ಮಂಗಳೂರು ಪಾಲಿಕೆಯಲ್ಲಿ ನಕಲಿ ತೆರಿಗೆ ನೋಂದಣಿ ಜಾಲ: ಮಧ್ಯವರ್ತಿಯಿಂದ ಲಕ್ಷಾಂತರ ರೂ ದೋಖಾ
ಮಂಗಳೂರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ತೆರಿಗೆ ನೋಂದಣಿಯಲ್ಲಿ ನಕಲಿ ಸರ್ಟಿಫಿಕೇಟ್ ಸೃಷ್ಟಿಸಿ ಲಕ್ಷಾಂತರ ರೂ ದೋಖಾ ಮಾಡುತ್ತಿರುವ ಜಾಲವೊಂದು ಪತ್ತೆ ಆಗಿದೆ. ಈ ಬಗ್ಗೆ ವಂಚನೆಗೊಳಗಾದವರಿಂದ ಪಾಲಿಕೆಗೆ ದೂರು ನೀಡಲಾಗಿದ್ದು, ಪಾಲಿಕೆ ಕೂಡ ಈ ಕುರಿತಾಗಿ ಪೊಲೀಸರಿಗೆ ದೂರು ನೀಡಿದೆ.

ಮಂಗಳೂರು, ಜುಲೈ 03: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಕಲಿ ತೆರಿಗೆ ನೋಂದಣಿ (fake tax scam) ಜಾಲವೊಂದು ಪತ್ತೆ ಆಗಿದ್ದು, ನಕಲಿ ಪ್ರಮಾಣಪತ್ರಗಳನ್ನು (Certificate) ಸೃಷ್ಟಿಸಿ ಲಕ್ಷಾಂತರ ರೂ ವಂಚನೆ ಮಾಡಿರುವಂತಹ ಘಟನೆ ಬೆಳಕಿಗೆ ಬಂದಿದೆ. ಮಹಾನಗರ ಪಾಲಿಕೆಯಿಂದ ನೀಡುವ ಸರ್ಟಿಫಿಕೇಟ್ನ್ನೇ ವಂಚಕರು ಕಂಪ್ಯೂಟರ್ ತಂತ್ರಜ್ಞಾನ ಬಳಸಿ ನಕಲಿ ಮಾಡಿ ವಂಚಿಸಿದ್ದಾರೆ. ಅಷ್ಟೇ ಅಲ್ಲದೆ ಉದ್ದಿಮೆದಾರರಿಂದ ಹಣ ಸಂಗ್ರಹಿಸಿ ಪಾಲಿಕೆಗೆ ಕಟ್ಟದೆ ಕೆಲ ಏಜೆಂಟರು ದೋಖಾ ಮಾಡಿದ್ದಾರೆ. ಸದ್ಯ ಪಾಲಿಕೆಯಿಂದ ಕಂಕನಾಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಈ ನಕಲಿ ಸರ್ಟಿಫಿಕೇಟ್ ಮೇಲ್ನೋಟಕ್ಕೆ ನೋಡಿದರೆ ಯಾವುದೇ ವ್ಯತ್ಯಾಸ ಕಂಡುಬರುತ್ತಿಲ್ಲ. ಆದರೆ ಕೆಲ ಸರ್ಟಿಫಿಕೇಟ್ನಲ್ಲಿ ಯಾರದ್ದೋ ಕ್ಯೂ ಆರ್ ಕೋಡ್ ಬಳಕೆ ಮಾಡಲಾಗಿದ್ದು, ಸ್ಕ್ಯಾನ್ ಮಾಡಿದಾಗ ಬೇರೆ ಉದ್ದಿಮೆದಾರರ ಪರವಾನಗಿ ಪತ್ರ ಲಭ್ಯವಾಗುತ್ತಿದೆ. ಅತ್ತ ಉದ್ದಿಮೆದಾರರು ಇದೇ ಮೂಲ ಪ್ರತಿ ಎಂದು ನಂಬಿದ್ದಾರೆ.
