AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಶ್ರೀಮಂತ ಯುವಕರ ಬಲೆಗೆ ಬೀಳಿಸ್ತಿದ್ದ ಯುವತಿ, ಹಲ್ಲೆ ಮಾಡಿ ದೋಚುತ್ತಿದ್ದ ಹನಿಟ್ರ್ಯಾಪ್ ಗ್ಯಾಂಗ್ ಅರೆಸ್ಟ್

ದಾವಣಗೆರೆಯಲ್ಲಿ ಶ್ರೀಮಂತ ಯುವಕರನ್ನು ಬಲೆಗೆ ಬೀಳಿಸಿ ಸುಲಿಗೆ ಮಾಡುತ್ತಿದ್ದ ಹನಿಟ್ರ್ಯಾಪ್ ಗ್ಯಾಂಗ್‌ನ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ ಚನ್ನಗಿರಿಯಲ್ಲಿ ಸಾಲ ಹಾಗೂ ಕೌಟುಂಬಿಕ ದ್ವೇಷದ ಹಿನ್ನೆಲೆ ಗ್ರಾ.ಪಂ. ಸದಸ್ಯನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಗ್ರಾ.ಪಂ. ಸದಸ್ಯನ ಸೋದರತ್ತೆಯೇ ಆತನನ್ನು ಕೊಲೆ ಮಾಡಿಸಿರುವ ಆರೋಪ ಕೇಳಿಬಂದಿದೆ.

ದಾವಣಗೆರೆ: ಶ್ರೀಮಂತ ಯುವಕರ ಬಲೆಗೆ ಬೀಳಿಸ್ತಿದ್ದ ಯುವತಿ, ಹಲ್ಲೆ ಮಾಡಿ ದೋಚುತ್ತಿದ್ದ ಹನಿಟ್ರ್ಯಾಪ್ ಗ್ಯಾಂಗ್ ಅರೆಸ್ಟ್
ಪಂಚಮಿ, ವೆಂಕಟೇಶ್, ಗಂಗಾ ಮಲ್ಲೇಶ್ ನಾಯ್ಕ ಹಾಗೂ ಜಗದೀಶImage Credit source: tv9
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: May 16, 2026 | 10:04 AM

Share

ದಾವಣಗೆರೆ, ಮೇ 16: ದಾವಣಗೆರೆ (Davanagere) ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳು ವರದಿಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ದಾವಣಗೆರೆಯಲ್ಲಿ ಶ್ರೀಮಂತ ಯುವಕರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ನಡೆಸಿ ಹಣ, ಒಡವೆ ಸುಲಿಗೆ ಮಾಡುತ್ತಿದ್ದ ಐದು ಮಂದಿ ಕಿಲಾಡಿಗಳನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ, ಹಣ ಹಾಗೂ ಕೌಟುಂಬಿಕ ದ್ವೇಷದ ಹಿನ್ನೆಲೆ ಗ್ರಾಮ ಪಂಚಾಯತ್ ಸದಸ್ಯರೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಮುಖ್ಯಾಂಶಗಳು

  • ಹನಿಟ್ರ್ಯಾಪ್ ಗ್ಯಾಂಗ್‌ನ ಐವರನ್ನು ಬಂಧಿಸಿದ ಪೊಲೀಸರು.
  • ₹10.20 ಲಕ್ಷ ಮೌಲ್ಯದ ಚಿನ್ನ ಹಾಗೂ ಕೃತ್ಯಕ್ಕೆ ಬಳಸಿದ್ದಇನ್ನೋವಾ ಕಾರು ವಶಕ್ಕೆ.
  • ಶ್ರೀಮಂತ ಯುವಕನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದರೋಡೆ ಮಾಡಿದ್ದ ಗ್ಯಾಂಗ್.

