
ದಾವಣಗೆರೆ, (ಮಾರ್ಚ್ 13): ಜಿಲ್ಲೆಯಲ್ಲಿ ಭಿನ್ನಾಭಿಪ್ರಾಯ ಸರಿಪಡಿಸಲು ಹೋರಾಡುತ್ತಿರುವ ಬಿಜೆಪಿ (BJP) ಈಗ ಉಪಚುನಾವಣೆಯನ್ನು (Davanagere South By Election) ಗೆದ್ದು ಕೊಳ್ಳುವ ನೆಪದಲ್ಲಾದರೂ ಭಿನ್ನಮತಕ್ಕೆ ಕೊನೆ ಹಾಡಲು ಸರ್ಕಸ್ ಮುಂದುವರಿಸಿದೆ. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯ ಜೊತೆಗೆ ಎರಡೂ ಬಣಗಳನ್ನು ಕೂರಿಸಿ ಚರ್ಚೆ ನಡೆಸಲಾಗಿದೆ. ಇನ್ನು ಕಾಂಗ್ರೆಸ್ನಲ್ಲೂ (Congress) ಸಹ ಅಭ್ಯರ್ಥಿ ಆಯ್ಕೆಯಲ್ಲಿ ಮುಸುಕಿನ ಗುದ್ದಾಟಗಳು ನಡೆಯುತ್ತಿವೆ. ಸಚಿವರಾದ ಜಮೀರ್ ಅಹಮ್ಮದ್ ಖಾನ್, ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರೆ ಇನ್ನೊಂದೆಡೆ ಎಸ್ಎಸ್ ಮಲ್ಲಿಕಾರ್ಜುನ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಸಮಿತಿ ಸಹ ಎರಡು ಕಡೆಯವರನ್ನು ಕೂರಿಸಿ ಸಭೆ ಮಾಡಿದೆ.
ಕಳೆದೆರಡು ವರ್ಷಗಳಿಂದಲೂ ಭಿನ್ನಮತದಿಂದ ಬಳಲುತ್ತಿರುವ ದಾವಣಗೆರೆ ಜಿಲ್ಲಾ ಬಿಜೆಪಿ ಉಪಚುನಾವಣೆಯಿಂದಲಾದರೂ ಒಗ್ಗೂಡುವ ವಿಶ್ವಾಸವಿಟ್ಟುಕೊಂಡು ಈಗ ಪ್ರಯತ್ನ ಶುರುವಾಗಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿ ಅಂತಿಮಗೊಳಿಸಲು ಬಿಜೆಪಿ ರಾಜ್ಯ ಕೋರ್ ಕಮಿಟಿ ಇಂದು (ಮಾರ್ಚ್ 13) ಚರ್ಚೆ ನಡೆಸಿದೆ. ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಐವರು ಟಿಕೆಟ್ ಆಕಾಂಕ್ಷಿಗಳ ಹೆಸರನ್ನು ಚರ್ಚೆ ನಡೆಸಲಾಗಿದೆ. ಯಶವಂತ್ ರಾವ್ ಜಾಧವ್, ಬಿ.ಜಿ. ಅಜಯ್ ಕುಮಾರ್, ಶ್ರೀನಿವಾಸ್ ದಾಸ್ ಕರಿಯಪ್ಪ, ದೇವಮುನಿ ಮತ್ತು ರಾಜನಹಳ್ಳಿ ಶಿವಕುಮಾರ್ ಆಕಾಂಕ್ಷಿಗಳಾಗಿದ್ದು, ಎರಡು ದಿನಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿಗೆ ಶಿಫಾರಸುಗೊಳ್ಳಲಿದೆ.