ಇದನ್ನೂ ಓದಿ: ಮನೆಗಳಿಗೆ ಸ್ಟಿಕ್ಕರ್ ಅಂಟಿಸುವುದು ಸಮೀಕ್ಷಾ ಪ್ರಕ್ರಿಯೆಯ ಭಾಗ: ಬಿಬಿಎಂಪಿ ಸ್ಪಷ್ಟನೆ
ಇನ್ನು ಕೆಲ ಸರ್ಟಿಫಿಕೇಟ್ಗಳಲ್ಲಿ ಪರವಾನಗಿ ನವೀಕರಣದ ದಿನಾಂಕಗಳಷ್ಟೇ ಬದಲಾವಣೆ ಮಾಡಲಾಗಿದೆ. ಸುಮಾರು 4,500 ಉದ್ದಿಮೆ ಪರವಾನಗಿಯನ್ನು ನಕಲಿ ಮಾಡಿರುವ ಸಂಶಯ ವ್ಯಕ್ತವಾಗಿದೆ. ಹೀಗಾಗಿ ನಕಲಿ ಸರ್ಟಿಫಿಕೇಟ್ ನೀಡಿ ವಂಚಿಸಿರುವ ಬಗ್ಗೆ ಅನುಮಾನಗಳು ಮೂಡಿದ್ದು, ಸರ್ಟಿಫಿಕೇಟ್ಗಳ ಪರಿಶೀಲನೆಗೆ ಪಾಲಿಕೆ ಆಯುಕ್ತ ರವೀಂದ್ರ ನಾಯಕ್ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ.
ಮಧ್ಯವರ್ತಿ ವಿರುದ್ಧ ದೂರು
ಸದ್ಯ ವಂಚನೆಗೊಳಗಾದವರಿಂದ ಮಂಗಳೂರು ಮಹಾನಗರ ಪಾಲಿಕೆಗೆ ಮಧ್ಯವರ್ತಿ ಪೃಥ್ವಿರಾಜ್ ಶೆಟ್ಟಿ ಎಂಬವರ ವಿರುದ್ಧ ದೂರು ನೀಡಲಾಗಿದೆ. ಕೊಡಲೇ ಎಚ್ವೆತ್ತುಕೊಂಡ ಪಾಲಿಕೆ ಕೂಡ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಪಾಲಿಕೆ ಕಮಿಷನರ್ ರವೀಂದ್ರ ನಾಯಕ್ ಹೇಳಿದ್ದಿಷ್ಟು
ಈ ಕುರಿತಾಗಿ ಮಂಗಳೂರು ಮಹಾನಗರ ಪಾಲಿಕೆ ಕಮಿಷನರ್ ರವೀಂದ್ರ ನಾಯಕ್ ಪ್ರತಿಕ್ರಿಯಿಸಿದ್ದು, ಇಬ್ಬರು ವ್ಯಕ್ತಿಗಳು ಕಚೇರಿಗೆ ಬಂದು ದೂರು ನೀಡಿದ್ದಾರೆ. ಅವರ ಹೆಸರಿನಲ್ಲಿ ಪೃಥ್ವಿರಾಜ್ ಶೆಟ್ಟಿ ಎಂಬ ವ್ಯಕ್ತಿ ನಕಲಿ ಸರ್ಟಿಫಿಕೇಟ್ ಸೃಷ್ಟಿಸಿರುವ ಬಗ್ಗೆ ಹೇಳಿದ್ದಾರೆ. ಅವರು ನೀಡಿದ ಹಣ ದುರುಪಯೋಗ ಮಾಡಿ ನಕಲಿ ಸರ್ಟಿಫಿಕೇಟ್ ನೀಡಿದ್ದಾರೆ. ಮೇಲ್ನೋಟಕ್ಕೆ ಪರಿಶೀಲನೆ ಮಾಡಿದಾಗ ಆಸ್ತಿ ತೆರಿಗೆ ಮತ್ತು ಉದ್ದಿಮೆ ಪರವಾನಗಿ ನಕಲಿ ಮಾಡಿರೋದು ಗೊತ್ತಾಗಿದೆ. ಈ ಬಗ್ಗೆ ನಮ್ಮ ವಲಯ ಆಯುಕ್ತರಿಗೆ ದೂರು ದಾಖಲಿಸಲು ಸೂಚಿಸಲಾಗಿದೆ ಎಂದಿದ್ದಾರೆ.
