ಸುಹಾಸ್ ಶೆಟ್ಟಿ ಕೊಲೆಗೆ ವಿದೇಶದಿಂದ ಹಣ ಸಂದಾಯವಾಗಿರುವ ಶಂಕೆ: ಬ್ಯಾಂಕ್ ಖಾತೆಗಳ ಪರಿಶೀಲನೆಗೆ ಮುಂದಾದ ಮಂಗಳೂರು ಪೊಲೀಸರು

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಹೊಸ ಅಂಶಗಳು ಬೆಳಕಿಗೆ ಬಂದಿವೆ. ಫಾಜಿಲ್ ಸಹೋದರ ಆದಿಲ್ ನೀಡಿದ ಹಣದ ಜೊತೆಗೆ ವಿದೇಶದಿಂದಲೂ ಹಣ ಬಂದಿರುವ ಅನುಮಾನವಿದೆ. ಪೊಲೀಸರು ವಿವಿಧ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಿದ್ದಾರೆ. ಪ್ರಮುಖ ಆರೋಪಿ ಸಫ್ವಾನ್ ಹಲವರನ್ನು ಸಂಪರ್ಕಿಸಿ ಸಹಾಯ ಪಡೆದಿದ್ದಾನೆ ಎಂದು ತಿಳಿದುಬಂದಿದೆ.

ಸುಹಾಸ್ ಶೆಟ್ಟಿ ಕೊಲೆಗೆ ವಿದೇಶದಿಂದ ಹಣ ಸಂದಾಯವಾಗಿರುವ ಶಂಕೆ: ಬ್ಯಾಂಕ್ ಖಾತೆಗಳ ಪರಿಶೀಲನೆಗೆ ಮುಂದಾದ ಮಂಗಳೂರು ಪೊಲೀಸರು
ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳು ಪಾರ್ಟಿ ಮಾಡಿರುವುದಕ್ಕೆ ಸಂಬಂಧಿಸಿದ್ದು ಎನ್ನಲಾದ ಫೋಟೊ
Edited By:

Updated on: May 05, 2025 | 9:55 AM

ಮಂಗಳೂರು, ಮೇ 3: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shettyಹತ್ಯೆಗೆ ಫಾಜಿಲ್ ಸಹೋದರ ಸುಪಾರಿ ನೀಡಿದ್ದ ವಿಚಾರ ಬಹಿರಂಗವಾಗಿತ್ತು. ಆದರೆ, ಇದೀಗ ವಿದೇಶದಿಂದಲೂ ಹಣ ಕಳುಹಿಸಲಾಗಿತ್ತೇ ಎಂಬ ಅನುಮಾನ ವ್ಯಕ್ತವಾಗಿದೆ. ಆ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸುಹಾಸ್ ಶೆಟ್ಟಿ ಹತ್ಯೆ ಹಿಂದೆ ಅನೇಕ ಕಾಣದ ಕೈಗಳ ಕೈವಾಡ ಶಂಕೆ ವ್ಯಕ್ತವಾಗಿದ್ದು, ವಿವಿಧ ಬ್ಯಾಂಕ್ ಖಾತೆಗಳ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ. ಹತ್ಯೆ ನಡೆಸಲು ನೆರವು ನೀಡುವಂತೆ ಪ್ರಮುಖ ಆರೋಪಿ ಸಫ್ವಾನ್ ಅನೇಕರನ್ನು ಸಂಪರ್ಕಿಸಿದ್ದ. ಆ ಸಂದರ್ಭದಲ್ಲಿ ಜೈಲು, ಜಾಮೀನಿಗೆ ನೆರವಿಗಾಗಿ ಕೈಚಾಚಿದ್ದ ಎನ್ನಲಾಗಿದೆ.

ಕೊಲೆ ಮಾಡಿದ ಕೂಡಲೇ ಪೊಲೀಸರಿಗೆ ಶರಣಾಗುವ ಬಗ್ಗೆಯೂ ಹಂತಕರ ಗುಂಪು ಚರ್ಚೆ ನಡೆಸಿತ್ತು. ಹಂತಕರಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ಕಾಣದ ಕೈಗಳ ಗುಂಪು ಮಾಡಿತ್ತೇ ಎಂಬ ಬಲವಾದ ಅನುಮಾನ ಸೃಷ್ಟಿಯಾಗಿದೆ.

3 ತಿಂಗಳ ಹಿಂದೆಯೇ ಸುಹಾಸ್ ಕೊಲೆಗೆ ಸಿದ್ಧವಾಗಿತ್ತು ಸ್ಕೆಚ್

ಸುಹಾಸ್ ಶೆಟ್ಟಿ ಕೊಲೆಗೆ ಮೂರು ತಿಂಗಳ ಹಿಂದೆಯೇ ಸಂಚು ಹೂಡಲಾಗಿತ್ತು. ಜನವರಿಯಲ್ಲೇ ಸಫ್ವಾನ್ ತಂಡಕ್ಕೆ ಫಾಜಿಲ್ (ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ಹತ್ಯೆಗೊಳಗಾಗಿದ್ದ ಯುವಕ) ತಮ್ಮ ಆದಿಲ್ 3 ಲಕ್ಷ ರೂಪಾಯಿ ಹಣ ಕೊಟ್ಟಿದ್ದ. ಕೃತ್ಯಕ್ಕಾಗಿ ಒಂದು ಪಿಕ್ ಅಪ್ ವಾಹನ, ಸ್ವಿಫ್ಟ್ ಕಾರ್ ಬಳಕೆ ಮಾಡಿದ್ದ. ಅಕಸ್ಮಾತ್ ಸುಹಾಸ್ ಶೆಟ್ಟಿ ತಪ್ಪಿಸಿಕೊಂಡರೆ ಪ್ಲಾನ್ ಬಿಯನ್ನೂ ರೆಡಿ ಮಾಡಿಕೊಳ್ಳಲಾಗಿತ್ತು ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ
ಸುಹಾಸ್ ಶೆಟ್ಟಿ ಕೊಲೆ: ಇಲ್ಲಿದೆ ಆರೋಪಿಗಳ ಪ್ಲ್ಯಾನ್​​ನ ಇನ್​ಸೈಡ್ ಡಿಟೇಲ್ಸ್
ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಮಂಗಳೂರಿನ 3 ಕಡೆ ಚಾಕು ಇರಿತ: 7 ಜನರ ಬಂಧನ
ಸುಹಾಸ್ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿರುವ ಇಬ್ಬರು ಹಿಂದೂಗಳು ಯಾರು?
ಸುಹಾಸ್ ಹತ್ಯೆ: ಫಿನೀಶ್, ರಿವೇಂಜ್ ಪೋಸ್ಟ್​​ಗಳ ವಿರುದ್ಧ 12 ಪ್ರಕರಣ ದಾಖಲು

