AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಮ್ಸ್​ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ನುರಿತ ವ್ಯವಸ್ಥೆ ಇಲ್ಲ; ಸೂಕ್ತ ಚಿಕಿತ್ಸೆ ಸಿಗದೆ ರೋಗಿಗಳ ಪರದಾಟ

ಉತ್ತರ ಕರ್ನಾಟಕದ ಐದಾರೂ ಜಿಲ್ಲೆಯ ರೋಗಿಗಳಿಗೆ ಆಧಾರವಾದ ಕಿಮ್ಸ್ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 20-30 ಮತ್ತು ವರ್ಷಕ್ಕೆ 500 ರಿಂದ 600 ಕ್ಕೂ ಹೆಚ್ಚು ಹೃದಯ ರೋಗಿಗಳು ದಾಖಲಾಗುತ್ತಾರೆ. ಆದರೆ ಇಲ್ಲಿ ತೆರದ ಹೃದಯ ಶಸ್ತ್ರ ಚಿಕಿತ್ಸೆಗೆ ನುರಿತ ತಜ್ಞವೈದ್ಯರಿಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ.

ಕಿಮ್ಸ್​ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ನುರಿತ ವ್ಯವಸ್ಥೆ ಇಲ್ಲ; ಸೂಕ್ತ ಚಿಕಿತ್ಸೆ ಸಿಗದೆ ರೋಗಿಗಳ ಪರದಾಟ
ಕಿಮ್ಸ್ ಆಸ್ಪತ್ರೆ
Follow us
TV9 Web
| Updated By: preethi shettigar

Updated on:Nov 24, 2021 | 2:09 PM

ಧಾರವಾಡ: ಇಡೀ ಉತ್ತರ ಕರ್ನಾಟಕ ಭಾಗದ ಬಡರೋಗಿಗಳಿಗೆ ಸಂಜೀವಿನಿ ಎಂದೇ ಹೆಸರುವಾಸಿಯಾಗಿರುವ ಆಸ್ಪತ್ರೆ ಹುಬ್ಬಳ್ಳಿಯ ಕಿಮ್ಸ್. ಆದರೆ ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಆಸ್ಪತ್ರೆಯಲ್ಲಿ ಹೃದ್ರೋಗ ಶಸ್ತ್ರಚಿಕಿತ್ಸೆಗೆ ಬೇಕಾದ ನುರಿತ ತಜ್ಞರೂ ಇಲ್ಲ. ಅಗತ್ಯ ಸಲಕರಣೆಗಳೂ ಇಲ್ಲ. ಯಾರಿಗಾದರೂ ಹೃದಯಾಘಾತ ಆದರೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯ ವ್ಯವಸ್ಥೆಯಿಲ್ಲದೆಯೇ ಪರದಾಡುವಂತಾಗಿದೆ. ಇದು ಸಹಜವಾಗಿಯೇ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಸೂಕ್ತ ಚಿಕಿತ್ಸೆಗೆ ಅವಕಾಶ ಮಾಡಿ ಎಂದು ಆಗ್ರಹಿಸಿದ್ದಾರೆ.

ಉತ್ತರ ಕರ್ನಾಟಕದ ಐದಾರೂ ಜಿಲ್ಲೆಯ ರೋಗಿಗಳಿಗೆ ಆಧಾರವಾದ ಕಿಮ್ಸ್ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 20-30 ಮತ್ತು ವರ್ಷಕ್ಕೆ 500 ರಿಂದ 600 ಕ್ಕೂ ಹೆಚ್ಚು ಹೃದಯ ರೋಗಿಗಳು ದಾಖಲಾಗುತ್ತಾರೆ. ಆದರೆ ಇಲ್ಲಿ ತೆರದ ಹೃದಯ ಶಸ್ತ್ರ ಚಿಕಿತ್ಸೆಗೆ ನುರಿತ ತಜ್ಞವೈದ್ಯರಿಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ಸರ್ಕಾರದ ಈ ನಡೆ ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಹೃದಯ ಸಂಬಂಧಿ ಕಾಯಿಲೆಗಳಿಗಾಗಿ ಸ್ಥಿತಿವಂತವರು ಖಾಸಗಿ ಆಸ್ಪತ್ರೆಗೆ ಮೊರೆ ಹೋದರೆ, ಬಡವರು ಹಣಕಾಸಿನ ಸಮಸ್ಯೆಯಿಂದ ಚಿಕಿತ್ಸೆ ಪಡೆಯದೇ ಪ್ರಾಣಕಳೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಎಲ್ಲ ವಯಸ್ಕರಲ್ಲಿ ಹೆಚ್ಚಾಗುತ್ತಿದೆ. ಸರಿಯಾದ ಚಿಕಿತ್ಸೆ ದೊರಕದೇ ಅತೀ ಹೆಚ್ಚು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಕಿಮ್ಸ್‌ ಆಸ್ಪತ್ರೆಯಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನೀಡಲು ಸಲಕರಣೆಗಳ ಸೌಲಭ್ಯವಿಲ್ಲದೆ ಅದೇ ವೈದ್ಯರು ಬೆಂಗಳೂರಿನಲ್ಲಿರುವ ಜಯದೇವ ಆಸ್ಪತ್ರೆಗೆ ಮತ್ತು ಹಲವಾರ ಖಾಸಗಿ ಆಸ್ಪತ್ರೆಗೆ ಶಿರಸ್ಸು ಮಾಡುತ್ತಿದ್ದಾರೆ.