ಇನ್ನು ಹೆಚ್ಚಿನ ಉದ್ದಿಮೆ ಪರವಾನಗಿ ತಿದ್ದುಪಡಿಯಾಗಿರುವ ಸಾಧ್ಯತೆ ಇದೆ. ಈ ಬಗ್ಗೆ ಪರಿಶೀಲನೆ ನಡೆಸಲು ಸಿಬ್ಬಂದಿಗಳಿಗೆ ಸೂಚಿಸಿದ್ದೇನೆ. ಸುಮಾರು 4,500 ಉದ್ದಿಮೆ ಪರವಾನಗಿ ನವೀಕರಣ ಆಗಲು ಬಾಕಿ ಇದೆ. ಅದನ್ನ ಪರಿಶೀಲನೆ ಮಾಡಿದರೆ ನಕಲಿ ಆಗಿರುವ ಸಾಧ್ಯತೆ ಗೊತ್ತಾಗುತ್ತೆ. ಉದ್ದಿಮೆದಾರರು ತಮ್ಮ ಪರವಾನಗಿ ಸರ್ಟಿಫಿಕೇಟ್ ಅನ್ನು ಕೂಡಲೇ ಪರಿಶೀಲನೆ ಮಾಡಿ. ಏನೇ ಸಮಸ್ಯೆ ಇದ್ದರೂ ಪಾಲಿಕೆಗೆ ಬಂದು ಅಧಿಕಾರಿಗಳನ್ನು ಭೇಟಿ ಮಾಡಬಹುದು ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಮೆಟ್ರೋ ದರ ಏರಿಕೆ ಪರಿಣಾಮ, ಪ್ರಯಾಣಿಕರ ಸೆಳೆದ ಬಿಎಂಟಿಸಿ: ಹೆಚ್ಚುವರಿ 25 ಲಕ್ಷ ರೂ. ಆದಾಯ!
ದಾಖಲೆ ತಿದ್ದುಪಡಿ, ನಕಲಿ ಆಗಿದೆಯಾ ಎಂದು ಅವರೇ ಪರಿಶೀಲನೆ ಮಾಡಿಕೊಳ್ಳಬಹುದು. ನಮ್ಮ ಗಮನಕ್ಕೆ ತಂದರೆ ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತೇವೆ. ಎಲ್ಲಾ ಪಾವತಿಗೂ ಆನ್ಲೈನ್ ವ್ಯವಸ್ಥೆ ಇದೆ. ಆನ್ಲೈನ್ಪಾವತಿ ಮಾಡಿ ತಮ್ಮ ಸೇವೆಯನ್ನು ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಮಧ್ಯವರ್ತಿಗಳ ಬಳಿ ಹೋಗದೆ ನಾಗರಿಕರು ಮಾಡಬಹುದು. ಏನೇ ಸೇವೆ ಬೇಕು ಅಂದ್ರು ನಮ್ಮ ಅಧಿಕಾರಿಗಳು, ಸಿಬ್ಬಂದಿಗಳು ಸಹಾಯ ಮಾಡುತ್ತಾರೆ. ನಕಲಿ, ವಂಚನೆ, ಭ್ರಷ್ಟಾಚಾರ ತಡೆಯಲು ಇದು ಸಹಕಾರಿ ಆಗಲಿದೆ ಎಂದು ಕಮಿಷನರ್ ರವೀಂದ್ರ ನಾಯಕ್ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:03 am, Thu, 3 July 25







