
ಮಂಗಳೂರು, (ಮಾರ್ಚ್ 17): ಕೌಟುಂಬಿಕ ಕಲಹದ ವಿಚಾರಕ್ಕೆ ದೂರು ನೀಡಲು ಬಂದ ಮಹಿಳೆಯರನ್ನು ಅಸಭ್ಯವಾಗಿ ಮಂಚಕ್ಕೆ ಕರೆದ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ (moodbidri inspector Sandesh) ವಿರುದ್ಧ ಈಗ ರಾಜ್ಯ ಮಹಿಳಾ ಆಯೋಗವು ಸಿಡಿದೆದ್ದಿದ್ದು, ಸುಮೋಟೋ ಕೇಸ್ ದಾಖಲಿಸಿಕೊಂಡಿದೆ. ಅಲ್ಲದೇ ಈ ಪ್ರಕರಣ ಸಂಬಂಧ ವರದಿ ನೀಡುವಂತೆ ಮಂಗಳೂರ ನಗರ ಪೊಲೀಸ್ ಕಮಿಷನರ್ಗೆ ಪತ್ರ ಬರೆದಿದೆ. ಇದರ ಬೆನ್ನಲ್ಲೇ ಇನ್ಸ್ಪೆಕ್ಟರ್ ಸಂದೇಶನನ್ನು ಅಮಾನತು ಮಾಡಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಆದೇಶ ಹೊರಡಿಸಿದ್ದಾರೆ. ಆಡಿಯೋ, ವಿಡೀಯೋದಲ್ಲಿ ಮಹಿಳೆಯರ ಜೊತೆ ಅನುಚಿತ ವರ್ತನೆಯ ಕಾರಣ ನೀಡಿ ಸಂದೇಶ ಅವರನ್ನ ಸಸ್ಪೆಂಡ್ ಮಾಡಲಾಗಿದೆ.
ಸಂತ್ರಸ್ತೆ ಮಹಿಳೆ ಆರೋಪ ಸಂಬಂಧ ಕೆಲ ಆಡಿಯೋ ವಿಡಿಯೋಗಳ ಬಯಲಿಗೆ ಬರುತ್ತಿದ್ದಂತೆಯೇ ಇನ್ಸ್ಪೆಕ್ಟರ್ ವಿರುದ್ಧದ ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ಎಸಿಪಿ ಶ್ರೀಕಾಂತ್ಗೆ ಜವಾಬ್ದಾರಿ ನೀಡಲಾಗಿತ್ತು. ಮತ್ತೊಂದೆಡೆ ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ ಮಹಿಳೆಯರಿಗೆ ಕಿರುಕುಳ ಆರೋಪ ಸಂಬಂಧ ಶಾಸಕ ಉಮಾನಾಥ್ ಕೋಟ್ಯಾನ್ ಗೃಹ ಸಚಿವರನ್ನ ಭೇಟಿ ಮಾಡಿ ಮಾಡಿದ್ದು, ಸಂದೇಶ್ ಅವರನ್ನು ಅಮಾನತ್ತಿನಲ್ಲಿಟ್ಟು ತನಿಖೆ ಮಾಡುವಂತೆ ಮನವಿ ಮಾಡಿದ್ದರು. ಅಲ್ಲದೇ ಈ ಬಗ್ಗೆ ಮಹಿಳಾ ಆಯೋಗ ಸಹ ಸುಮಟೋ ಕೇಸ್ ದಾಖಲಿಸಿಕೊಂಡಿದ್ದು, ಪ್ರಕರಣದ ವರದಿ ನೀಡುವಂತೆ ಮಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿತ್ತು. ಈ ಎಲ್ಲಾ ಬೆಳವಣಿಗೆ ಬಳಿಕ ಇನ್ಸ್ಪೆಕ್ಟರ್ ಸಂದೇಶ ಅವರನ್ನು ಕೊನೆಗೂ ಅಮಾನತು ಮಾಡಲಾಗಿದೆ.
ಇನ್ನು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಮಹಿಳಾ ಆಯೋಗ, ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ (ಸುಮಟೋ ಕೇಸ್) ದಾಖಲಿಸಿಕೊಂಡಿದೆ. ಅಲ್ಲದೇ ಈ ಪ್ರಕರಣ ಸಂಬಂಧ ತನಿಖೆ ನಡೆಸಿ 5 ದಿನದೊಳಗೆ ವರದಿ ನೀಡುವಂತೆ ಮಂಗಳೂರ ನಗರ ಪೊಲೀಸ್ ಕಮಿಷನರ್ಗೆ ಪತ್ರ ಬರೆದಿದೆ.
ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧ ಸಂತ್ರಸ್ತ ಮಹಿಳೆಯರು ಅತ್ಯಂತ ಭೀಕರ ಆರೋಪಗಳನ್ನು ಮಾಡಿದ್ದಾರೆ. ಕೌಟುಂಬಿಕ ಸಮಸ್ಯೆಗೆ ನ್ಯಾಯ ಕೇಳಲು ಹೋದರೆ, ಅದಕ್ಕೆ ಪ್ರತಿಯಾಗಿ ಲೈಂಗಿಕ ಸುಖಕ್ಕೆ ಬೇಡಿಕೆ ಇಡುತ್ತಿದ್ದರು ಎಂಬುದು ಪ್ರಮುಖ ಆರೋಪ. ಅಷ್ಟೇ ಅಲ್ಲದೆ, ಗಂಡನನ್ನು ಬಂಧಿಸಿ ಬಳಿಕ ಅವರನ್ನು ಬಿಡುಗಡೆ ಮಾಡಲು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ಪೆಕ್ಟರ್ ಸಂತ್ರಸ್ತೆಯ ಮಗನ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂಬ ದೂರು ಕೇಳಿಬಂದಿದೆ. ಈ ಪ್ರಕರಣವು ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದು, ಉನ್ನತ ಅಧಿಕಾರಿಗಳ ತನಿಖೆಯ ಬಳಿಕ ಸತ್ಯಾಸತ್ಯತೆ ಹೊರಬರಬೇಕಿದೆ.
Published On - 7:02 pm, Tue, 17 March 26