ಬಡಜನರು ನಗರಕ್ಕೆ ಹೋಗಿ ಚಿಕಿತ್ಸೆ ಪಡಯಬೇಕೆಂದರೆ ಲಕ್ಷಾಂತರ ಹಣವ್ಯಯ ಮಾಡಬೇಕಾಗುತ್ತದೆ. ಆದರಿಂದ ಇದು ಬಡಜನರಿಗೆ ಕಬ್ಬಿನ ಕಡಲೆಯಾಗಿದ್ದು, ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಕಿಮ್ಸ್ ಆಸ್ಪತ್ರೆಯಲ್ಲಿ ಹೃದ್ರೋಗ ಹಾಗೂ ಶಸ್ತ್ರಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಇಲ್ಲದಿರುವುದು ಸರ್ಕಾರದ ನಿಷ್ಕಾಳಜಿ ತೋರಿಸುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಪ್ರತಿ ವರ್ಷ ಕಿಮ್ಸ್ ಆಸ್ಪತ್ರೆಗೆ ಕೋಟಿ ಕೋಟಿ‌ ಅನುದಾನ ಬಿಡುಗಡೆಯಾದರೂ ಓಪನ್ ಹಾರ್ಟ್ ಸರ್ಜರಿಗೆ ಬೇಕಾದ ಸಕಲ ಸೌಲಭ್ಯವನ್ನು ಈ ಆಸ್ಪತ್ರೆಯಲ್ಲಿ ಕಲ್ಪಿಸದೇ ಇರುವುದು ನಿಜಕ್ಕೂ ಬೇಸರದ ಸಂಗತಿ. ಇನ್ನಾದರೂ ಈ ಕಿಮ್ಸ್ನಲ್ಲಿ ನುರಿತ ತಜ್ಞ ವೈದ್ಯರನ್ನು ನೇಮಿಸಿ ಹೃದಯ ಶಸ್ತ್ರಚಿಕಿತ್ಸೆಗೆ ಬೇಕಾದ ಸೌಲಭ್ಯ ಒದಗಿಸಿ ಸರ್ಕಾರ ಬಡಜನರ ಜೀವನ ಕಾಪಾಡಬೇಕಾಗಿದೆ.

ವರದಿ: ರಹಮತ್ ಕಂಚಗಾರ್

ಇದನ್ನೂ ಓದಿ: ಹಾವೇರಿ ಜಿಲ್ಲೆಯ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಅಲ್ಲಿ ಆಪರೇಶನ್, ಇಲ್ಲಿ ಆರೈಕೆ ಎಂಬ ಸ್ಥಿತಿ ನಿರ್ಮಾಣ; ಸೂಕ್ತ ಚಿಕಿತ್ಸೆಗಾಗಿ ಜನರ ಪರದಾಟ

ರಾಮನಗರ: ಜಿಲ್ಲಾಸ್ಪತ್ರೆಯಲ್ಲಿ ಕೈಕೊಟ್ಟ ಡಯಾಲಿಸಿಸ್‌ ಯಂತ್ರಗಳು; ಚಿಕಿತ್ಸೆಗಾಗಿ ರೋಗಿಗಳ ಪರದಾಟ

Published On - 9:55 am, Wed, 24 November 21