ಕೋರ್ಟ್ ಮೆಟ್ಟಿಲೇರಿದ್ದ 15 ದಂಪತಿ ಮತ್ತೆ ಒಂದಾದ ಕ್ಷಣ: ಅಪರೂಪದ ಘಟನೆಗೆ ಸಾಕ್ಷಿಯಾದ ಧಾರವಾಡ ಕೋರ್ಟ್
ಕೌಟುಂಬಿಕ ಕಲಹ ಸೇರಿ ವಿವಿಧ ಕಾರಣಗಳಿಗೆ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದ 15 ದಂಪತಿ ಎಲ್ಲವನ್ನೂ ಮರೆತು ಮತ್ತೆ ಹೊಸ ಜೀವನಕ್ಕೆ ಕಾಲಿಟ್ಟಿರುವಂತಹ ಘಟನೆ ಧಾರವಾಡ ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದಿದೆ. ಇದೇ ರೀತಿಯಾಗಿ ಇತ್ತ ಕೋಲಾರದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಆರು ದಂಪತಿ ಮತ್ತೆ ಒಂದಾದರು.

ಧಾರವಾಡ, ಜುಲೈ 11: ಕೌಟುಂಬಿಕ ಕಲಹ, ವರದಕ್ಷಿಣೆ ಕಿರುಕುಳ ಸೇರಿದಂತೆ ವಿವಿಧ ಕಾರಣದಿಂದ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ದ 15 ದಂಪತಿ (Couples) ನ್ಯಾಯಾಧೀಶರ ಮನವೊಲಿಕೆ ಮತ್ತು ಸಮಾಲೋಚನೆಯ ಬಳಿಕ ಮತ್ತೆ ಒಂದಾದರು. ಎಲ್ಲವನ್ನೂ ಮರೆತು ಮತ್ತೊಮ್ಮೆ ಹೊಸ ಜೀವನಕ್ಕೆ ಜೋಡಿಗಳು ಕಾಲಿಟ್ಟಿದ್ದು, ಈ ಅಪರೂಪದ ಘಟನೆಗೆ ಧಾರವಾಡ (dharwad) ಜಿಲ್ಲಾ ನ್ಯಾಯಾಲಯ ಇಂದು ಸಾಕ್ಷಿಯಾಯಿತು.
ಮತ್ತೆ ಒಂದಾದ 15 ದಂಪತಿ
ದೂರಾಗುವ ಮನಸ್ಸು ಮಾಡಿ ನ್ಯಾಯಾಲಯಕ್ಕೆ ಬಂದಿದ್ದ ಜೋಡಿಗಳು ಇಂದು ಪರಸ್ಪರ ಒಂದಾದರು. ಧಾರವಾಡ ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ನಲ್ಲಿ ಹಲವಾರು ವರ್ಷಗಳಿಂದ ದೂರವಿದ್ದ 15 ದಂಪತಿ ಮತ್ತೆ ಒಂದಾದರು. ಆ ಮೂಲಕ ಹೊಸ ಜೀವನ ಆರಂಭಿಸುವ ಸಂಕಲ್ಪ ಮಾಡಿದರು. ಮರಳಿ ಒಂದಾದ ಜೋಡಿಗಳಿಗೆ ಮುಂದೆ ಉತ್ತಮ ಬದುಕು ಸಾಗಿಸಿ ಎಂದು ನ್ಯಾಯಾಧೀಶ ನಾಗರಾಜಪ್ಪ, ಎ. ಕೆ. ಶುಭ ಹಾರೈಸಿದರು.
