AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಝೀರೋ ಟ್ರಾಫಿಕ್​ನಲ್ಲೇ ಕೈಕೊಟ್ಟ ಆಂಬ್ಯುಲೆನ್ಸ್: ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮಗು ಮಾರ್ಗ ಮಧ್ಯೆ ಸಾವು

Davangere baby death: ದಾವಣಗೆರೆ ಮನಕುಲುಕುವ ಘಟನೆಗೆ ಸಾಕ್ಷಿಯಾಗಿದೆ. ಶ್ವಾಸಕೋಶದ ತೀವ್ರ ಸೋಂಕಿನಿಂದ ಬಳಲುತ್ತಿದ್ದ ಮೂರೂವರೆ ತಿಂಗಳ ಮಗುವನ್ನು ಉಡುಪಿಯ ಮಣಿಪಾಲ ಆಸ್ಪತ್ರೆಗೆ ಜೀರೋ ಟ್ರಾಫಿಕ್ ಮೂಲಕ ಕರೆದೊಯ್ಯುತ್ತಿದ್ದ ವೇಳೆ ಆಂಬ್ಯುಲೆನ್ಸ್ ಟೈಯರ್​​ ಸ್ಫೋಟಗೊಂಡಿದೆ. ಪರಿಣಾಮ ಸೂಕ್ತ ಚಿಕಿತ್ಸೆ ಸಿಗದೆ ಮಗು ಸಾವನ್ನಪ್ಪಿದೆ.

ಝೀರೋ ಟ್ರಾಫಿಕ್​ನಲ್ಲೇ ಕೈಕೊಟ್ಟ ಆಂಬ್ಯುಲೆನ್ಸ್: ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮಗು ಮಾರ್ಗ ಮಧ್ಯೆ ಸಾವು
ಪ್ರಾತಿನಿಧಿಕ ಚಿತ್ರImage Credit source: Getty images
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on:Jul 31, 2026 | 5:50 PM

Share

ಮುಖ್ಯಾಂಶಗಳು

  • ಮನಕುಲುಕುವ ಘಟನೆಗೆ ಸಾಕ್ಷಿಯಾದ ದಾವಣಗೆರೆ
  • ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮಗು ಮಾರ್ಗ ಮಧ್ಯೆ ಸಾವು
  • ಜೀರೋ ಟ್ರಾಫಿಕ್​​ನಲ್ಲಿ ಆಂಬ್ಯುಲೆನ್ಸ್ ಟೈಯರ್​​ ಸ್ಫೋಟ

ದಾವಣಗೆರೆ, ಜುಲೈ 31: ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಮೂರೂವರೆ ತಿಂಗಳ ಮಗುವನ್ನು ತುರ್ತು ಚಿಕಿತ್ಸೆಗಾಗಿ ದಾವಣಗೆರೆಯಿಂದ (davanagere) ಉಡುಪಿಯ ಮಣಿಪಾಲ ಕಸ್ತೂರಬಾ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಜೀರೋ ಟ್ರಾಫಿಕ್​​ ವ್ಯವಸ್ಥೆ ಮಾಡಲಾಗಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಮಾರ್ಗ ಮಧ್ಯೆ ಆಂಬ್ಯುಲೆನ್ಸ್ ಟೈಯರ್​​ ಸ್ಫೋಟಗೊಂಡಿದ್ದು, ಮಗು ಸಾವನ್ನಪ್ಪಿದೆ. ಈ ಮನಕುಲುಕುವ ಘಟನೆಗೆ ದಾವಣಗೆರೆ ಸಾಕ್ಷಿಯಾಗಿದೆ.

ನಡೆದಿದ್ದೇನು?

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಂಡಿ ಗ್ರಾಮದ ಹನುಮೇಶ್ ಹಾಗೂ ಪವಿತ್ರಾ ದಂಪತಿಯ ಮಗು ಹನ್ವಿಕಾ. ಹೆರಿಗೆಗಾಗಿ ದಾವಣಗೆರೆ ಜಿಲ್ಲೆಯ ಹರಿಹರದ ತಾಯಿ ಮನೆಗೆ ಬಂದಿದ್ದ ಪವಿತ್ರಾ, ಮೂರು ತಿಂಗಳ ಹಿಂದೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಆದರೆ ಕಳೆದ ಕೆಲ ದಿನಗಳಿಂದ ತೀವ್ರ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಹನ್ವಿಕಾಗೆ ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಮಾರ್ಗ ಮಧ್ಯದಲ್ಲೇ ಆಂಬ್ಯುಲೆನ್ಸ್ ಟೈಯರ್ ಸ್ಪೋಟ

ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣವೇ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದರು. ಹೀಗಾಗಿ ದಾವಣಗೆರೆ ಪೊಲೀಸ್ ಇಲಾಖೆಯ ಸಹಾಯ ಕೇಳಿದಾಗ ಜೀರೋ ಟ್ರಾಫಿಕ್ ನೀಡುವುದಾಗಿ ಭರವಸೆ ನೀಡಿದ್ದರು. ಮಗುವಿನ ಜೀವ ಅಮೂಲ್ಯವಾಗಿದ್ದು ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸಿ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್​​ಟಿ ಶೇಖರ್ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಜಿಲ್ಲೆಯ ಗಡಿ ದಾಟುವ ಮೊದಲೇ ಆಂಬ್ಯುಲೆನ್ಸ್ ಟೈಯರ್ ಸ್ಫೋಟಗೊಂಡಿದೆ.

ಇದನ್ನೂ ಓದಿ: ಕಲಬುರಗಿ, ರಾಯಚೂರಿನ ವಸತಿ ಶಾಲೆಯಲ್ಲಿ ಪಲಾವ್, ಅವಲಕ್ಕಿ ತಿಂದಿದ್ದ ವಿದ್ಯಾರ್ಥಿಗಳು ಅಸ್ವಸ್ಥ

ಇನ್ನು ಈ ವೇಳೆ ಪೊಲೀಸರು ಹಾಗೂ ವೈದ್ಯರು ಹತ್ತಿರದ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ ಮಗುವಿನ ನಾಡಿ ಮಿಡಿತ ಕಡಿಮೆ ಆಗಿದೆ. ವೈದ್ಯರು ಹರಸಾಹಸ ಪಟ್ಟರು ಮಗುವಿನ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.

ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ

ಪೊಲೀಸರು ಹಾಗೂ ವೈದ್ಯರ ಸತತ ಪ್ರಯತ್ನ ಮತ್ತು ಸಾವಿರಾರು ಜನರ ಪ್ರಾರ್ಥನೆಯ ನಡುವೆಯೂ ಮಗು ಉಳಿಯಲಿಲ್ಲ. ಕಣ್ಣೆದುರೇ ಮಗುವನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:43 pm, Fri, 31 July 26

Follow Us