ಮಾಜಿ ಸಚಿವ ರೇಣುಕಾಚಾರ್ಯಗೆ ಸಂಕಷ್ಟ: 11 ವರ್ಷದ ಹಿಂದಿನ ಕೇಸ್ಗೆ ಮರುಜೀವ
ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ವಿರುದ್ಧ ಹನ್ನೊಂದು ವರ್ಷಗಳ ಹಿಂದೆ ದಾಖಲಾಗಿದ್ದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಇದೀಗ ಮರುಜೀವ ಬಂದಿದೆ. ಲೋಕಾಯುಕ್ತಕ್ಕೆ ದೂರು ನೀಡಿದ್ದ ದಾವಣಗೆರೆಯ ಗುರುಪಾದಯ್ಯ ಮಠದ, 11 ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದಾರೆ. ರೇಣುಕಾಚಾರ್ಯ ಮಾಜಿ ಜನಪ್ರತಿನಿಧಿಯಾಗಿರುವುದರಿಂದ ಪ್ರಾಸಿಕ್ಯೂಷನ್ಗೆ ಅನುಮತಿ ಅನಗತ್ಯವೆಂದು ಮಠದ ವಾದಿಸಿದ್ದಾರೆ.

ದಾವಣಗೆರೆ, ಸೆಪ್ಟೆಂಬರ್ 09: ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹಾಗೂ ಅವರ ಮೂವರು ಸಹೋದರರು ಸೇರಿ ಕೋಟ್ಯಂತರ ರೂ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು 11 ವರ್ಷಗಳ ಹಿಂದೆ ದಾಖಲಾಗಿದ್ದ ಭ್ರಷ್ಟಾಚಾರ ಪ್ರಕರಣಕ್ಕೆ ಇದೀಗ ಮತ್ತೆ ಜೀವ ಬಂದಿದೆ. ದಾವಣಗೆರೆಯಲ್ಲಿ ಈ ಕುರಿತು ಮಾತನಾಡಿರುವ ದೂರುದಾರ ಗುರುಪಾದಯ್ಯ ಮಠದ, ರೇಣುಕಾಚಾರ್ಯ ವಿರುದ್ಧದ ವಿಚಾರಣೆಗೆ ಸರ್ಕಾರದ ಪ್ರಾಸಿಕ್ಯೂಷನ್ ಅನುಮತಿ ಅನಗತ್ಯ ಎಂದು ಹೇಳಿದ್ದಾರೆ.
2015ರಲ್ಲಿ ಲೋಕಾಯುಕ್ತಕ್ಕೆ ದೂರು: ಚಾರ್ಜ್ಶೀಟ್ ಸಲ್ಲಿಕೆ
ಕಳೆದ 11 ವರ್ಷಗಳಿಂದ ಈ ಹೋರಾಟ ನಡೆಸುತ್ತಿರುವುದಾಗಿ ಹೇಳಿರುವ ಗುರುಪಾದಯ್ಯ ಮಠದ, 2015ರಲ್ಲಿ ರೇಣುಕಾಚಾರ್ಯ ಮತ್ತು ಅವರ ಸಹೋದರರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರಿನನ್ವಯ ಲೋಕಾಯುಕ್ತ ಅಧಿಕಾರಿಗಳು ಅವರ ಮನೆ ಸೇರಿದಂತೆ ಬಹುತೇಕ ಕಡೆ ದಾಳಿ ನಡೆಸಿ, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಕೂಡ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಜಮೀರ್ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಪ್ರಾಸಿಕ್ಯೂಷನ್ ಅನುಮತಿ ಬೇಡ; ವಿಳಂಬವಾದರೆ ಹೈಕೋರ್ಟ್ ಮೊರೆ
‘ದೂರು ದಾಖಲಿಸಿದಾಗಲೂ ರೇಣುಕಾಚಾರ್ಯ ಮಾಜಿ ಜನಪ್ರತಿನಿಧಿಯಾಗಿದ್ದರು, ಈಗಲೂ ಮಾಜಿ ಜನಪ್ರತಿನಿಧಿಯೇ ಆಗಿದ್ದಾರೆ. ಆದ್ದರಿಂದ ಅವರ ವಿಚಾರಣೆಗೆ ಸರ್ಕಾರದ ಪ್ರಾಸಿಕ್ಯೂಷನ್ ಅನುಮತಿಯ ಅಗತ್ಯವಿಲ್ಲ. ಸರ್ಕಾರ ಪ್ರಾಸಿಕ್ಯೂಷನ್ ಹೆಸರಿನಲ್ಲಿ ಪ್ರಕರಣವನ್ನು ವಿಳಂಬ ಮಾಡಲು ಮುಂದಾದರೆ ಮತ್ತೆ ಹೈಕೋರ್ಟ್ ಮೆಟ್ಟಿಲೇರುವುದಾಗಿ ಮಠದ ಎಚ್ಚರಿಸಿದ್ದು, ಪ್ರಕರಣವನ್ನು ತಕ್ಷಣ ಲೋಕಾಯುಕ್ತಕ್ಕೆ ವಾಪಸ್ ಕಳುಹಿಸಬೇಕೆಂದು ಆಗ್ರಹಿಸಿದ್ದಾರೆ’.
ಕಾನೂನು ಹೋರಾಟಕ್ಕಾಗಿ ಎಲ್ಎಲ್ಬಿ ಓದುತ್ತಿರುವ ದೂರುದಾರ
ಹಿಂದೆ ಸೂಕ್ತ ಕಾನೂನು ಅರಿವು ಇಲ್ಲದ ಕಾರಣ ಇಂತಹ ಪ್ರಕರಣದಲ್ಲಿ ಹೋರಾಟ ನಡೆಸಿ ಜೈಲಿಗೆ ಹೋಗಿ ಬಂದಿರುವುದಾಗಿ ಹೇಳಿಕೊಂಡಿರುವ ಗುರುಪಾದಯ್ಯ ಮಠದ, ರೇಣುಕಾಚಾರ್ಯ ವಿರುದ್ಧ ಸಮರ್ಥವಾಗಿ ಕಾನೂನು ಹೋರಾಟ ಮುಂದುವರಿಸುವ ಸಲುವಾಗಿಯೇ ತಾವು ಪ್ರಸ್ತುತ ಎಲ್ಎಲ್ಬಿ ವ್ಯಾಸಂಗ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




