ಸಿಎಂ, ಡಿಸಿಎಂ ಮಧ್ಯೆ ಒಪ್ಪಂದ ಆಗಿದ್ರೆ ಅಧಿಕಾರ ಹಂಚಿಕೆ ಆಗಲಿ: ಕಾಂಗ್ರೆಸ್ ಶಾಸಕ ಬಿ.ದೇವೇಂದ್ರಪ್ಪ ಹೊಸ ಬಾಂಬ್
ಕರ್ನಾಟಕ ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಕುರಿತು ನಾಯಕತ್ವ ಬದಲಾವಣೆ ಇಲ್ಲವೆಂದು ಹೈಕಮಾಂಡ್ ಈಗಾಗಲೇ ಹೇಳಿದೆ. ಈ ಮಧ್ಯೆ ಸಿಎಂ ಮತ್ತು ಡಿಸಿಎಂ ನಡುವೆ ಒಪ್ಪಂದ ಆಗಿದ್ದರೇ ಅಧಿಕಾರ ಹಂಚಿಕೆ ಆಗಲಿ ಎಂದು ಜಗಳೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ದೇವೇಂದ್ರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

ದಾವಣಗೆರೆ, ಜುಲೈ 27: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಒದೊಂದು ಬೆಳವಣಿಗೆಗಳು ಸಾಕಷ್ಟು ಚರ್ಚೆ ಮತ್ತು ತೀವೃ ಕುತೂಹಲ ಮೂಡಿಸುತ್ತಿವೆ. ಐದು ವರ್ಷ ನಾನೇ ಸಿಎಂ ಎಂದಿರುವ ಸಿದ್ದರಾಮಯ್ಯ (Siddaramaiah) ಪದೇ ಪದೆ ದೆಹಲಿಗೆ ಭೇಟಿ ನೀಡುತ್ತಿದ್ದಾರೆ. ಇದರ ಮಧ್ಯೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹಲವು ದೇಗುಲಗಳಿಗೆ ಸರಣಿ ಭೇಟಿ ನೀಡುತ್ತಿರುವುದು ಕೂಡ ಅಚ್ಚರಿಗೆ ಕಾರಣವಾಗಿದೆ. ಹೀಗಿರುವಾಗ ಸಿಎಂ ಮತ್ತು ಡಿಸಿಎಂ ನಡುವೆ ಒಪ್ಪಂದ ಆಗಿದ್ದರೇ ಅಧಿಕಾರ ಹಂಚಿಕೆ ಆಗಲಿ ಎಂದು ಜಗಳೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ದೇವೇಂದ್ರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಬಿ.ದೇವೇಂದ್ರಪ್ಪ, ಅಧಿಕಾರ ಹಂಚಿಕೆ ಆಗಲಿ ಎಂಬುವುದು ನನ್ನ ವೈಯಕ್ತಿಕ ಅಭಿಪ್ರಾಯ, ಆದರೆ ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಇಲ್ಲ. ಸಿಎಂ ಸ್ಥಾನ ಖಾಲಿ ಇಲ್ಲ ಅಂದ್ಮೇಲೆ ಅದರ ಬಗ್ಗೆ ಚರ್ಚೆ ಅನಗತ್ಯ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿಗೆ ಇಂದು ಸಿಎಂ, ಡಿಸಿಎಂ: ಪ್ರವಾಸಕ್ಕೆ ಮುನ್ನಾ ದಿನ ರಹಸ್ಯವಾಗಿ ಹಾಸನಕ್ಕೆ ತೆರಳಿ ಡಿಕೆ ಶಿವಕುಮಾರ್ ಪೂಜೆ!
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನನ್ನನ್ನು ಕರೆದು ಮಾತನಾಡಿಸಿದರು. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕೂಡ ನನ್ನನ್ನು ಕರೆದು ಮಾತನಾಡಿದ್ದಾರೆ. ಆದರೆ ನಾನು ಯಾರ ವಿರುದ್ಧವೂ ಆರೋಪ ಮಾಡಲ್ಲ. ನನ್ನ ಜಗಳೂರು ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ಆಗಬೇಕು ಅಷ್ಟೇ ಎಂದಿದ್ದಾರೆ.
ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದ ಬಿ.ದೇವೇಂದ್ರಪ್ಪ
ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಪ್ರಾದೇಶಿಕ, ಜಾತಿವಾರು ಲೆಕ್ಕಾಚಾರ ನಡೆದರೆ ನಾನು ಪ್ರಯತ್ನ ಮಾಡುವೆ. ನಾನೇನು ಸನ್ಯಾಸಿ ಅಲ್ಲ, ಸಚಿವ ಸ್ಥಾನಕ್ಕಾಗಿ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.