ಸುಹಾಸ್ ಕೊಲೆಗೆ ಹೇಗಿತ್ತು ಸಫ್ವಾನ್ ಪ್ಲಾನ್?

ಸುಹಾಸ್ ಶೆಟ್ಟಿ ಚಲನ ವಲನಗಳ ಮೇಲೆ ಪ್ರಮುಖ ಆರೋಪಿ ಸಫ್ವಾನ್ 15 ದಿನಗಳಿಂದ ಗಮನ ಇರಿಸಿದ್ದ. ಹುಡುಗರನ್ನು ಬಿಟ್ಟು ರೇಖಿ ಮಾಡಿಸಿದ್ದ. ಚಿಕ್ಕಮಗಳೂರಿನ ಕಳಸಾದ ರಂಜಿತ್ ಹಾಗೂ ನಾಗರಾಜ್ 15 ದಿನಗಳಿಂದ ಸಫ್ವಾನ್ ಮನೆಯಲ್ಲೇ ಇದ್ದರು. ಸುಹಾಸ್ ಶೆಟ್ಟಿ ಬಜ್ಪೆಗೆ ಬರುವ ಬಗ್ಗೆ ಅಝರುದ್ಧಿನ್ ಮಾಹಿತಿ ನೀಡಿದ್ದ. ಎಷ್ಟು ಗಂಟೆಗೆ ಸುಹಾಸ್ ಹೊರಡುತ್ತಾನೆ, ಅವನೊಂದಿಗೆ ಯಾರಿದ್ದಾರೆ ಎಂಬುದನ್ನು ಸಫ್ವಾನ್​​ಗೆ ಮಾಹಿತಿ ನೀಡಿದ್ದ. ಸುಹಾಸ್ ಶೆಟ್ಟಿ ಹತ್ಯೆಯಾಗುತ್ತಿದ್ದಂತೆಯೇ ಅಝರುದ್ದೀನ್ ತಲೆ ಮರೆಸಿಕೊಂಡು ಪರಾರಿಯಾಗಿದ್ದಾನೆ. ಸದ್ಯ ಆತನ ಬಂಧನಕ್ಕೆ ಮಂಗಳೂರು ಪೊಲೀಸರ ತಂಡ ಕಾರ್ಯಾಚರಣೆ ನಡೆಸುತ್ತಿದೆ.

ಹತ್ಯೆಗೂ ಮುನ್ನ ಭರ್ಜರಿ ಪಾರ್ಟಿ ಮಾಡಿದ್ದ ಶಂಕೆ

ಸುಹಾಸ್ ಶೆಟ್ಟಿ ಹತ್ಯೆಗೂ ಮುನ್ನ ಹಂತಕರ ತಂಡ ಭರ್ಜರಿ ಪಾರ್ಟಿ ಮಾಡಿತ್ತೇ ಎಂಬ ಅನುಮಾನ ವ್ಯಕ್ತವಾಗಿದೆ. ಹತ್ಯೆಗೆ ಸ್ಕೆಚ್ ರೂಪಿಸಲು ಎಪ್ರಿಲ್ 2ರಂದು ರಹಸ್ಯ ಸ್ಥಳದಲ್ಲಿ ಪಾರ್ಟಿ ಮಾಡಿದ್ದ ಶಂಕೆ ವ್ಯಕ್ತವಾಗಿದೆ. ಚಿಕ್ಕಮಗಳೂರಿನ ಕಳಸದ ರೆಸಾರ್ಟ್ ಒಂದರಲ್ಲಿ ಆರೋಪಿಗಳು ಪಾರ್ಟಿ ಮಾಡಿದ್ದು ಎನ್ನಲಾದ ಫೋಟೊ ಈಗ ಬಯಲಾಗಿದೆ.

ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆಗೆ ಸ್ಕೆಚ್ ಹಾಕಿದ್ದೇ ರೋಚಕ: ಇಲ್ಲಿದೆ ಆರೋಪಿಗಳ ಪ್ಲ್ಯಾನ್​​ನ ಇನ್​ಸೈಡ್ ಡಿಟೇಲ್ಸ್

ಫಾಜಿಲ್ ಸಹೋದರ ಆದಿಲ್ ಕೊಟ್ಟ ಹಣದಲ್ಲಿ ಆರೋಪಿಗಳು ಪಾರ್ಟಿ ಮಾಡಿದ್ದರೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಕೊಲೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಮೂವರು ಆರೋಪಿಗಳು ಪಾರ್ಟಿಯಲ್ಲಿ ಇರುವ ಫೋಟೋ ದೊರೆತಿದ್ದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