ಮಂಗಳೂರಿನಲ್ಲಿ ಕೆಂಡದಂತಹ ಬಿಸಿಲು: ಕರಾವಳಿ ಕರ್ನಾಟಕಕ್ಕೆ ಶಾಖಾಘಾತದ ಎಚ್ಚರಿಕೆ

ಮಂಗಳೂರಿನಲ್ಲಿ ತಾಪಮಾನ 40 ಡಿಗ್ರಿ ಸೆಲ್ಶಿಯಸ್ ದಾಟುತ್ತಿದ್ದು, ಆರೋಗ್ಯ ಇಲಾಖೆ ಶಾಖಾಘಾತದ ಎಚ್ಚರಿಕೆ ನೀಡಿದೆ. ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬಿಸಿಲಿಗೆ ಬರದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದ್ದು, ಹತ್ತಿ ಬಟ್ಟೆ ಹಾಗೂ ಹೆಚ್ಚಿನ ನೀರಿನ ಬಳಕೆಗೆ ವೈದ್ಯರು ಸಲಹೆ ನೀಡಿದ್ದಾರೆ. ಬಿಸಿಲಿನ ತಾಪ ಮೀನುಗಾರಿಕೆ ಮೇಲೂ ಪ್ರಭಾವ ಬೀರಿದೆ.

ಮಂಗಳೂರಿನಲ್ಲಿ ಕೆಂಡದಂತಹ ಬಿಸಿಲು: ಕರಾವಳಿ ಕರ್ನಾಟಕಕ್ಕೆ ಶಾಖಾಘಾತದ ಎಚ್ಚರಿಕೆ
ದಕ್ಷಿಣ ಕನ್ನಡ ತಾಪಮಾನ ಏರಿಕೆ (ಸಾಂದರ್ಭಿಕ ಚಿತ್ರ)
Edited By:

Updated on: Apr 03, 2026 | 12:01 PM

ಮಂಗಳೂರು, ಏಪ್ರಿಲ್ 3: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಾದ್ಯಂತ ರಣಬಿಸಿಲು ಜನರನ್ನು ಹೈರಾಣಾಗಿಸಿದೆ. ದಿನದಿಂದ ದಿನಕ್ಕೆ ತಾಪಮಾನ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಸಾರ್ವಜನಿಕರು ಉರಿ ಸೆಕೆಗೆ ಬೆವೆತು ಹೋಗಿದ್ದಾರೆ. ಈ ನಡುವೆ ಉಷ್ಣಾಂಶ ಹೆಚ್ಚಳದಿಂದಾಗಿ ‘ಶಾಖಾಘಾತ (Heat Stroke)’ ಸಂಭವಿಸುವ ಸಾಧ್ಯತೆ ಇರುವ ಬಗ್ಗೆ ಆರೋಗ್ಯ ಇಲಾಖೆ ತೀವ್ರ ಮುನ್ನೆಚ್ಚರಿಕೆ ನೀಡಿದೆ.

ಒಂದು ಪ್ರದೇಶದ ಸಾಮಾನ್ಯ ಉಷ್ಣತೆಗಿಂತ 4.5 ಡಿಗ್ರಿ ಸೆಲ್ಶಿಯಸ್​ನಿಂದ 6.4 ಡಿಗ್ರಿ ಸೆಲ್ಶಿಯಸ್​​ನಷ್ಟು ತಾಪಮಾನ ಹೆಚ್ಚಾದಲ್ಲಿ ಶಾಖಾಘಾತ ಸಂಭವಿಸುತ್ತದೆ. ದಕ್ಷಿಣ ಕನ್ನಡದಲ್ಲಿ ಈಗಾಗಲೇ ಉಷ್ಣಾಂಶವು 40 ಡಿಗ್ರಿ ಸೆಲ್ಶಿಯಸ್ ಆಸುಪಾಸಿನಲ್ಲಿದೆ. ಇದರ ಪರಿಣಾಮವಾಗಿ ಮೈಮೇಲೆ ಬೆವರುಸಾಲೆ, ಮಾಂಸಖಂಡಗಳ ಸೆಳೆತ, ತಲೆಸುತ್ತುವಿಕೆ ಉಂಟಾಗಬಹುದು. ತೀವ್ರತರದ ಹಂತದಲ್ಲಿ ಇದು ಎದೆಯ ಸೆಳೆತ ಹಾಗೂ ಹೃದಯಾಘಾತಕ್ಕೂ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಆರೋಗ್ಯ ಇಲಾಖೆಯ ಮಾರ್ಗಸೂಚಿಯಲ್ಲಿ ಏನೇನಿದೆ?

  • ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಅನಗತ್ಯವಾಗಿ ಬಿಸಿಲಿಗೆ ಹೋಗುವುದನ್ನು ತಪ್ಪಿಸಿ.
  • ಸಾಕಷ್ಟು ನೀರು ಕುಡಿಯಿರಿ. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೋನೇಟೆಡ್ ಪಾನೀಯಗಳಿಂದ ದೂರವಿರಿ.
  • ಹಗುರವಾದ, ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ, ಟೋಪಿ ಮತ್ತು ಕನ್ನಡಕ ಬಳಸಿ.
  • ಮಕ್ಕಳನ್ನು ಮಧ್ಯಾಹ್ನದ ಬಿಸಿಲಿನಲ್ಲಿ ಆಟವಾಡಲು ಬಿಡಬೇಡಿ.

ಮೀನುಗಾರಿಕೆಗೂ ಬಿಸಿಲ ಬಿಸಿ

ಬಿಸಿಲಿನ ತಾಪ ಕೇವಲ ಮನುಷ್ಯರಿಗಷ್ಟೇ ಅಲ್ಲ, ಮೀನುಗಾರಿಕೆಗೂ ಹೊಡೆತ ನೀಡಿದೆ. ಸಮುದ್ರದ ಮೇಲ್ಮೈ ನೀರು ಬಿಸಿಯಾಗುತ್ತಿರುವುದರಿಂದ ಮೀನುಗಳು ಸಮುದ್ರದಾಳಕ್ಕೆ ಹೋಗಿ ಸೇರುತ್ತಿವೆ. ಇದರಿಂದಾಗಿ ಮೀನುಗಾರರ ಬಲೆಗೆ ಮೀನುಗಳು ಬೀಳುತ್ತಿಲ್ಲ, ಇದು ಮೀನುಗಾರರನ್ನು ಆತಂಕಕ್ಕೆ ತಳ್ಳಿದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಇಂದು ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ; 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​!

ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಶಾಖಾಘಾತಕ್ಕೆ ಒಳಗಾದವರಿಗೆ ಚಿಕಿತ್ಸೆ ನೀಡಲು ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಜನರು ಅತೀ ಹೆಚ್ಚಿನ ಮುಂಜಾಗ್ರತೆ ವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಸೂಚಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:00 pm, Fri, 3 April 26

Follow Us