ಹನಿಟ್ರ್ಯಾಪ್ ಪ್ರಕರಣದ ವಿವರ

ಪಂಚಮಿ (34), ಜಗದೀಶ (35), ಗಂಗಾ ಮಲ್ಲೇಶ್ ನಾಯ್ಕ (25) ಹಾಗೂ ವೆಂಕಟೇಶ್ (30) ಎಂಬವರೇ ಹನಿಟ್ರ್ಯಾಪ್ ಕೇಸ್​ನಲ್ಲಿ ಬಂಧಿತರಾದವರು. ಈ ಕಿಲಾಡಿ ಗ್ಯಾಂಗ್ ಮೊದಲು ಶ್ರೀಮಂತ ಹಿನ್ನೆಲೆಯುಳ್ಳ ಯುವಕರನ್ನು ಟಾರ್ಗೆಟ್ ಮಾಡುತ್ತಿತ್ತು. ಗ್ಯಾಂಗ್‌ನ ಸದಸ್ಯೆ ಪಂಚಮಿ (34) ಎಂಬಾಕೆ ಶ್ರೀಮಂತ ಯುವಕನೊಬ್ಬನೊಂದಿಗೆ ಸ್ನೇಹ ಬೆಳೆಸಿ, ಹರಿಹರ ತಾಲೂಕಿನ ಶಿವನಹಳ್ಳಿ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದಾಳೆ. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಜಗದೀಶ, ಗಂಗಾ ಮಲ್ಲೇಶ್ ನಾಯ್ಕ, ವೆಂಕಟೇಶ್ ಹಾಗೂ ಮತ್ತೊಬ್ಬ ಆರೋಪಿ ಧಾವಿಸಿ ಬಂದು ಯುವಕನ ಮೇಲೆ ಹಲ್ಲೆ ನಡೆಸಿ, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಇಡೀ ಗ್ಯಾಂಗ್ ಅನ್ನು ಜೈಲಿಗಟ್ಟಿದ್ದಾರೆ. ಈ ತಂಡ ಇನ್ನೂ ಹಲವು ಯುವಕರಿಗೆ ವಂಚಿಸಿರುವ ಶಂಕೆ ಇದ್ದು, ತನಿಖೆ ಚುರುಕುಗೊಂಡಿದೆ.

ಚನ್ನಗಿರಿಯ ನಲ್ಲೂರು ಗ್ರಾಮದಲ್ಲಿ ಪಂಚಾಯತಿ ಸದಸ್ಯನ ಬರ್ಬರ ಹತ್ಯೆ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಅತಾವುಲ್ಲಾ (46) ಎಂಬುವವರನ್ನು ತಡರಾತ್ರಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅಡಿಕೆ ಕತ್ತರಿಸುವ ಕತ್ತಿ ಹಾಗೂ ಮಚ್ಚುಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಹಳೇ ಕಾರುಗಳ ವ್ಯಾಪಾರ ಮಾಡುತ್ತಿದ್ದ ಅತಾವುಲ್ಲಾ, ಭದ್ರಾವತಿ ತಾಲೂಕಿನ ಕಾಗೆಕೋಡುಮಗ್ಗಿ ಗ್ರಾಮದ ತನ್ನ ಸೋದರತ್ತೆಯ ಮಗಳ ಬಳಿ 2 ಲಕ್ಷ ರೂ. ಸಾಲ ಮಾಡಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಇಡೀ ಕರ್ನಾಟಕವನ್ನೇ ನಡುಗಿಸಿದ 4500 ಕೋಟಿ ರೂ. ವಂಚನೆ ಕೇಸ್: ಶಿವಂ ಅಸೋಸಿಯೇಟ್‌ ಮಾಲೀಕ ಅರೆಸ್ಟ್

ಸಾಲದ ಹಣದ ವಿವಾದ ಒಂದೆಡೆಯಾದರೆ, ಸೋದರತ್ತೆಯ ಮಗಳನ್ನು ಬಿಟ್ಟು ಅತಾವುಲ್ಲಾ ಬೇರೆ ಯುವತಿಯನ್ನು ಮದುವೆಯಾಗಿದ್ದಕ್ಕೆ ಸೋದರತ್ತೆ ತೀವ್ರ ದ್ವೇಷ ಸಾಧಿಸುತ್ತಿದ್ದಳು. ಇದೇ ಹಳೇ ದ್ವೇಷದ ಹಿನ್ನೆಲೆಯಲ್ಲಿ ಭದ್ರಾವತಿ ತಾಲೂಕಿನ ಶೇಖ್ ದಸ್ತುಗಿರಿ ಹಾಗೂ ಜಬೀವುಲ್ಲಾ ಎಂಬ ಹಂತಕರಿಗೆ ಸುಪಾರಿ ಕೊಟ್ಟು ಈ ಕೊಲೆ ಮಾಡಿಸಲಾಗಿದೆ ಎಂಬುದು ತಿಳಿದುಬಂದಿದೆ. ಸದ್ಯ ಚನ್ನಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಹಂತಕರ ಪತ್ತೆಗೆ ಜಾಲ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Basavaraj Doddamani
Basavaraj Doddamani

ಬಸವರಾಜ ದೊಡ್ಡಮನಿ ಟಿವಿ9 ಕನ್ನಡ ವರದಿಗಾರರಾಗಿದ್ದು, ವಿಶೇಷವಾಗಿ ದಾವಣಗೆರೆ ಜಿಲ್ಲಾ ಪ್ರಾದೇಶಿಕ ಸುದ್ದಿಗಳ ಮೇಲೆ ಕೇಂದ್ರೀಕರಿಸುತ್ತಾರೆ.

Read More