರೆ, ಈ ಬಾರಿ ಕಳೆದ ವರ್ಷದಂತೆ ಸಿಹಿ ತಿಂಡಿ, ಪಾನೀಯ ಹಂಚಬಾರದು ಎಂದು ಗಣೇಶೋತ್ಸವ ಆಯೋಜಿಸುವ ಸಮಿತಿಯವರೇ ಮುಸ್ಲಿಂ ಸಮುದಾಯದವರಿಗೆ ಪತ್ರ ಬರೆದಿದ್ದಾರೆ.

ಮಸೀದಿಯೊಂದಕ್ಕೆ ಗಣೇಶೋತ್ಸವ ಆಯೋಜಕರು ಬರೆದ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕಳೆದ ವರ್ಷ ಮುಸಲ್ಮಾನ ಸಮಾಜ ಬಾಂಧವರು ಹಂಚಿದ ಸಿಹಿ ತಿಂಡಿ ತಿಂದು ನಮ್ಮ ಕೆಲವು ಮಕ್ಕಳು ಅಸ್ವಸ್ಥರಾಗಿದ್ದಾರೆ. ಹೀಗಾಗಿ ಈ ಬಾರಿ ಗಣೇಶೋತ್ಸವ ಮೆರವಣಿಗೆಯಲ್ಲಿ ಸಿಹಿ ತಿಂಡಿ, ತಂಪು ಪಾನೀಯ ಹಂಚಬೇಡಿ ಎಂದು ಶ್ರೀ ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿಯಿಂದ ಬೋಳಂತೂರು ಮಸೀದಿಗೆ ಪತ್ರ ಬರೆದು ಮನವಿ ಮಾಡಲಾಗಿದೆ.

ಕಳೆದ ವರ್ಷ ಮಾತ್ರವಲ್ಲದೆ, ಕಳೆದ ಕೆಲವು ವರ್ಷಗಳಿಂದ ಗಣೇಶೋತ್ಸವ ಮೆರವಣಿಗೆ ವೇಳೆ ಮುಸ್ಲಿಂ ಸಮಾಜದವರು ಸಿಹಿ ತಿಂಡಿ ಹಂಚುತ್ತಿರುವುದು ನಡೆದುಬಂದಿದೆ. ಆದರೆ, ಈ ಬಾರಿ ತಂಪು ಪಾನೀಯ, ಸಿಹಿ ತಿಂಡಿ ಸೇವಿಸಿದ ಹಿಂದೂ ಮಕ್ಕಳು ಅಸ್ವಸ್ಥರಾದ ಆರೋಪದಲ್ಲಿ ಅದಕ್ಕೆ ಅವಕಾಶ ನಿರಾಕರಿಸಲಾಗಿದೆ. ಇದರಿಂದಾಗಿ ಎರಡು ಸಮುದಾಯಗಳ ನಡುವಣ ಸಾಮರಸ್ಯ ಕೆಡುವ ಆತಂಕವೂ ಎದುರಾಗಿದೆ.

ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿಯು ಮಸೀದಿಗೆ ಬರೆದಿರುವ ಪತ್ರದ ಬಗ್ಗೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಯಾಗುತ್ತಿದೆ.

ಇದನ್ನೂ ಓದಿ: ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಬಾಲಕಿ; ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ

ವೈರಲ್ ಆದ ಪತ್ರದಲ್ಲೇನಿದೆ?

‘‘ಕಳೆದ ವರ್ಷದ ಸಾರ್ವಜನಿಕ ಗಣೇಶೋತ್ಸವದ ಮೆರವಣಿಗೆ ಸಂದರ್ಭದಲ್ಲಿ ಪಾನೀಯ ಮತ್ತು ಸಿಹಿತಿಂಡಿ ವಿತರಣೆಯನ್ನು ತಮ್ಮ ಸಮಾಜ ಬಾಂಧವರು ನೀಡಿರುತ್ತಾರೆ. ಅದನ್ನು ಸ್ವೀಕರಿಸಿದ ನಮ್ಮ ಕೆಲವು ಮಕ್ಕಳು ಅಸ್ವಸ್ಥರಾಗಿರುತ್ತಾರೆ. ಇದರಿಂದ ನಮ್ಮ ಸಾಮರಸ್ಯ ಕೆಡುತ್ತದೆ. ಇದರ ಮುಂಜಾಗೃತೆಗಾಗಿ ತಮ್ಮಲ್ಲಿ ಮನವಿ ಮಡುವುದೇನೆಂದರೆ, ಇನ್ನು ಮುಂದಕ್ಕೆ ಶೋಭಾಯಾತ್ರೆಯಲ್ಲಿ ತಮ್ಮ ಸಮಾಜ ಬಾಂಧವರು ಯಾವುದೇ ಪಾನೀಯ ಹಾಗೂ ತಿಂಡಿ ತಿನಸುಗಳನ್ನು ನೀಡಬಾರದಾಗಿ ಈ ಮೂಲಕ ವಿನಂತಿಸುತ್ತೇವೆ. ಆದ್ದರಿಂದ ನಮ್ಮ ಶೋಭಾಯಾತ್ರೆಗೆ ನಿಮ್ಮ ಎಲ್ಲಾ ಸಮಾಜ ಬಾಂಧವರು ಮೇಲಿನ ವಿಷಯಕ್ಕೆ ಸಹಕರಿಸುವಂತೆ ನಿಮ್ಮಲ್ಲಿ ಈ ಮೂಲಕ ಮನವಿ ಮಾಡುತ್ತೇವೆ’’ ಎಂದು ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿ ಬರೆದಿದ್ದು ಎನ್ನಲಾದ ವೈರಲ್ ಆಗಿರುವ ಪತ್ರದಲ್ಲಿ ಉಲ್ಲೇಖವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