ಕೋರ್ ಕಮಿಟಿ ಸಭೆಯ ಬಳಿಕವೂ ಸಹ ದಾವಣಗೆರೆಯ ಎರಡೂ ಬಣಗಳನ್ನು ಬೆಂಗಳೂರಿಗೆ ಕರೆಸಿಕೊಂಡು ಬಿಜೆಪಿ ನಾಯಕರು ಚರ್ಚೆ ನಡೆಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಶಾಸಕ ಬಿ.ಪಿ. ಹರೀಶ್ ಮತ್ತು ದಾವಣಗೆರೆ ಜಿಲ್ಲಾಧ್ಯಕ್ಷ ರಾಜಶೇಖರ್ ಸೇರಿದಂತೆ ಎರಡೂ ಬಣಗಳ ಮುಖಂಡರು ಭಾಗವಹಿಸಿದ್ದರು. ಸಭೆಯಲ್ಲಿ ಎಲ್ಲಾ ವ್ಯತ್ಯಾಸಗಳನ್ನೂ ಪಕ್ಕಕ್ಕಿಟ್ಟು ಉಪಚುನಾವಣೆಯನ್ನು ಎದುರಿಸಬೇಕೆಂದು ಸೂಚನೆ ನೀಡಲಾಗಿದೆ. ನಾಯಕರ ಸೂಚನೆಗೆ ಒಪ್ಪಿಕೊಂಡಂತಿರುವ ಎರಡೂ ಬಣ ಪಕ್ಷದ ಕೆಲಸ ಮಾಡುವುದಾಗಿ ಒಪ್ಪಿಕೊಂಡಿವೆ.
ಈ ಮಧ್ಯೆ ಕೋರ್ ಕಮಿಟಿ ಸಭೆಗೂ ಮುನ್ನ ಜಿ.ಎಂ. ಸಿದ್ದೇಶ್ವರ ಬಣವನ್ನು ಸಮಾಧಾನಿಸುವ ಕೆಲಸವನ್ನೂ ಬಿಜೆಪಿ ಮಾಡಿದೆ. ಹಾಲಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ ರೇಣುಕಾಚಾರ್ಯ ಬಣದಲ್ಲಿ ಗುರುತಿಸಿಕೊಂಡಿದ್ದು, ಸಿದ್ದೇಶ್ವರ ಬಣದ ರಾಜನಹಳ್ಳಿ ಶಿವಕುಮಾರ್, ಬಾತಿ ವೀರೇಶ್ ಮತ್ತು ಶಿವಪ್ರಕಾಶ್ ಅವರಿಗೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಗಳನ್ನು ನೀಡಲಾಗಿದೆ.
ಇನ್ನು ಕಾಂಗ್ರೆಸ್ ನಲ್ಲಿ ಕೂಡಾ ಅಭ್ಯರ್ಥಿ ಆಯ್ಕೆಯ ಸರ್ಕಸ್ ಮುಂದುವರಿದಿದೆ. ಒಂದೆಡೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂದು ಸಚಿವ ಜಮಿರ್ ಅಹಮ್ಮದ್ ಖಾನ್ ಪಟ್ಟು ಹಿಡಿದಿದ್ದರೆ, ಇನ್ನೊಂದೆಡೆ ಎಸ್ಎಸ್ ಮಲ್ಲಿಕಾರ್ಜುನ ತಮ್ಮ ಪುತ್ರಿನಿಗೆ ಟಿಕೆಟ್ ಕೊಡಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಹೀಗಾಗಿ ಕಾಂಗ್ರೆಸ್ನಲ್ಲೂ ಸಹ ಟಿಕೆಟ್ಗಾಗಿ ಮುಸುಕಿನ ಗುದ್ದಾಟಗಳು ನಡೆಯುತ್ತಿವೆ. ಈ ಸಂಬಂಧ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ನೇತೃತ್ವದಲ್ಲಿ ನಿನ್ನೆ (ಮಾರ್ 12) ವಿಧಾನಸೌಧದಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧಿಸಿದಂತೆ ಸಭೆ ನಡೆದಿದೆ. ಮತ್ತೊಂದೆಡೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಪುತ್ರ ಸಮರ್ಥ ಶಾಮನೂರು ಪರವಾಗಿ ದಾವಣಗೆರೆಯಿಂದ ಒಂದು ತಂಡ ಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿ ನೀಡಿ ಟಿಕೆಟ್ ನೀಡುವಂತೆ ಒತ್ತಾಯಿಸಿದೆ.
ಒಟ್ಟಿನಲ್ಲಿ ದಾವಣಗೆರೆ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಗೊಂದಲ ಉದ್ಭವಿಸಿದ್ದು, ಅಂತಿಮವಾಗಿ ಯಾರಿಗೆ ಟಿಕೆಟ್ ಸಿಗುತ್ತೋ ಕಾದುನೋಡಬೇಕಿದೆ.