ಇದನ್ನೂ ಓದಿ: ಧಾರವಾಡ ಕೃಷಿ ವಿವಿ ಸಂಶೋಧನೆಗೆ ಜಾಗತಿಕ ಮನ್ನಣೆ: ಇಂಡೋನೇಷ್ಯಾಗೆ ಗೋಧಿ ಬೀಜ ರಫ್ತು
ದಾಂಪತ್ಯ ಕಲಹ, ವೈಮನಸ್ಸು ಹಾಗೂ ಕುಟುಂಬದ ಭಿನ್ನಾಭಿಪ್ರಾಯಗಳಿಂದ ವರ್ಷಗಳ ಕಾಲ ಈ ದಂಪತಿಗಳು ದೂರವಾಗಿದ್ದರು. ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ನ್ಯಾಯಾಧೀಶರು ಸಮಾಲೋಚನೆ, ಮನವೊಲಿಕೆ ಹಾಗೂ ದಾಂಪತ್ಯ ಜೀವನದ ಬಗ್ಗೆ ಅರ್ಥೈಸುವಿಕೆಯ ಮೂಲಕ 15 ಜೋಡಿಗಳು ಮತ್ತೆ ಒಂದಾಗುವಂತೆ ಮಾಡಿದರು. ಬಳಿಕ ಎಲ್ಲವನ್ನು ಮರೆತು ದಂಪತಿ ಪರಸ್ಪರ ಹಾರ ಬದಲಾಯಿಸಿಕೊಂಡು ಹೊಸ ಬದುಕಿಗೆ ಕಾಲಿಟ್ಟರು. ಇದರಿಂದಾಗಿ ನ್ಯಾಯಾಲಯದ ಆವರಣ ಕೆಲ ಕಾಲ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು. ಪ್ರತಿಯೊಂದು ಜೋಡಿಯ ಹಿಂದೆಯೂ ಒಂದೊಂದು ನೋವಿನ ಕಥೆಯಿದ್ದರೂ, ಅಂತಿಮವಾಗಿ ಎಲ್ಲರೂ ಹೊಸ ಜೀವನದತ್ತ ಮುಖ ಮಾಡಿದರು.
ಕೋಲಾರದಲ್ಲಿ ಲೋಕ ಅದಾಲತ್ಗೆ ಭರ್ಜರಿ ರೆಸ್ಪಾನ್ಸ್: ಒಂದಾದ ಆರು ದಂಪತಿ
ಕೋಲಾರದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ರಾಜಿ ಸಂಧಾನದ ಮೂಲಕ ಆರು ದಂಪತಿ ಒಂದಾದರು. ಇದು ಕಕ್ಷಿದಾರರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ಸಣ್ಣಪುಟ್ಟ ಕಾರಣಗಳಿಗೆ ವಿಚ್ಛೇದನ ಮೊರೆ ಹೋಗಿದ್ದ ದಂಪತಿಗಳು ಪರಸ್ಪರ ಹೂವಿನ ಹಾರ ಬದಲಾಯಿಸಿಕೊಂಡು, ತಮ್ಮ ಕಹಿ ಘಟನೆಗಳನ್ನು ಮರೆತು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಬಾರಿಯ ಲೋಕ ಅದಾಲತ್ನ ವಿಶೇಷ. ಮುಂದಿನ ದಿನಗಳಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕರಣಗಳೇ ಇಲ್ಲದಂತಾಗಲಿ ಎಂಬುದೇ ನಮ್ಮ ಆಶಯ ಎಂದು ಹಿರಿಯ ನ್ಯಾಯಾಧೀಶ ಬಿ. ಎಸ್. ಜಯಶ್ರೀ ಹೇಳಿದ್ದಾರೆ.
ಇದನ್ನೂ ಓದಿ: ಸರ್ಕಾರದ ಕ್ರಮಕ್ಕೆ ಕಂಗಾಲಾದ ವಯೋವೃದ್ಧ ಪಿಂಚಣಿದಾರರು: ಕಚೇರಿಗೆ ಅಲೆದಾಟ
ಒಂದು ಸುಂದರವಾದ ಸಂಸಾರ ನಡೆಸಿ ಸುಖಮಯ ಜೀವನ ನಡೆಸಬೇಕಿದ್ದ ದಂಪತಿ ಯಾವುದೋ ಒಂದು ಕಾರಣಕ್ಕೆ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಗಂಡ-ಹೆಂಡತಿಗೆ ಬುದ್ದಿವಾದ ಹೇಳಿ ಒಂದು ಮಾಡಿರುವುದು ವಿಶೇಷ. ಒಟ್ಟಿನಲ್ಲಿ ಹೀಗೆ ಮತ್ತೆ ಒಂದಾದ ಎಲ್ಲ ದಂಪತಿ ಭವಿಷ್ಯದಲ್ಲಿ ಚೆನ್ನಾಗಿ ಬಾಳಲಿ ಅನ್ನೋದೇ ಎಲ್ಲರ ಆಶಯ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




